ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಭಾನುವಾರ, ಮೇ 31, 2020

ಅಂತರಂಗ

ನಾ...ಬೀಗಿ ಬಾಗಿದ್ದೆ
ನನ್ನೊಳಗಿನ ಭಾವುಕತೆಯ
ಅಂತರ್ಯಾಮಿ
ಸದಾ... ಹಸಿರೆಂದು
ಇಂದು ಬರಲೊಲ್ಲದೆ
ಮುನಿಸಿನ ಪಟ್ಟಿ ಧರಿಸಿ
ನಯನ ಒಲವಾಗಿಸಿ, ಜಡಗಟ್ಟಿವೆ
ತಲೆಭಾರದ ಹರಿವು
ಚಿತ್ತದಲ್ಲಿ  ಮಡುಗಟ್ಟಿ
ಕವಲೊಡೆಯುತ್ತಿವೆ.
ಆಹ್ವಾನವಿತ್ತು,  ಅಂಗಲಾಚಿದರೂ
ಕೋಪದ ಪಟ್ಟಿಯ ದಿರಿಸು
ಬಿಚ್ಚಲೊಲ್ಲದೆ.. ನನ್ನಲ್ಲೇ
ದಿಕ್ಕು ಬದಲಿಸಿ ಬತ್ತಿದೆ
ಭಾವಸೆಲೆಯಾಗಿ,, ಅಂತಃಕರಣ
ಕೊರೆದು ಸುರಂಗವಾಗಿಸಿ
ಅವಿತುಬಿಟ್ಟಿವೆ.

ಶನಿವಾರ, ಮೇ 30, 2020

ಅಂತರ್ಯಾಮಿ


ಒಲವಿನ ಕಾನನದಿ
ಅಲ್ಪದಿ ಹೊಕ್ಕಿದ
ಆತ್ಮದ  ರೂಪವು
ಬರಸಿಡಿಲು ಬಡಿದು
ಎತ್ತೊಯ್ದು...ಮಳೆಯಾಗಿ
ಚೆಲ್ಲಿದಾಗ...!
ಸಾವಿನ ಶೋಕವು ಹೆಪ್ಪಾಗಿ
ಮಂಜುಗಡ್ಡೆಯಲ್ಲಿ ಘನೀಕರಿಸಿ
ಅಳಿವುಳಿವಿಗೋಸುಗ
ಅನಿವಾರ್ಯ ತಾಪಕ್ಕೆ
ಹನಿ ಹನಿ ರಕ್ತ
ರಾಶಿಯಾಗಿ
ಹರಿಯುತಲಿಹುದು
ಹರಿಯುತಲಿಹುದು..
ಹರಿಯುತಲೇ ಇರುವುದು
ಮಣ್ಣಿನ ಸೊಗಡು ಮೆತ್ತುವವರೆಗು.
 

ಗುರುವಾರ, ಮೇ 28, 2020

ಕೂಸು


ಮುಂದೊಂದು ಜನ್ಮದಲ್ಲಿ
ನಿನ್ನಿಂದ ಕೂಸಾಗಿ ಹುಟ್ಟಿ
ಕೈ ಬೆರೆಳು ಹಿಡಿದು ನಡೆವಾಸೆ
ನಿನ್ನ ಬಿಗಿದಪ್ಪುವಾಸೆ
ನಿನ್ನ ತೋಳಲ್ಲಿ ಮಲಗುವಾಸೆ
ಸಿಹಿ ಮುತ್ತು ಪಡೆವಾಸೆ
ಕೈ ತುತ್ತು ತಿನ್ನುವಾಸೆ
ನಗು ಮೊಗಕ್ಕೆ ಚುಂಬಿಸುವಾಸೆ
ನಿನ್ನ ಬಾಯಿಗೆ ಬೈಗುಳವಾಗುವಾಸೆ
ಬೆತ್ತದ ಪೆಟ್ಟು ತಿನ್ನುವಾಸೆ
ನಿನ್ನೊಂದಿಗೆ ಹಟಬೀಳುವಾಸೆ
ಮುನಿಸಲ್ಲಿ ನಿನ್ನ ಮೌನವಾಗುವಾಸೆ
ನಿನ್ನ ನೆರಳಲ್ಲಿ ಹಬ್ಬುವ ಬಳ್ಳಿಯಾಗುವಾಸೆ
ಅಳುವಲ್ಲಿ ಸಾಂತ್ವನವಾಗುವಾಸೆ
ನಗುವಿನ ಆನಂದಬಾಷ್ಪವಾಗುವಾಸೆ
ಕಷ್ಟದಲ್ಲಿ ಹೆಗಲಾಗುವಾಸೆ
ಸುಖದಲ್ಲಿ ಜೊತೆ ನಲಿವಾಸೆ
ಮಮತೆ, ವಾತ್ಸಲ್ಯಕ್ಕೆ ಅಮ್ಮನಾಗುವಾಸೆ
ಮಡದಿಯ ಒಲವಾಗುವಾಸೆ
ಧ್ಯಾನದಲ್ಲಿ ನಿನ್ನ ಏಕಾಂತವಾಗುವಾಸೆ
ಜೊತೆಯಿರುವ ಲೇಖನಿಯಾಗುವಾಸೆ
ಆಸಕ್ತಿಯ ಹವ್ಯಾಸಗಳಾಗುವಾಸೆ
ಪ್ರೀತಿಯಲ್ಲಿ ಹೂವಾಗುವಾಸೆ
ನೀ ಹಡೆವ ಕವಿತೆಗಳಾಗುವಾಸೆ
ಸಾಧನೆಗೆ ಜ್ಞಾನದ ಹೊತ್ತಿಗೆಯಾಗುವಾಸೆ
ನಾ..ಇರುವವರೆಗೂ....ನಿನ್ನೊಂದಿಗೆ ಇರುವಾಸೆ.


ಬುಧವಾರ, ಮೇ 27, 2020

ನನ್ನ ಕವಿತೆಯ ಪರಿವು




ಕವಿತೆಯ ಕಾವ್ಯ ನೀನು
ಕಾವ್ಯದ ಭಾವ ನೀನು
ಕಾವ್ಯದ ವಸ್ತು ನೀನು
ಕಾವ್ಯದ ಕಲ್ಪನೆ ನೀನು
ಕಾವ್ಯದ ಹುಟ್ಟು ನೀನು
ಕಾವ್ಯದ ಭಾಷೆ ನೀನು
ಕಾವ್ಯದ ರಚನೆ ನೀನು
ಕಾವ್ಯದ ಪ್ರಾಸ ನೀನು
ಕಾವ್ಯದ ಲಯ  ನೀನು
ಕಾವ್ಯದ ಜೀವ ನೀನು
ಕಾವ್ಯದ ಆಶಯ ನೀನು
ಕಾವ್ಯದ ಒಳಹರಿವು ನೀನು
ಕಾವ್ಯದ ಬದುಕು ನೀನು
ಕಾವ್ಯದ ಅಲಂಕಾರ ನೀನು
ಕಾವ್ಯದ ಛಂದಸ್ಸು ನೀನು
ಕಾವ್ಯದ ಸ್ಫೂರ್ತಿ ನೀನು
ಕಾವ್ಯದ ಸೆಲೆ ನೀನು
ಕಾವ್ಯದ ಪ್ರತಿಮೆ ನೀನು
ಕಾವ್ಯದ ಕೃತಿಯು ನೀನು
ಕಾವ್ಯದ ಕರ್ತೃ ನೀನು
ಕಾವ್ಯದ ತರ್ಜುಮೆ ನೀನು
ಕಾವ್ಯದ ರಸೌಚಿತ್ಯ ನೀನು
ಕಾವ್ಯದ ವಿಮರ್ಶೆ ನೀನು
ಕೊನೆಗೆ.....
ಕಾವ್ಯದ ಕವಿಯೂ ನೀನೆ.
         

ಮನ

ಮಣ್ಣ ಘಾಟು ಬಡಿದು
ಸುವಾಸನೆ ಮಂಪೇರಿಸಿ
ಮೂಗಿಗೆ ಬೇಲಿಕಟ್ಟಿ
ಮಣ್ಣ ಸಂಗ ಬಯಸುತ್ತಿದೆ ಮನ.. !

ಮಣ್ಣ ಪುಟ್ಟ ಪುಟ್ಟ ಕಂದಮ್ಮಗಳು
ಸಣ್ಣ ಹೊಟ್ಟೆಗೆ ಚಪ್ಪರಿಸಲು
ಆಹಾರವಾಗುತ್ತ ನಂಟು ಬಿತ್ತಲು
ಹಂಬಲಿಸುತ್ತಿದೆ ಮನ.. !

ಮಣ್ಣ ಅಣುಗಳ ಬೆವರಲ್ಲಿ
ಕೊಳೆತ ಹೂವಾಗಿ ಬಾಳಲು
ಕುಣಿಯುತ್ತಿದೆ ಮನ.. !

ಮಣ್ಣ ಹಸಿ ತೇವದೊಳಗೆ
ದೇಹವನ್ನು ಉಜ್ಜಿ ಮೆತ್ತಿಕೊಳ್ಳಲು
ಹಾತೊರೆಯುತ್ತಿದೆ ಮನ.. !

ಮಣ್ಣ ವಿಶಾಲ ಆಗಸದಲ್ಲಿ
ಅರೆಬೆಂದ ನೆನಪನ್ನು ಹಚ್ಚುತ್ತಾ
ನಿರಾಳತೆಯನ್ನು ತನ್ನದಾಗಿಸಿ
ಬಾಳ ಅಮಾವಾಸ್ಯೆ ನೆನೆದು
ಕಾಲುಚಾಚಿ ನಿದ್ರಿಸಲು
ತವಕಿಸುತ್ತಿದೆ ಈ ನನ್ನ ಮನ.. !!
 

ಮಂಗಳವಾರ, ಮೇ 26, 2020

ನೋವು

ಚುಚ್ಚಿ ಚುಚ್ಚಿ ಮುಕ್ಕುವ
ಹದ್ದುಗಳ ನಡುವೆ
ಒಲವ ಕಟ್ಟೆಯ ಹೂರಣ
ಮೂಕ ಮನಸ್ಸಿನ
ನೂರಾರು ನೋವ ರಂಧ್ರಗಳು
ಸೊಕ್ಕಿನ ಬರಸಿಡಿಲು ಬಡಿದು
ಮುಚ್ಚಲೆತ್ನಿಸಿದರೂ..
ಆಗಾಗ್ಗೆ ತೆರೆದುಕೊಳ್ಳುತ್ತವೆ
ಪರಿ ಹೇಗಿದೆಯೆಂದರೆ
ಅವುಗಳೂ.. ಪರಿಸ್ಥಿತಿ ಅಣುಕಿಸಿ
ಕೇಕೆ ಹಾಕಲಾರಂಭಿಸಿವೆ
ಭಯವಿಲ್ಲವೀಗ..ಸೆಟೆದು ನಿಂತಿವೆ
ಬಂದ ನೋವಿನ ಉಂಡೆಗಳನ್ನು
ಗುಳುಂ ಎಂದು ನುಂಗಿ
ಗಹ ಗಹನೇ ನಕ್ಕು
ನೀರು ಕುಡಿದು.. ಬಾಯಿ ಒರೆಸಿಕೊಳ್ಳುತ್ತಿವೆ
ಇನ್ನಾ.. ಬರುವುದಾದರೆ ಬರಲಿ
ಎಂದು ಹಸಿವಿನ ಬಾಯಾರಿಕೆಗೆ
ಬಾಯ್ತೆರೆದು ನಿಂತು ಬಿಟ್ಟಿವೆ.

ಸೋಮವಾರ, ಮೇ 25, 2020

ಅಂತರಂಗ

ಮನಸ್ಸು ಕನಸ್ಸಿನೊಳಗೊಂದು
ಪುಟ್ಟ ಹಕ್ಕಿ...!!
ಗೂಡು ಕಟ್ಟಿ ನಲುಗುತಿಹುದು
ಕತ್ತಲ್ಲನ್ನೇ ಹೊತ್ತಿದ್ದರು
ಸದಾ ಇಣುಕುತ್ತಿರುತ್ತದೆ
ಅದಕ್ಕೂ.. ಕಣ್ಣು.. ಕಿವಿ..
ಮನಸ್ಸು... ಇದ್ದಿರಬಹುದು!
ಉಸಿರಾಡಲು ಹವಣಿಸುತ್ತಿರುತ್ತದೆ
ನಿರಾಸೆಯ ಗುಳ್ಳೆಗಳನ್ನು ಅಂಟಿಸಿಕೊಂಡು
ಭರವಸೆಯ ಗಂಟು
ಹೊದ್ದು ನಿದ್ರಿಸುತ್ತಿರುತ್ತದೆ
ಒಳ ಇರಲೂ.. ಒಲ್ಲದು
ಹೊರಹೋಗಲು ಕಾಲಿಲ್ಲ
ಅದರ ಖಂಡನೆ ಸಲ್ಲದು
ಸೂರ್ಯ ತೇಜಸ್ಸಿನ ಕಿರಣ ಪ್ರಭೆ
ಪುಟ್ಟ ರಂಧ್ರ ಸೃಷ್ಟಿಸಿ
ಹೊರ ತೇಲಿಸ ಬಹುದೆಂಬ
ಆಶಾಭಾವದ ಕಪ್ಪುಛಾಯೆ
ಎಂದಿಗೋ.. ಮೂಕವೇದನೆಗೆ
ಬಿಡುಗಡೆಯ ಮರೀಚಿಕೆ
ಇಂದಿರಾ..ಚಂದಿರ.. ಆಚಾರ್ಯರಿಂದ.

ಒಬ್ಬಂಟಿ

ಏಳುಬೀಳಿನ ಬಾಳ ಪಥದಲ್ಲಿ
ಒಬ್ಬಂಟಿ ಧ್ಯಾನ..!
ಭಾವನೆಗಳು ತಲೆಶೂಲ
ಏಕಾಂತ ಹಿತವೆನಿಸಿ
ಸಾನಿಧ್ಯ ಸಾಕೆನಿಸಿ
ನೆನಪಿನ ದಾರಿ ಸವೆದು
ಆಹ್ವಾನ ಬೇಡೆನಿಸಿ
ಸಿಹಿ ನೆನಪು ಉಪ್ಪಿನ ಮುಪ್ಪಾಗಿ
ತಳ್ಳಿದಷ್ಟು ದೂರ.. ಸಾಗಿ
ಮನಸ್ಸಿನ ಮರ್ಕಟ ತಿಂದು
ಮಣ್ಣಾ ಕಣದ ಅಣುವಾಗಿ
ಹೆಬ್ಬಂಡೆ ತಾಕಿದರು..
ಅಲುಗಾಡದಂತೆ
ವಾರಿಧಿಯ ಭೋರ್ಗರೆತದೊಳಗೆ
ಮರೆವಿನ ಕಂಬಳಿ ಹೊದ್ದು
ಮರುಜನ್ಮ ಅರಸಿ
ಮಗುವಾಗಿ
ಮಲಗಿಬಿಡುವಾಸೆ.

ಖಾಲಿಯಾಗಿದೆ ಭಾವನೆಗಳು







ಸೋಮವಾರ, ಮೇ 18, 2020

ಪನ್ನೀರು



   ಜಲ ಜಲನೇ ಹರಿವ ನೀನು
   ಅದೆಷ್ಟು ಚಂದ...
   ಅದ್ಹೇಗೆ  ಹಗುರಾಗಿಸುತ್ತೀಯೋ   
   ಮನವ ನನ್ನ ಗೆಳೆಯ
   ಕೆನ್ನೆಗಳಿಗೆ ಮುತ್ತಿಕುತ್ತಾ
   ಸ್ಪರ್ಶಿಸುವ ನೀನು
   ಭಾವನೆಗಳ ಜಲಧಿ
   ಭಾವೋದ್ರೇಗಕ್ಕೂ ಸೈ !
   ನನ್ನೊಳಗೂ... ಜೈ
   ಮನವನ್ನು ಮುದುಡಿ ಅರಳಿಸುವೆ
   ನನ್ನ ಅಪ್ಪಿಯಂತೆ
   ದಿನಕ್ಕೊಮ್ಮೆಯಾದರೂ ನೀ ಇಣುಕುವೆ
   ಮುತ್ತಿಕ್ಕಿ ಅಪ್ಪುವೆ
   ಅಪ್ಪಿ ಮುತ್ತಿಕ್ಕುವೆ
   ಅಳಿಸಿ  ಅಳಿಸಿ ನಗುವೆ..
   ಅಳಿಸಿ ಅಳಿಸಿ ನಗಿಸುವೆ..
   ಕೊನೆಗೆ  ಬಿಟ್ಟು ಜಿಗಿವೆ.
   ನನ್ನೊಳಗಿನ ಪ್ರಾಣಪಕ್ಷಿಯಲ್ಲಿ.

  

ಭಾನುವಾರ, ಮೇ 10, 2020

ಕಾಜೂರು ಸತೀಶ್ ಸರ್

   
         ನನ್ನ ಈ  ಲೇಖನ  ಕೊಡಗಿನ ಪ್ರತಿಭಾನ್ವಿತ ಕವಿ ಹಾಗು ತನ್ನ ಕೌಶಲ್ಯವನ್ನು ವಿವಿಧ ಆಸಕ್ತಿಯ ಭಿನ್ನತೆ ಮೆರೆಯುವ ಕೊಡಗಿನ ಪ್ರತಿಭಾನ್ವಿತ., ಸಂವೇದನಾಶೀಲ ಯುವ  ಕವಿ.. ಶಿಕ್ಷಕ.. ಅನುವಾದಕ.. ಸಾಹಿತಿ.. ಚಿಂತಕ  ಕಾಜೂರು ಸತೀಶ್ ರವರ ಬಗ್ಗೆ.

       
      ಶ್ರೀ. ನಾರಾಯಣ್ ಮತ್ತು  ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ.
     
         ಸತೀಶ್ ರವರ ಕವಿತೆಗಳನ್ನು ಜೀರ್ಣಿಸಿಕೊಳ್ಳಲು ಎರೆಡೆರೆಡು ಬಾರಿಯಾದರೂ ಓದುವ ನಾನು ಅವರ ಕವಿತೆಗಳ ಬಗ್ಗೆ ಏನು ಹೇಳಲು ಸಾಧ್ಯ..? ಎಂಬ ಪ್ರಶ್ನೆ ಆಗಾಗ್ಗೆ ಕಾಡುತ್ತಿರುತ್ತದೆ. ಇರಲಿ..... ಅನ್ನಿಸಿದ್ದನ್ನು ಹೇಳುವುದರಲ್ಲಿ ತಪ್ಪಿಲ್ಲವೆಂದು ಭಾವಿಸುತ್ತೇನೆ.
   
      2015ರ " ಕಡೆಂಗೋಡ್ಲು  ಶಂಕರಭಟ್ಟ  ಕಾವ್ಯ ಪುರಸ್ಕಾರ " ಪಡೆದ ಸತೀಶ್ ರವರ ಮೊದಲ  ಕವನ ಸಂಕಲನ "ಗಾಯದ ಹೂವುಗಳು "  ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ "ಕಡಲಕರೆ "ಗೆ..ತಡವಾಗಿಯಾದರೂ ಶುಭಾಶಯಗಳನ್ನು  💐💐ತಿಳಿಸುತ್ತಾ... ಮುಂದುವರೆಯುತ್ತೇನೆ.
     
                            ನಾ ಅರಿತಂತೆ ಸತೀಶ್ ರವರ  ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ.. ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು  ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.

     ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ.
 
ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.
   
    
  ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
  ಹೌದಾಗಿರುವ ಇವರು,  ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ  ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ  ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ  wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ.
     
      ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.

      ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ...!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ  ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.

            ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ  ಸತೀಶ್
ರವರು ವರ್ಣಚಿತ್ರಗಳು... ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು.

                                                                     
      ಕಾಡಿನ ಹಾದಿಯಾದರೂ ಸೈ.. !ಎನ್ನುವ ಅನ್ವೇಷಣಾ ಮನೋಭಾವದ ನಮ್ಮ ಸತೀಶ್ ರವರಿಗೆ ಗೆಳೆಯರ ಜೊತೆಗೂಡಿ  ಚಾರಣ ಹೋಗುವುದು,   ಬಲುಪ್ರೀತಿಯ   ಹವ್ಯಾಸಗಳಲ್ಲಿ ಒಂದಾಗಿದೆ.

     ಮಾಡೆಲಿಂಗ್ ಕ್ಷೇತ್ರಕ್ಕೂ ಸೈ ಎನ್ನುವ ರೀತಿಯ ಸುಂದರ, ಸದೃಢಕಾಯ ಸತೀಶ್ ರವರಿಗೆ... ಸತೀಶ್ ರವರು ಮಾತ್ರ ಸಾಟಿ.

       ಸಾಮಾಜಿಕಜಾಲತಾಣಗಳು... youtube.. ನಂತಹ ವಿಡಿಯೋ ಶೇರಿಂಗ್ ಸರ್ವಿಸ್ ಗಳಲ್ಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ.
 

   
    " ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.".. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ  ನಿಪುಣತೆ ಇವರಲ್ಲಿದೆ.

    ಗಣ್ಯ ವ್ಯಕ್ತಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಇವರು,  ಸರಳಜೀವಿ. ಸನ್ಮಾನ, ಹೊಗಳಿಕೆ, ಪ್ರಚಾರ, ಆಡಂಬರದ ಜೀವನಗಳಿಂದ ದೂರದಲ್ಲೇ ಉಳಿಯುವ ಇವರು,  ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಒಬ್ಬಂಟಿಯಾಗಿ ಹೊರಡುವ ಪರಿ... ಕವಿತೆಗಳ ಮೊರೆ ಹೋಗುವ ರೀತಿ ಇವರ ವ್ಯಕ್ತಿತ್ವಕ್ಕೆ  ಇನ್ನಷ್ಟು ಮೆರಗು ನೀಡುತ್ತವೆ. 

            ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ  ಇಂತಹ ಕವಿ., ಕವಿತೆಗಳು, ತೊಡಗಿಸಿಕೊಳ್ಳುವಿಕೆ, ವ್ಯಕ್ತಿತ್ವ ಯುವಪೀಳಿಗೆಗೆ ಮಾರ್ಗದರ್ಶಿ ಎಂದರೆ ಅತಿಶಯದ ಮಾತುಗಳಾಗುವುದಿಲ್ಲ. 

    ಇಂತಹ  ವಿಶಿಷ್ಟತೆಯ ವಿಭಿನ್ನ ಚೇತನ ನಮ್ಮೊಂದಿಗೆ ಶಿಕ್ಷಕರಾಗಿ, ನಮ್ಮ ಇಲಾಖೆಯಲ್ಲಿರುವುದೇ ಹೆಮ್ಮೆಯ ಸಂಗತಿ.           
                  2017 ರಲ್ಲಿ ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನರಾಗಿರುವ, ಇವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಸಲ್ಲುವಂತಾಗಲಿ,  ಹಾಗೆಯೇ ಮತ್ತಷ್ಟು ಪ್ರಶಸ್ತಿಗಳು ಇವರ ಪ್ರತಿಭೆಗೆ ಅರಸಿ ಬರಲಿ. 

      ತಮ್ಮಲ್ಲಿಯ   ಜ್ಞಾನ ಮತ್ತು ಕವಿತ್ವದ ನೆಲೆಯಿಂದ ರಾಷ್ಟ್ರಕಂಡ ಕವಿಗಳ ಸಾಲಿನಲ್ಲಿ ನಮ್ಮ ಸತೀಶ್  ಸರ್ ರವರ  ಹೆಸರು ಹೊರಹೊಮ್ಮುವಂತಾಗಲಿ ಎಂಬುದೇ ಸಾಮಾನ್ಯ ಓದುಗಳಾಗಿ ನನ್ನ ಮನತುಂಬಿದ ಹಾರೈಕೆ💐💐. 

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...