ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶುಕ್ರವಾರ, ಫೆಬ್ರವರಿ 5, 2021

ಮುಪ್ಪು


ಶತ ಶತಮಾನಗಳಿಂದಲೂ
ಬಾಳಿ ಬಂದಿದ್ದೆ
ತಲೆಮಾರಿಗಿಲ್ಲ ಯಾರೂ ಇಂದು
ಕಾಲೊಂದು ಮುರಿಯಿತೆಂದು
ಹೊಳಪಿನ ಬಣ್ಣ ಮಾಸಿತೆಂದು
ಹಳೆಕೊಠಡಿಯ ವಾಸ್ತವ್ಯಕ್ಕೆ
ತಂದು ಬಿಸುಟಿದರು 
ಗತಕಾಲವೂ ಇಂದಿಲ್ಲಿ ನೆನಪಾಗಿದೆ 
ಎಲ್ಲರ ಸಮ್ಮುಖ ಅಂದು ನಾ 
ಅರೆಬರೆ ತಿಂದು ಆಲಿಸಿದ 
ನ್ಯಾಯದ ತುಣುಕುಗಳು 
ಬಹಿಷ್ಕರಿಸಿದ ವ್ಯಾಜ್ಯಗಳು, 
ದಾರಿ ಅರಸಿ ಸೋಲನ್ನಪ್ಪಿದ 
ಭೂ ಮಾತೆಯರು ನನ್ನಲ್ಲಿ ವಿರಳ 
ತಾರುಣ್ಯದಲ್ಲಿ ಉದಾಸೀನತೆ 
ಕುಡಿಯುವ ನೀರಾಗಿತ್ತು ನನಗೆ 
ಹಾಗೆ ಮುದುಕ -ಮುದುಕಿಯರ 
ಕಣ್ಣೀರೂ  ಸಹ 
ಅದೆಷ್ಟೋ  ಬಡವರು ನನ್ನ ಕಾಲುಗಳಿಗೆ
ಪಾಲಿಸು ಮಾಡಿದ್ದರು 
ಹೆಪ್ಪುಗಟ್ಟಿದ್ದ ರಕ್ತದ ಕಲೆಗಳನ್ನು 
ಕೆರೆದು ತೆಗೆದಿದ್ದರು 
ರಕ್ತ ಬೀಜಾಸುರರು ಮೆಟ್ಟಿಲೇರಿ 
ಅಟ್ಟಹಾಸಗೈದಿದ್ದರು ನನ್ನಲ್ಲಿ 
ಲೆಕ್ಕವಿಲ್ಲದಷ್ಟು ನೋಟಿನ ನೊಣಗಳು
ಅಂಟಿ ಗುಯ್ ಗುಟ್ಟಿದ್ದವು 
ಬ್ಯಾಕ್ಟೀರಿಯಾ, ವೈರಸ್ಸುಗಳು ಕೊರೆದು 
ಕರಕಲು ಮಾಡಿ ಅದೃಶ್ಯವಾಗಿದ್ದರೂ 
ಜಾತಿ, ವಿಜಾತಿಯ ಬೇರುಗಳು 
ಹಬ್ಬಿ ಬಿಟ್ಟಿದ್ದವು 
ಎಲ್ಲವೂ ಜೊಂಪುಗಟ್ಟಿದ್ದವು ಅಂದು ನನ್ನಲ್ಲಿ. 
ಇಂದು ನಾ ಮುರಿದಿರುವೆ 
ಅದೇ ಜನ ನನಗೂ ತೋರಿರುವರು 
ಮುಪ್ಪನು ಮರೆಯುವ  ತಾರುಣ್ಯವ 
ನನ್ನಂತೆ ಶತ ಶತಮಾನ ಅರಸಿ 
ಮರುಗುತ್ತಿರುವ ಈ ಹಾಳು ಉಗ್ರಾಣದಲ್ಲಿ. 

 

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...