ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..
ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವಿತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಅಕ್ಟೋಬರ್ 6, 2021

ಕೆಲಸಬೇಕಾಗಿದೆ

ಕಸಗುಡಿಸುವ
ಕೆಲಸಬೇಕಾಗಿದೆ, ಆ ಕಚೇರಿಯಲಿ
ಆ ಒಲವ ನೋಡಲು
ಅದರ ಚೆಲುವ ಸವಿಯಲು
ಅಂತರ್ಯ ಸ್ವಚ್ಛವಾಗಲು

ಆ ಒಂದು ಕಚೇರಿಯಲಿ
ಒಲವಿಂದ ಉಸಿರಾಡುತ್ತಿರುವ
ಹಸಿರಿನ ಅರಿವನ್ನು
ನಾ ಉಸಿರಾಡಲು
ಕೆಲಸ ಬೇಕಾಗಿದೆ, ಆ ಕಚೇರಿಯಲಿ

ಒಲವು ಮೌನದಲಿ
ಪ್ರತಿಭಟಿಸುತ್ತಿರುವ
ಶಿಷ್ಟತೆಯ , ಮಾರ್ದನಿಯಾಗಿ
ಧ್ವನಿಸಲು  ಕೆಲಸಬೇಕಾಗಿದೆ
ಆ ಕಚೇರಿಯಲಿ 

ಒಲವಲ್ಲಿ ತುಂಬಿರುವ 
ಗಾಂಭೀರ್ಯವನು ಅಳೆದು 
ಕುಡಿದು ಹೊರಹೊಮ್ಮಿದ ಹೂವಾಗಲು 
ಕೆಲಸಬೇಕಾಗಿದೆ, ಆ ಕಚೇರಿಯಲಿ 

ಒಲವಿನ ಕಣ್ಣಲ್ಲಿ ಕಣ್ಣಾಗಿ 
ಮಾತಲ್ಲಿ ಮಾತಾಗಿ 
ಸುತ್ತಲಿನ ಸಾಂಗತ್ಯವಾಗಿ 
ಅದರ ಚಪ್ಪಲಿಯ ಧೂಳಾಗಿ 
ಅದರಂತೆ ಶಾಂತಿ ಸೌಹಾರ್ದದ 
ಮೂರ್ತಿಯಾಗಲು 
ಕೆಲಸಬೇಕಾಗಿದೆ,  ಆ ಕಚೇರಿಯಲ್ಲಿ 
ಕಸಗುಡಿಸುವ ಕೆಲಸಬೇಕಾಗಿದೆ. 


ಅಮ್ಮ

ಪಾಪ ಅಮ್ಮ , ಎಂದು
ಅನ್ನಿಸಲೇ ಇಲ್ಲ
ಉರಿಮುಖದ ಸಹಾನುಮೂರ್ತಿಯ
ಒಳಗಿನ ಭಾವ ಎಂದೂ
ಅರಿಯಲೇ ಇಲ್ಲ, ಅರಿತ್ತದ್ದು ಒಂದೇ 
ವಟ ವಟ ಎನ್ನುವ ಬೈಗುಳ 
ರೋಗಕ್ಕೆ ನಂಟು ಬಿದ್ದು 
ಬೆವರಲ್ಲೇ ಉಣ ಬಡಿಸಿದರೂ 
ಕಂಡಿದ್ದು ನನ್ನ ಹಸಿವಷ್ಟೆ 
ಮೊಳಕೆಯೊಡೆದ ಅದೆಷ್ಟೋ 
ತನ್ನೊಳಗನ್ನು ಸಂಸಾರದ
ಕೆನ್ನಾಲಗೆಯಲ್ಲಿ ಅದ್ಹೇಗೆ 
ಚಿವುಟಿರಬಹುದು? 
ಸೊರಗಿ ಮೂಡಿದ ಸೀರೆಯ 
ನೋವಿನ  ನೆರಿಗೆಗಳನು 
ಅಮ್ಮ, ಎಂದಿಗೂ ಬಿಚ್ಚಿ 
ಹರಡಲಿಲ್ಲ 
ನಕ್ಕು ಹರಡಿದರೂ ಅದ 
ಅರಿಯುವ ಗೋಜು 
ಯಾರಿಗಿರಲಿಲ್ಲ
ಒಮ್ಮೆ ಅಲ್ಲಿಂದ ಕಾಲ್ಕಿತ್ತರೆ 
ಸಾಕೆನ್ನುತ್ತಿದ್ದ ಮನವಿಂದು 
ಘಾಸಿಗೊಂಡು ಉರಿವ
ಅದೇ ಕರಿನೆರಳ  
ಪಾಪ ಪ್ರಜ್ಞೆಯ   ಭಾಸದಲಿ.














ಸ್ವಾತಂತ್ರ್ಯ

ನಿನಗೊಂದು ಸ್ವಇಚ್ಚೆಯ ಪ್ರಶ್ನೆ
ಉತ್ತರಿಸುವೆಯ ಅಪ್ಪಿ...
ಸ್ವಾತಂತ್ರ್ಯಕ್ಕೆ ರೆಕ್ಕೆ ಬರುವುದು
ಯಾವಾಗ...?
ಪ್ರತಿ ಮನೆ -ಮನಗಳು
ಮಸಣದಿಂದೆದ್ದು ಹೊರಬರುವುದು
ಯಾವಾಗ...?
ಕಳ್ಳಗಿಂಡಿಯಲ್ಲಿ ಸದಾ ಬಗ್ಗಿ ನೋಡುವ
ಸ್ವಾತಂತ್ರ್ಯ, ಮುಖಾಮುಖಿಯಾಗುವುದು
ಯಾವಾಗ..?
ತಳ್ಳುವಿಕೆ, ನೂಕುವಿಕೆಗೆ ನಾಚುವ ಸ್ವಾತಂತ್ರ್ಯ
ರಾರಾಜಿಸುವುದು ಯಾವಾಗ...?
ಹೆಣ್ಮಕ್ಕಳ ಹಣೆಯಗಲದ ಕುಂಕುಮದಲಿ 
ಮಾತಾಗುವುದು  ಯಾವಾಗ...? 
ಹೆಂಗಳೆಯರ ಕಾಲ್ಗೆಜ್ಜೆಯಲಿ 
ನಲಿದಾಡುವ ದನಿಯಾಗುವುದು 
ಯಾವಾಗ...? 
ಕಂಬಗಳಲಿ ಮುಗಿಲ್ನೋಡುತ 
ಪಟ ಪಟನೆ ಕೈ ಬೀಸಿ ಕರೆಯುವ 
ಬಾವುಟಕ್ಕೆ ಅರ್ಥದ ಗಾಳಿ 
ಸ್ಪರ್ಶಿಸುವುದು ಯಾವಾಗ..? 
ಸ್ವಾತಂತ್ರ್ಯಕ್ಕೂ ಸ್ವಾತಂತ್ರ್ಯ 
ಮುತ್ತಿಕ್ಕುವುದು ಯಾವಾಗ..? 
ನನ್ನ ದೇಶ, ಬಾಪು ಬಯಸಿದ 
ಸ್ವಾತಂತ್ರ್ಯ ಕೊಡುವುದು ಯಾವಾಗ..? 
ಉತ್ತರಿಸುವೆಯ ಅಪ್ಪಿ.....? 



ತೂತು

ಬಚ್ಚಲ ತೂತು ದೊಡ್ಡದಾಯಿತೆಂದು
ಚಿಕ್ಕದು ಮಾಡಲು ಪ್ರಯತ್ನಿಸಿದೆ
ಮರುದಿನ ಅದರ ಸುತ್ತೆಲ್ಲಾ ಬಿರುಕುಗಳು
ಅದನ್ನೂ ಮುಚ್ಚಿ, ಉಸಿರು ಬಿಡುವಲ್ಲಿಗೆ
ಇಲಿರಾಯ ಒಂದು ಚಿಕ್ಕ
ಬಿಲ ಕೊರೆದು ಓಡಾಡಿದ
ಮಗನ ಬೆರಳು ಸಿಕ್ಕಿಕೊಂಡರೆಂದು
ಮಣ್ಣು ಹಾಕಿ ಸಮ ಮಾಡಿದೆ
ಕಣ್ಣು ಮುಚ್ಚಿ ಬಿಡುವುದರೊಳಗೆ
ಇರುವೆಗಳು ಸಾಲು ಸಾಲು
ಇದರ ಗೋಜೆ ಬೇಡೆಂದು
ಅಲ್ಲಿಗೊಂದು ಬೋರ್ಡು
ನೇತುಹಾಕಿದೆ
ಎಲ್ಲಾ ಕ್ರಿಮಿಗಳಿಗೂ
ಇಲ್ಲಿ ಸ್ಥಳಾವಕಾಶವಿದೆ
ಸವಾಲುಳ್ಳ ದೊಡ್ಡ ಕ್ರಿಮಿಗಳಿಗೆ
ಹೆಚ್ಚು ಪ್ರಾಶಸ್ತ್ಯ
ಹಾಗೂ ಸತ್ಕರಿಸುವಿಕೆಯೇ
ಉತ್ತರವಾಗಿರುವುದೆಂದು.


ಮಂಗಳವಾರ, ಸೆಪ್ಟೆಂಬರ್ 14, 2021

ಆತ್ಮ

ಆತ ತನ್ನಾತ್ಮದ ಉಸಿರಿಗೆ
ತನ್ನೆಲ್ಲಾ ಜೀವ, ಭಾವ
ಬಸಿದು, ರೂಪುಕೊಟ್ಟು
ಜೀವ ತೆತ್ತನು.
ಆ ರೂಪಿಂದು ಅರಳಿ
ಹೂವಾಗುವ ಹಾದಿಯಲ್ಲಿ.....


ಶಾನು -ಆನು

ಶಾನು, ಆನು ಸೇರಿಕೊಂಡು
ಜಿಗಿದು ನಲಿದು
ಒಂದೇ ಸಮನೆ
ಗೊಳ್ಳು ಹಾಕುತ...
ಸೋನು ಬಂದು
ಹಿಡಿದು ಬಡಿದು
ಕೇಕೆ ಹಾಕುತ....
ಇದನು ಕಂಡು
ಶಾನು, ಆನು
ಮುದುಡಿ ಕುಳಿತ
ಕುಯ್ ಕುಯ್ ಗುಟ್ಟುತ.




ಸೋಮವಾರ, ಜುಲೈ 12, 2021

ಸ್ನೇಹಿತೆ


ಸ್ನೇಹಿತೆಯ ಕೈಯಲ್ಲಿದ್ದ
ಬೆಂಕಿಯನ್ನು ಕುರಿತು ಕೇಳಿದೆ
ಎಲ್ಲಿಂದ ತಂದಿರುವೆ..?
ಪಕ್ಕದ ಮನೆಯಿಂದ
ಎಂದಳವಳು ನಗುನಗುತ
ನನ್ನ ನಿನ್ನ ಮೈಯ
ಕಾವು ಆ ಬೆಂಕಿಯನ್ನು
ಕ್ಷಣಮಾತ್ರದಲ್ಲಿ
ನಂದಿಸಿಬಿಡುವಷ್ಟಿದೆ
ಎಂದೆನವಳಿಗೆ 
ಕಣ್ಣೊಳಗಿನ ಕಾವು ಹೊರ 
ಹಾಕುತ್ತಾ ಬಿಟ್ಟ ಕಣ್ಣು, 
ಬಾಯಿ ಬಿಟ್ಟಂತೆ 
ಸ್ನೇಹಿತೆ ಸ್ತಬ್ಧ.  



ಶನಿವಾರ, ಜೂನ್ 19, 2021

ಅಂಶ


ನೀ ನನ್ನೊಳಗೆ ಬೆಳೆಯಬೇಕಿತ್ತು
ಬೊಜ್ಜಾಗಿಯೋ
ತ್ಯಾಜ್ಯವಾಗಿಯೋ ಅಲ್ಲ
ನನ್ನಾತ್ಮದ ಬುದ್ಧನಾಗಿ
ಪ್ರತಿ ಉಸಿರಾಡದಲಿ
ನಿನ್ನಂಶದ ತಾಳ್ಮೆಯಾಗಿ
ಕಸಿವಿಸಿ ಮೊಳಕೆಗಳ 
ಹಸಿರಂಶವಾಗಿ 
ದೃಢತೆ ಕಾಯದ ಹೆಮ್ಮರವಾಗಿ 
ಹಾರಾಡಿ, ಕಾಲ್ಕಿತ್ತು ಓಡುವ 
ನನ್ನೊಳಗಿಗೆ  ಲಗಾಮುದಾರನಾಗಿ. 


ಶುಕ್ರವಾರ, ಜೂನ್ 11, 2021

ಕನಸುಗಳು

ನಾ ಕಂಡ ಕನಸುಗಳಲಿ
ನೇವರಿಸುವ ನೆತ್ತಿಗಳಿರಬೇಕಿತ್ತು
ಕನಸುಗಳಿಗೆ ಬಲೆ ಹೆಣೆದು
ದಾರಿ ತೋರುವ ಕಲ್ಪನೆಯ
ಹೊತ್ತಿಗೆಗಳಿರಬೇಕಿತ್ತು
ಮಾತುಗಳಿಗೆ ಹಿತ ತುಂಬುವ
ತುಟಿಗಳಿರಬೇಕಿತ್ತು
ವಾಸ್ತವಕ್ಕೆ ಚಿಮ್ಮಿ ನಿಲ್ಲುವ 
ಪಾದಗಳ ಸ್ಪರ್ಶವಿರಬೇಕಿತ್ತು 
ಸೂಕ್ಷ್ಮಕ್ಕೆ ಸೂಕ್ಷ್ಮ ತಿಳಿಸುವ 
ಅರಿವುಗಳಿರಬೇಕಿತ್ತು 
ಭಾವಕ್ಕೆ ನಂಟು ಬೆಸೆಯುವ 
ಮಿಡಿತಗಳಿರಬೇಕಿತ್ತು 
ರಾಗಕ್ಕೆ ಲಯ ಬೆಸೆಯುವ
ತಾಳ ಸಿಗುವಂತಿರಬೇಕಿತ್ತು 
ಸುಮ್ಮನೆ ಕೂತಾಗ ಸ್ಪರ್ಶಿಸಿ 
ಛೇಡಿಸಿ ಹೋಗುವ ತಂಗಾಳಿಯ 
ಸಾಂಗತ್ಯವಿರಬೇಕಿತ್ತು 
ಏನಿಲ್ಲದಿದ್ದರೂ 
ನಿನ್ನಲ್ಲಿಯ ಬುದ್ಧನ ಸಾಮರಸ್ಯದ 
ಹಿತ ಸ್ಪರ್ಶ ಸ್ವಲ್ಪವಾದರೂ 
ಇರಬೇಕಿತ್ತು. 

ಹೆಪ್ಪು


ನೀ ಅಂದು ನಕ್ಕೆ.. !
ಗಾಣದಲ್ಲಿ ಸಿಕ್ಕಿದ ನಗು ಹೆಪ್ಪುಗಟ್ಟಿ ತಿರುಗಿತು
ಗಾಣ ನಿಂತರೂ ಸವೆದ ದಾರಿಗಳು ಮಾಸಿಲ್ಲ
ತಿರುಗುತ್ತಲೇ ಇವೆ
ಒಳಗಿಳಿದ ಅದರ ಬೇರುಗಳು
ನಾ ನಕ್ಕು ಚಿಗುರೊಡೆಯಲು
ಇಂದೂ ಕಾಯುತ್ತಲೇ ಇವೆ.






ಬುಧವಾರ, ಜೂನ್ 2, 2021

ಉಯಿಲು

ಕೊಟ್ಟು ಬಿಡಿ ನಿಮ್ಮಲಿ
ಚಾಚುತ್ತಿರುವ ಕೆನ್ನಾಲಿಗೆಯ ಕಿಚ್ಚುಗಳಿಗೆ
ನನ್ನ ವಿಳಾಸವನು
ದೇವರು ನನ್ನ ಹೆಸರಿಗೆ ಉಯಿಲು
ಬರೆದು ಅದರ ಮೇಲೆ ನನ್ನ
ಹೆಸರು ಅಂಟು ಹಾಕಿದ್ದಾನೆ ಎನ್ನಲಾಗಿದೆ
ನುಂಗಲು |ನೀರು ಕುಡಿಯಲು 
ದಣಿವಾರಿಸಿ ಕೊಳ್ಳಲು |ತಿಂದು ತೇಗಲು 
ಹಾ.....,     ಮರೆಯದಿರಿ  
ನಿಮ್ಮ ಅಕ್ಕ ಪಕ್ಕದವರು, ಪರಿಚಿತರಿಗೆ 
ನನ್ನ ವಿಳಾಸ ಕೊಡಲು. 





ಮಂಗಳವಾರ, ಏಪ್ರಿಲ್ 6, 2021

ಮುತ್ತುಗ

ನಾನಂದು ನೋಡ ಹೋಗಿದ್ದು
ಕಾಡಿಗೆ ಮುತ್ತುಗ
ಮುತ್ತು ಮುತ್ತಿನ ಕೆಂಪು
ಮುತ್ತಿನ ಮುತ್ತುಗ
ನಾ ಕಂಡಿದ್ದು ಕೆಂಪು ಹವಳ ದ್ವೀಪ
ಮುತ್ತಿನ ಮುತ್ತುಗ
ಕಾಡಿನ ನಡು ಹೊಕ್ಕುಳಲ್ಲಿ
ಅವಿತಿದ್ದ ಕೆಂಪು ಮುತ್ತು ಮುತ್ತುಗ
ಕಾಡೆಲ್ಲಾ ಸೂರೆಗೊಂಡು 
ಚಪ್ಪರ ಹಾಸಿ ಘಮ ಘಮಿಸಿ 
ಸೆಳೆಯುತ್ತಿದ್ದ ಕಾಡಿನ ಕೆಂಪು 
ಕಂಪಿನ ಚೆಂದುಳ್ಳಿಯ 
ಅಂದ ರಾಣಿ ಮುತ್ತುಗ 
ಸುಡು ಬಿಸಿಲಿನ ಇನಿಯನನ್ನು 
ತಬ್ಬಿ ಜ್ವಾಲೆಯಾಗಿ ಉರಿಯುತ್ತಿದ್ದ 
ಮೋಹಗಾತಿ ಮುತ್ತುಗ 
ಅಮ್ಮ ಬಡಿಸಿ ಹಸಿವಿಂಗಿಸುವ 
ಬಾಳ ತಟ್ಟೆಯ ಮುತ್ತುಗ 
ಕಾಡಿನರಾಜನ ಹೊಳೆಯುವ 
ಕಿರೀಟ ರಾಣಿ ಮುತ್ತುಗ 
ದುಂಬಿಗಳೊಂದಿಗೆ ಪಿಸುಗುಡುವ 
ಲಾವಣ್ಯಕಾಂತಿ ಮತ್ತಿನ ಮುತ್ತುಗ 
ಕಾಡಿನ ಸ್ವಾತಿ ಮುತ್ತು ಮುತ್ತುಗ. 


ಬುಧವಾರ, ಫೆಬ್ರವರಿ 24, 2021

ಕ್ಷಮಿಸು

ಕ್ಷಮಿಸು ಎಂಬುದು ಆಗಾಗ್ಗೆ
ಮರುಕಳಿಸುವ ಮಾರ್ದನಿ
ನಮ್ಮ ಮನುಕುಲದೊಳಗೆ
ಹಿಂಜರಿಕೆ, ಮುಗ್ಗರಿಕೆಗಳಿಲ್ಲ
ಕ್ಷಮಿಸುವಿಕೆಯ ಅರಿವು
ಪರಿವಿನ ಪಟ್ಟಿಯಲ್ಲಿ
ಮುಲಾಜು ರಿಯಾಯಿತಿಗಳಿಲ್ಲ
ಲಯ, ತಾಳಗಳಿಲ್ಲ
ಆದರೆ ವಜ್ರದ ಹೊಳಪಿದೆ
ಪಾದರಸದ ಹರಿವಿದೆ
ಒಮೊಮ್ಮೆ ಮುಗ್ಗರಿಸಿ ಪಲ್ಟಿ
ಹೊಡೆದರೂ ಇನ್ನೊಮ್ಮೆ
ಸೆಟೆದು ನಿಲ್ಲುತ್ತದೆ
ಸಾವೇ ಕಣ್ಣೆದುರಿದ್ದರೂ
ಸರಳ ಸುಲಲಿತವಾಗಿ
ಮಾಡುವುದ ಮಾಡಿ
ನನ್ನ ನೀ ಕ್ಷಮಿಸು. 
ನಾ ಕ್ಷಮಿಸುವಿಕೆಯನ್ನೇ 
ಪ್ರಶ್ನಿಸುವೆ ತರವೇ ಇದುವೆ ನಿನಗೆ...? 
ಕ್ಷಮಿಸು..... 


ಅಪ್ಪ

ಅಂದು ಅಪ್ಪ ತನ್ನ ನೋವಿನ ಬೀಜವನ್ನು
ನನ್ನೊಳಗಿನ ನಾನಾಗಿ ಬಿತ್ತಿದ
ಅದು ನನ್ನೊಳಗಿನ ನಾವಾಯಿತು
ಹಗಲು ರಾತ್ರಿ ತನ್ನ ಬೆವರು
ಘಾಟಿನ ಸಿಡಿ ಮಿಡಿಯನ್ನು ಮೆತ್ತಿದ
ಮೊಳೆತ ಗಿಡಕೆ ತನ್ನಂತೆ ಪ್ರಾಮಾಣಿಕತೆಯ 
ತಾಜಾತನದ ನೀರುಣಿಸಿದ 
ಅಮ್ಮ ಮುಲಾಮು ಇಲ್ಲದ ತನ್ನ 
ನೋವುಗಳಿಂದ ಪೋಷಣೆ ಮಾಡಿ 
ನಗೆಯೆಂಬ ಹರಿದ ಚಾಪೆ ಹೊದಿಸಿದಳು 
ಅವರಿಬ್ಬರ ಕತ್ತಲು ಬೆಳಕಿನ ಈಜಾಟದಲ್ಲಿ 
ಸಸಿ ಬಾಡದೆ ಚಿಗುರೊಡೆಯಿತು 
ಮಳೆ ಬಿಸಿಲಿನ ಒಲವ ತಾಪಕೆ 
ಇಬ್ಬರೂ ತಮ್ಮ ದೇಹದ ಚರ್ಮ
ಬಿಸಿಲುಡಿಗೆ ಮಾಡಿ 
ಗಿಡಕೆ ಹೊರಿಸಿದರು 
ಗಿಡ ಕವಲೊಡೆಯುವುದರಲ್ಲಿ 
ಎಡವಿದರು ಮೂಲತ್ವದಲ್ಲಿ 
ಅರಳಿ ಮರವಾಯಿತು 
ಆದರೀಗ ಬುಡಕೆ ತಗುಲಿದೆ 
ಮಾರ್ಮಿಕ ಹುಳುವಿನ ಕೊರೆತ 
ಉಳಿವು ಅಳಿವುಗಳಲ್ಲಿ 
ಪ್ರಶ್ನೆಯಾಗಿ ಕಂಡಿಹುದು 
ನನ್ನೊಳಗಿನ ನಾನು -ನಾವು. 






ಚೀಲ

ಬಲೆ ಬಲೆಯ ಕತ್ತಲೆಯ ಚೀಲ 
ನಾ ಅದರೊಳಗೆ  ಬೆಳಕನ್ನು 
ಹಿಡಿದು ಆದಷ್ಟು ತುಂಬಿದ್ದೆ 
ಬೆಳಕು ಮಿನುಗುವುದು ಬಲೆಯಲ್ಲಿ 
ಆಗಾಗ ಕಾಣುತಿತ್ತು
ಮೂಲೆಯಲ್ಲೆಲ್ಲೋ ದುಗುಡ 
ಬೆಳಕು ಕತ್ತಲ್ಲನ್ನು ನುಂಗುವುದೋ 
ಕತ್ತಲೆ ಬೆಳಕಿಗೆ ಶರಣಾಗುವುದೋ
ಚೀಲದ ದಾರ ಅಲುಗಾಡತೊಡಗಿತು 
ಆದಷ್ಟೂ ಬಿಗಿದು ಸರಿಮಾಡಿ 
ಕುಳಿತೆ ವಿರಮಿಸಲು 
ಕ್ಷಣಮಾತ್ರದಲ್ಲಿ ಹಿಂದೆ 
ಧಗ್ ಎಂಬ ಸದ್ದು 
ನಿಧಾನವಾಗಿ ನೋಡಿದೆ ತಿರುಗಿ 
ಚೀಲ ಛಿದ್ರ ಛಿದ್ರ !
ಬೆಳಕೆಂಬ ಸುಳಿವಿಲ್ಲ 
ಕತ್ತಲು ಸುರಿದು ಹರಿದಾಡುತ್ತಿದೆ 
ಅದ ನೋಡಿ ನನಗೆ ದಿಗಿಲಿನ ಮೂರ್ಛೆ 
ಕತ್ತಲೊಳಗೆ ನನ್ನದೇ ಪ್ರತಿಬಿಂಬ 
ಗಹ ಗಹಿಸಿ ನಗುತ್ತಿದ್ದ ಕಂಡು. 




ಶುಕ್ರವಾರ, ಫೆಬ್ರವರಿ 5, 2021

ಮುಪ್ಪು


ಶತ ಶತಮಾನಗಳಿಂದಲೂ
ಬಾಳಿ ಬಂದಿದ್ದೆ
ತಲೆಮಾರಿಗಿಲ್ಲ ಯಾರೂ ಇಂದು
ಕಾಲೊಂದು ಮುರಿಯಿತೆಂದು
ಹೊಳಪಿನ ಬಣ್ಣ ಮಾಸಿತೆಂದು
ಹಳೆಕೊಠಡಿಯ ವಾಸ್ತವ್ಯಕ್ಕೆ
ತಂದು ಬಿಸುಟಿದರು 
ಗತಕಾಲವೂ ಇಂದಿಲ್ಲಿ ನೆನಪಾಗಿದೆ 
ಎಲ್ಲರ ಸಮ್ಮುಖ ಅಂದು ನಾ 
ಅರೆಬರೆ ತಿಂದು ಆಲಿಸಿದ 
ನ್ಯಾಯದ ತುಣುಕುಗಳು 
ಬಹಿಷ್ಕರಿಸಿದ ವ್ಯಾಜ್ಯಗಳು, 
ದಾರಿ ಅರಸಿ ಸೋಲನ್ನಪ್ಪಿದ 
ಭೂ ಮಾತೆಯರು ನನ್ನಲ್ಲಿ ವಿರಳ 
ತಾರುಣ್ಯದಲ್ಲಿ ಉದಾಸೀನತೆ 
ಕುಡಿಯುವ ನೀರಾಗಿತ್ತು ನನಗೆ 
ಹಾಗೆ ಮುದುಕ -ಮುದುಕಿಯರ 
ಕಣ್ಣೀರೂ  ಸಹ 
ಅದೆಷ್ಟೋ  ಬಡವರು ನನ್ನ ಕಾಲುಗಳಿಗೆ
ಪಾಲಿಸು ಮಾಡಿದ್ದರು 
ಹೆಪ್ಪುಗಟ್ಟಿದ್ದ ರಕ್ತದ ಕಲೆಗಳನ್ನು 
ಕೆರೆದು ತೆಗೆದಿದ್ದರು 
ರಕ್ತ ಬೀಜಾಸುರರು ಮೆಟ್ಟಿಲೇರಿ 
ಅಟ್ಟಹಾಸಗೈದಿದ್ದರು ನನ್ನಲ್ಲಿ 
ಲೆಕ್ಕವಿಲ್ಲದಷ್ಟು ನೋಟಿನ ನೊಣಗಳು
ಅಂಟಿ ಗುಯ್ ಗುಟ್ಟಿದ್ದವು 
ಬ್ಯಾಕ್ಟೀರಿಯಾ, ವೈರಸ್ಸುಗಳು ಕೊರೆದು 
ಕರಕಲು ಮಾಡಿ ಅದೃಶ್ಯವಾಗಿದ್ದರೂ 
ಜಾತಿ, ವಿಜಾತಿಯ ಬೇರುಗಳು 
ಹಬ್ಬಿ ಬಿಟ್ಟಿದ್ದವು 
ಎಲ್ಲವೂ ಜೊಂಪುಗಟ್ಟಿದ್ದವು ಅಂದು ನನ್ನಲ್ಲಿ. 
ಇಂದು ನಾ ಮುರಿದಿರುವೆ 
ಅದೇ ಜನ ನನಗೂ ತೋರಿರುವರು 
ಮುಪ್ಪನು ಮರೆಯುವ  ತಾರುಣ್ಯವ 
ನನ್ನಂತೆ ಶತ ಶತಮಾನ ಅರಸಿ 
ಮರುಗುತ್ತಿರುವ ಈ ಹಾಳು ಉಗ್ರಾಣದಲ್ಲಿ. 

 

ಬುಧವಾರ, ಜನವರಿ 13, 2021

ಸೂರ್ಯ

ಸೌರಮಂಡಲ ಶೋಭಿತ ನಕ್ಷತ್ರ ನಮ್ಮ ವೈವಸ್ವತ. ತಾನು ಉರಿದು ಜಗಕ್ಕೆಲ್ಲ ಬೆಳಕು ಕೊಡುವುದು ಅರ್ಕನ ಸ್ವಭಾವತಃ ಕರ್ತವ್ಯ ಒಪ್ಪುವ, ಆದರೆ ಆಯಾಸಗೊಂಡಾಗ, ಭೂಮಿ ಆತಂಕದ  ಭೂಕಂಪ, ಜ್ವಾಲಾಮುಖಿಯ  ಸೃಷ್ಟಿಯಲ್ಲಿ ಕರಗುತ್ತಿದೆ ಎಂಬುದನ್ನು ಅರಿತು ಬೆಳಗಿದರೆ ಸೌರಮಂಡಲದ ಒಡೆಯ ಮತ್ತಷ್ಟು ಶೋಭಿತನಾಗುತ್ತಾನೆ. 


ಮಂಗಳವಾರ, ಡಿಸೆಂಬರ್ 15, 2020

ಪ್ರೀತಿ

ನೀ ನನಗೇನಾದರು ಮಾಡಬೇಕೆಂದರೆ
ಯಮನು ನನ್ನ ಪ್ರೀತಿಸಿ ಅಪ್ಪಿದಾಗ
ನನಗೊಂದು ಗೋರಿ ಕಟ್ಟಿಸು
ಹಾ..! ಅದನ್ನು ನೀನು ಮಾತ್ರ ಕಟ್ಟಬೇಕು
ಗಾಜಿನ ಗೋಪುರ ಕಳಶವಾಗಿರಲಿ
ನನ್ನ ಉಸಿರು ನಿನ್ನ ಅದರಲ್ಲಿ ತಾಕುತಿರಲಿ
ಗೋರಿ ಮಾಡುವಾಗ ನನ್ನ ಬಿಟ್ಟು
ಬೇರೇನನ್ನೂ ನೆನೆಯಕೂಡದು, ನನ್ನ
ಪ್ರೀತಿಯ ಪರಿವಿದ್ದರೆ.
ಅದರ ಸುತ್ತ ರಜ ಬೆಳೆಯದಂತೆ ನೋಡಿಕೋ
ನೆನಪಿಟ್ಟುಕೋ ಒಂದು ಹನಿಯೂ ಕಣ್ಣಿಂದ
ಜಾರದಿರಲಿ ನನ್ನ ದಣಿವಾರಿಸಲು 
ನನ್ನನಿಡುವಾಗ ಗೋರಿಯೊಳಗೆ 
ನನ್ನ ಕಣ್ಣುಗಳಲ್ಲಿ ನಿನ್ನ ಪ್ರತಿಬಿಂಬ 
ಅಚ್ಚಾಗಿರಲಿ, ನಿನ್ನ ನಾ ಹಿಂಬಾಲಿಸುವಂತೆ 
ಸ್ಪರ್ಶಿಸಿರದ ಅಧರಗಳನ್ನು ಹಣೆಗೊತ್ತಿ 
ನುಡಿ, ನನ್ನಂಶವಾಗಿ  ಆವಿರ್ಭವಿಸು 
ಸಾಧ್ಯವಾಗದಿದ್ದರೆ ಮರುಗಬೇಡ 
ನಿನ್ನ ವಿಶಾಲ ಮನಸ್ಸಿನ ಆಲಯದಲ್ಲಿ 
ಶಾಶ್ವತವಾಗಿ ಗೋರಿ ಕಟ್ಟಿ ಬಚ್ಚಿಡು 
ಅದಕ್ಕೊಂದು ಜೀವಂತ ಸ್ಮಾರಕ 
ಕಟ್ಟು ನಿನ್ನ ಉಸಿರಿನಿಂದ 
ಹೆಸರಿಡು, ವಾಕ್ಯವನ್ನು ಕಾಣಿಸು 
ನನ್ನ ಕನಸಿನ ಮಗು 
ಗೋರಿಯಲಿ ಚಿರನಿದ್ರೆ ಅರಸಿದೆ. 




ಸೋಮವಾರ, ನವೆಂಬರ್ 23, 2020

ಪಸೆ


ಒಂದು ಹುಳು
ಹಸಿ ಹಸಿಯಾಗಿ ಮಿಣುಕಿ
ಉಸಿರಾಡುತಿತ್ತು
ನುಣುಪು ನುಣುಪಾಗಿತ್ತು
ಪಸೆಯ ಹರಿಸಿ ಭ್ರಮಿಸುತಿತ್ತು
ಅದ ಕಂಡ ಕೊರಕಲು
ಅಭಿಮಾನದಿಂದ ಕುದಿಯಿತು 
ಹುಳುವೂ ಅದರಲಿ ಮಿಂದಿತು 
ದಿನ ದಿನಗಳು ಮೈತಳೆದವು 
ಹುಳುವು ತನ್ನ ಹಸಿ ಪಸೆಯನ್ನು 
ನಿಧಾನವಾಗಿ ಬಿಚ್ಚಿ 
ಬಿಸಿಲಿನ ಬೆಳಕಲ್ಲಿ ಬಿಸುಟಿ
ಏಕಾಂತದಲ್ಲಿ ಮೈ ಚಾಚಿತು 
ಕೊರಕಲು ಇದ ಕಂಡು ಹುಬ್ಬೇರಿಸಿತು 
ಲೋಕದ ಹಾಲ್ಬಣ್ಣವ ಅರಿತು 
ತಾನು ಕುಳಿತಲ್ಲೇ ಕುಸಿದು 
ನೀರಾಗಿ ಮಿಣುಕಿತು 
ಪಸೆಯ ಉಳಿಸಿ ಅಮರತ್ವವ ಕುಡಿಯಿತು 



ಭಾವ

ನನ್ನೊಳಗೆ ನಾ ಹೊಕ್ಕಿ
ನನ್ನೊಂದಿಗೆ ನಾ ಬದುಕಿಕೊಳ್ಳುವೆ
ಯಾರ ಹಂಗಿಲ್ಲ ನನಗೆ
ಮೆಚ್ಚುವ ಪರಿವೂ ಬೇಕಿಲ್ಲ
ಯಾರು ಏನಾದರೂ ಸವಿಯಲಿ
ಅವರವರ ಭಾವಕ್ಕೆ ಅದು ನುಸುಳಿ
ಹುಸಿಯಾಗುತ್ತಿರಲಿ 
ನಾ ಹೀಗೆ ಇರುವೆ 
ಏಕಾಂತರ ಮುಖಿಯಾಗಿ 
ಗೊತ್ತೇ... !
ಏಕಾಂಗಿಯಲ್ಲೂ ನಾ ಬಹುಮುಖಿ 
ಅದ ಅರಿವು ನನ್ನಿಂದ 
ನನಗೆ ಮಾತ್ರ ಸಾಧ್ಯ. 


ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...