ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..
ಅನಿಸಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅನಿಸಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜೂನ್ 3, 2021

ಎಲ್ಲರು ಅವನನ್ನು ಹುಚ್ಚನೆಂದೇ ಕರೆಯುತ್ತಿದ್ದರು, ನೋಡಲು ಸರಿಸುಮಾರು ಹಾಗೆಯೇ. ಎಣ್ಣೆ ಕಂಡು ವರ್ಷಗಳೇ ಕಳೆದಿದ್ದ ಕೂದಲು, ಎಂದೂ ತೆಗೆಯದ ಆ ಕಪ್ಪು ಬಿಳಿ ಗಡ್ಡ, ಚರಂಡಿಯ ಕೊಳಚೆಯೂ ನಾಚುವಂತ ಕೊಳಕಲು ಬಟ್ಟೆ, ಸ್ನಾನ, ಏನೆಂಬುದನ್ನೇ ಅರಿಯದ ದೇಹ,ಎಣ್ಣೆಯ ವಾಸನೆಯನ್ನು ಕಂಡಿರದ ಕೂದಲು, ಹೆಗಲ ಮೇಲೆ ಸದಾ ಸಂಗಾತಿಯಾಗಿದ್ದ ಒಂದು ಚೀಲ, ಹೀಗೆ ಆ ವ್ಯಕ್ತಿ ಕಾಣಸಿಗುತ್ತಿದ್ದ ದೈನಂದಿನ ಚಿತ್ರಣ. 

 ಸಿಕ್ಕ ಸಿಕ್ಕಲ್ಲಿ  ವಸ್ತುಗಳನ್ನು ಚೀಲಗಳಲ್ಲಿ ತುಂಬುವುದು, ಕಂಡ ಕಂಡ ಮನೆಯ ಹೊರಗೆ ಸಿಕ್ಕಿದ್ದನ್ನೆಲ್ಲಾ ಕದಿಯುವುದು, ಕೆಟ್ಟ ಕೆಟ್ಟ ಮಾತುಗಳಲ್ಲಿ ಜನರನ್ನು ಬೈಯುತ್ತಾ ನಡೆದಾಡುತ್ತಿದ್ದ ಆ ವ್ಯಕ್ತಿಯನ್ನು  ನೋಡಿ ಜನ, ವ್ಯಕ್ತಿಯನ್ನು ಹುಚ್ಚನೆಂದು ಕರೆಯುತ್ತಿದ್ದರು. ಹಾಗೆಯೇ ಕಳ್ಳತನ ಮಾಡುತ್ತಿದ್ದ ಕಾರಣಕ್ಕಾಗಿ,  ಆಗಾಗ್ಗೆ ಜನಗಳಿಂದ ಹೊಡೆತದ ರುಚಿಯನ್ನು ಕಂಡಿದ್ದರೂ ಕಳ್ಳತನ ಬಿಡುತ್ತಿರಲಿಲ್ಲ. ಬಹುಶಃ ಹಸಿವಿನ ದಾಹ ಮತ್ತು ಕುಡಿತದ ಚಟವನ್ನು ನೀಗಿಸಲು. 

ನಾನು ಆ ವ್ಯಕ್ತಿಯನ್ನು ಗಮನಿಸಿದ ಹಾಗೆ ಸಂಬಂಧಿಗಳಿದ್ದು, ಮದುವೆಯ ಗೋಜಿರಲಿಲ್ಲವಾದ್ದರಿಂದ ಏಕಾಂಗಿಯಾಗಿದ್ದರು. ಸಣ್ಣ ಪಟ್ಟಣವೆಂದು ಗುರುತಿಸಿಕೊಳ್ಳುವ , ತಾರಸಿ, ಬಹುಅಂತಸ್ತಿನ ಮನೆಗಳ ಮಧ್ಯೆ ಇದ್ದ,  ತನ್ನ ಪಾಳುಮನೆಯಲ್ಲಿ ವಾಸ. ಆ ಮನೆಯೊಳಗೋ ಕದ್ದು ತಂದಿದ್ದ ಏನೇನೋ ವಸ್ತುಗಳು, ಬಟ್ಟೆ, ಪಾತ್ರೆ, ದೊಡ್ಡ ಕಲ್ಲುಗಳು, ಮೂಟೆಗಳು ಕಾಫಿ ಬೀಜ, ಮೆಣಸು, ಶುಂಠಿ, ಹೀಗೆ ಏನೇನೋ.  ಈ ಕದ್ದು ತಂದ ವಸ್ತುಗಳನ್ನು ಅಂಗಡಿಯಲ್ಲಿ ಮಾರುವುದು, ಅವರು ಕೊಟ್ಟ ಅಲ್ಪ -ಸ್ವಲ್ಪ ಹಣದಲ್ಲಿ ಕುಡಿದು, ಆ ಪಾಳು ಮನೆಯೊಳಗೆ ಶವಾಸನ ಹಾಕಿ ಮಲಗುವುದು. 

ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಅವರಿವರ ಮನೆಯ ಹಿತ್ತಲು ಹುಡುಕುವುದು, ಆ ವ್ಯಕ್ತಿಯ ದಿನಚರಿಯಾಗಿತ್ತು.ಈ ದಿನಚರಿ ಕೊರೋನಾ ಲಾಕ್ಡೌನ್ ದಿನಗಳಲ್ಲೂ ಮುಂದುವರೆದಿತ್ತು. ಆದರೆ ಎಂದೂ ಆ ವ್ಯಕ್ತಿ ಮಾಸ್ಕ್ ಮೊರೆ ಹೋದವರಲ್ಲ. ಹಾಗೆ ಕೊರೋನಾ ಸಹ ಅವರ ಬಳಿ ಬಂದಿದ್ದಿಲ್ಲ. ಆದರೆ ಮೂರು ದಿನಗಳಿಂದ ಸದಾ ಬೀದಿಯಲ್ಲಿ ಸುತ್ತಾಡುತ್ತಿದ್ದ  ಆ ವ್ಯಕ್ತಿ ಕಾಣುತ್ತಿರಲಿಲ್ಲ. ಅಂತಹ ವ್ಯಕ್ತಿಯ ಬಗ್ಗೆ ಯಾರು ತಾನೇ ತಲೆಕೆಡಿಸಿ ಕೊಂಡಾರು? 

ಯಾವಾಗ ಆ ಪಾಳುಮನೆಯಿಂದ ಕೆಟ್ಟ ವಾಸನೆ ಅಕ್ಕ ಪಕ್ಕದ ಮನೆಗೆ ಬಡಿಯಿತೋ,ಅನುಮಾನಾಸ್ಪದದಿಂದ  ಒಳ ಹೊಕ್ಕು ನೋಡಿದಾಗ ಎಲ್ಲರ ಅನುಮಾನ ನಿಜವಾಗಿತ್ತು, ಹುಚ್ಚನೆಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿ  ಸತ್ತು ದಿನಗಳು ಕಳೆದಿದ್ದವು.  

ಸಂಬಂಧಿಕರು, ಬೆಲೆಬಾಳುವ ಆಸ್ತಿ, ಹಲವಾರು ಲಕ್ಷಗಳನ್ನು ಇಟ್ಟಿದ್ದ( ಜನಗಳ ಮಾತು ),  ಇಷ್ಟೆಲ್ಲಾ ಇದ್ದಾರು, ಆ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆದದ್ದು, ಗ್ರಾಮ ಪಂಚಾಯಿತಿಯಿಂದ ಒಂದು ಗೂಡ್ಸ್ ಆಟೋ ನಲ್ಲಿ ತೆಗೆದುಕೊಂಡು ಹೋಗಿ ಹೂತರು. 

ಆ ವ್ಯಕ್ತಿಯ ದುರ್ದೈವ ಅಷ್ಟೆಲ್ಲಾ ಬೆಲೆಬಾಳುವ ಆಸ್ತಿ ಇದ್ದರೂ ವಿದ್ಯೆ, ಸಾಮಾನ್ಯ ತಿಳುವಳಿಕೆ ಇಲ್ಲದೆ, ಒಂದು ದಿನವೂ ಸಾಮಾನ್ಯ ಜನಗಳಂತೆ ಬಾಳದೆ ಅನಾಥ ಶವವಾಗಿ ಜೀವಬಿಟ್ಟಿದ್ದು. 

 ಹುಚ್ಚನಿಗೆ ಕೊರೋನಾ, ಕುಡಿದ ಮತ್ತಿನಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ,  ಹೀಗೆಲ್ಲ  ಸತ್ತ ಕೆಲವು ದಿನಗಳ ನಂತರ ಜನಗಳು ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದರು. ಆದರೆ ಆ ವ್ಯಕ್ತಿ ಜನಗಳು ಹೇಳುವಂತೆ ಹುಚ್ಚನಾಗಿರಲಿಲ್ಲ. ಅವನ ವೇಷ ಭೂಷಣಗಳಷ್ಟೇ ಹುಚ್ಚಾಗಿದ್ದವು.  



ಶುಕ್ರವಾರ, ಮೇ 21, 2021

ಮುಖ್ಯರಸ್ತೆಯಲ್ಲಿರುವ ಸಣ್ಣದೊಂದು ದಿನಸಿ ಅಂಗಡಿ.ಅಂಗಡಿಯ ಮಾಲೀಕ ವ್ಯಾಪಾರದಲ್ಲಿ ಬಹಳ ನಿಸ್ಸೀಮ(ಮೋಸ ಮಾಡುವುದರಲ್ಲೂ ಅಷ್ಟೇ). ನಾನು  ಬಸ್ಸಿಗಾಗಿ ಕಾದು ನಿಂತಾಗ, ಕೆಲಮೊಮ್ಮೆ ಅಲ್ಲೆಲ್ಲ ಸಂಚರಿಸುವಾಗ ಗಮನಿಸಿದ್ದೆ, ಆ ಮಾಲೀಕ ಹೇಗೆ ಹಳ್ಳಿಯ ಜನರು, ಮುಗ್ದ ಜನರನ್ನು, ಚಿಲ್ಲರೆ ಕೊಡುವ ವಿಷಯದಲ್ಲಿ ಎಷ್ಟೆಲ್ಲಾ ವಿಧದಲ್ಲಿ ಮೋಸ  ಮಾಡುತ್ತಿದ್ದನೆಂದು,  ಗಮನಿಸುವಿಕೆ ಅಷ್ಟೇ ಅಲ್ಲ, ಅನುಭವವನ್ನೂ ಪಡೆದಿದ್ದೆ. ಕೂಡು -ಕಳೆಯುವಿಕೆಯಲ್ಲಿ ವ್ಯತ್ಯಾಸ, ನೋಟುಗಳಲ್ಲಿ ವ್ಯತ್ಯಾಸ ಮಾಡುವುದು, ಚಿಲ್ಲರೆ ಕೊಡುವಿಕೆಯಲ್ಲಿ ಎಗರಿಸುವುದು, ತೂಕದಲ್ಲಿ ವ್ಯತ್ಯಾಸ, ಅವಧಿ ಮುಗಿದ ದಿನಸಿ ಪ್ಯಾಕ್ಗಳನ್ನು ನೀಡುವುದು, ಹೀಗೆ ನನ್ನ ಅರಿವಿಗೆ ಬಂದ ಅಂಶಗಳನ್ನು ಮಾಲೀಕನೊಂದಿಗೆ ಕೆಲವು ಬಾರಿ ಚರ್ಚಿಸಿ  ಸರಿ ಮಾಡಿಕೊಂಡಿದ್ದೆ. ಆದರೆ ಅಲ್ಲಿ ಖರೀದಿಸುವ ಉಳಿದ ಜನರನ್ನು ನೋಡಿದಾಗ,  ಛೆ.. !!ಪಾಪ ಅನ್ನಿಸುತ್ತಿತ್ತು, ಆದರೆ ನನ್ನಿಂದ ಏನೂ ಮಾಡಲಾಗದ ಪರಿಸ್ಥಿತಿ. 

 ಒಂದೊಮ್ಮೆ ಹೀಗೆ.... ಅಂಗಡಿ ಬಸ್ಸು ನಿಲ್ದಾಣದ ಪಕ್ಕದಲ್ಲೇ ಇದ್ದುದ್ದರಿಂದ, ಬಸ್ಸಿಗಾಗಿ ಕಾದು ನಿಂತಿದ್ದೆ. ನಾನೆಂದರೆ ಬಸ್ಸಿಗೆ ಸಾಮಾನ್ಯವಾಗಿ ಮುನಿಸು. ನಾ ಕಾದು ನಿಂತಾಗಲೆಲ್ಲ ಬಸ್ ರಾಯ ಏನಾದರೂ ತಗಾದೆ ಮಾಡಿಕೊಂಡು ಬಿಟ್ಟಿರುತ್ತಾನೆ. ಕಾಯುತ್ತಾ ನಿಂತ ನನಗೆ ಆ ಅಂಗಡಿಗೆ ಬಂದ ಯುವಕರ ಮೇಲೆ ದೃಷ್ಟಿ ಹರಿಯಿತು. ಇಬ್ಬರೂ young and smart ಆಗಿದ್ದರು. ಇಬ್ಬರನ್ನು ನೋಡಿದರೆ ಅಕ್ಕ -ಪಕ್ಕದ ಊರಿನವರ ಮುಖಚರ್ಯೆ ಕಾಣುತ್ತಿರಲಿಲ್ಲ. ಒಬ್ಬ energetic boy ಬೈಕ್ ನಲ್ಲೇ ಕುಳಿತ, ಒಬ್ಬ ಇಳಿದು ಅಂಗಡಿಗೆ ಹೋಗಿ ಸಿಗರೇಟು ಪ್ಯಾಕ್ ಕೇಳಿದ, ಹೆಚ್ಚು ನಂಟು ಬೆಳಸಿದರೆ ಶ್ವಾಸಕೋಶ, ಹೃದಯವನ್ನೆಲ್ಲಾ ತಿಂದು ಕ್ಯಾನ್ಸರ್ ಗೆ ಆಹ್ವಾನ ನೀಡುವ, ಒಂದು ಸಿಗರೇಟು ಪ್ಯಾಕ್ ಬೆಲೆ ಸುಮಾರು 200ರೂ ಇರಬಹುದು. ಅವನು ಕೇಳಿದ್ದು ಬರೋಬ್ಬರಿ 20 ಪ್ಯಾಕುಗಳನ್ನು, ಮಾಲೀಕ 20 ಪ್ಯಾಕ್ ಗಳನ್ನು ಕೈನಲ್ಲಿ ಹಿಡಿದು ಹಣವನ್ನು ಕೇಳಿದ, ಆ young boy ಪರ್ಸ್ ತೆಗೆದು ಪರದಾಡುತ್ತಿದ್ದದ್ದನ್ನು  ನೋಡಿದರೆ,  ಅಷ್ಟೆಲ್ಲಾ ಹಣವಿಲ್ಲವೆಂಬುದು ಅವನ ಹಾವಭಾವಗಳಲ್ಲಿ ವ್ಯಕ್ತವಾಗುತ್ತಿತ್ತು. ಹಿಂದೆ ತಿರುಗಿ ಬೈಕ್ ಮೇಲೆ ಕುಳಿತ ಸ್ನೇಹಿತನ ಬಳಿ ಹೋಗಿ ಹಣವನ್ನು ಕೇಳಿ ಪಡೆದುಕೊಂಡು ಬಂದು, ಇನ್ನಾ 6 ಪ್ಯಾಕುಗಳು ಬೇಕೆಂದ, ಅಂಗಡಿಯ ಮಾಲೀಕ 20 ಪ್ಯಾಕ್ ಗಳನ್ನು ಟೇಬಲ್ ನ ಮೇಲಿಟ್ಟು  6 ಪ್ಯಾಕ್ ಗಳನ್ನು ತರಲು ಒಳಗೆ ಹೋದ. ತಕ್ಷಣ ಆ intelligent young boy  20 ಪ್ಯಾಕ್ ಗಳನ್ನು ಎತ್ತಿಕೊಂಡು, ಚಾಲನೆಯಲ್ಲಿದ್ದ ಸ್ನೇಹಿತನ ಬೈಕ್ ನಲ್ಲಿ ಕುಳಿತ ಅಷ್ಟೇ... ಆ ಬೈಕ್ ಅರೆಕ್ಷಣದಲ್ಲಿ ಮಾಯ. ಮಾಲೀಕ ಗಲಿಬಿಲಿಯಿಂದ ತನ್ನ ಬೈಕನ್ನೇರಿ ಹಿಂಬಾಲಿಸಿದರೂ ಅವರ ಸುಳಿವು ಇಲ್ಲ. ಹಿಂದಿರುಗಿ ಬಂದ ಅಂಗಡಿಯ ಮಾಲೀಕನ ಸಪ್ಪೆ ಮೋರೆಯಲ್ಲಿ ನನಗೆ ಕಂಡಿದ್ದು ಮಾಡಿದ್ದುಣ್ಣೋ ಮಹರಾಯ ನಲಿದಾಡುತ್ತಿದ್ದದ್ದು. ಅಷ್ಟರಲ್ಲಿ ಬಸ್ ರಾಯ ಹಾರ್ನ್ ಮಾಡಿದ ಶಬ್ದಕ್ಕೆ ನಾನು ಗಲಿಬಿಲಿಗೊಂಡು ಬಸ್ಸನ್ನೇರಿ ಕುಳಿತ,  ನನ್ನ ತಲೆಯಲ್ಲಿ  ಒಂದು ಸಿಗರೇಟು ಪ್ಯಾಕ್ ಬೆಲೆ 200ರೂ, 20× 200 ಇವೇ ಕೊರೆಯ ತೊಡಗಿದವು.  


ಮಂಗಳವಾರ, ಮೇ 18, 2021

     ಕೊರೋನಾ ಅದೆಷ್ಟು ಜನರನ್ನು ಮಾನಸಿಕವಾಗಿ, ದೈಹಿಕವಾಗಿ ಅಂಟಿದೆಯೋ ಗೊತ್ತಿಲ್ಲ. ಆದರೆ ಈ ಕೊರೋನಾ ಕೆಲವಷ್ಟು ಜನರ ಆರೋಗ್ಯ, ಆಯಸ್ಸು, ನಿದ್ರೆ, ನೆಮ್ಮದಿ ಹೀಗೆ ಏನೆಲ್ಲಾ ಕಸಿದು ಕಬಳಿಸಿದೆ ಎಂಬುದು ಆಯಾ ಪರಿಸ್ಥಿತಿಯಲ್ಲಿರುವವರು ಮಾತ್ರ ಹೇಳಲು ಸಾಧ್ಯ. ಶ್ರಮವನ್ನೇ  ನಂಬಿ ದುಡಿಯುವ ಆತ್ಮವಿಶ್ವಾಸದ ಜೀವಗಳಿಗೆ ಇದಾವುದು ಬಾಧಿಸಿರುವುದಿಲ್ಲ.
    ಕೊರೋನಾದ ಎರಡನೆಯ ಅಲೆಯ ಲಾಕ್ಡೌನ್ ದಿನಗಳು,  ನನ್ನನ್ನು ಆರೋಗ್ಯಕ್ಕಿಂತ ಹೆಚ್ಚಾಗಿ ಕಾಡಿದ್ದು, ನನ್ನ ಬರವಣಿಗೆಯ ಮೇಲೆ. ಮನಸ್ಸಿಗೆ ಕೊರೋನಾ ಹಿಡಿದಿದೆ ಎಂದನಿಸಿದ ಮೇಲೆ,  ಬರವಣಿಗೆಯಲ್ಲಿ ಕೊರೋನಾ ಲಕ್ಷಣಗಳು ಒಂದೊಂದೇ ಕಾಡತೊಡಗಿದವು. ನನಗೇಕೋ ಲಕ್ಷಣಗಳು ಹೆಚ್ಚಾಗುತ್ತಿವೆ ಎಂದು ಭಾಸವಾಗಿ ಪರೀಕ್ಷಿಸಲು ಪುಸ್ತಕ, ಪೆನ್ನು ಹಿಡಿದು ಗಂಟೆ ಗಟ್ಟಲೆ ಕೂತರೂ ದೊರೆತದ್ದು , ನಿರೀಕ್ಷೆ ಯಂತೆಯೇ ಕೊರೋನಾದ ಪಾಸಿಟಿವ್ ಲಕ್ಷಣಗಳು. ಅನುಭವಿಸಲಾಗದ ಪರಿಸ್ಥಿತಿ. ಏನೆಲ್ಲಾ ಔಷದೋಪಚಾರ ದೊರೆದರೂ ಸರಿಯಾಗದಂತಹ ಬರವಣಿಗೆಬಾರದ ಸ್ಥಿತಿ. ಆದಷ್ಟೂ ಬೇಗ ಕೊರೊನಕ್ಕೆ ಕೊರೋನಾದ ಮೂರನೆಯ ಅಲೆ ಅಪ್ಪಳಿಸಲಿ ಎಂದು ಶಪಿಸುತ್ತ ಕೂರುತ್ತಿದ್ದ ನನಗೆ, ಕೊನೆಗೂ ಬರವಣಿಗೆ ಅಪ್ಪಳಿಸಿದ್ದು ಈ ಅನಿಸಿಕೆ ವ್ಯಕ್ತವಾಗುವ  ಮೂಲಕ. 




ಗುರುವಾರ, ಫೆಬ್ರವರಿ 25, 2021

'ದಿ ಗ್ರೇಟ್ ಇಂಡಿಯನ್ ಕಿಚನ್' ಮಲಯಾಳಂ ಮೂವಿ



ಮಾತನಾಡಲು ಭಾಷೆ ಬಾರದಿದ್ದರೂ, ಅಕ್ಷರ ಜ್ಞಾನ ಇದೆಯಲ್ಲ ಎಂಬ ಹೆಮ್ಮೆಯಿಂದ ನೋಡಿದ್ದೆ. ಹಿಂದೆ ನೋಡಿದ ಮಲಯಾಳಂ ಚಲನಚಿತ್ರಗಳಿಗಿಂತ ತುಸು ಹೆಚ್ಚಾಗಿ ಕಾಡಿದ ಚಲನಚಿತ್ರ ಕಾರಣ ಆ ಚಿತ್ರದಲ್ಲಿ ಕಂಪುಗಟ್ಟಿರುವ ನೈಜತನ. ಭಾರತೀಯ ಅಡುಗೆ ಮನೆಯ ಸ್ವಾರಸ್ಯಕತೆಯನ್ನು ತೀರಾ ಸರಳವಾಗಿ ಸೆರೆಹಿಡಿದಿದ್ದಾರೆ. ಬಹುಪಾಲು ಮಹಿಳೆಯರು ಅರಿವಿಲ್ಲದೆ ಅನುಭವಿಸುತ್ತಿರುವ ಕಥಾಹಂದರ. ನಾಯಕಿಯ ಪಾತ್ರಕ್ಕೆ ಜೀವ ತುಂಬಿರುವ ನಿಮಿಷ ಸಜಯನ್ ರವರ ನಟನೆ ಪ್ರಶಂಸನೀಯ. 



ಬುಧವಾರ, ಜನವರಿ 27, 2021

ಮೆರಗು ನೀಡುವ ಹಬ್ಬ ಆಚರಣೆ

        ಅದೊಂದು ರಾಷ್ಟ್ರೀಯ ಹಬ್ಬ ಆಚರಣೆಯ ದಿನದಲ್ಲಿ ಶಾಲೆಗೆ ಮೆರಗು ತರಬಯಸಲು ಸ್ಪರ್ಧೆ, ಆಟ -ಊಟೋಪಚಾರಗಳ ಆಮಿಷ ಒಡ್ಡಿ ಎಲ್ಲರನ್ನು ಸೇರಿಸಿದ ಕಾರ್ಯಕ್ರಮ. ಅಂದು ಶಾಲೆಯಲ್ಲಿ ಹಿಂದೆಂದೂ ಕಾಣದ ಹಬ್ಬದ ವಾತಾವರಣ. 

ಶಾಲೆಯ ಮುಂದೆ ದಿನಾ ನಡೆದು ಹೋದರೂ,ಶಾಲೆಯ ಕಡೆ ತಿರುಗಿಯೂ ನೋಡದ, ಅಕಸ್ಮಾತಾಗಿ ನೋಡಿದರು ಶಾಲೆಯ ಕಟ್ಟಡ, ಅಲ್ಲಿಯ ಶಿಕ್ಷಕರು ನಮಗೆ ಗೊತ್ತೇ ಇಲ್ಲವೆಂಬಂತೆ ಹೋಗುವ ಜನಗಳು, ಸರ್ಕಾರಿ ಶಾಲೆ ಎಂದರೆ ಏನೋ ಉದಾಸೀನ ಮನೋಭಾವನೆ ಇರುವ ಗಣ್ಯರು, ಶಾಲೆಯನ್ನು ಸಾರ್ವಜನಿಕ ಸಭಾಂಗಣ ಮತ್ತು ಸಾರ್ವಜನಿಕ ಆಟದ ಮೈದಾನ ಮಾಡಿಕೊಳ್ಳಲು ಬಯಸುತ್ತಿರುವ ಮನಸ್ಸುಳ್ಳವರೆಲ್ಲಾ,  ಆ  ದಿನ ಅಲ್ಲಿ ನೆರೆದು ನಮ್ಮದೇ ಶಾಲೆ ಎಂಬಂತೆ ಬೀಗುತ್ತಿದ್ದರು.ಅದರಲ್ಲಿ ಒಂದೋ - ಎರಡೋ ಮನಸ್ಸುಗಳು  ಮಾತ್ರ ನಾನು ಓದಿದ ಶಾಲೆಯ ಅಭಿವೃದ್ಧಿಯ ಶ್ರೇಯಸ್ಸಿಗಾಗಿ ಶ್ರಮಿಸುತ್ತಿದ್ದವು.

ಅಲ್ಲಿಯ ಶಿಕ್ಷಕರುಗಳ ತೋರ್ಪಡಿಕೆಯ ಓಡಾಟ ಅಷ್ಟಿಷ್ಟಲ್ಲ.ಜನರಂತು ಶಿಕ್ಷಕರುಗಳ ಓಡಾಟ ನೋಡಿ ತಾವೂ ಶಿಕ್ಷಕರಾಗಿದ್ದರು. ಅದರಲ್ಲಿ ಕೆಲವು ಶಿಕ್ಷಕರು ತರಾತುರಿಯಲ್ಲಿ ನೀಡಿದ ಕೆಲಸವನ್ನು ಅಸಮಾಧಾನದಿಂದಲೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
 
ಕಾರ್ಯಕ್ರಮವು ಹೇಗೋ ಏನೋ ಅದ್ದೂರಿಯಾಗಿ ನಡೆಯಿತು, ಎಲ್ಲರು ಆಡಿ, ಉಂಡು ತಿಂದು, ಕುಣಿದರು, ಸಮಾಪ್ತಿಯು ಹೊಸ ವರ್ಷ ಆಚರಣೆಯಂತೆ ರಾತ್ರಿಗಳಲ್ಲಿ ಜರುಗಿತ್ತು. 

    ಮಾರನೇ ದಿನ ನಾ ಎಂದಿನಂತೆ ಶಾಲೆಯ ಮುಂದೆ ಹಾದು ಹೋಗುವಾಗ ಗಮನಿಸಿದೆ... ಮೊದಲಿನಂತೆ ಕಂಡ ಶಾಲೆ, ಆದರೆ ಗಿಡಗಳನ್ನು ತೆಗೆದು ಮತ್ತೆ ನೆಟ್ಟ ಹೊಸ ಗಿಡಗಳು, ಕಾರ್ಯಕ್ರಮ ನಡೆದ ಸಂಕೇತವಾಗಿ ಅವಶೇಷವಾಗಿ ಉಳಿದಿದ್ದ ಚಪ್ಪರ, ನನ್ನನ್ನು ಬಳಸಿಕೊಂಡು ತಿಂದು ಕುಡಿದರೆಂದು ಅಳುತ್ತ ಹರಕು -ಮುರುಕಾಗಿದ್ದ ಪ್ಲಾಸ್ಟಿಕ್ ಲೋಟ-ತಟ್ಟೆಗಳು, ಕಸ, ಮೂಲೆಗಳಲ್ಲಿ ಅವಿತು ಕುಳಿತ್ತಿದ್ದ ಬಾಟಲಿಗಳು, ನಾಯಿಗಳು ಮೂಸಿ ನೋಡಿ ಖುಷಿ ಪಡುತ್ತಿದ್ದ ಮೂಳೆಗಳು ಹಾಗೂ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದ್ದ ಶಾಲೆಯ ಮೂಕರಾಗದ ತರಂಗದಲೆಗಳು. 

ಎಲ್ಲಕ್ಕಿಂತ ನನ್ನನ್ನು ಹೆಚ್ಚಾಗಿ ಕಾಡಿದ ವಿಷಯವೆಂದರೆ ಅಲ್ಲಿ ಕ್ರಾಂತಿಕಾರಿಯಾಗಿ ಭುಗಿಲೆದ್ದು ಕೆಲಸ ಮಾಡಿದ ಜಾತಿಯ ಬೇರು, ರಾಜಕೀಯ ವೈಷಮ್ಯ, ನಾಟಕೀಯ ಪ್ರವೃತ್ತಿ, ಪ್ರಚಾರದ ಲಾಬಿಗಳು. ಎಲ್ಲಿಯೂ ಶಾಲೆಯ ಮೃದು ಮನಸ್ಸುಗಳನ್ನು ಪಾರಿಜಾತಗಳಾಗಿ ಅರಳಿಸುವ ಭರವಸೆ ಕಂಡು ಬರಲಿಲ್ಲ.

ಹೂ, ಹಣ್ಣು, ಹಾರ-ತುರಾಯಿ, ಬಹುಮಾನ, ಉಪಹಾರಗಳಿಗೆಂದು ದಾನ ನೀಡಿ ಪ್ರಚಾರ ಪಡೆಯುವ ಉದಾರ ಮನಸ್ಸುಗಳು, ಶೈಕ್ಷಣಿಕ ಉಪಯುಕ್ತತೆ ವಿಷಯ ಬಂದರೆ ಉದಾರತೆ ಬತ್ತಿದ ಜಲವಾಗುತ್ತದೆ. ಹಾರ-ತುರಾಯಿ, ಬಹುಮಾನ, ಉಪಹಾರ ಇತ್ಯಾದಿಗಳಿಗೆ ಸಂಗ್ರಹಗೊಂಡಿದ್ದ ಅಷ್ಟೂ ಹಣವು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಅಲಂಕಾರಗೊಂಡಿದ್ದರೆ ಉದಾರತೆ ಸಾರ್ಥಕತೆಯ ಉತ್ತುಂಗದಲ್ಲಿ ವಿಜೃಂಭಿಸುತಿತ್ತು.


ಶುಕ್ರವಾರ, ನವೆಂಬರ್ 6, 2020

"ಗಾಯದ ಹೂವುಗಳು "



"ಗಾಯದ ಹೂವುಗಳು 2015 ರ  ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ" ಪಡೆದ ಕೊಡಗಿನ ಯುವಕವಿ  ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ.  ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್  ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ. 
                                         ಕವಿತೆಯೆಂದರೇನೆಂದೇ 
                                                             ತಿಳಿಯದ, 
                         ನನ್ನನ್ನೇ ಉಸಿರಾಡಿಕೂಳ್ಳುತ್ತಿರುವ
                                                   ಅಪ್ಪ -ಅಮ್ಮನಿಗೆ.         ಎಂಬ ಕವಿಯ ಅರ್ಪಣಾಭಾವದಿಂದ ಅರ್ಪಿಸಿಕೊಳ್ಳುತ್ತ ಹೋಗುತ್ತದೆ. 

"ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ, ಕವಿತೆಯ ತೆಕ್ಕೆಯೊಳಗೆ ಬಿದ್ದೆ "ಎಂದು  ಮುನ್ನುಡಿ ಬರೆದು ಕೊಳ್ಳುವ ಕವಿ, ಕವಿತೆಗಳನ್ನು ಹೆರುವ ಪರಿಯೇ ವಿಭಿನ್ನ. 

 ಇರುವೆ, ಒಂಟಿ, ಊದುಕೊಳವೆ, ಖಾಲಿಡಬ್ಬ, ಚಪ್ಪಲಿಗಳು, ಮಾತು, ಮೌನ ಮತ್ತು ಕವಿತೆ, ಮರಣದ ಹಾಡು, ಹಾವು, ಮೈಲಿಗೆ, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ನೆಲವಿಲ್ಲದವನ ಉಯಿಲು, ಬೇಲಿ, ನದಿ, ಕಾಡು ಕವಿತೆ, ಮಿಕ್ಕವರಾರನ್ನೂ ಹೀರಕೂಡದು, ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳು, ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ,ಒಲೆ ಮತ್ತು ಅವ್ವ, ಅರ್ಥವಾಗಿರಬಹುದು, ನೀನು ನನ್ನ  ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯ್ ಸ್ವಗತ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಅಸ್ವಸ್ಥ ಕವಿತೆಗಳು, ನೋಟೀಸು, ಸಲಾಮು, ನನ್ನ ಕವಿತೆ, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಇರಲಿ, ಅಪ್ಪ ಮತ್ತವನ ಹತ್ಯಾರಗಳು, ಎಲ್ಲ ಅಮಾವಾಸ್ಯೆಗಳಲ್ಲೂ ಪದ್ಯವೊಂದಿರಲಿ ಬೆಳಕಿಗೆ, ಸಾವು, ಗಾಯದ ಹೂವುಗಳು, ಆಲ್ಬಮ್, ಯಾರದಿದು? ಇನ್ನೂ ಬದುಕಿರುವ ಕವಿತೆಗಳು, ಮೊದಲ ರಾತ್ರಿಯಂದು, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ನಿನಗೆ, ಕೊಳದ ಬಳಿಯ ಮರ, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ, ಮಧ್ಯರಾತ್ರಿಯ ನಂತರದ ಮಳೆ, ಶಬ್ದ ಸಮರ, ಮರ, ಕಸದ ತೊಟ್ಟಿಯ ಕಾಗದದ ಲೋಟಗಳು, ಪರೀಕ್ಷೆ, ಉಯಿಲು. 

ಈ ಮೇಲಿನ 53 ಹೂವುಗಳಿರುವ ಹೂಗುಚ್ಛ "ಗಾಯದಹೂವುಗಳು".ಪ್ರತಿಯೊಂದು ಹೂವುಗಳೂ ಗಾಯದ ಹೂವುಗಳಾಗಿ ಅರಳಿ, ಸುತ್ತೆಲ್ಲಾ ಪರಿಮಳ ಸೂಸುತ್ತಾ ಎಲ್ಲರನ್ನು ಆಕರ್ಷಿಸಿ ಘಮಘಮಿಸುತ್ತಿರುವ ಪ್ರೀತಿಯ ಪಾರಿಜಾತಗಳಾಗಿವೆ.

ಕೇಳಿಸಿಕೊಳ್ಳಿ 
ಒಂದು ಇರುವೆ ಸತ್ತಿದೆ 
ನನ್ನ ಕಾಲ ಬುಡದಲ್ಲಿ 
        
      ಎನ್ನುವ ಕವಿಯು ಸಮಾಜದ ವ್ಯವಸ್ಥೆ, ಶ್ರೀಮಂತವರ್ಗ,ಹತಾಶೆಗಳನ್ನು ಕಡಿಮೆ ಪದಗಳಲ್ಲಿ ಅತಿಸೂಕ್ಷ್ಮವಾಗಿ ಶಬ್ಧ ಸಂವೇದನೆಯಿಂದ  ಪ್ರಸವಿಸಿದ್ದಾರೆ. 

 ಸತೀಶ್  ರವರ ಕವಿತಗಳನ್ನು ಓದುತ್ತಾ ಹೋದರೆ ಅವು ಬರಿ ಕವಿತೆಗಳಾಗಿ ಅಭಿವ್ಯಕ್ತವಾಗುವುದಿಲ್ಲ. ಅವುಗಳು ಅವರು ಬದುಕಿಕೊಳ್ಳಲು ಹಡೆದ ಮಕ್ಕಳಾಗಿವೆ. ಕವಿಗೆ ಕವಿತೆಗಳೇ ಬದುಕಿನ ಭರವಸೆಯ ಮೌಲ್ಯಗಳು. 

ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕ್ರತರು 
ಮಸೀದಿ ಮಂದಿರ ಇಗರ್ಚಿಗಳಿಗೂ ಅಸ್ಪೃಶ್ಯರು 
ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ 
  
    ಈ ಕವಿತೆಯಲ್ಲಿ ಮೌಢ್ಯ, ಜಾತೀಯತೆ, ಮೇಲು -ಕೀಳು ಮನೋಧೋರಣೆ, ಅಸಹಾಯಕತೆ, ಬಡತನ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯ ಬಗ್ಗೆ ಇರುವ ಅತೃಪ್ತಿಯನ್ನು ಚಪ್ಪಲಿಗಳು ಕವಿತೆಯ ಮೂಲಕ ಧನ್ಯತಾ ಭಾವದಲ್ಲಿ ಕವಿತೆಯಾಗಿ ಹಡೆದಿದ್ದಾರೆ. 

ಕಡಲಿನ ಆಚೆ ಬದಿಯಲ್ಲಿ 
ನಿನ್ನದೊಂದು ತೊಟ್ಟು ರಕ್ತ 
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ 
ಚೆಲ್ಲಿ ಬಿಡೋಣ 
 
ಕವಿ ಕವಿತೆಗಳಲ್ಲಿ ಬಳಸಿರುವ ರೂಪಕಗಳು, ಪ್ರತಿಮೆ, ಸಾಂಕೇತಿಕ ಭಾಷೆ ಪ್ರತಿಯೊಂದು ಅವರು ಕವನ ಹೆರುವ ರೀತಿಗೆ ಉದಾಹರಣೆ. 

ಹಸಿದ ಜಿಗಣೆಯೇ 
ಬಾ ಹೀರು ನನ್ನನ್ನು 
ಸ್ವಲ್ಪದರಲ್ಲೇ ನೀನು 
ದ್ರಾಕ್ಷಿಯಾಗಿ ಉದುರುತ್ತೀ 

  ಕವಿಯ ಜಿಗಣೆಯೊಂದಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.ಮಿಕ್ಕವರಾರನ್ನೂ ಹೀರಕೂಡದು ಎಂದು ಹೇಳುವ ಪರಿ, ಕವಿಗೆ ಇತರರ ಮೇಲಿರುವ ಉದಾರತೆ, ಕಾಳಜಿ, ವಿಶಾಲ ಮನೋಭಾವವನ್ನು ಗೋಚರಿಸುತ್ತದೆ.

ಸತೀಶ್ ರವರ ಕವಿತೆಗಳು ಹಸಿವು, ಬಡತನ, ಸಮಾಜದ ಅವ್ಯವಸ್ಥೆ, ಮೋಸ, ವಂಚನೆ, ಭ್ರಷ್ಟಾಚಾರ, ಹತಾಶೆ, ಜಾತೀಯತೆ, ಅಸಮಾನತೆ, ಪ್ರೀತಿ -ಪ್ರೇಮ, ಪ್ರಕೃತಿಯ ಬಗ್ಗೆ ಕಾಳಜಿ, ಪ್ರಕೃತಿ ವಿನಾಶದ ಬಗ್ಗೆ ಅಸಮಾಧಾನ ಹೀಗೆ ಸುಗಂಧ ಬೀರುತ್ತಾ ಒಂದೊಂದು ಕವಿತೆಯು ಸೂಕ್ಷ್ಮ ಸಂವೇದನೆಯೊಂದಿಗೆ ಮೊಗ್ಗಾಗಿ ಜೀವನದ ಆಳವಾದ ಅನುಭವದೊಂದಿಗೆ ಅರಳುತ್ತಾ ಹೋಗಿವೆ. 

ಕವಿತೆಗಳು ರೋಷದಿಂದ ತಲ್ಲಣಿಸುವಂತೆ  ಭಾಸವಾದರೂ ಆರೋಗ್ಯಯುತ ಸಮಾಜ ರೂಪುಗೊಳ್ಳಲು ಬದಲಾವಣೆಗಳಿಗಾಗಿ ಮಿಡಿಯುವ ತುಮುಲವೆನಿಸುತ್ತದೆ ನನಗೆ.

ಕವಿತೆಗಳನ್ನು ವ್ಯಾಖ್ಯಾನಿಸುವುದಕ್ಕಿಂತ  ಅವುಗಳನ್ನು ಸವಿದರೆ ಅವುಗಳಲ್ಲಿನ ಕವಿಯ ಸಾಹಿತ್ಯ ಅಭಿವ್ಯಕ್ತಿಯ ಪರಿಚಯವಾಗುತ್ತದೆ. 

ಮಲೆಯಾಳಂ,ಇಂಗ್ಲೀಷ್ ಭಾಷೆಗಳ ಸಾಹಿತ್ಯದ ರುಚಿವುಂಡು ಅನುವಾದಗಳಲ್ಲಿ  ತೊಡಗಿದ್ದರೂ(ಮಲಯಾಳಂ ಅನುವಾದಿತ ಕವಿತೆಗಳ ಸಂಕಲನ" ಕಡಲ ಕರೆ"ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ) ಕನ್ನಡವನ್ನು ಹೆಚ್ಚು ಪ್ರೀತಿಸಿ ಗುರುತಿಸಿಕೊಂಡಿರುವುದು ಸತೀಶ್ ರವರ ಹೆಚ್ಚುಗಾರಿಕೆ. 

  'ದೊಡ್ಡವರ ಶಿಫಾರಸ್ಸಿಲ್ಲದೆ ಬಹುಮಾನ ದಕ್ಕುವುದಿಲ್ಲ'
 ಎಂಬ ಕವಿಯ ನಿಲುವನ್ನು ಹುಸಿಯಾಗಿಸಿ ಅವರ ಕವಿತ್ವ ಜ್ಞಾನಕ್ಕೆ ಪ್ರಶಸ್ತಿಯನ್ನು ದಕ್ಕಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಅವರ ಸಾಹಿತ್ಯದ ತೇರು ಗಾಯದ ಹೂವುಗಳಿಂದ ಅರಳಿ ದೊಡ್ಡ ಹೆಮ್ಮರವಾಗಿ ಹಲವರಿಗೆ ಆಶ್ರಯವಾಗುವ ದೀವಿಗೆಯಾಗಲಿ ಎಂಬುದೇ ಸಾಮಾನ್ಯ ಓದುಗರಾಗಿ ನಮ್ಮೆಲರ ಹೃದಯತುಂಬಿದ ಹಾರೈಕೆ💐💐.
  


ಮಂಗಳವಾರ, ನವೆಂಬರ್ 3, 2020

ಮಹಾಕಾದಂಬರಿ

ನನಗೆ ಜೀವನದಲ್ಲಿ ದೊರೆತದ್ದು ಅಮೂಲ್ಯವಾದ ಬೃಹತ್ 

ಕಾದಂಬರಿ. ಓದುತ್ತಲೇ ಇರುವೆನು. ಅರ್ಥೈಸಿಕೊಂಡಿರುವೆ 

ಎನ್ನುವಾಗಲೇ, ಅದು ಅರ್ಥವಾಗದೇ ತೋರುತ್ತದೆ. ಪ್ರತಿ 

ಪುಟಗಳಲ್ಲು ವಿಶೇಷತೆಯಿಂದ ಕೂಡಿರುವ ಕಾದಂಬರಿಯನ್ನು 

ಓದುತ್ತಾ ಸಾಗಿದಷ್ಟು ತಿಳಿಯುವ ಹಂಬಲ, ಸಂತೋಷ, 

ಮನಸ್ಸಿಗೆ ನೆಮ್ಮದಿ, ಸಾರ್ಥಕ ಮನೋಭಾವ. 

ಕಾದಂಬರಿಯನ್ನು ನಾನಿರುವವರೆಗೂ ಓದುತ್ತಾ ಇರುವಾಸೆ. 

ಕಾದಂಬರಿಯ ಪಾತ್ರದಲ್ಲಿ ಗೊಂದಲವಿದ್ದರು ಅದರಲ್ಲಿರುವ 

ಒಳಹಂದರ ಬಲುವಿಶಾಲ. ಕಾದಂಬರಿ ನನಗೆ ಓದುವ ಸವಿ 

ಉಣಿಸಲು ದಕ್ಕಿದ್ದು ನನ್ನ ಅದೃಷ್ಟವೇ ಸರಿ. ನಾನು ಬಹಳ 

ಇಷ್ಟಪಟ್ಟು ಓದಿದ ಏಕೈಕ ಆತ್ಮೀಯ ಕಡೆಯ ಜ್ಞಾನ ಹೊತ್ತಿಗೆ. 

ಅದನ್ನೀಗ ಹಿಂದಿರುಗಿಸುವ ಸಮಯ ಸನ್ನಿಹಿತವಾಗಿದೆ.                                                         
 ಆದರೆ  ಹಿಂದಿರುಗಿಸುವ ಮನಸ್ಸಿಲ್ಲದಿದ್ದರೂ ಭಾರವಾದ 

ಮನಸ್ಸಿನಿಂದ ಅದನ್ನು ನೀಡಿದವರಿಗೆ ಕೊಡುತ್ತಿದ್ದೇನೆ. ಆದರೆ 

ಆ ಕಾದಂಬರಿ ನನ್ನ ಭಾರವಾದ ಮನಸ್ಸಿನೊಂದಿಗೆ ಅಸ್ತಿತ್ವ 

ಮತ್ತು ಅಕ್ಷರ ಜ್ಞಾನವನ್ನು ತನ್ನೊಂದಿಗೆ ಹೊತ್ತೊಯ್ಯುತ್ತಿದೆ 

ಎಂಬುದು ಅದಕ್ಕೂ ತಿಳಿಯದ ಒಳಅರ್ಥವಾಗಿದೆ. 

ಸೋಮವಾರ, ನವೆಂಬರ್ 2, 2020

ಕಚೇರಿ

ಆ ಕಚೇರಿಗೆ ಹೋಗುವುದೆಂದರೆ ನನಗೆ ಈಗಲೂ ಏನೋ 

ಒಂದು ತರದ ಭಯ. ಸ್ವಲ್ಪ ಇಬ್ಬನಿ ಮಿಶ್ರಿತ ಬೆವರು. 

ಮೊದಲೇ ಹಿಂಜರಿಕೆ ಸ್ವಭಾವದ ನನಗೆ, ಅಲ್ಲಿ 

ಕಾಲಿಡುವುದೆಂದರೆ ದಿನಗಳ ಮೊದಲೇ ಚಿಂತೆ ಮೇಳೈಸುತ್ತದೆ. 

ನನ್ನ ಕೆಲಸ ಆಗದಿದ್ದರೂ ಪರವಾಗಿಲ್ಲ, ನನಗೆ ಅಲ್ಲಿಗೆ 

ಹೋಗುವುದೆಂದರೆ ಆಗದ ಮಾತು. ಕಾರಣವಿಷ್ಟೆ... ಅಲ್ಲಿಯ 

ಕೆಲಸ ನಿಮಿತ್ತ ನೇಮಕಗೊಂಡವರ ಮದವೇರಿದ ನಡವಳಿಕೆ. 

ಸ್ವಲ್ಪವೂ ಸೌಜನ್ಯ, ಸಭ್ಯತೆ, ಶಿಷ್ಟಾಚಾರಗಳನ್ನು ಅವರಲ್ಲಿ 

ನಾನೆಂದು ಕಾಣೆ. ಹಾ!!... ಹಾಗೆಂದ ಮಾತ್ರಕ್ಕೆ ಈ 

ನಡವಳಿಕೆಗಳು ಶಾಶ್ವತ ವಲ್ಲ, ಬೆಲೆಯುಳ್ಳ ಕಾಗದಗಳನ್ನು 

ನೀಡಿದರೆ ಬಲುದೂರದ ಮಾತು. ಆಗ ಭೂತವೂ... 

ವರ್ತಮಾನ, ಭವಿಷ್ಯಗಳ ದೇವರಾಗಿ ಕಾಣಸಿಗುತ್ತದೆ. ನನಗೆ 

ಹೀಗೆಯೋ.. ಬೇರೆಯವರಿಗೂ ಹೀಗೆಯೋ ಅರಿವಿಗೆ 

ಅರಿಯುತ್ತಿಲ್ಲ.



ಮಂಗಳವಾರ, ಸೆಪ್ಟೆಂಬರ್ 22, 2020

ಮಲೆಗಳಲ್ಲಿ -ಮದುಮಗಳು






 


    ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಪುಸ್ತಕ ಕುವೆಂಪುರವರ "ಮಲೆಗಳಲ್ಲಿ ಮದುಮಗಳು " ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವರ್ಗ, ಸ್ಥಳಗಳು, ಜಾತಿ, ಪಂಗಡಗಳ ವಿವರಣೆಗಳ ಸುತ್ತ ಹೆಣೆದುಕೊಳ್ಳುತ್ತಾ ಅಂದಿನ ಮೇಲುಜಾತಿ, ಕೀಳುಜಾತಿಯ ವಿಡಂಬನೆ, ಕೂಲಿ ಆಳುಗಳನ್ನು ನಡೆಸುಕೊಳ್ಳುತಿದ್ದ ಹೀನಾಯ ಸ್ಥಿತಿ, ಬ್ರಾಹ್ಮಣ ವರ್ಗದವರೇ ಶ್ರೇಷ್ಠರೆಂದು, ಉಳಿದ ವರ್ಗದವರನ್ನು ಹೀನಾಯವಾಗಿ ಕಾಣುತ್ತಾ ಅವರ ಮೂಢಾಚಾರಗಳನ್ನು ಜೀವನೋಪಾಯ ಸಂಪಾದನೆಗೆ ಬಂಡವಾಳ ವಾಗಿಸಿದ್ದ ಬ್ರಾಹ್ಮಣರ ಮನೋಧರ್ಮ, ಪುರುಷ ಪ್ರಾಧಾನ್ಯತೆಯ ಸಮಾಜ, ಮಹಿಳೆಯ ಅಸಮಾನತೆ, ಮೂಢನಂಬಿಕೆ, ಬಡತನ, ಕ್ರೈಸ್ತಧರ್ಮದ ಪ್ರಚಾರದ ವಿವಿಧ ರೀತಿಗಳು, ಮಲೆನಾಡಿನ ವರ್ಣನೆ, ಸಹ್ಯಾದ್ರಿಯ ಬೆಟ್ಟಗಳ ವರ್ಣನೆ, ದಟ್ಟ ಕಾಡಿನ ರಮಣೀಯತೆಯ ಭವ್ಯವಾದ ಕಣ್ಣುಕಟ್ಟುವ ವರ್ಣನೆ, ಕಾಡಿನ ಭೀಕರತೆ, ಕೃಷಿ, ತೋಟಗಾರಿಕೆ, ಅಂದಿನ ಆಚಾರ -ವಿಚಾರ, ಹಳ್ಳಿಯ ಸೊಗಡು, ನುರಿತ ಗ್ರಾಮ್ಯ ಭಾಷೆಯ ಸುತ್ತ ಒಂದರೊಳಗೊಂದು ಹೆಣೆದುಕೊಳ್ಳುತ್ತಾ ಸಾಗುತ್ತದೆ.

ಕಾದಂಬರಿಯಲ್ಲಿನ ಊರುಗಳಾದ ಸಿಂಬಾವಿ, ಲಕ್ಕುಂದ, ಮೇಗರವಳ್ಳಿ, ಬೆಟ್ಟಳ್ಳಿ, ಕೋಣೂರು, ತೀರ್ಥಹಳ್ಳಿ, ಕಾಗಿನಹಳ್ಳಿ ಹೂವಳ್ಳಿ, ಕಾನೂರು... ಇತ್ಯಾದಿ ಹಾಗೂ ಪ್ರಸ್ತಾಪವಾಗಿರುವ ವ್ಯಕ್ತಿಗಳಾದ ಭರಮೈಹೆಗ್ಗಡೆ, ಜಗ್ಗಮ್ಮ, ಸುಬ್ಬಣ್ಣಹೆಗ್ಗಡೆ, ಮುಕುಂದಯ್ಯ, ಚಿನ್ನಮ್ಮ, ನಾಗತ್ತೆ, ನಾಗಕ್ಕ, ವೆಂಕಟಣ್ಣ ಗೌಡ್ರು, ಲಕ್ಕಮ್ಮ, ತಿಮ್ಮಪ್ಪಹೆಗ್ಗಡೆ, ಮಂಜಮ್ಮ, ಶಂಕರಹೆಗ್ಗಡೆ, ರಂಗಮ್ಮ(ಹುಚ್ಚು ಹೆಗ್ಗಡತ್ತಿ ), ಸೀತಮ್ಮ, ಕಲ್ಲಯ್ಯಗೌಡ್ರು,   ದೇವಯ್ಯಗೌಡರು, ದೇವಮ್ಮ, ರಂಗಪ್ಪಗೌಡರು, ದೊಡ್ಡಣ್ಣಹೆಗ್ಗಡೆ, ಧರ್ಮು, ಕಾಡು, ತಿಮ್ಮು, ರಾಮು, ಗುತ್ತಿ, ತಿಮ್ಮಿ, ಐತ, ಪಿಂಚಲೂ, ಬಚ್ಚ, ಕರಿಸಿದ್ದ, ಸಣ್ಣತಿಮ್ಮ,ಚಿಂಕ್ರ, ದೇಯಿ, ಅಕ್ಕಣ್ಣಿ..ಇತ್ಯಾದಿ ಪಾತ್ರಗಳೊಂದಿಗೆ ಕಾದಂಬರಿ ಬೆರೆದು ಅದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ.

ನನ್ನನ್ನು ಅತಿಯಾಗಿ ಕಾಡಿದ ಪಾತ್ರಗಳೆಂದರೆ ಒಡಯರಿಗೆ ನಿಷ್ಠ ಆಳುಗಳಾದ (ಸ್ವಾಮಿ ನಿಷ್ಠರು )ಗುತ್ತಿ, ಐತ, ಚೊಚ್ಚಲ ಬಸಿರು ಹೊತ್ತಿದ್ದರು, ಮುಕುಂದಯ್ಯ -ಚಿನ್ನಮ್ಮರನ್ನು ಒಂದಾಗಿಸುವುದಕ್ಕಾಗಿ ಸರ್ವಸ್ವವನ್ನು ಲೆಕ್ಕಿಸದೆ ಶ್ರಮವಹಿಸುವ ಪಿಂಚಲು. 
 
ಚಿನ್ನಮ್ಮಳಿಗೋಸ್ಕರ ಸೀರುಡಿಕೆಯಾದ ತಾಯಿ ಸ್ವರೂಪಿ ನಾಗಕ್ಕ.                                                                                                                                                                                   ಚಿಂಕ್ರ ಮತ್ತು ದೇಯಿಯ ಮಕ್ಕಳನ್ನು   ತನ್ನ  ಮಕ್ಕಳಾಗಿ ಪ್ರೀತಿ ತೋರುವ ಅಕ್ಕಣ್ಣಿ. 

ಸ್ವಾಮಿಭಕ್ತ ಹುಲಿಯ (ಗುತ್ತಿಯ ನಾಯಿ )ತನ್ನ ಒಡೆಯನಿಗಾಗಿ ಭೋರ್ಗರೆದು ಹರಿಯುತ್ತಿರುವ ತುಂಗೆಯನ್ನು ಲೆಕ್ಕಿಸದೆ ನದಿಗೆ ಹಾರಿ ಪ್ರವಾಹದ ವಿರುದ್ಧ ಈಜಿದ ಗುತ್ತಿಯ ಪ್ರೀತಿಯ ಕುನ್ನಿ. 

ಮುಕುಂದಯ್ಯ -ಚಿನ್ನಮ್ಮರ ಪ್ರೀತಿ, ಪ್ರಲಾಪ, ಅಕ್ಕರೆಯ ನಡವಳಿಕೆ. 

ವೇಷ -ಭೂಷಣ, ಆಚಾರ -ವಿಚಾರಗಳಲ್ಲಿ ಕ್ರೈಸ್ತಧರ್ಮದ ಅನುಸರಿಸುತ್ತಿದ್ದ ದೇವಯ್ಯಗೌಡರು. 

ದೊಡ್ಡ ವಿದ್ವಾಂಸರಾಗಿ, ಪವಾಡಪುರುಷರಾಗಿ, ಸಂನ್ಯಾಸಿಯಾಗಿ ಗೋಚರವಾದ ಗಡ್ಡದಯ್ಯ. ಗಡ್ಡದಯ್ಯ ಹೇಳಿದ ಸ್ವಾಮಿ ವಿವೇಕಾನಂದರು ಭರತಖಂಡವನ್ನು ಸಂಚರಿಸಿ, ಭೋದಿಸಿ ಹೊಸದೊಂದು ಯುಗಶಕ್ತಿಯನ್ನು ಉದ್ಬೋದನಗೊಳಿಸುವ ವಿಚಾರ. 

ಸಾಬಾರುಗಳ ಮೋಸ -ವಂಚನೆಯ ವ್ಯಾಪಾರ, ಕೊಲೆ -ಸುಲುಗೆ, ಹೊಡೆತಗಳು. 

ಕೆಲವೊಂದು ಪಾತ್ರಗಳ ವರ್ತನೆ  ನಮ್ಮನ್ನು ಕಲ್ಪನೆಗೂ ಮೀರಿ ಯೋಚನಾಲೋಕಕ್ಕೆ ತಳ್ಳಿ ಮತ್ತೆ ವಾಸ್ತವಕ್ಕೆ ಕರೆತರುತ್ತವೆ. ಈ ಕಾದಂಬರಿಯನ್ನು ಓದುತ್ತಾ ಅದರೊಳಗಿನ ಒಂದು ಪಾತ್ರವಾಗಿ, ಅಲ್ಲಿದ್ದ ಪಾತ್ರಗಳೆಲ್ಲ ನನ್ನ ಸುತ್ತಮುತ್ತಲಿನವರಂತೆ ವಿಜೃಂಭಿಸಿ ಖುಷಿ ದೊರೆತು,ಅನಘ್ಯ ಅನುಭವ ಮೈ ಹೊಕ್ಕಿತು. 

ಕುವೆಂಪುರವರ ಕಲ್ಪನೆಯಲ್ಲಿ ಮೂಡಿಬಂದಿರುವ ಪ್ರತಿಯೊಂದು ಪಾತ್ರಗಳು ಅನನ್ಯ ಹಾಗೂ ಅದಮ್ಯವಾಗಿವೆ. ಕುವೆಂಪುರವರ ವಿಸ್ತೃತ ಕಲ್ಪನೆಗೆ ಪ್ರತಿಯೊಂದು ಪಾತ್ರಗಳು ಶರಣಾಗಿವೆ. 
ಇಂತಹ ಬೃಹತ್ ಕಾದಂಬರಿಯಲ್ಲಿಯ ಅದ್ಭುತವಾದ ಸಾಹಿತ್ಯವನ್ನು ಸವಿಯುವಂತೆ ಮಾಡಿದ  ಆತ್ಮಕ್ಕೆ ನಾ ಸದಾ ಚಿರಋಣಿ. 




ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...