ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಬುಧವಾರ, ಅಕ್ಟೋಬರ್ 6, 2021

  ಬಾಪುವಿನೊಂದಿಗೆ,  ನನ್ನ ಕೆಲವು ಮನದಾಳದ  ಮಾತುಗಳಿವೆ. 
     ನೀವೇನೋ ಸ್ವಾತಂತ್ರ್ಯಕ್ಕೆ ಹೋರಾಡಿ, ಸ್ವಾತಂತ್ರ್ಯದ ಬೀಜ ಬಿತ್ತು ಹೋದಿರಿ,  ಆದರಿಂದು ಸ್ವಾತಂತ್ರ್ಯವೇ ಅರ್ಥ ಕಳೆದುಕೊಂಡು, ಕೆಲವು ವಿಷಯಗಳಿಗೆ ಹಾಗೂ  ಕೆಲವರಿಗೆ ಮಾತ್ರ ಸೀಮಿತವಾಗಿದೆ. 

ಅಹಿಂಸೆಯ ದಾರಿ ತೋರಿದಿರಿ, ಆದರೆ ನೀವು ಜನಗಳಿಗೆ ಮಾನಸಿಕವಾಗಿ ಹಿಂಸಿಸುವುದೂ ಮಹಾಪಾಪವೆಂದು ತೋರಿಸಿಕೊಡಲಿಲ್ಲ 

ಮಾನವೀಯ ಮೌಲ್ಯಗಳಿರಬೇಕೆಂದೇನೂ ಹೇಳಿದಿರಿ, ಆದರಿಂದು ಜನಗಳಲ್ಲಿ ಪ್ರೀತಿ, ಕರುಣೆ, ತ್ಯಾಗ, ಅನುಕಂಪ, ಸಹಾನುಭೂತಿ, ತಾಳ್ಮೆಗಳೆಲ್ಲವೂ ಬುಡಸಮೇತ ಕಿತ್ತು ಬಿದ್ದುಕೊಂಡಿವೆ. 
ಪ್ರಚಾರ, ಹೊಗಳಿಗೆ, ಅನ್ಯಾಯ, ಭ್ರಷ್ಟತೆ, ಮೋಸ, ವಂಚನೆಗಳಿಗೆ ಆಶ್ರಯ ನೀಡಿವೆ. 

ನೀವೇ ಯೋಚಿಸಿ..... ನಿಮ್ಮ ಕನಸಿನ ದೇಶದ ವ್ಯವಸ್ಥೆಯು,  ಸ್ವಲ್ಪ ಮಟ್ಟಿಗಾದರೂ ಸರಿಯಾಗಲು , ಜನ ಮನಗಳಲ್ಲಿ ನೀವು ಮತ್ತೆ ಮೊಳಕೆಯಾಗಿ  ಚಿಗುರೊಡೆಯಬೇಕಾದ ಅನಿವಾರ್ಯತೆ ಎಷ್ಟಿದೆ ಎನ್ನುವುದನ್ನು ಬಾಪು. 

ಕೆಲಸಬೇಕಾಗಿದೆ

ಕಸಗುಡಿಸುವ
ಕೆಲಸಬೇಕಾಗಿದೆ, ಆ ಕಚೇರಿಯಲಿ
ಆ ಒಲವ ನೋಡಲು
ಅದರ ಚೆಲುವ ಸವಿಯಲು
ಅಂತರ್ಯ ಸ್ವಚ್ಛವಾಗಲು

ಆ ಒಂದು ಕಚೇರಿಯಲಿ
ಒಲವಿಂದ ಉಸಿರಾಡುತ್ತಿರುವ
ಹಸಿರಿನ ಅರಿವನ್ನು
ನಾ ಉಸಿರಾಡಲು
ಕೆಲಸ ಬೇಕಾಗಿದೆ, ಆ ಕಚೇರಿಯಲಿ

ಒಲವು ಮೌನದಲಿ
ಪ್ರತಿಭಟಿಸುತ್ತಿರುವ
ಶಿಷ್ಟತೆಯ , ಮಾರ್ದನಿಯಾಗಿ
ಧ್ವನಿಸಲು  ಕೆಲಸಬೇಕಾಗಿದೆ
ಆ ಕಚೇರಿಯಲಿ 

ಒಲವಲ್ಲಿ ತುಂಬಿರುವ 
ಗಾಂಭೀರ್ಯವನು ಅಳೆದು 
ಕುಡಿದು ಹೊರಹೊಮ್ಮಿದ ಹೂವಾಗಲು 
ಕೆಲಸಬೇಕಾಗಿದೆ, ಆ ಕಚೇರಿಯಲಿ 

ಒಲವಿನ ಕಣ್ಣಲ್ಲಿ ಕಣ್ಣಾಗಿ 
ಮಾತಲ್ಲಿ ಮಾತಾಗಿ 
ಸುತ್ತಲಿನ ಸಾಂಗತ್ಯವಾಗಿ 
ಅದರ ಚಪ್ಪಲಿಯ ಧೂಳಾಗಿ 
ಅದರಂತೆ ಶಾಂತಿ ಸೌಹಾರ್ದದ 
ಮೂರ್ತಿಯಾಗಲು 
ಕೆಲಸಬೇಕಾಗಿದೆ,  ಆ ಕಚೇರಿಯಲ್ಲಿ 
ಕಸಗುಡಿಸುವ ಕೆಲಸಬೇಕಾಗಿದೆ. 


ಅಮ್ಮ

ಪಾಪ ಅಮ್ಮ , ಎಂದು
ಅನ್ನಿಸಲೇ ಇಲ್ಲ
ಉರಿಮುಖದ ಸಹಾನುಮೂರ್ತಿಯ
ಒಳಗಿನ ಭಾವ ಎಂದೂ
ಅರಿಯಲೇ ಇಲ್ಲ, ಅರಿತ್ತದ್ದು ಒಂದೇ 
ವಟ ವಟ ಎನ್ನುವ ಬೈಗುಳ 
ರೋಗಕ್ಕೆ ನಂಟು ಬಿದ್ದು 
ಬೆವರಲ್ಲೇ ಉಣ ಬಡಿಸಿದರೂ 
ಕಂಡಿದ್ದು ನನ್ನ ಹಸಿವಷ್ಟೆ 
ಮೊಳಕೆಯೊಡೆದ ಅದೆಷ್ಟೋ 
ತನ್ನೊಳಗನ್ನು ಸಂಸಾರದ
ಕೆನ್ನಾಲಗೆಯಲ್ಲಿ ಅದ್ಹೇಗೆ 
ಚಿವುಟಿರಬಹುದು? 
ಸೊರಗಿ ಮೂಡಿದ ಸೀರೆಯ 
ನೋವಿನ  ನೆರಿಗೆಗಳನು 
ಅಮ್ಮ, ಎಂದಿಗೂ ಬಿಚ್ಚಿ 
ಹರಡಲಿಲ್ಲ 
ನಕ್ಕು ಹರಡಿದರೂ ಅದ 
ಅರಿಯುವ ಗೋಜು 
ಯಾರಿಗಿರಲಿಲ್ಲ
ಒಮ್ಮೆ ಅಲ್ಲಿಂದ ಕಾಲ್ಕಿತ್ತರೆ 
ಸಾಕೆನ್ನುತ್ತಿದ್ದ ಮನವಿಂದು 
ಘಾಸಿಗೊಂಡು ಉರಿವ
ಅದೇ ಕರಿನೆರಳ  
ಪಾಪ ಪ್ರಜ್ಞೆಯ   ಭಾಸದಲಿ.














ಸ್ವಾತಂತ್ರ್ಯ

ನಿನಗೊಂದು ಸ್ವಇಚ್ಚೆಯ ಪ್ರಶ್ನೆ
ಉತ್ತರಿಸುವೆಯ ಅಪ್ಪಿ...
ಸ್ವಾತಂತ್ರ್ಯಕ್ಕೆ ರೆಕ್ಕೆ ಬರುವುದು
ಯಾವಾಗ...?
ಪ್ರತಿ ಮನೆ -ಮನಗಳು
ಮಸಣದಿಂದೆದ್ದು ಹೊರಬರುವುದು
ಯಾವಾಗ...?
ಕಳ್ಳಗಿಂಡಿಯಲ್ಲಿ ಸದಾ ಬಗ್ಗಿ ನೋಡುವ
ಸ್ವಾತಂತ್ರ್ಯ, ಮುಖಾಮುಖಿಯಾಗುವುದು
ಯಾವಾಗ..?
ತಳ್ಳುವಿಕೆ, ನೂಕುವಿಕೆಗೆ ನಾಚುವ ಸ್ವಾತಂತ್ರ್ಯ
ರಾರಾಜಿಸುವುದು ಯಾವಾಗ...?
ಹೆಣ್ಮಕ್ಕಳ ಹಣೆಯಗಲದ ಕುಂಕುಮದಲಿ 
ಮಾತಾಗುವುದು  ಯಾವಾಗ...? 
ಹೆಂಗಳೆಯರ ಕಾಲ್ಗೆಜ್ಜೆಯಲಿ 
ನಲಿದಾಡುವ ದನಿಯಾಗುವುದು 
ಯಾವಾಗ...? 
ಕಂಬಗಳಲಿ ಮುಗಿಲ್ನೋಡುತ 
ಪಟ ಪಟನೆ ಕೈ ಬೀಸಿ ಕರೆಯುವ 
ಬಾವುಟಕ್ಕೆ ಅರ್ಥದ ಗಾಳಿ 
ಸ್ಪರ್ಶಿಸುವುದು ಯಾವಾಗ..? 
ಸ್ವಾತಂತ್ರ್ಯಕ್ಕೂ ಸ್ವಾತಂತ್ರ್ಯ 
ಮುತ್ತಿಕ್ಕುವುದು ಯಾವಾಗ..? 
ನನ್ನ ದೇಶ, ಬಾಪು ಬಯಸಿದ 
ಸ್ವಾತಂತ್ರ್ಯ ಕೊಡುವುದು ಯಾವಾಗ..? 
ಉತ್ತರಿಸುವೆಯ ಅಪ್ಪಿ.....? 



ತೂತು

ಬಚ್ಚಲ ತೂತು ದೊಡ್ಡದಾಯಿತೆಂದು
ಚಿಕ್ಕದು ಮಾಡಲು ಪ್ರಯತ್ನಿಸಿದೆ
ಮರುದಿನ ಅದರ ಸುತ್ತೆಲ್ಲಾ ಬಿರುಕುಗಳು
ಅದನ್ನೂ ಮುಚ್ಚಿ, ಉಸಿರು ಬಿಡುವಲ್ಲಿಗೆ
ಇಲಿರಾಯ ಒಂದು ಚಿಕ್ಕ
ಬಿಲ ಕೊರೆದು ಓಡಾಡಿದ
ಮಗನ ಬೆರಳು ಸಿಕ್ಕಿಕೊಂಡರೆಂದು
ಮಣ್ಣು ಹಾಕಿ ಸಮ ಮಾಡಿದೆ
ಕಣ್ಣು ಮುಚ್ಚಿ ಬಿಡುವುದರೊಳಗೆ
ಇರುವೆಗಳು ಸಾಲು ಸಾಲು
ಇದರ ಗೋಜೆ ಬೇಡೆಂದು
ಅಲ್ಲಿಗೊಂದು ಬೋರ್ಡು
ನೇತುಹಾಕಿದೆ
ಎಲ್ಲಾ ಕ್ರಿಮಿಗಳಿಗೂ
ಇಲ್ಲಿ ಸ್ಥಳಾವಕಾಶವಿದೆ
ಸವಾಲುಳ್ಳ ದೊಡ್ಡ ಕ್ರಿಮಿಗಳಿಗೆ
ಹೆಚ್ಚು ಪ್ರಾಶಸ್ತ್ಯ
ಹಾಗೂ ಸತ್ಕರಿಸುವಿಕೆಯೇ
ಉತ್ತರವಾಗಿರುವುದೆಂದು.


ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...