ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಅಕ್ಟೋಬರ್ 6, 2021

  ಬಾಪುವಿನೊಂದಿಗೆ,  ನನ್ನ ಕೆಲವು ಮನದಾಳದ  ಮಾತುಗಳಿವೆ. 
     ನೀವೇನೋ ಸ್ವಾತಂತ್ರ್ಯಕ್ಕೆ ಹೋರಾಡಿ, ಸ್ವಾತಂತ್ರ್ಯದ ಬೀಜ ಬಿತ್ತು ಹೋದಿರಿ,  ಆದರಿಂದು ಸ್ವಾತಂತ್ರ್ಯವೇ ಅರ್ಥ ಕಳೆದುಕೊಂಡು, ಕೆಲವು ವಿಷಯಗಳಿಗೆ ಹಾಗೂ  ಕೆಲವರಿಗೆ ಮಾತ್ರ ಸೀಮಿತವಾಗಿದೆ. 

ಅಹಿಂಸೆಯ ದಾರಿ ತೋರಿದಿರಿ, ಆದರೆ ನೀವು ಜನಗಳಿಗೆ ಮಾನಸಿಕವಾಗಿ ಹಿಂಸಿಸುವುದೂ ಮಹಾಪಾಪವೆಂದು ತೋರಿಸಿಕೊಡಲಿಲ್ಲ 

ಮಾನವೀಯ ಮೌಲ್ಯಗಳಿರಬೇಕೆಂದೇನೂ ಹೇಳಿದಿರಿ, ಆದರಿಂದು ಜನಗಳಲ್ಲಿ ಪ್ರೀತಿ, ಕರುಣೆ, ತ್ಯಾಗ, ಅನುಕಂಪ, ಸಹಾನುಭೂತಿ, ತಾಳ್ಮೆಗಳೆಲ್ಲವೂ ಬುಡಸಮೇತ ಕಿತ್ತು ಬಿದ್ದುಕೊಂಡಿವೆ. 
ಪ್ರಚಾರ, ಹೊಗಳಿಗೆ, ಅನ್ಯಾಯ, ಭ್ರಷ್ಟತೆ, ಮೋಸ, ವಂಚನೆಗಳಿಗೆ ಆಶ್ರಯ ನೀಡಿವೆ. 

ನೀವೇ ಯೋಚಿಸಿ..... ನಿಮ್ಮ ಕನಸಿನ ದೇಶದ ವ್ಯವಸ್ಥೆಯು,  ಸ್ವಲ್ಪ ಮಟ್ಟಿಗಾದರೂ ಸರಿಯಾಗಲು , ಜನ ಮನಗಳಲ್ಲಿ ನೀವು ಮತ್ತೆ ಮೊಳಕೆಯಾಗಿ  ಚಿಗುರೊಡೆಯಬೇಕಾದ ಅನಿವಾರ್ಯತೆ ಎಷ್ಟಿದೆ ಎನ್ನುವುದನ್ನು ಬಾಪು. 

ಸೋಮವಾರ, ಸೆಪ್ಟೆಂಬರ್ 20, 2021

ಗ್ರಾಮೀಣ ಸಮುದಾಯ

  "ಗ್ರಾಮೀಣ ಸಮುದಾಯ " ಎಷ್ಟೊಂದು ವಿಶಾಲ ಅರ್ಥಕೊಡುವ ಪದ.  ಪದದಷ್ಟೇ ವಿಶಾಲ ಮನಸ್ಸಿನ,   ಚಿಂತನಾಶೀಲ, ಪ್ರಜ್ಞಾವಂತ  ಜನಗಳಿದ್ದರೆ  ಸಮಸ್ಯೆಗಳು ಸುಲಭವಾಗಿ ಪರಿಹಾರ ಕಾಣುತ್ತವೆ. 

ಎಲ್ಲಿ  ಜನರ ಆಲೋಚನೆಗಳು, ಚಿಂತನೆಗಳು, ಕಾರ್ಯ ಚಟುವಟಿಗಳು, ಆಚಾರ, ವಿಚಾರಗಳು  ಉನ್ನತ ಮಟ್ಟದಲ್ಲಿರುತ್ತವೆಯೋ , ಅಲ್ಲಿಯ ಶಾಲೆ, ಶಾಲೆಯ ವಾತಾವರಣವೂ ಸಹ ಉನ್ನತಮಟ್ಟದಲ್ಲಿರುತ್ತವೆ . ಒಂದು ಸಮುದಾಯ ಶಾಲೆಯ ಸಮಸ್ಯೆ /ಕೊರತೆಯನ್ನು ನೀಗಿಸುವಂತಿರಬೇಕೇ ಹೊರತು, ಹುಟ್ಟು ಹಾಕುವಂತಿರಬಾರದು.     

ಶಾಲೆಗಳ ವಿಷಯದಲ್ಲಿ ಸಮುದಾಯಗಳ ಪಾತ್ರ ಮಹತ್ವದ್ದು, ಅದರ ಅರಿವು ಅಲ್ಲಿಯ ಜನಸಮುದಾಯಕ್ಕಿರಬೇಕು. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ದ್ವೇಷ, ಒಳರಾಜಕೀಯ, ಒಳಸಂಚು, ಜಾತೀಯತೆ, ಸ್ವ ಪ್ರತಿಷ್ಠೆ ಗಳಿಗೆ ಶಾಲೆ ಒಳಗಾಗುತ್ತಿರುವುದು ಖಂಡಿಸಲಸಾದ್ಯವಾದ  ಶೋಚನೀಯ ವಿಷಯ. ಎಲ್ಲಿ ಸಮುದಾಯದ ಜನ ಪ್ರಜ್ಞಾಹೀನರಾಗಿರುತ್ತಾರೋ,  ಅಲ್ಲಿ ಅರಾಜಕತೆ ಹಾಗು ಮೂರ್ಖತನದ ಕಾರ್ಯಗಳು ಮೈತುಂಬಿ ಕುಣಿದಾಡುತ್ತವೆ. 

ಸ್ವ ಪ್ರತಿಷ್ಠೆಗಳನ್ನು ಶಾಲೆಗಳಲ್ಲಿ ಬೇಯಿಸಿಕೊಳ್ಳಲು ಅವಕಾಶ ನೀಡುವ  ಅಥವಾ ತಮ್ಮ ಮೂರ್ಖತನದ ಅಮಲಿನ ನಶೆಯನ್ನು ಶಾಲೆಯಲ್ಲಿ ಪ್ರದರ್ಶಿಸಲು, ಕೈ ಬೀಸಿ ಕರೆಯುವ ಮಟ್ಟಿಗೆ ಶಿಕ್ಷಕ ವರ್ಗವೂ  ಬುದ್ಧಿಹೀನವಾಗಬಾರದು. 

ಶಾಲೆ ವಿದ್ಯಾದೇಗುಲ. ಅದನ್ನು ವಿದ್ಯಾದೇಗುಲವಾಗಿಯೇ ನೋಡುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. 
 ಜನರು,  ಸಮುದಾಯ /ಶಾಲೆಯ ಹಿತಚಿಂತಕರಾಗಬೇಕೇ ವಿನಃ  ಘಾತುಕರಾಗಬಾರದು. 

ತಿಳಿದೋ, ತಿಳಿಯದೆಯೋ ಪ್ರೋತ್ಸಾಹಿಸುತ್ತಿರುವ ಪೋಷಕರು ಒಳಸಂಚುಗಳ ಬಗ್ಗೆ ಸ್ವಲ್ಪ ಚಿಂತಿಸಿದರೆ ಅದರಲ್ಲಿರುವ ಮರ್ಮಗಳು ಅರಿಯುತ್ತವೆ. 

ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರಲ್ಲಿ ಒಡೆದು ಮೂಡಬೇಕಾದ ಜ್ಞಾನೋದಯ.... ಇವೆಲ್ಲದುದರ ದುಷ್ಪರಿಣಾಮ ಯಾರ ಮೇಲೆ..? 
       
                  

ಮಂಗಳವಾರ, ಜನವರಿ 12, 2021

ಕೊಡಗಿನ ಗವಿಸಿದ್ಧೇಶ್ವರ ಬೆಟ್ಟ

ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಸಿಕೊಳ್ಳುವ ಕರ್ನಾಟಕದ ಒಂದು ಪುಟ್ಟ ಜಿಲ್ಲೆ ಕೊಡಗು. ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ ಆಗಳಿ. ಈ ಗ್ರಾಮವು ನಿಸರ್ಗ ರಮಣೀಯತೆಯಿಂದ ಕಂಗೊಳಿಸುತ್ತಿದೆ .ಈ ನಿಸರ್ಗ ಸೌಂದರ್ಯದ ಒಡಲಲ್ಲಿರುವುದೇ ಗವಿಸಿದ್ಧೇಶ್ವರ ಬೆಟ್ಟ. ಈ ಬೆಟ್ಟಕ್ಕೆ ಕಟ್ಟೆಪುರ ಮೀಸಲು ಅರಣ್ಯದ ನಡುವೆ ಹಾದು ಹೋಗಬೇಕು.

ಈ ಅರಣ್ಯವು ತುಂಬಾ ದಟ್ಟತೆಯನ್ನು,ಇಂದು ಉಳಿಸಿ ಕೊಂಡಿಲ್ಲವಾದರೂ ರಸ್ತೆಯಲ್ಲಿ ಸಾಗುವಾಗ ತಂಪಾದ ವಾತಾವರಣ ಮನಕ್ಕೆ ಹಿತನೀಡುತ್ತದೆ.   ಗವಿಸಿದ್ಧೇಶ್ವರ ಬೆಟ್ಟಕ್ಕೆ ಸಾಗುವ ಹಾದಿಯಲ್ಲಿ ಕಾಡುಬಸವ ಹೆಸರಿನಲ್ಲಿ ಕರಿಸಿಕೊಳ್ಳುವ ಚಿಕ್ಕದಾದ ದೇವರಗುಡಿ ಒಂದು ಕಾಣಸಿಗುತ್ತದೆ. ಈ ಗುಡಿಯು ತನ್ನದೆಯಾದ ವಿಶಿಷ್ಟ್ಯವನ್ನು ಹೊಂದಿದ್ದು,

ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಪ್ರಕೃತಿಯ ಮಧ್ಯದಲ್ಲಿ ಮಲಗಿ ವಿಶ್ರಮಿಸಿರುವಂತೆ ಭಾಸವಾಗುವ ಮನೋಜ್ಞವಾದ ಕೆರೆಯೊಂದು ಕಾಣಸಿಗುತ್ತದೆ.

ದಂಡಿನ ಬಾವಿ ದಳವಾಯಿ ಕೆರೆ. ಹಿಂದೆ ಕೊಡಗಿನ ರಾಜನಾಗಿದ್ದ ವೀರರಾಜ ಮತ್ತು ಅವನ ಸೇನಾಧಿಕಾರಿಗಳು (ರಾಜನ ದಂಡು -ಸೇನೆ) ಸಿದ್ಧೇಶ್ವರ ದೇವರ ಆಣತಿಯಂತೆ ಒಂದು ರಾತ್ರಿಯಲ್ಲಿ ಕೆರೆಯನ್ನು ನಿರ್ಮಾಣ ಮಾಡಿದ್ದರಿಂದ, ಈ ಕೆರೆಗೆ ದಂಡಿನ ಬಾವಿ ದಳವಾಯಿ ಕೆರೆ ಎಂದು ಹೆಸರಾಗಿದೆ ಎಂದು ಇಲ್ಲಿನ ಹಿರಿಯ ಗ್ರಾಮಸ್ಥರು ಹೇಳುತ್ತಾರೆ. ಈ ಕೆರೆಯ ಸೌಂದರ್ಯವನ್ನು ಮನ ತುಂಬಿಕೊಂಡು ಮುಂದೆ ಸಾಗಿದರೆ, ರಸ್ತೆಯ ಬಲಭಾಗಕ್ಕೆ ಕಾಣುವ ಕವಲು ದಾರಿಯಲ್ಲಿ ಸ್ವಲ್ಪ ದೂರ ಪ್ರಯಾಣಿಸಿದರೆ, ನಮ್ಮನ್ನು ಎದುರ್ಗೊಳ್ಳುವುದೇ ಮನೋಹರವಾದ ಬಂಡೆಗಳಿಂದ ಕೂಡಿದ ಗವಿಸಿದ್ಧೇಶ್ವರ ಬೆಟ್ಟ .

ಅಲ್ಲಿನ ಸುತ್ತಲಿನ ಪ್ರದೇಶವೂ ದೇವರ ಕಾಡು ಎಂದು ಕರೆಸಿಕೊಳ್ಳುತ್ತದೆ. ಹೆಬ್ಬಂಡೆಗಳ ನಡುವಿರುವ ಈ ಬೆಟ್ಟವನ್ನು, ಅಲ್ಲಿಯ ಹಕ್ಕಿ -ಪಕ್ಷಿಗಳ ಕಲರವ, ಚಿಲಿಪಿಲಿ ನಾದವನ್ನು ಆಲಿಸುತ್ತಾ, ಪ್ರಕೃತಿ ಸೌಂದರ್ಯ ವನ್ನು ಆರಾಧಿಸುತ್ತಾ, ಬೆಟ್ಟವನ್ನು ಕಡಿದು ನಿರ್ಮಿಸಿರುವ ಮೆಟ್ಟಿಲುಗಳನ್ನು ಏರುತ್ತಾ ಹೋದರೆ ಕಾಣಸಿಗುವುದೇ ಸಿದ್ದೇಶ್ವರ ಸ್ವಾಮಿ ದೇವಾಲಯ. ದೇವಸ್ಥಾನದ ಗೋಡೆಗಳು ಪೂರ್ಣಪ್ರಮಾಣದಲ್ಲಿ ನೈಸರ್ಗಿಕವಾಗಿ ರಚನೆಯಾಗಿರುವ ಬಂಡೆಗಳಿಂದ ನಿರ್ಮಿಸಲ್ಪಟ್ಟಿವೆ.

ದೇವಾಲಯದ ಒಳಗೆ ಪ್ರವೇಶಿಸಿದಾಗ ಗವಿಸಿದ್ಧೇಶ್ವರ ಸ್ವಾಮಿ ಮಲಗಿರುವ ಭಂಗಿಯಲ್ಲಿ ಕಾಣಸಿಗುತ್ತದೆ. ಇಲ್ಲಿ ನಾಗದೇವತೆಯು ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ.



      ದೇವಾಲಯದ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿದ್ದು,ಜನಗಳ ಸದ್ದು-ಗದ್ದಲವಿಲ್ಲದೆ ನಿಶಬ್ದವಾಗಿದ್ದು,  ಪ್ರಕೃತಿಯ ಸೌಂದರ್ಯವು ಮನಸ್ಸಿಗೆ ಮುದನೀಡುತ್ತದೆ. ದೇವಾಲಯದ ಹಿಂಬದಿಯಲ್ಲಿ ನಿಂತು ನೋಡಿದರೆ ಪ್ರಕೃತಿ ದೇವತೆಯೇ ಎದ್ದು ಬಂದಂತೆ ಭಾಸವಾಗುವ ಆ ಕ್ಷಣ ಮೈನವಿರೇಳಿಸುತ್ತದೆ. 

       ಇಲ್ಲಿ ಕಂಡುಬರುವ ಪುರಾತನ ಹೆಬ್ಬಂಡೆಗಳು ಇಲ್ಲಿಯ ಇನ್ನೊಂದು ವಿಶೇಷತೆಗಳಾಗಿವೆ. ಗ್ರಾಮಸ್ಥರ ಅಭಿಪ್ರಾಯದಲ್ಲಿ ಈ ದೇವಸ್ಥಾನದ ಐತಿಹ್ಯವನ್ನು ಹೇಳುವುದಾದರೆ  ಸುಮಾರು 500 ರಿಂದ 600 ವರ್ಷಗಳ ಹಿಂದೆ ಐದು ಜನ ಶರಣರು ಭಿಕ್ಷಾಟನೆ ಮಾಡಿಕೊಂಡು ಈ ಗ್ರಾಮದಲ್ಲಿ ನೆಲೆಸಿದ್ದು, ಈ ಬೆಟ್ಟವು ಹಿಂದೆ ದಟ್ಟಾರಣ್ಯವಾಗಿದ್ದು, ಧ್ಯಾನಕ್ಕೆ ಪ್ರಶಾಂತವಾಗಿದ್ದರಿಂದ ಶರಣರು ಕಾಲಕ್ರಮೇಣ  ಗ್ರಾಮಗಳನ್ನು ತೊರೆದು ಈ ಪ್ರದೇಶಕ್ಕೆ ಬಂದು ಗುಹೆಯಲ್ಲಿ   ನೆಲೆ ಕಂಡುಕೊಂಡರು. 

  ಶರಣರು ಲೋಕ ಕಲ್ಯಾಣಾರ್ಥವಾಗಿ ಈ ಪ್ರದೇಶದಲ್ಲಿ ಶಿವನು ನೆಲೆನಿಲ್ಲಬೇಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿದಾಗ,  ಅವರ ತಪಸ್ಸಿಗೆ ಮೆಚ್ಚಿ ಸಿದ್ದೇಶ್ವರನ ರೂಪದಲ್ಲಿ ಗವಿ (ಗುಹೆ )ಯಲ್ಲಿ ಐಕ್ಯವಾಗುತ್ತಾನೆ. ಶರಣರು ಸಹ ಸಿದ್ದೇಶ್ವರನ ಸನಿಹದಲ್ಲಿ ಕಲ್ಲುಗಳ ರೂಪದಲ್ಲಿ ಐಕ್ಯವಾಗಿರುವುದನ್ನು ಕಾಣಬಹುದು. ಅಂದಿನಿಂದ  ಇದು ಗವಿಸಿದ್ಧೇಶ್ವರ ಬೆಟ್ಟವೆಂದು ಕರೆಯಲ್ಪಡುತ್ತದೆ. 

ಸಿದ್ಧೇಶ್ವರ ಸ್ವಾಮಿಯ ಮೂರ್ತಿ ಮತ್ತು ಬೆಟ್ಟ ಪ್ರತಿವರ್ಷ ರಾಗಿಕಾಳಿನಷ್ಟು ಬೆಳೆಯಲ್ಪಡುತ್ತಿದೆ ಎಂಬುದು ಗ್ರಾಮಸ್ಥರ ಹೇಳಿಕೆ ಮತ್ತು ನಂಬಿಕೆ. 

       ಪ್ರತಿವರ್ಷ ಶಿವರಾತ್ರಿಯ ಮಾರನೇ ದಿನ  ಎಲ್ಲಾ ಜನಾಂಗದವರು ಸೇರಿ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

           ಜನರು,  ಪಟ್ಟಣಗಳ ಕಿರಿಕಿರಿ ಗದ್ದಲ ಶಬ್ದಗಳಿಂದ ಯಾವಾಗಲೂ ದೂರವಿರುವ ಈ ಬೆಟ್ಟ ನಿಸರ್ಗ ಸೌಂದರ್ಯ ಮತ್ತು ನಿಶ್ಯಬ್ದತೆಯಿಂದ  ಮನಸ್ಸಿನ ಎಲ್ಲಾ ಜಂಜಾಟಗಳನ್ನು ಕ್ಷಣಕಾಲ ದೂರವಿಡಲು ಮತ್ತು ಪೋಟೋಗ್ರಫಿಯನ್ನು  ಅರಸಿ ಬರುವವರಿಗೆ ಒಂದು ಆಹ್ವಾನದಂತೆ ವ್ಯಕ್ತವಾಗುತ್ತದೆ.ಅಪರೂಪಕ್ಕೊಮ್ಮೆ ಎಂಬಂತೆ ಗಜರಾಜರ ದಂಡು ದಾಳಿಮಾಡುತ್ತದೆ ಎಂಬುದನ್ನು ಬಿಟ್ಟರೆ ಇಲ್ಲಿಗೆ ತೆರಳಲು ಬೇರೆ ಇನ್ನಾವುದೇ ಭಯವಿಲ್ಲ.
  
        


ಸೋಮವಾರ, ಅಕ್ಟೋಬರ್ 19, 2020

ಭಾವನೆಗಳು (ಭಾವನೆಗಳಿರುವವರ ಭಾವಕ್ಕೆ.... )


ಭಾವನೆಗಳು ನಮ್ಮನ್ನು ಬರಸೆಳೆದು ಬಂಧಿಸುತ್ತವೆಯೋ ಅಥವಾ ನಾವೇ ಅವುಗಳಲ್ಲಿ ಮೋಹಗೊಂಡು ಬಂಧಿಯಾಗುತ್ತೇವೆಯೋ ತಿಳಿಯದು. ನಿರ್ಭಾವ ವ್ಯಕ್ತಿಗಳು ಇದ್ದಾರೆಂದು ಹೇಳಲಾಗುವುದಿಲ್ಲವಾದರೂ ನಮ್ಮ ಆಚಾರ -ವಿಚಾರ, ಕೆಲಸ ನಮ್ಮ ಭಾವನೆಗಳೊಂದಿಗೆ ವಿಲೀನಗೊಂಡಿರುತ್ತವೆ. ಕನಸು, ಕಲ್ಪನೆಗಳು, ಭಾವನೆಗಳು ಹಡೆಯುವ ಕೂಸುಗಳೆಂದರೆ ತಪ್ಪಾಗಲಾರವು.

ಒಬ್ಬ ವ್ಯಕ್ತಿಯ ಪರಿಪೂರ್ಣತೆ ಎಂಬುದು ಕೇವಲ ಜ್ಞಾನ, ತಿಳುವಳಿಕೆ, ಗೌರವಾಧಾರಗಳು, ಪ್ರಶಂಸೆ, ಬುದ್ಧಿವಂತಿಕೆ, ಪ್ರಶಸ್ತಿಗಳಲ್ಲಿ ಅಡಕವಾಗಿರುವುದಿಲ್ಲ. ವ್ಯಕ್ತಿಯ ಭಾವನಾತ್ಮಕ ಅಂಶಗಳನ್ನೂ ಅವಲಂಬಿಸಿರುತ್ತವೆ.ಭಾವನೆ ಮತ್ತು ಬುದ್ಧಿವಂತಿಗೆ ಪರಸ್ಪರ ಸಂಬಂಧ ಹೊಂದಿರುವ ನಮ್ಮ ನರನಾಡಿಗಳಿದ್ದಂತೆ. ಬುದ್ಧಿವಂತಿಕೆಯೇ ಎಲ್ಲಕ್ಕಿಂತ ಮೇಲಾದುದ್ದಲ್ಲ,. ಒಂದು ವೇಳೆ ಬುದ್ಧಿ ಮಾತ್ರದಿಂದಲೇ ಆಕಾಂಕ್ಷೆ, ಚಿಂತನೆಗಳು, ಹುಟ್ಟುತ್ತವೆಯೆಂದರೂ, ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ.
ಭಾವನೆಯು ತೀರ ನೇರವಾಗಿ ಸಂಬಂಧ ಹೊಂದಿರುವ ಅಂಶಗಳೆಂದರೆ ಸ್ನೇಹ, ಪ್ರೀತಿ, ದಾಂಪತ್ಯ, ಕುಟುಂಬಗಳಲ್ಲಿ. ಕುಟುಂಬದಲ್ಲಿ ಬುದ್ಧಿಗಿಂತ ಭಾವನೆಯ ಪಾತ್ರ ಹಿರಿದಾಗಬೇಕು. ಹೆಚ್ಚು ಆತ್ಮೀಯತೆಯ ನಡವಳಿಕೆಯು ಸಂಬಂಧವನ್ನು ಹೆಚ್ಚು ಗಟ್ಟಿಯಾಗಿ ಬೆಸೆದುಕೊಳ್ಳುತ್ತವೆ.

ಭಾವನೆಗಳು ವಿಸ್ತ್ರುತವಾಗಿ ತೆರೆದುಕೊಳ್ಳುವ ಮತ್ತೊಂದು ವಲಯವೆಂದರೆ ಹೃದಯವಂತಿಕೆ. ಹೃದಯವಂತಿಕೆ ಎಂಬುದು ಕೆಲವರಿಗೆ ಸಾಮಾನ್ಯ ಭಾವನಾತ್ಮಕ ಅಂಶವಾಗಿ ಕಾಣಬಹದು. ಹೃದಯವಂತಿಕೆ ಬಹು ವಿಶಾಲವಾದ ಎಲ್ಲರಲ್ಲೂ ಇರದ, ಎಲ್ಲರಿಂದಲು ತೋರಲಾರದ ಭಾವನಾತ್ಮಕತೆಯಲ್ಲಿ ಅತ್ಯಂತ ವಿರಳವಾದ ಒಂದು ವ್ಯಕ್ತಿತ್ವ.
 
  ಕೆಲವರ ಪ್ರಕಾರ ಭಾವನಾತ್ಮಕ ಅಂಶಗಳಾದ ಪ್ರೀತಿ, ಕಾಳಜಿ, ಭಾತೃತ್ವ, ಮಮತೆಗಳು ಗೋಪ್ಯತೆಯ ವಿಷಯ ವಸ್ತುಗಳಾಗಿದ್ದು, ಕಾಲಯಮನನ್ನು ತಿಂದು ಹಾಕುವ ಅಂಶಗಳಾಗಿ ಕಾಣಸಿಗುತ್ತವೆ. 
 
 ಹಾಗೆಯೇ ಇನ್ನೊಂದು ಮುಖ್ಯವಾದ ಅಂಶವೆಂದರೆ ಭಾವನೆಯೇ ಬದುಕಾದರು ಕಷ್ಟ. ಹಾಗೆ ಎಲ್ಲವನ್ನು ಬುದ್ಧಿಗೆ ಮೀಸಲಿಟ್ಟರೂ ಕಷ್ಟ.  ಇಂದಿನ ಸ್ವಾರ್ಥ ಜಗತ್ತಿನಲ್ಲಿ ಪ್ರೀತಿಯ, ಸ್ಪಂದನೆಯ ಭಾವನೆಗಳೆಂದರೆ ಬೆಲೆ ಇಲ್ಲದವುಗಳಾಗಿವೆ. ಭಾವನೆಗಳಿಗೆ ಈ ದಿನಗಳಲ್ಲಿ  ಬೆಲೆಕೊಡುವವರು ಅತ್ಯಲ್ಪರು ಹಾಗು ಅತ್ಯಲ್ಪರಲ್ಲಿ ಅಲ್ಪರು. ಭಾವನೆಯನ್ನು ಬದುಕಾಗಿಸಿ ಕೊಂಡು ಅದರ ವೇದನೆಯಲ್ಲಿ ಹಪಹಪಿಸಿ ನರಳುತ್ತಿರುವ ಅದೆಷ್ಟೋ ಮನಸ್ಸುಗಳು, ಸ್ವಾರ್ಥ ಮನಸ್ಸುಗಳ ಅರ್ಥೈಸಿ ಬೇರೊಂದು ಅಸ್ಮಿತೆಯನ್ನು ಒಪ್ಪಿ ಬಾಳುವ ಅನಿವಾರ್ಯತೆ ಬಂದೊದಗಿದೆ. 
 
  ಇಂದಿನ ದಿನಗಳಿಗೆ ಸಮಯವಿಲ್ಲವೋ ಅಥವಾ ನಮಗೆ ನಮ್ಮ ಕೆಲಸದ ಒತ್ತಡ, ಜವಾಬ್ಧಾರಿಗಳಿಂದ ಬಿಡುವು ಸಿಗುತ್ತಿಲ್ಲವೋ... ಒಮ್ಮೆ ಎಲ್ಲರು , ಅವರವರ ಯೋಚನಾಲಹರಿಗೆ ಹೊಕ್ಕಬೇಕಾಗುತ್ತದೆ.  ಜ್ಞಾನ (ಬುದ್ಧಿ ವಂತಿಕೆ )ಮನಸ್ಸಿನ ದೀಪವಿದ್ದಂತೆ, ಪ್ರೀತಿ ಅದರ ಪ್ರಕಾಶದಲ್ಲಿ ಬೆಳಗುವ ಬೆಳಕಾಗ ಬೇಕೇ ಹೊರತು, ಒಬ್ಬ ವ್ಯಕ್ತಿಯ ಮನಸ್ಸಿನ ಭಾವನೆಗಳನ್ನು ಅರಿಯುವಲ್ಲಿ ಜ್ಞಾನವು ನಂದಿದಾಗ,  ಹೃದಯವಂತಿಕೆ ಇಲ್ಲದ ಮೇಲೆ... ಬುದ್ಧಿವಂತಿಗೆ(ಜ್ಞಾನ )ಎಷ್ಟಿದ್ದರೇನು..? ಅನ್ನಿಸದೆ ಇರಲಾರದು. 

   ನಮ್ಮನು ಪ್ರೀತಿಸುವ, ನಮ್ಮ ಬರುವಿಕೆಗಾಗಿ ಹಾತೊರೆಯುವ, ನಮ್ಮನ್ನೇ ಜೀವವೆಂದು ಆಶಿಸಿ, ಭಾವಿಸಿ ಬದುಕುತ್ತಿರುವ ಜೀವಗಳ ಭಾವನೆಗಳಿಗೆ ಅಸಡ್ಡೆ ತೋರಿ ಬದುಕುವುದು ನಮ್ಮ ಇಂದಿನ ನವೀಕರಣಗೊಂಡು ರೂಪುಗೊಂಡಿರುವ ಭಾವನೆಗಳಾಗಿವೆ.   ಭಾವನೆಗಳಿಗೆ ಬೇಲಿ ಹಾಕಿ, ಸುತ್ತ  ನೀರೆರೆಯುವ ಬದಲು,   ಪರಸ್ಪರ ಹಂಚಿ ತೆಗೆದುಕೊಳ್ಳುವುದರಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ.

 ಭಾವನೆಗಳನ್ನು hidden context ಆಗಿ ಮಾಡದೆ, share context ಆಗಿಸಿ, ಭಾವನೆಗಳು, ಬುದ್ಧಿವಂತಿಕೆ, ಕಾರ್ಯನಿರ್ವಹಣೆಯಲ್ಲಿ ಭಾವನಾತ್ಮಕ ಬುದ್ಧಿ ವಂತಿಕೆಯನ್ನು ಸರಿದೂಗಿಸಿಕೊಂಡು ಬದುಕುವತ್ತ, ಯೋಚಿಸುವ ಚಿಂತನೆ ಮಾಡಿ ಬದುಕನ್ನು ಕಟ್ಟಿಕೊಳ್ಳುವ ಬುದ್ಧಿವಂತಿಕೆಯ ಭಾವನಾಜೀವಿಗಳಾಗೋಣ. ಭಾವನೆಗಳೆಂಬ  ಸುಂದರವಾದ  ಅಂತರಂಗದ  ಅಲೆಗಳನ್ನು 
ಗೌರವಿಸೋಣವೆಂಬುದು ನನ್ನ ಭಾವಾಂತರಂಗದ ಅನಿಸಿಕೆ. 
        


      

ಬುಧವಾರ, ಆಗಸ್ಟ್ 5, 2020

ಕೊಡಗಿನ ಪ್ರತಿಭಾನ್ವಿತ ಕವಿ ಕಾಜೂರು ಸತೀಶ್

                 ನನ್ನ ಈ ಲೇಖನ ಕೊಡಗಿನ ಪ್ರತಿಭಾನ್ವಿತ ಯುವ ಕವಿ ಹಾಗೂ ಭಿನ್ನತೆಯಲ್ಲಿ ವಿಭಿನ್ನತೆ ಮೆರೆವ,  ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ಹವ್ಯಾಸಗಳ ಮೂಲಕ,  ಇಂದಿನ ಯುವ ಜನತೆಗೆ ಪ್ರೇರಣೆಯಾಗಿರುವ ಅನುವಾದಕ,  ಸಂವೇದನಾಶೀಲ ಯುವ  ಸಾಹಿತಿ,  ಶಿಕ್ಷಕ..  ಚಿಂತಕ  ಕಾಜೂರು ಸತೀಶ್ ರವರ ಕುರಿತಾಗಿದೆ.

  ಶ್ರೀ. ನಾರಾಯಣ್ ಮತ್ತು  ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ.
        
      2015ರ " ಕಡೆಂಗೋಡ್ಲು  ಶಂಕರಭಟ್ಟ  ಕಾವ್ಯ ಪುರಸ್ಕಾರ " ಪಡೆದ ಸತೀಶ್ ರವರ ಮೊದಲ  ಕವನ ಸಂಕಲನ "ಗಾಯದ ಹೂವುಗಳು "  ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ "ಕಡಲಕರೆ "ಗೆ..ತಡವಾಗಿಯಾದರೂ ಅಭಿನಂದನೆಗಳನ್ನು   💐💐ತಿಳಿಸುತ್ತಾ... ಮುಂದುವರೆಯುತ್ತೇನೆ.
      
                            ನಾ ಅರಿತಂತೆ ಸತೀಶ್ ರವರ  ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ, ಪ್ರೇರಣೆಯ ಶಕ್ತಿ,  ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು  ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.

     ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದು ಮತ್ತು ಏಕಾಂತವನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ.
  
ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.

  ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
  ಹೌದಾಗಿರುವ ಇವರು,  ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ  ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ  ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ  wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ.   ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.

      ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ...!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ  ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.

            ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ  ಸತೀಶ್
ರವರು ವರ್ಣಚಿತ್ರಗಳು... ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು.ಫೇಸ್ಬುಕ್, ಇನ್ಸ್ಟಾಗ್ರಾಮ್, ಸ್ಟಾರ್ ಮೇಕರ್, youtube ಗಳಲ್ಲಿ ಅವರು ತೊಡಗಿಸಿ ಕೊಂಡಿರುವ ರೀತಿ ಶ್ಲಾಘನೀಯ. 

 Kajoorusathish.blogspot.com ಈ ಬ್ಲಾಗ್ ಅನ್ನು ಒಮ್ಮೆ ವೀಕ್ಷಿಸಿದರೆ ಅವರ ಕವಿತೆಗಳು, ಬರಹ, ವಿಮರ್ಶೆ ಗಳು, ಹೀಗೆ ಸಾಹಿತ್ಯಾಭಿರುಚಿ ಅವಲೋಕನವಾಗುತ್ತದೆ. 

ಕಾಡಿನ ಹಾದಿಯಾದರೂ ಸೈ.. !ಎನ್ನುವ ಅನ್ವೇಷಣಾ ಮನೋಭಾವದ ನಮ್ಮ ಸತೀಶ್ ರವರಿಗೆ ಗೆಳೆಯರ ಜೊತೆಗೂಡಿ  ಚಾರಣ ಹೋಗುವುದು,   ಬಲುಪ್ರೀತಿಯ   ಹವ್ಯಾಸಗಳಲ್ಲಿ ಒಂದಾಗಿದೆ.  ಮಾಡೆಲಿಂಗ್ ಕ್ಷೇತ್ರಕ್ಕೂ ಸೈ ಎನ್ನುವ ರೀತಿಯ ಸುಂದರ, ಸದೃಢಕಾಯ ಸತೀಶ್ ರವರಿಗೆ... ಸತೀಶ್ ರವರು ಮಾತ್ರ ಸಾಟಿ.

     ಸಾಮಾಜಿಕಜಾಲತಾಣಗಳು... youtube.. ನಂತಹ ವಿಡಿಯೋ ಶೇರಿಂಗ್  ಸರ್ವಿಸ್ಗಳಲ್ಲಿ ಸರ್ಕಾರಿಶಾಲೆ ಮತ್ತು ಸರ್ಕಾರಿ ಶಾಲಾಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ.   " ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.".. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ  ನಿಪುಣತೆ ಇವರಲ್ಲಿದೆ.

   ಗಣ್ಯ ವ್ಯಕ್ತಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಇವರು,  ಸರಳಜೀವಿ. ಸನ್ಮಾನ, ಹೊಗಳಿಕೆ, ಪ್ರಚಾರ, ಆಡಂಬರದ ಜೀವನಗಳಿಂದ ದೂರದಲ್ಲೇ ಉಳಿಯುವ ಇವರು,  ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಒಬ್ಬಂಟಿಯಾಗಿ ಹೊರಡುವ ಪರಿ... ಕವಿತೆಗಳ ಮೊರೆ ಹೋಗುವ ರೀತಿ ಇವರ ವ್ಯಕ್ತಿತ್ವಕ್ಕೆ  ಇನ್ನಷ್ಟು ಮೆರಗು ನೀಡುತ್ತವೆ. 

 ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವ ಇಂದಿನ 
ದಿನಗಳಲ್ಲಿ  ಇಂತಹ ಯುವ ಕವಿ., ಕವಿತೆಗಳು, ತೊಡಗಿಸಿಕೊಳ್ಳುವಿಕೆ, ವ್ಯಕ್ತಿತ್ವ ಹವ್ಯಾಸ ಯುವಪೀಳಿಗೆಗೆ ಮಾರ್ಗದರ್ಶಿ ಎಂದರೆ ಅತಿಶಯದ ಮಾತುಗಳಾಗುವುದಿಲ್ಲ. 

    ಇಂತಹ  ವಿಶಿಷ್ಟತೆಯ ವಿಭಿನ್ನ ಚೇತನ  ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿರುವುದೇ ಹೆಮ್ಮೆಯ ಸಂಗತಿ.     2017 ರಲ್ಲಿ ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನರಾಗಿರುವ, ಇವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಸಲ್ಲುವಂತಾಗಲಿ,  ಹಾಗೆಯೇ ಮತ್ತಷ್ಟು ಪ್ರಶಸ್ತಿಗಳು ಇವರ ಪ್ರತಿಭೆಗೆ ಅರಸಿ ಬರಲಿ. 

 ತಮ್ಮಲ್ಲಿಯ   ಜ್ಞಾನ ಮತ್ತು ಕವಿತ್ವದ ನೆಲೆಯಿಂದ ರಾಷ್ಟ್ರಕಂಡಕವಿಗಳ ಸಾಲಿನಲ್ಲಿ ನಮ್ಮ ಸತೀಶ್  ಸರ್ ರವರ  ಹೆಸರು ಹೊರಹೊಮ್ಮುವಂತಾಗಲಿ ಎಂಬುದೇ ಸಾಮಾನ್ಯ ಓದುಗಳಾಗಿ ನನ್ನ ಮನತುಂಬಿದ ಹಾರೈಕೆ💐💐. 

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...