ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಸೋಮವಾರ, ಆಗಸ್ಟ್ 24, 2020

ನನ್ನಪ್ಪ

ಹಂಗಿಲ್ಲದ ಅಪ್ಪನ ಗುಡಿಸಲಿನ ಅರಮನೆಯಲ್ಲಿ 
ನನ್ನಪ್ಪ ಮಲಗಿ ಏರುಸಿರು ಬಿಡುತ್ತಿದ್ದ 
ಮಂಚವಿಂದು ಒಂಟಿಕಾಲ ಕೊಕ್ಕರೆಯಾಗಿದೆ 
ಅಪ್ಪನ ಉಸಿರಂತೆ ಇಂದು ಸೊಳ್ಳೆಗಳು ಸುಯ್ಗುಡುತ್ತಿವೆ 
ಮೂಗಿಗೆ ಆಗಾಗ್ಗೆ ಬಡಿಯುತ್ತಿದ್ದ ಮೋಟು ಬೀಡಿಯ 
ಘಾಟು ಹೊಗೆಯ ರೂಪ ಕಳಚಿ, ಹೊಸಬಟ್ಟೆ ಧರಿಸಿ 
ಊರು ಸುತ್ತಲು ಹೋಗಿದೆ. 
ಚರ್ಮ ಸವೆದು ಸವಕಳಿಯಾಗಿ, ಜಗತ್ತಿಗೆ ಅನ್ನನೀಡುವ 
ನಾಡ  ಬೆನ್ನೆಲುಬಿನ, ಅಸ್ಥಿಪಂಜರದ  ಸಾಹುಕಾರ ನನ್ನಪ್ಪ. 
ಕೆನ್ನೀರ ಹನಿಗಳನ್ನು ಬೆವರಾಗಿಸಿ ಬಸಿದು 
ಜಳಕ ಮಾಡಿ ನುಣುಪಾಗಿ ನರಳುತ್ತಿದ್ದ ನನ್ನಪ್ಪ. 
ಹೊಟ್ಟೆಯಲ್ಲಿ ಗಾಳಿಚೀಲ ಹೊಕ್ಕಿಸಿ ವಿಚಾರ -ಪ್ರಚಾರಗಳ 
ಬಾಗಿಲು ಕಿಟಕಿಗಳ ಕದ ಮುಚ್ಚಿ ಬಿಟ್ಟಿದ್ದ ನನ್ನಪ್ಪ. 
ತನ್ನ ಜಿಡ್ಡಿಲ್ಲದ  ರಕ್ತದಿಂದ ಗುಳ್ಳೆನರಿಗಳನ್ನು ಕೊಬ್ಬಿಸಿ 
ಮಲಗಿಸಿ, ಹರಕು -ಮುರುಕಿನ ಧೋತರ ಪೇಟವಾಗಿಸಿ 
ಜೈ ಜವಾನ್, ಜೈ ಕಿಸಾನ್ ನಂತೆ ಮಿಂದೇಳುತ್ತಿದ್ದ ನನ್ನಪ್ಪ.
ತಾಳ್ಮೆ -ಶಾಂತಿಗಳ ಸಸಿ ಬಿತ್ತಿ ಹೊತ್ತಿದ್ದ ಭಾವ ಮೂರ್ತಿ ನನ್ನಪ್ಪ
ಅದೆಷ್ಟು ತಾಳ್ಮೆ ಅಪ್ಪನಿಗೆ..?ಜಿಗಣೆಗಳು 
ಉಸಿರಾಡುತ್ತಿದ್ದದ್ದು ಅಪ್ಪನಿಂದ,ಅಪ್ಪನ ಮುದ್ದಿನ ರಕ್ತ ಬೀಜಾಸುರಗಳು 
ಅಸಲಿಯೆಂದರೆ ಈಗೀಗ ಅವುಗಳಿಗೂ ಅಪ್ಪನ 
ಬತ್ತಿದ ದೇಹದ ಮೇಲೆ ವೈರಾಗ್ಯದ ಮುನಿಸು 
ಎತ್ತುಗಳಂತೆ ನೇಗಿಲು ಹೊರುವ ಅಪ್ಪನಿಗೆ 
ಕಪಟ, ಕುಟಿಲ ಕುಯುಕ್ತಿಯ ತೇರು -ಬೇರಿನ 
ಅರ್ಬುತ ರೋಗಗಳ ಅರಿವಿಲ್ಲ 
ತನ್ನ ಛಲ -ಬಲದ ಬೇರು ಬತ್ತಿದ್ದರು ನಗುತ್ತಿದ್ದ, 
ಅಮಾವಾಸ್ಯೆಯ ಹೂವಂತೆ 
ಸಾಲವೆಂಬುದು ಅವನ ಜೇಬಿನಲ್ಲಿರುವ ತೂತುಗಳ 
ಹಾಹಾಕಾರದ ಹಾಲಿನ ಸಮಾಧಿಯ 
ಮೇಲೆ ತೂಗುತ್ತಿರುವ ನೇಣುಗತ್ತಿ 
ದಿನ ಅಂಗಳದಲ್ಲಿ ಬಣಗುಡುತ್ತಿದ್ದ ನನ್ನಪ್ಪ 
ಇಂದು ಯಾವ ದಾರಿ ಹಿಡಿದ್ದಿದ್ದಾನೋ? 
ತನ್ನ ಶ್ರಮದ ಭಾರದ ಫಲಗಳ ಹೊರಲಾರದೇ 
ಯಾವ ತಾಯಿ ನೆಟ್ಟ ಮರದ ರೆಂಬೆಗೆ 
ತನ್ನ ನೊಗದ ಕೊರಳ ಕೊಟ್ಟಿದ್ದಾನೋ? 
ನನ್ನಪ್ಪನಂತೆ ಅದೆಷ್ಟೋ ಅಪ್ಪಂದಿರ 
ಕರುಳ ರೋದನಕ್ಕೆ ಬಲಿಯಾಗಿದ್ದಾನೋ..? 
ಶೃಂಗರಿಸುತ್ತಿದ್ದ ಭೂತಾಯಿಯನ್ನೇ ಎಲ್ಲಿ 
ಹೊದ್ದು ನೆಮ್ಮದಿಯ ನಿದ್ದೆಯ ಕನಸು ಅರಸಿ 
ಅಂಗಾತ ಮಲಗಿರುವನೋ ತಿಳಿದಿಲ್ಲ 
ಆದರೆ ಅಪ್ಪ ಹೆಮ್ಮೆಯ ಬೀಜ ಬಿತ್ತಿದ್ದಾನೆ
ಅದೀಗ ಮೊಳಕೆಯೊಡೆದು ನೆರಳಿನ ಅರಳಿ ಮರವಾಗಿದೆ
ನಾನು ರೈತ ಪುತ್ರಿ, ಅನ್ನದಾತನ ಹೆಮ್ಮೆಯ ಜೀವ ಪುತ್ರಿ. 






ಗುರುವಾರ, ಆಗಸ್ಟ್ 13, 2020

ನಿರಾಕರಣೆ

ನನ್ನ ಮರೆತ ಹೊನ್ನ ಮೆತ್ತ ಹೊತ್ತು 
ನನ್ನ ತೊರೆದು  ಯೋಚಿಸಿದ 
ಆ ಘಳಿಗೆಗಳ ಚಲನಗಳು 
ಕಳಚುತ್ತಿವೆ, ಇಂದು-ನಾಳೆಗಳ ಅಂಗಿಯ 
ಯಾರ ಕತ್ತಲು ಯಾರ ಒಡಲ್ಲಲ್ಲಿ 
ಜಿನುಗಿ ಹಾವಾಗುತ್ತಿರುವುದೋ 
ಕಡಲ ತುಂಬೆಲ್ಲ ಬರುವ ನಿನ್ನ ನೆನಪಿನ 
ಆರಿದ ಮಲ್ಲಿಗೆಯ ಕೆಂಡಗಳು 
ಎಷ್ಟು ಹೊತ್ತು ಸುಡಬಲ್ಲವು ನನ್ನ 
ಕರಕಲಾಗಿಸಲು ಅಥವಾ ಕಪ್ಪು ಬಣ್ಣ ಹಚ್ಚಲು 
ಬೇಕ ಸಮಯದ ಎಲ್ಲೆಗಳು 
ಬೂದಿಯ ಮಣ್ಣಲ್ಲಿ ಒಲೆಯ ತೂತುಗಳಾಗಿ 
ಹರಿದು ಹೋಗಲಿ 
ಎಷ್ಟೆಂದು ಉರಿಯ ಕಾವಿಗೆ ತಲೆ, ಕಾಲು ಕೊಡಲಿ 
ಆತ್ಮಶಕ್ತಿಯ ಅಂತರಾಗದ ಹಾಹಾಕಾರ ಮುಗಿಲೆದ್ದಿದೆ 
ಒಡಲಿನ ಭಾರ ಹೆಚ್ಚಿ ನಜ್ಜಾಗುತ್ತಿದೆ 
ಆಳಗರ್ಭದಲ್ಲಿ ಅಡಗಿ ನೆರೆ ಉಕ್ಕದಿರಲಿ 
ಅಲ್ಲೇ ಬೆನ್ನು ಮೇಲಾಗಿಸಿ, ಸಮುದ್ರರಾಜನ 
ತೋಳಲ್ಲಿ ಮಲಗಲಿ 
ನನ್ನೊಬ್ಬಳದೇ ಎಂಬ ಸಾಕ್ಷಾತ್ಕಾರ 
ಗೋರಿಯ ಮೇಲೆ ಬೆಳೆದ ರಜವಾಗಿದೆ 
ಕಳೆಯ ಭಾರಕೆ,  ನೀ ಬರುವ ದಾರಿ ಕಾಣುತ್ತಿಲ್ಲ 
ಇಂದು -ನೆನ್ನೆಗಳಲ್ಲಿ ಭೂಗತವಾಗಿ ನಿರಾತ್ಮವಾಗಿದ್ದ 
ಅಣುಗಳೆಲ್ಲ ಕಣ್ಣು, ಕಿವಿ, ಮೂಗು, ಬಾಯಿಗಳಾಗಿ
ಅಸ್ಥಿಪಂಜರಕ್ಕೆ ಇಂದು ರೆಕ್ಕೆ ಬಂದು ಉಸಿರಾಡುತ್ತಿವೆ 
ನನ್ನ ನೋವುಗಳೆಲ್ಲ ಸುಟ್ಟ ಬದನೆಕಾಯಿಗಳಾಗಿ 
ಹೊಟ್ಟೆ ಸೇರಿ ಆರಾಮದಲ್ಲಿ ನಿದ್ರಿಸುತ್ತಿವೆ.  




ಬುಧವಾರ, ಆಗಸ್ಟ್ 5, 2020

ಕೊಡಗಿನ ಪ್ರತಿಭಾನ್ವಿತ ಕವಿ ಕಾಜೂರು ಸತೀಶ್

                 ನನ್ನ ಈ ಲೇಖನ ಕೊಡಗಿನ ಪ್ರತಿಭಾನ್ವಿತ ಯುವ ಕವಿ ಹಾಗೂ ಭಿನ್ನತೆಯಲ್ಲಿ ವಿಭಿನ್ನತೆ ಮೆರೆವ,  ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ಹವ್ಯಾಸಗಳ ಮೂಲಕ,  ಇಂದಿನ ಯುವ ಜನತೆಗೆ ಪ್ರೇರಣೆಯಾಗಿರುವ ಅನುವಾದಕ,  ಸಂವೇದನಾಶೀಲ ಯುವ  ಸಾಹಿತಿ,  ಶಿಕ್ಷಕ..  ಚಿಂತಕ  ಕಾಜೂರು ಸತೀಶ್ ರವರ ಕುರಿತಾಗಿದೆ.

  ಶ್ರೀ. ನಾರಾಯಣ್ ಮತ್ತು  ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ.
        
      2015ರ " ಕಡೆಂಗೋಡ್ಲು  ಶಂಕರಭಟ್ಟ  ಕಾವ್ಯ ಪುರಸ್ಕಾರ " ಪಡೆದ ಸತೀಶ್ ರವರ ಮೊದಲ  ಕವನ ಸಂಕಲನ "ಗಾಯದ ಹೂವುಗಳು "  ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ "ಕಡಲಕರೆ "ಗೆ..ತಡವಾಗಿಯಾದರೂ ಅಭಿನಂದನೆಗಳನ್ನು   💐💐ತಿಳಿಸುತ್ತಾ... ಮುಂದುವರೆಯುತ್ತೇನೆ.
      
                            ನಾ ಅರಿತಂತೆ ಸತೀಶ್ ರವರ  ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ, ಪ್ರೇರಣೆಯ ಶಕ್ತಿ,  ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು  ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.

     ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದು ಮತ್ತು ಏಕಾಂತವನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ.
  
ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.

  ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
  ಹೌದಾಗಿರುವ ಇವರು,  ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ  ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ  ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ  wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ.   ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.

      ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ...!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ  ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.

            ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ  ಸತೀಶ್
ರವರು ವರ್ಣಚಿತ್ರಗಳು... ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು.ಫೇಸ್ಬುಕ್, ಇನ್ಸ್ಟಾಗ್ರಾಮ್, ಸ್ಟಾರ್ ಮೇಕರ್, youtube ಗಳಲ್ಲಿ ಅವರು ತೊಡಗಿಸಿ ಕೊಂಡಿರುವ ರೀತಿ ಶ್ಲಾಘನೀಯ. 

 Kajoorusathish.blogspot.com ಈ ಬ್ಲಾಗ್ ಅನ್ನು ಒಮ್ಮೆ ವೀಕ್ಷಿಸಿದರೆ ಅವರ ಕವಿತೆಗಳು, ಬರಹ, ವಿಮರ್ಶೆ ಗಳು, ಹೀಗೆ ಸಾಹಿತ್ಯಾಭಿರುಚಿ ಅವಲೋಕನವಾಗುತ್ತದೆ. 

ಕಾಡಿನ ಹಾದಿಯಾದರೂ ಸೈ.. !ಎನ್ನುವ ಅನ್ವೇಷಣಾ ಮನೋಭಾವದ ನಮ್ಮ ಸತೀಶ್ ರವರಿಗೆ ಗೆಳೆಯರ ಜೊತೆಗೂಡಿ  ಚಾರಣ ಹೋಗುವುದು,   ಬಲುಪ್ರೀತಿಯ   ಹವ್ಯಾಸಗಳಲ್ಲಿ ಒಂದಾಗಿದೆ.  ಮಾಡೆಲಿಂಗ್ ಕ್ಷೇತ್ರಕ್ಕೂ ಸೈ ಎನ್ನುವ ರೀತಿಯ ಸುಂದರ, ಸದೃಢಕಾಯ ಸತೀಶ್ ರವರಿಗೆ... ಸತೀಶ್ ರವರು ಮಾತ್ರ ಸಾಟಿ.

     ಸಾಮಾಜಿಕಜಾಲತಾಣಗಳು... youtube.. ನಂತಹ ವಿಡಿಯೋ ಶೇರಿಂಗ್  ಸರ್ವಿಸ್ಗಳಲ್ಲಿ ಸರ್ಕಾರಿಶಾಲೆ ಮತ್ತು ಸರ್ಕಾರಿ ಶಾಲಾಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ.   " ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.".. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ  ನಿಪುಣತೆ ಇವರಲ್ಲಿದೆ.

   ಗಣ್ಯ ವ್ಯಕ್ತಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಇವರು,  ಸರಳಜೀವಿ. ಸನ್ಮಾನ, ಹೊಗಳಿಕೆ, ಪ್ರಚಾರ, ಆಡಂಬರದ ಜೀವನಗಳಿಂದ ದೂರದಲ್ಲೇ ಉಳಿಯುವ ಇವರು,  ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಒಬ್ಬಂಟಿಯಾಗಿ ಹೊರಡುವ ಪರಿ... ಕವಿತೆಗಳ ಮೊರೆ ಹೋಗುವ ರೀತಿ ಇವರ ವ್ಯಕ್ತಿತ್ವಕ್ಕೆ  ಇನ್ನಷ್ಟು ಮೆರಗು ನೀಡುತ್ತವೆ. 

 ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವ ಇಂದಿನ 
ದಿನಗಳಲ್ಲಿ  ಇಂತಹ ಯುವ ಕವಿ., ಕವಿತೆಗಳು, ತೊಡಗಿಸಿಕೊಳ್ಳುವಿಕೆ, ವ್ಯಕ್ತಿತ್ವ ಹವ್ಯಾಸ ಯುವಪೀಳಿಗೆಗೆ ಮಾರ್ಗದರ್ಶಿ ಎಂದರೆ ಅತಿಶಯದ ಮಾತುಗಳಾಗುವುದಿಲ್ಲ. 

    ಇಂತಹ  ವಿಶಿಷ್ಟತೆಯ ವಿಭಿನ್ನ ಚೇತನ  ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿರುವುದೇ ಹೆಮ್ಮೆಯ ಸಂಗತಿ.     2017 ರಲ್ಲಿ ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನರಾಗಿರುವ, ಇವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಸಲ್ಲುವಂತಾಗಲಿ,  ಹಾಗೆಯೇ ಮತ್ತಷ್ಟು ಪ್ರಶಸ್ತಿಗಳು ಇವರ ಪ್ರತಿಭೆಗೆ ಅರಸಿ ಬರಲಿ. 

 ತಮ್ಮಲ್ಲಿಯ   ಜ್ಞಾನ ಮತ್ತು ಕವಿತ್ವದ ನೆಲೆಯಿಂದ ರಾಷ್ಟ್ರಕಂಡಕವಿಗಳ ಸಾಲಿನಲ್ಲಿ ನಮ್ಮ ಸತೀಶ್  ಸರ್ ರವರ  ಹೆಸರು ಹೊರಹೊಮ್ಮುವಂತಾಗಲಿ ಎಂಬುದೇ ಸಾಮಾನ್ಯ ಓದುಗಳಾಗಿ ನನ್ನ ಮನತುಂಬಿದ ಹಾರೈಕೆ💐💐. 

ಸೋಮವಾರ, ಆಗಸ್ಟ್ 3, 2020

ನೆನಪು




ನಾ ಮುಂದಿನ ದಿನಗಳಲ್ಲಿ
ಖಾಲಿಯಾಗಿ ಹೋಗುತ್ತೇನೆ
ನೀ ಕೊಟ್ಟ ಬುತ್ತಿಯನ್ನು ಸಾಲೆಣಿಸಿ
ದಾರಿಯುದ್ದಕ್ಕೂ ಕನಸಿನ
ಇರುವೆಗಳಿಗೆ ಚೆಲ್ಲುತ್ತ ಸಾಗುತ್ತೇನೆ
ನಕ್ಷತ್ರದ ಸಮುದ್ರದಲ್ಲಿ ನಗುವಾಗ
ಸಿಡಿ ಮೂತಿಗೆ ಮುತ್ತಿಕ್ಕಿ ಸರಿಯುತ್ತೇನೆ
ನಿನ್ನ ಹಾವ -ಭಾವಗಳ ಬೆವರನ್ನು
ಕದ್ದು ಮುಕ್ಕಿ ಬಿಡುತ್ತೇನೆ
ಹಿಂಬಾಲಿಸಿ ನಿನ್ನ ದಾರಿ ತಪ್ಪಿಸಿ
ಕ್ಷಣ ಮಾತ್ರಕ್ಕೆ ಕಾಡಿಸಿ ಅಗ್ನಿಜ್ವಾಲೆಯ
ತಾಪಕ್ಕೆ ಬಿಸುಟು ಕೂತಾಗ
ನಿನ್ನ ಸವಿಗಲ್ಲಕೆ ಬಾಯಾರಿಸಿ ತುಟಿಯಿತ್ತು
ನೀ ಬಂದಾಗ ಮೆಲ್ಲ ಮೆಲ್ಲನೆ
ಮಾಯಾಕುದುರೆಯ ಪಲ್ಲಂಗವಾಗುತ್ತೇನೆ
ಸೂರಲ್ಲಿ ನಿಂತು ಮುಖವೆತ್ತಿ
ನಗುವಿನ ವದನ ಚೆಲ್ಲಿ ಕೈ ಬೀಸಿದಾಗ
ನಿರಾಕೃತಿಯ ನಕ್ಷತ್ರದಲ್ಲಿ ಆಲಿಂಗನದ
ಮಿಲನವಾಗಿ ಸದಾ ಮಿನುಗುತ್ತಿರುತ್ತೇನೆ.



ಮಕ್ಕಳಲ್ಲಿನ ಮಾನವೀಯತೆ


              ಮಕ್ಕಳಲ್ಲಿನ ಮಾನವೀಯತೆ

        ಪ್ರತಿಭಾನ್ವಿತರೆಲ್ಲ -ಮೌಲ್ಯವುಳ್ಳವರೇ..? ಜೀರ್ಣಿಸಿಕೊಳ್ಳಲು ಕಷ್ಟವಾಗುವ ಪ್ರಶ್ನೆ.   ಶಿಕ್ಷಕರಾಗಿ ಎಲ್ಲಾ ಮಕ್ಕಳನ್ನು ಸಮಾನರಾಗಿ ಕಾಣುವ ಪ್ರಯತ್ನ ಮಾಡುತ್ತೇವೆಯಾದರು, ಪ್ರತಿಭೆಯುಳ್ಳವರಲ್ಲಿ ಹೆಚ್ಚಾಗಿ ಮೋಹಗೊಳ್ಳುತ್ತೇವೆ. ಪ್ರತಿಯೊಂದು ಮಗು ಒಂದೊಂದು ಕೌಶಲ್ಯ ಹೊಂದಿರುತ್ತದೆ.ಒಂದೊಂದು ಮಗುವಿನ ಬುದ್ಧಿ ಶಕ್ತಿ ಮಟ್ಟ  ಒಂದೊಂದು ರೀತಿಯದ್ದಾಗಿರುತ್ತದೆ. ಇದರಲ್ಲಿ ಮಗುವಿನ ತಪ್ಪೇನು..?? ಅದನ್ನು ಗುರುತಿಸಿ ಒರೆ ಹಚ್ಚುತ್ತೇವೆಯಾದರು,
ಹೆಚ್ಚಾಗಿ ನಾವು ಇಷ್ಟಪಡುವುದು ಬುದ್ದಿವಂತರನ್ನ,ಪ್ರತಿಭೆಯುಳ್ಳ, ಚುರುಕುವುಳ್ಳ, ಮಕ್ಕಳನ್ನು ಮಾತ್ರ. ಮೇಲ್ನೋಟಕ್ಕೆ ಒಪ್ಪಿಕ್ಕೊಳ್ಳಲು ಕಷ್ಟವಾದರು ಒಳಮನಸ್ಸಿನ  ಸತ್ಯದ ಪೊರೆ ಬಿಚ್ಚಿದರೆ ಸಿಗುವ ಉತ್ತರ.

       ಅದೇ ತರಗತಿಯಲ್ಲಿ ಒಳ್ಳೆ ನಡತೆ,  ಮೌಲ್ಯವುಳ್ಳ  ಮಗು ಇದ್ದರು, ಅದರ ಬಗ್ಗೆ ನಾವು ಅಷ್ಟಾಗಿ ಗಮನ ಕೊಡುವುದಿಲ್ಲ.   ಏಕೆ...??  ಶ್ರದ್ಧೆ,  ನಿಷ್ಠೆ, ನ್ಯಾಯ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ಒಳ್ಳೆಯ ಗುಣ, ಸಂಸ್ಕಾರ, ಸಚ್ಚಾರಿತ್ಯ, ಸಹಕಾರ, ಸಹೋದರತ್ವ ಗುಣಗಳು ನಮಗೆ ಒಂದು ಅತ್ಯಮೂಲ್ಯ ಕೌಶಲ /ಪ್ರತಿಭೆಯಾಗಿ ಗೋಚರಿಸುವುದಿಲ್ಲ?? ಗೋಚರಿಸಿಲ್ಲ. ಸೂಕ್ಷ್ಮವಾಗಿ ಆಲೋಚಿಸಿ, ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ.

      ಇಂದಿನ ನವನವೀನತೆ ಹೊಂದಿರುವ ಸಮಾಜದಲ್ಲಿ ಮಾನವ ವೈಜ್ಞಾನಿಕತೆಯ ತುತ್ತ ತುದಿಯನ್ನೇರಿದರು, ಮಾನವರಾಗಿ ಬಾಳುವುದನ್ನು ಕಲಿತ್ತಿಲ್ಲ. ನೈತಿಕತೆ, ಮಾನವೀಯತೆಗಳು ರಾಗಿ ಕಾಳಿನಷ್ಟು ಬೆಲೆ ಉಳಿಸಿ ಕೊಂಡಿಲ್ಲ.

                 ನಾನಾದರು ಮಾಡುವುದೇನು?  ನನ್ನಲ್ಲೇ ನಾ ಹೊಕ್ಕಾಗ ಅಥವಾ ಇತರರನ್ನು ಅವಲೋಕಿಸಿದಾಗ, ಒಂದು ಮಗು /ವ್ಯಕ್ತಿ ಬುದ್ಧಿವಂತ, ಪ್ರತಿಭಾವಂತ ಎಂದರೆ ಪ್ರೋತ್ಸಾಹಿಸಿ ಬೆನ್ನುತಟ್ಟುತ್ತೇವೆ, ಇನ್ನಾ ಮುಂದುವರೆದು,ಸಾಮಾಜಿಕಜಾಲತಾಣಗಳಲ್ಲಿ, ಅವರ ಬಗ್ಗೆ ಹಾಕಿ ಬೀಗುತ್ತೇವೆ.ಅದೇ ಒಂದು ಮಗು/ ವ್ಯಕ್ತಿ  ಸಂಸ್ಕಾರವಂತನಾಗಿ, ಮೌಲ್ಯವುಳ್ಳವನಾಗಿ,  ಬಾಳುತ್ತಿರುವನೆಂದರೆ, ನಾವು ಅವರನ್ನು  ಗುರುತಿಸುವ  ಗೋಜಿಗೆ  ಹೋಗುವುದಿಲ್ಲ . ನೈತಿಕಗುಣವಿಲ್ಲದ ತಳಪಾಯ ಕಟ್ಟ ಹೊರಟಿರುವ ನಮಗೆ ಕಾಣುವುದು ಪ್ರತಿಭೆ, ಪುರಸ್ಕಾರ, ಪ್ರಶಂಸೆಗಳ ಗರಿಮೆಯ ಹಿರಿಮೆ.

               "ವರ್ತನೆಯ ನರ್ತನಕ್ಕೆ ಪರಿವರ್ತನೆಯ ಶೃಂಗಾರ "ಎಂಬ ಕವಿವಾಣಿಯಂತೆ ಪ್ರತಿಭಾವಂತರನ್ನು ಗೌರವಿಸೋಣ, ಪ್ರೋತ್ಸಾಹಿಸಿ, ಬೆಳೆಸೋಣ ಜೊತೆಗೆ ಮಾನವೀಯತೆಯನ್ನು ಎತ್ತಿ ಹಿಡಿಯೋಣ.

             ಜೀವನದಲ್ಲಿ ಪ್ರತಿಭೆ, ಸಾಧನೆಗಳಷ್ಟೇ ಮುಖ್ಯವಲ್ಲ, ಅದರೊಂದಿಗೆ ಗುಣ, ನಡತೆ, ಸಂಸ್ಕಾರ, ಬೆರೆತುಬಾಳುವ ಮನಸ್ಸು, ಗುರುಹಿರಿಯರಲ್ಲಿ ವಿನಯತೆಗಳು ಅವಶ್ಯಕ. ಇಂತಹ ಮಕ್ಕಳನ್ನು ಗುರುತಿಸಿ ನೈತಿಕ ಬಲವರ್ಧನೆಗೊಳಿಸುವ ಕೆಲಸ ನಮ್ಮಿಂದಾಗಬೇಕು. ಇಂತಹ ಅಭೂತಪೂರ್ಣವಾದ  ಹೊಣೆ , ಶಾಲೆ, ಶಿಕ್ಷಕರು, ಪೋಷಕರುಗಳಾದ ನಮ್ಮ ಮೇಲಿದೆ.




ಲೇಖನಕ್ಕೆ ಸ್ನೇಹಿತೆ ಲಕ್ಷ್ಮಿಯ ಪೂರಕವಾದ ಆಶಯ                                     ನುಡಿಗಳು :-

 ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಸಮಂಜಸವೇ ಸರಿ. ಜೊತೆಗೆ ಸಾಮಾನ್ಯ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ಅಷ್ಟೇ ಮುಖ್ಯ. ಕೆಲವೇ ಪ್ರತಿಭಾವಂತರಿಂದ ಸಮಾಜ ಸಮೃದ್ಧಿ ಆಗುವುದಿಲ್ಲ. ಪ್ರತಿಯೊಬ್ಬರು ತಮ್ಮ ಕೊಡುಗೆ ನೀಡಬೇಕು. 

     ಪ್ರತಿಯೊಂದು ಮಗುವೂ ಅನನ್ಯ. ವಿಭಿನ್ನತೆಯೇ ಪ್ರತಿಯೊಬ್ಬರ ವೈಶಿಷ್ಠ್ಯ. ಈ ಭಿನ್ನತೆಯನ್ನು ಸ್ವೀಕರಿಸುವ ಗುಣ ಎಲ್ಲರಲ್ಲು ಇರಬೇಕು. ಎಲ್ಲರು ಅವರದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಹೆಚ್ಚಿನ ನಿರೀಕ್ಷೆ ಸಲ್ಲದು. ಪ್ರತಿಭಾವಂತ ಮತ್ತು ಸಾಧಾರಣ ವಿದ್ಯಾರ್ಥಿಯನ್ನು ಭೇದಭಾವ ದೃಷ್ಟಿಯಲ್ಲಿ ಕಾಣಬಾರದು. ಪ್ರತಿ ಮಗುವನ್ನು ಶಿಕ್ಷಕರು ಸಮಾನ ಮನೋಭಾವದಿಂದ ನೋಡಬೇಕು. ಪ್ರತಿಭಾವಂತ ಮಗು ಮಾತ್ರ ನಮ್ಮ ಪ್ರತಿಷ್ಠೆ ಅಲ್ಲ. ಪ್ರತಿ ಮಗುವೂ ಸಹ ನಮ್ಮ ಪ್ರತಿಷ್ಠೆ. 

  ಸಾಮಾನ್ಯ ಮಗುವಿನ ವಿಶೇಷತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ತರಗತಿಯಲ್ಲಿ ಈ ತರಹದ ವಿದ್ಯಾರ್ಥಿಗಳು ಇರುತ್ತಾರೆ.ಹೇಗೆಂದರೆ, ಕಲಿಕೆಯಲ್ಲಿ ಹಿಂದುಳಿದಿದ್ದಾನೆ, ಆದರೆ ನಯ -ವಿನಯದಲ್ಲಿ ಎಲ್ಲರಿಗಿಂತ ಮುಂದೆ. ಶಿಕ್ಷಕರೆದುರು ಮಾತನಾಡಲು ಹಿಂಜರಿಯುತ್ತಾಳೆ, ಆದರೆ ತನ್ನ ದೃಷ್ಟಿ ದೋಷ ಸಹಪಾಠಿಗೆ ಸಹಾಯ -ಬೆಂಬಲ ನೀಡಲು ಹಿಂಜರಿಯುವುದಿಲ್ಲ. ಸದಾ ಕೀಟಲೆ ಮಾಡುವ ಇವನು, ಶಾಲೆಯ ಕೆಲಸ ಕಾರ್ಯಗಳಲ್ಲಿ ಸದಾ ಮುಂದು. ಗೃಹಕಾರ್ಯ ಮಾಡದ ಇವನು, ಎಷ್ಟೇ ಬೈದರೂ ಬೇಸರಗೊಳ್ಳುವುದಿಲ್ಲ.  ಅವನ ಮುಗ್ದ ನಗು ಮಾಸುವುದಿಲ್ಲ. 

  ಪಾಠ ಪ್ರವಚನ ವಿಷಯದಲ್ಲಿ ಇವನು ಹಿಂದೆ ಇದ್ದಾನೆ, ಆದರೆ ಈ ವರೆಗೆ ಅನ್ಯ ಯಾವ ವಿಷಯದಲ್ಲೂ ತಪ್ಪು ಮಾಡುವುದಿಲ್ಲ. ಇಂತಹ ಹಲವು ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ. ಅವರನ್ನು ಬೇರೆಯವರೊಂದಿಗೆ ಹೋಲಿಸಿ ಹೀಯಾಳಿಸುವ ಬದಲು, ಗುಣಗಳನ್ನು ಗುರುತಿಸಿ, ಪ್ರೇರೇಪಿಸಿದರೆ ಮುಂದೆ ಖಂಡಿತಾ ಸುಧಾರಿಸುತ್ತಾರೆ. 

  ಸಮಾಜ ಕೇವಲ ಪ್ರತಿಭೆ ಮೇಲೆ ನಿಂತಿಲ್ಲ. ಮಾನವೀಯ ಮೌಲ್ಯಗಳ ನೆಲೆಯಲ್ಲಿ ನಿಂತಿದೆ. ಇದನ್ನು ಬೆಂಬಲಿಸುವ ಹೊರೆ ಶಿಕ್ಷಕರದ್ದು ಮತ್ತು ಪೋಷಕರದ್ದು. 



ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...