ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಸೋಮವಾರ, ನವೆಂಬರ್ 23, 2020

ಪಸೆ


ಒಂದು ಹುಳು
ಹಸಿ ಹಸಿಯಾಗಿ ಮಿಣುಕಿ
ಉಸಿರಾಡುತಿತ್ತು
ನುಣುಪು ನುಣುಪಾಗಿತ್ತು
ಪಸೆಯ ಹರಿಸಿ ಭ್ರಮಿಸುತಿತ್ತು
ಅದ ಕಂಡ ಕೊರಕಲು
ಅಭಿಮಾನದಿಂದ ಕುದಿಯಿತು 
ಹುಳುವೂ ಅದರಲಿ ಮಿಂದಿತು 
ದಿನ ದಿನಗಳು ಮೈತಳೆದವು 
ಹುಳುವು ತನ್ನ ಹಸಿ ಪಸೆಯನ್ನು 
ನಿಧಾನವಾಗಿ ಬಿಚ್ಚಿ 
ಬಿಸಿಲಿನ ಬೆಳಕಲ್ಲಿ ಬಿಸುಟಿ
ಏಕಾಂತದಲ್ಲಿ ಮೈ ಚಾಚಿತು 
ಕೊರಕಲು ಇದ ಕಂಡು ಹುಬ್ಬೇರಿಸಿತು 
ಲೋಕದ ಹಾಲ್ಬಣ್ಣವ ಅರಿತು 
ತಾನು ಕುಳಿತಲ್ಲೇ ಕುಸಿದು 
ನೀರಾಗಿ ಮಿಣುಕಿತು 
ಪಸೆಯ ಉಳಿಸಿ ಅಮರತ್ವವ ಕುಡಿಯಿತು 



ಭಾವ

ನನ್ನೊಳಗೆ ನಾ ಹೊಕ್ಕಿ
ನನ್ನೊಂದಿಗೆ ನಾ ಬದುಕಿಕೊಳ್ಳುವೆ
ಯಾರ ಹಂಗಿಲ್ಲ ನನಗೆ
ಮೆಚ್ಚುವ ಪರಿವೂ ಬೇಕಿಲ್ಲ
ಯಾರು ಏನಾದರೂ ಸವಿಯಲಿ
ಅವರವರ ಭಾವಕ್ಕೆ ಅದು ನುಸುಳಿ
ಹುಸಿಯಾಗುತ್ತಿರಲಿ 
ನಾ ಹೀಗೆ ಇರುವೆ 
ಏಕಾಂತರ ಮುಖಿಯಾಗಿ 
ಗೊತ್ತೇ... !
ಏಕಾಂಗಿಯಲ್ಲೂ ನಾ ಬಹುಮುಖಿ 
ಅದ ಅರಿವು ನನ್ನಿಂದ 
ನನಗೆ ಮಾತ್ರ ಸಾಧ್ಯ. 


ಏಕಾತ್ಮ

ನನ್ನೊಳಗಿನ ಕವಿತೆ ಏಕಾತ್ಮ
ಅರಿವಿನ ಪರಮಾತ್ಮ
ಕವಿತೆಯ ಒಡಲ
ಉಸಿರಿನಲ್ಲಿರುವ ಹಸಿರಾಂಶ
ಚಿಗುರೊಡೆಯುತ್ತಲೇ ಹಬ್ಬಿ
ವ್ಯಾಪಿಸಿ ಬಿರಿಯುತ್ತದೆ
ಶಯನದಲ್ಲಿದ್ದರೂ ಅರಸಿ
ರಮಿಸುವ ಸವಿಗನಸಿನ ಏಕಾಂತ
ಪ್ರಶಾಂತತೆಗೆ ಕೈ ಇಟ್ಟಾಗ ಲೇಖನಿಯ
ಶಾಹಿಯಲ್ಲಿ ಬರೆದುಕೊಳ್ಳುತ್ತಾ ಸಾಗಿ
ಕ್ಷಣಮಾತ್ರದಲ್ಲಿ ಸದ್ದಾದರೆ
ಮರೆವಿನ ಗುಳಿ ಹೊಕ್ಕಿ ಮಿಂಚಾಗಿ
ಆಗ-ಈಗ ಸ್ವಲ್ಪ ಇಣುಕಿದರೂ
ಭಾವನೆಗಳ ಭಾವಕ್ಕೆ ಬಿಗಿದಪ್ಪಿ
ತಿಳಿದು ಬಳಿದು ಬಣ್ಣ ಮೆತ್ತಿ
ರೂಪು ನೀಡಿ ಹಡೆಯದೆ 
ಮೈಯಿಳಿಯುತ್ತದೆ 
ಕವಿತೆಯೊಳಗೊಂದು ಕವಿತೆ 
ಉಸಿರಾಡಿ ಬಸಿರ ಅಡಗಿಸಿಟ್ಟ 
ಗ್ರಹಿಕೆಯ ಅರಿವ ಪರಿವು 
ಅವರವರ ಭಾವಾರ್ಥದಲ್ಲಿ 
ಮೇಳೈಸಿ ನಲಿಯುತ್ತಿರುತ್ತದೆ. 


ಶನಿವಾರ, ನವೆಂಬರ್ 21, 2020

ಕವಿತೆ ಭಾವ

ನಗುವೋ ಅಳುವೋ
ಉಸಿರಿಗೆ ಬಸಿರಿನ ಮುನ್ನುಡಿ
ಬಿರಿದ ಮೊಳಕೆ ಬಸರು ಹೊತ್ತು
ಜಗಿದು ಉಗಿದ ಕನಸು ತಿಂದು
ನಿತ್ಯ ನೂರು ಬವಣೆ ಸಹಿಸಿ
ಬಾಳ ಕೂಸು ಒದೆದ ಭಾಸ
ಕಷ್ಟ ಮಾಯವಾಗಿ ದಿವಸ
ಭಾವನೂರು ಉಕ್ಕಿ ಹರಿವ ಒಲವು
ಬಾಳ ದಿನದ ಕನಸು ಸವಿದು
ಬೆವರು ಬಸಿದು
ಉಸಿರು ನೀಡಿ
ರಕ್ತ ಪಸರಿ
ಮಾಂಸ ಹಂಚಿ
ಗಾಯ ಬಿರಿದು
ನೋವು ಚೀರಿ
ಜೀವ ಹಡೆವ, ದೈವ ಮಾತೃ 
ಆತ್ಮದಿಂದ ತಿದ್ದಿ ತೀಡಿ ರೂಪುಕೊಟ್ಟು 
ಅರಿವ ದಾರಿಯನ್ನೇ ತೋರಿ 
ತಾನು ಬತ್ತಿ, ಕಣ್ಣ ನೀರು ಎರೆದು
ಕಂಡ ಫಲದಿ ಜಗದ ಖುಷಿಯ ಮೆರೆವ  
ಸಾರ್ಥಕತೆಯ ಸತ್ತ್ವದಂತೆ 
ತಾಯಿ ಮನದ ನನ್ನ ಕವಿತೆ ಭಾವ. 



ಗುರುವಾರ, ನವೆಂಬರ್ 19, 2020

ಕಡಲ್ಲವ್ವ

ಅಕ್ಕರೆಯ, ಕಾಣದ ಕಡಲ್ಲವ್ವ...
ನನ್ನದೊಂದು ವಿನಮ್ರ ಬೇಡಿಕೆ...
ಕ್ಷಣಕಾಲ ಕೊಂಚ ಭೋರ್ಗರೆಯುವುದಾ.. ನಿಲ್ಲಿಸು
ಓಶಿಯೋಗ್ರಫಿ ಭಾಷೆ ತಿಳಿದಿಲ್ಲ, ಭಾಷೆ ಬಡವಿ
ಬಿಡುವೆಯಾ.. ಒಳಗಿನ ಪಸೆ ಹರಿಯಲು...
ಒರತೆ ಹರಿದಷ್ಟೂ ವಿಶಾಲ, ಹಸಿರು
ಒಡಲೆಲ್ಲ ಜೀವನಿಧಿ ಹೊತ್ತ ವಾರಿಧಿಯೇ...
ಅದೆಷ್ಟು ಹೊಳಪಿನ ನೀಲಿ -ತಿಳಿಯ ಮಿಶ್ರವರ್ಣ
ಉದರದ ವಿಷವನ್ನೆಲ್ಲ ಹೊತ್ತೊಯ್ದು
ತಂದು ಬಿಸಟು ಬೀರುವೆ ನಗೆಯನ್ನು
ನಿನ್ನ ಮಡಿಲಲ್ಲಿ ಗುಳು ಗುಳು ಗುಟ್ಟುತ್ತಿರುವ
ಜೀವರಾಶಿಯಾಗಿ ಬದುಕಿಕೊಳ್ಳಲೆ...?
ಭೋರ್ಗರೆವ ನಿನ್ನ ಶಬ್ದಕ್ಕೆ ದನಿಯಾಗಿ
ನಿನ್ನ ಅಲೆಯಲ್ಲಿ ತೇಲುವ ನೌಕೆಯಾಗಿ
ಇಲ್ಲವೆಂದರೆ ನಿನ್ನಲ್ಲಿನ ಉಪ್ಪಿನ ನಿಯತ್ತಾಗಿ
ನಿನ್ನ ಉಡಿ ಮೊಳಕೆಯಾಗಿ ತಲೆಯೆತ್ತಿ 
ಜಗದ ಮಾದರಿಯನ್ನು ಅರಸರಸಿ 
ನಿನ್ನಲ್ಲಿಯ ತಂಪೆರೆಯುವ ಮನೋಹರತೆ 
ಉಕ್ಕಿ ನಿನ್ನಲ್ಲಿಯ ತಂಗಾಳಿಯಾಗಿ  
ಹೊತ್ತು ಮೂಡುಗೆ, ಕಂತುಗೆಗಳಲ್ಲಿ 
ದಿನಾ  ಮುಳುಗೇಳುವ ಪರಿಯ ಧಿರಿಸು ಧರಿಸಿ 
ಕೊನೆಯವರೆಗೂ ನಾ... ನಿನ್ನಂತೆ 
ವಿಶಾಲ ಪರಿಧಿಯ ಅಲೆಗಳನ್ನು ಹೊತ್ತು 
ಸದಾ ಭೋರ್ಗರೆಯುತ್ತಾ ಮುನ್ನುಗ್ಗುವ
ಸೆಳೆವಿನ ಕುರುಹಾಗಿ, ಒಳವಿನ ಸೆಲೆಯಾಗಿ  
ಸದಾ  ಜನ ಮನದ ಬನಗಳೊಳಗೆ.                                     
                                  

ಮಂಗಳವಾರ, ನವೆಂಬರ್ 10, 2020

ನಂಬಿಕೆ

ನಂಬಿಕೆಯೊಳಗೊಂದು ಅಪನಂಬಿಕೆಯ 
ಗಿಡ ಬೆಳೆದು ಬೇರು ಬಿಟ್ಟಿಹುದು 
ಅದರ ತುಂಬೆಲ್ಲ ನನ್ನ ಹಸಿರಿನ 
ಉಸಿರು ತುಂಬಿದ್ದೇನೆ 
ಕಣ್ಣು ತುಂಡರಿಸೋಣವೆಂದರೆ 
ರಕ್ತ ಒಸರುತ್ತದೆ 
ಕಾಂಡ ಕತ್ತರಿಸಲು ಒಡಲು 
ಬರಿದಾಗಿ ಬತ್ತುತ್ತದೆ 
ರಕ್ತದಲ್ಲೆಲ್ಲಾ ಪಸರಿಸಿರುವ 
ಬೇರನ್ನೇ ಚಿವುಟಿ ಬಿಡಲು
ಜೀವವೇ ಅಳಿಯುತ್ತದೆ 
ಏನು ಮಾಡಲಿ.....?? 



ಅವ್ವ

ಅವ್ವ ಬೆಂಕಿ ಹಚ್ಚಿ ಬೇಯುತಿಹಳು 
ತನ್ನ ಗಂಟಲೇ ಹೊಗೆ ಕೊಳವೆಯಾಗಿಸಿ 
ತನ್ನವರಿಗಾಗಿ ಉಸಿರಾಗಿ ಊದಿ ಊದಿ 
ಬೆಂಕಿಯನ್ನು ಧಗ ಧಗನೇ ಹತ್ತಿಸಿರುವಳು 
ಆಸೆ ಆಕಾಂಕ್ಷೆಯ  ಕನಸುಗಳನು ಬೆಂಕಿಯಲ್ಲಿ 
ಬೇಯಿಸಿ, ಜ್ವಾಲೆಯಲ್ಲಿ ಕೆಂಪೇರಿಹಳು 
ಅಗ್ನಿಯೊಂದಿಗಿನ ಈಜಿ ಮೀಯುವಿಕೆಯಲ್ಲಿ 
ನನ್ನವ್ವ ಬೆಂಕಿಗೂ ಕಿಡಿಯಾಗಿಹಳು 
ಕೆಂಡವ ತನ್ನ ಬೆಂದ ಚರ್ಮಕ್ಕೆ ಅಂಟಿಸಿಕೊಂಡು 
ತನ್ನೊಳಗೆ ಉರಿದ ಅದೆಷ್ಟೋ ಬೆಳಕಿನ ಕಿಡಿಗಳನ್ನು 
ತನ್ನ ಸೆರಗೊಳಗೆ ಬಚ್ಚಿಟ್ಟು ತಾನು ಸುಡುವ 
ರೊಟ್ಟಿಗೆ ಭವಿಷ್ಯದ ತಾಳೆ ಹಾಕುತಿಹಳು 
ಮೂಗು -ಮೂಗುತಿಯರು ಹೊಗೆ ಗೂಡಿನ 
ಒಡೆಯ -ಒಡತಿಯರಾದರೂ 
ಪ್ರೇಮ ನಂದಿಲ್ಲ ಅವಳಲ್ಲಿ 
ನಂದುವುದೂ ಇಲ್ಲ, ಅವ್ವನ ಮಿಡಿತ 
ತನ್ನವರ ಭಾವವಷ್ಟೆ !
ಅವ್ವನ್ನಲ್ಲಿರುವ ಬೂದಿಯಂತೆ ಶಾಂತತೆಯ 
ಕೆದಕುತಿಹಳು ಮತ್ತೆ ಅದರಲ್ಲೆ ಬೆಂಕಿ 
ಮಾಡಿ ಮನೆ -ಮನವ ಹಚ್ಚಿ 
ಅವ್ವನ ಬೆಳಕಿನ ಅನಂತತೆ ಎಂದೆಂದಿಗೂ ಹೀಗೆ 
ಜಗದ -ಜನಮನಗಳಲ್ಲಿ ಹಬ್ಬಿ ಹರಡುವಲ್ಲಿ ಜಾಗೃತಗೊಳ್ಳುತ್ತಿರಲಿ. 




ಶುಕ್ರವಾರ, ನವೆಂಬರ್ 6, 2020

"ಗಾಯದ ಹೂವುಗಳು "



"ಗಾಯದ ಹೂವುಗಳು 2015 ರ  ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ" ಪಡೆದ ಕೊಡಗಿನ ಯುವಕವಿ  ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ.  ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್  ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ. 
                                         ಕವಿತೆಯೆಂದರೇನೆಂದೇ 
                                                             ತಿಳಿಯದ, 
                         ನನ್ನನ್ನೇ ಉಸಿರಾಡಿಕೂಳ್ಳುತ್ತಿರುವ
                                                   ಅಪ್ಪ -ಅಮ್ಮನಿಗೆ.         ಎಂಬ ಕವಿಯ ಅರ್ಪಣಾಭಾವದಿಂದ ಅರ್ಪಿಸಿಕೊಳ್ಳುತ್ತ ಹೋಗುತ್ತದೆ. 

"ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ, ಕವಿತೆಯ ತೆಕ್ಕೆಯೊಳಗೆ ಬಿದ್ದೆ "ಎಂದು  ಮುನ್ನುಡಿ ಬರೆದು ಕೊಳ್ಳುವ ಕವಿ, ಕವಿತೆಗಳನ್ನು ಹೆರುವ ಪರಿಯೇ ವಿಭಿನ್ನ. 

 ಇರುವೆ, ಒಂಟಿ, ಊದುಕೊಳವೆ, ಖಾಲಿಡಬ್ಬ, ಚಪ್ಪಲಿಗಳು, ಮಾತು, ಮೌನ ಮತ್ತು ಕವಿತೆ, ಮರಣದ ಹಾಡು, ಹಾವು, ಮೈಲಿಗೆ, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ನೆಲವಿಲ್ಲದವನ ಉಯಿಲು, ಬೇಲಿ, ನದಿ, ಕಾಡು ಕವಿತೆ, ಮಿಕ್ಕವರಾರನ್ನೂ ಹೀರಕೂಡದು, ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳು, ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ,ಒಲೆ ಮತ್ತು ಅವ್ವ, ಅರ್ಥವಾಗಿರಬಹುದು, ನೀನು ನನ್ನ  ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯ್ ಸ್ವಗತ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಅಸ್ವಸ್ಥ ಕವಿತೆಗಳು, ನೋಟೀಸು, ಸಲಾಮು, ನನ್ನ ಕವಿತೆ, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಇರಲಿ, ಅಪ್ಪ ಮತ್ತವನ ಹತ್ಯಾರಗಳು, ಎಲ್ಲ ಅಮಾವಾಸ್ಯೆಗಳಲ್ಲೂ ಪದ್ಯವೊಂದಿರಲಿ ಬೆಳಕಿಗೆ, ಸಾವು, ಗಾಯದ ಹೂವುಗಳು, ಆಲ್ಬಮ್, ಯಾರದಿದು? ಇನ್ನೂ ಬದುಕಿರುವ ಕವಿತೆಗಳು, ಮೊದಲ ರಾತ್ರಿಯಂದು, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ನಿನಗೆ, ಕೊಳದ ಬಳಿಯ ಮರ, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ, ಮಧ್ಯರಾತ್ರಿಯ ನಂತರದ ಮಳೆ, ಶಬ್ದ ಸಮರ, ಮರ, ಕಸದ ತೊಟ್ಟಿಯ ಕಾಗದದ ಲೋಟಗಳು, ಪರೀಕ್ಷೆ, ಉಯಿಲು. 

ಈ ಮೇಲಿನ 53 ಹೂವುಗಳಿರುವ ಹೂಗುಚ್ಛ "ಗಾಯದಹೂವುಗಳು".ಪ್ರತಿಯೊಂದು ಹೂವುಗಳೂ ಗಾಯದ ಹೂವುಗಳಾಗಿ ಅರಳಿ, ಸುತ್ತೆಲ್ಲಾ ಪರಿಮಳ ಸೂಸುತ್ತಾ ಎಲ್ಲರನ್ನು ಆಕರ್ಷಿಸಿ ಘಮಘಮಿಸುತ್ತಿರುವ ಪ್ರೀತಿಯ ಪಾರಿಜಾತಗಳಾಗಿವೆ.

ಕೇಳಿಸಿಕೊಳ್ಳಿ 
ಒಂದು ಇರುವೆ ಸತ್ತಿದೆ 
ನನ್ನ ಕಾಲ ಬುಡದಲ್ಲಿ 
        
      ಎನ್ನುವ ಕವಿಯು ಸಮಾಜದ ವ್ಯವಸ್ಥೆ, ಶ್ರೀಮಂತವರ್ಗ,ಹತಾಶೆಗಳನ್ನು ಕಡಿಮೆ ಪದಗಳಲ್ಲಿ ಅತಿಸೂಕ್ಷ್ಮವಾಗಿ ಶಬ್ಧ ಸಂವೇದನೆಯಿಂದ  ಪ್ರಸವಿಸಿದ್ದಾರೆ. 

 ಸತೀಶ್  ರವರ ಕವಿತಗಳನ್ನು ಓದುತ್ತಾ ಹೋದರೆ ಅವು ಬರಿ ಕವಿತೆಗಳಾಗಿ ಅಭಿವ್ಯಕ್ತವಾಗುವುದಿಲ್ಲ. ಅವುಗಳು ಅವರು ಬದುಕಿಕೊಳ್ಳಲು ಹಡೆದ ಮಕ್ಕಳಾಗಿವೆ. ಕವಿಗೆ ಕವಿತೆಗಳೇ ಬದುಕಿನ ಭರವಸೆಯ ಮೌಲ್ಯಗಳು. 

ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕ್ರತರು 
ಮಸೀದಿ ಮಂದಿರ ಇಗರ್ಚಿಗಳಿಗೂ ಅಸ್ಪೃಶ್ಯರು 
ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ 
  
    ಈ ಕವಿತೆಯಲ್ಲಿ ಮೌಢ್ಯ, ಜಾತೀಯತೆ, ಮೇಲು -ಕೀಳು ಮನೋಧೋರಣೆ, ಅಸಹಾಯಕತೆ, ಬಡತನ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯ ಬಗ್ಗೆ ಇರುವ ಅತೃಪ್ತಿಯನ್ನು ಚಪ್ಪಲಿಗಳು ಕವಿತೆಯ ಮೂಲಕ ಧನ್ಯತಾ ಭಾವದಲ್ಲಿ ಕವಿತೆಯಾಗಿ ಹಡೆದಿದ್ದಾರೆ. 

ಕಡಲಿನ ಆಚೆ ಬದಿಯಲ್ಲಿ 
ನಿನ್ನದೊಂದು ತೊಟ್ಟು ರಕ್ತ 
ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ 
ಚೆಲ್ಲಿ ಬಿಡೋಣ 
 
ಕವಿ ಕವಿತೆಗಳಲ್ಲಿ ಬಳಸಿರುವ ರೂಪಕಗಳು, ಪ್ರತಿಮೆ, ಸಾಂಕೇತಿಕ ಭಾಷೆ ಪ್ರತಿಯೊಂದು ಅವರು ಕವನ ಹೆರುವ ರೀತಿಗೆ ಉದಾಹರಣೆ. 

ಹಸಿದ ಜಿಗಣೆಯೇ 
ಬಾ ಹೀರು ನನ್ನನ್ನು 
ಸ್ವಲ್ಪದರಲ್ಲೇ ನೀನು 
ದ್ರಾಕ್ಷಿಯಾಗಿ ಉದುರುತ್ತೀ 

  ಕವಿಯ ಜಿಗಣೆಯೊಂದಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.ಮಿಕ್ಕವರಾರನ್ನೂ ಹೀರಕೂಡದು ಎಂದು ಹೇಳುವ ಪರಿ, ಕವಿಗೆ ಇತರರ ಮೇಲಿರುವ ಉದಾರತೆ, ಕಾಳಜಿ, ವಿಶಾಲ ಮನೋಭಾವವನ್ನು ಗೋಚರಿಸುತ್ತದೆ.

ಸತೀಶ್ ರವರ ಕವಿತೆಗಳು ಹಸಿವು, ಬಡತನ, ಸಮಾಜದ ಅವ್ಯವಸ್ಥೆ, ಮೋಸ, ವಂಚನೆ, ಭ್ರಷ್ಟಾಚಾರ, ಹತಾಶೆ, ಜಾತೀಯತೆ, ಅಸಮಾನತೆ, ಪ್ರೀತಿ -ಪ್ರೇಮ, ಪ್ರಕೃತಿಯ ಬಗ್ಗೆ ಕಾಳಜಿ, ಪ್ರಕೃತಿ ವಿನಾಶದ ಬಗ್ಗೆ ಅಸಮಾಧಾನ ಹೀಗೆ ಸುಗಂಧ ಬೀರುತ್ತಾ ಒಂದೊಂದು ಕವಿತೆಯು ಸೂಕ್ಷ್ಮ ಸಂವೇದನೆಯೊಂದಿಗೆ ಮೊಗ್ಗಾಗಿ ಜೀವನದ ಆಳವಾದ ಅನುಭವದೊಂದಿಗೆ ಅರಳುತ್ತಾ ಹೋಗಿವೆ. 

ಕವಿತೆಗಳು ರೋಷದಿಂದ ತಲ್ಲಣಿಸುವಂತೆ  ಭಾಸವಾದರೂ ಆರೋಗ್ಯಯುತ ಸಮಾಜ ರೂಪುಗೊಳ್ಳಲು ಬದಲಾವಣೆಗಳಿಗಾಗಿ ಮಿಡಿಯುವ ತುಮುಲವೆನಿಸುತ್ತದೆ ನನಗೆ.

ಕವಿತೆಗಳನ್ನು ವ್ಯಾಖ್ಯಾನಿಸುವುದಕ್ಕಿಂತ  ಅವುಗಳನ್ನು ಸವಿದರೆ ಅವುಗಳಲ್ಲಿನ ಕವಿಯ ಸಾಹಿತ್ಯ ಅಭಿವ್ಯಕ್ತಿಯ ಪರಿಚಯವಾಗುತ್ತದೆ. 

ಮಲೆಯಾಳಂ,ಇಂಗ್ಲೀಷ್ ಭಾಷೆಗಳ ಸಾಹಿತ್ಯದ ರುಚಿವುಂಡು ಅನುವಾದಗಳಲ್ಲಿ  ತೊಡಗಿದ್ದರೂ(ಮಲಯಾಳಂ ಅನುವಾದಿತ ಕವಿತೆಗಳ ಸಂಕಲನ" ಕಡಲ ಕರೆ"ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ) ಕನ್ನಡವನ್ನು ಹೆಚ್ಚು ಪ್ರೀತಿಸಿ ಗುರುತಿಸಿಕೊಂಡಿರುವುದು ಸತೀಶ್ ರವರ ಹೆಚ್ಚುಗಾರಿಕೆ. 

  'ದೊಡ್ಡವರ ಶಿಫಾರಸ್ಸಿಲ್ಲದೆ ಬಹುಮಾನ ದಕ್ಕುವುದಿಲ್ಲ'
 ಎಂಬ ಕವಿಯ ನಿಲುವನ್ನು ಹುಸಿಯಾಗಿಸಿ ಅವರ ಕವಿತ್ವ ಜ್ಞಾನಕ್ಕೆ ಪ್ರಶಸ್ತಿಯನ್ನು ದಕ್ಕಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಅವರ ಸಾಹಿತ್ಯದ ತೇರು ಗಾಯದ ಹೂವುಗಳಿಂದ ಅರಳಿ ದೊಡ್ಡ ಹೆಮ್ಮರವಾಗಿ ಹಲವರಿಗೆ ಆಶ್ರಯವಾಗುವ ದೀವಿಗೆಯಾಗಲಿ ಎಂಬುದೇ ಸಾಮಾನ್ಯ ಓದುಗರಾಗಿ ನಮ್ಮೆಲರ ಹೃದಯತುಂಬಿದ ಹಾರೈಕೆ💐💐.
  


ಮಂಗಳವಾರ, ನವೆಂಬರ್ 3, 2020

ಮಹಾಕಾದಂಬರಿ

ನನಗೆ ಜೀವನದಲ್ಲಿ ದೊರೆತದ್ದು ಅಮೂಲ್ಯವಾದ ಬೃಹತ್ 

ಕಾದಂಬರಿ. ಓದುತ್ತಲೇ ಇರುವೆನು. ಅರ್ಥೈಸಿಕೊಂಡಿರುವೆ 

ಎನ್ನುವಾಗಲೇ, ಅದು ಅರ್ಥವಾಗದೇ ತೋರುತ್ತದೆ. ಪ್ರತಿ 

ಪುಟಗಳಲ್ಲು ವಿಶೇಷತೆಯಿಂದ ಕೂಡಿರುವ ಕಾದಂಬರಿಯನ್ನು 

ಓದುತ್ತಾ ಸಾಗಿದಷ್ಟು ತಿಳಿಯುವ ಹಂಬಲ, ಸಂತೋಷ, 

ಮನಸ್ಸಿಗೆ ನೆಮ್ಮದಿ, ಸಾರ್ಥಕ ಮನೋಭಾವ. 

ಕಾದಂಬರಿಯನ್ನು ನಾನಿರುವವರೆಗೂ ಓದುತ್ತಾ ಇರುವಾಸೆ. 

ಕಾದಂಬರಿಯ ಪಾತ್ರದಲ್ಲಿ ಗೊಂದಲವಿದ್ದರು ಅದರಲ್ಲಿರುವ 

ಒಳಹಂದರ ಬಲುವಿಶಾಲ. ಕಾದಂಬರಿ ನನಗೆ ಓದುವ ಸವಿ 

ಉಣಿಸಲು ದಕ್ಕಿದ್ದು ನನ್ನ ಅದೃಷ್ಟವೇ ಸರಿ. ನಾನು ಬಹಳ 

ಇಷ್ಟಪಟ್ಟು ಓದಿದ ಏಕೈಕ ಆತ್ಮೀಯ ಕಡೆಯ ಜ್ಞಾನ ಹೊತ್ತಿಗೆ. 

ಅದನ್ನೀಗ ಹಿಂದಿರುಗಿಸುವ ಸಮಯ ಸನ್ನಿಹಿತವಾಗಿದೆ.                                                         
 ಆದರೆ  ಹಿಂದಿರುಗಿಸುವ ಮನಸ್ಸಿಲ್ಲದಿದ್ದರೂ ಭಾರವಾದ 

ಮನಸ್ಸಿನಿಂದ ಅದನ್ನು ನೀಡಿದವರಿಗೆ ಕೊಡುತ್ತಿದ್ದೇನೆ. ಆದರೆ 

ಆ ಕಾದಂಬರಿ ನನ್ನ ಭಾರವಾದ ಮನಸ್ಸಿನೊಂದಿಗೆ ಅಸ್ತಿತ್ವ 

ಮತ್ತು ಅಕ್ಷರ ಜ್ಞಾನವನ್ನು ತನ್ನೊಂದಿಗೆ ಹೊತ್ತೊಯ್ಯುತ್ತಿದೆ 

ಎಂಬುದು ಅದಕ್ಕೂ ತಿಳಿಯದ ಒಳಅರ್ಥವಾಗಿದೆ. 

ಸೋಮವಾರ, ನವೆಂಬರ್ 2, 2020

ಹುಡುಗಿ

ನನಗೊಂದು ದಿನ ಬೈಸಿಕಲ್ಲಿನ ಕೆಳಗೆ 
ಒಬ್ಬಳು ಹುಡುಗಿ ಸಿಕ್ಕಿದ್ದಳು 
ಹೇಗಿದ್ದಳು ಹುಡುಗಿ...??? 
ನಯವಾಗಿ, ಮೃದುವಾಗಿ ತಕ್ಕಮಟ್ಟಿಗೆ 
ಸುಂದರವಾಗಿ 
ಚಕ್ರ ಅವಳ ಮೇಲೆ ಸ್ವಲ್ಪ ಸ್ವಲ್ಪವೇ 
ಉರುಳುತಲಿತ್ತು 
ಹೇಗಿದ್ದಳು ಹುಡುಗಿ...??
ಹುಡುಗಿ ನಗುತ್ತಲೇ ಇದ್ದಳು 
ನನಗೂ ಆಶ್ಚರ್ಯ... !!
ಆದರೆ ಅಲ್ಲೊಂದು ಹೆಪ್ಪುಗಟ್ಟಿ ಉಕ್ಕುವ 
ಶಬ್ಧ ಹೊರಡುತಿತ್ತು 
ಹೇಗಿದ್ದಳು ಹುಡುಗಿ..? 
ಆಗಲೂ ಹುಡುಗಿ ಸ್ವಲ್ಪವೇ ನಗುತ್ತಿದ್ದಳು 
ಶಬ್ಧ ಹಾಗೆಯೇ ಮುಂದುವರೆದಿತ್ತು 
ಇನ್ನೇನು ಸಂಪೂರ್ಣವಾಗಿ ಚಕ್ರ ಅವಳ 
ಮೇಲೆ ಉರುಳುವುದರಳಿತ್ತು ಅಷ್ಟರಲ್ಲಿ 
ಕಾಲಚಕ್ರವಾಗಿ ಅವಳೇ ಅದರ ಮೇಲೆ ಹತ್ತಿ 
ಸವಾರಿ ಮಾಡಿದ್ದಳು. 


ಕಚೇರಿ

ಆ ಕಚೇರಿಗೆ ಹೋಗುವುದೆಂದರೆ ನನಗೆ ಈಗಲೂ ಏನೋ 

ಒಂದು ತರದ ಭಯ. ಸ್ವಲ್ಪ ಇಬ್ಬನಿ ಮಿಶ್ರಿತ ಬೆವರು. 

ಮೊದಲೇ ಹಿಂಜರಿಕೆ ಸ್ವಭಾವದ ನನಗೆ, ಅಲ್ಲಿ 

ಕಾಲಿಡುವುದೆಂದರೆ ದಿನಗಳ ಮೊದಲೇ ಚಿಂತೆ ಮೇಳೈಸುತ್ತದೆ. 

ನನ್ನ ಕೆಲಸ ಆಗದಿದ್ದರೂ ಪರವಾಗಿಲ್ಲ, ನನಗೆ ಅಲ್ಲಿಗೆ 

ಹೋಗುವುದೆಂದರೆ ಆಗದ ಮಾತು. ಕಾರಣವಿಷ್ಟೆ... ಅಲ್ಲಿಯ 

ಕೆಲಸ ನಿಮಿತ್ತ ನೇಮಕಗೊಂಡವರ ಮದವೇರಿದ ನಡವಳಿಕೆ. 

ಸ್ವಲ್ಪವೂ ಸೌಜನ್ಯ, ಸಭ್ಯತೆ, ಶಿಷ್ಟಾಚಾರಗಳನ್ನು ಅವರಲ್ಲಿ 

ನಾನೆಂದು ಕಾಣೆ. ಹಾ!!... ಹಾಗೆಂದ ಮಾತ್ರಕ್ಕೆ ಈ 

ನಡವಳಿಕೆಗಳು ಶಾಶ್ವತ ವಲ್ಲ, ಬೆಲೆಯುಳ್ಳ ಕಾಗದಗಳನ್ನು 

ನೀಡಿದರೆ ಬಲುದೂರದ ಮಾತು. ಆಗ ಭೂತವೂ... 

ವರ್ತಮಾನ, ಭವಿಷ್ಯಗಳ ದೇವರಾಗಿ ಕಾಣಸಿಗುತ್ತದೆ. ನನಗೆ 

ಹೀಗೆಯೋ.. ಬೇರೆಯವರಿಗೂ ಹೀಗೆಯೋ ಅರಿವಿಗೆ 

ಅರಿಯುತ್ತಿಲ್ಲ.



ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...