ತಮ್ಮ ಹೆಸರಿಗೆ ತಕ್ಕಂತೆ ಎಲ್ಲೋ ಲಕ್ಷಕ್ಕೊಬ್ಬರು, ಕೊಟ್ಟಿಗೊಬ್ಬರು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ಆ ಹೆಸರಿಗೊಂದು ಸಾರ್ಥಕತೆಯನ್ನು ತಂದುಕೊಡುತ್ತಾರೆ. ಅದರಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ, ಸರಳಜೀವಿ, ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಕೆಫೆ ಕಾಫಿ ಡೇ ಕಿಂಗ್ ಮೇಕರ್ ಸಿದ್ಧಾರ್ಥ್ ಹೆಗ್ಡೆ ಸರ್ ಒಬ್ಬರು. ಯಶಸ್ಸಿನ ತುತ್ತತುದಿ ತಲುಪಿದ ಎಲ್ಲರ ಹಿಂದೆ ನೋವಿನ ಕಥೆಯಿರುತ್ತದೆ. ಅನುಕರಿಸುವ ಛಲವಿರುತ್ತದೆ, ಕಲಿಯುವ ಪಾಠಗಳಿರುತ್ತವೆ. ಆದರೆ ಆ ಯಶಸ್ಸು ಪಡೆದ ಮೇಲೆ ಆರಂಭವಾಗುವುದು ವಾಟ್ ನೆಕ್ಸ್ಟ್...? ? ಅನ್ನುವ ಆ ಕಾಲ ಘಟ್ಟವಿದೆಯಲ್ಲ ಅಲ್ಲೇ ಎಲ್ಲರೂ ಎಡವುದು.
ಸಿದ್ಧಾರ್ಥ ಸರ್ ಒಬ್ಬ ಯಶಸ್ವಿ ಉದ್ಯಮಿ ಮಾತ್ರ ಆಗಿದ್ದರೆ ಇಷ್ಟೊಂದು ನೋವು ಕಾಡುತ್ತಿ ರಲಿಲ್ಲವೇನೋ !ಆದರೆ ಸಿದ್ಧಾರ್ಥ್ ಸರ್ ಮಾನವೀಯ ಗುಣಗಳುಳ್ಳ ಅಪ್ರತಿಮ ಕನ್ನಡದ ಕಟ್ಟಾಳುವಾಗಿದ್ದರು.
ಸಾಫ್ಟ್ವೇರ್ ನಲ್ಲಿ ಇನ್ಫೋಸಿಸ್ನ ನ ನಾರಾಯಣಮೂರ್ತಿ ಯವರು ಮೆರೆದ ಉದ್ಯಮಶೀಲತೆಯನ್ನು ಈಗ ಮತ್ತೊಬ್ಬ ಕನ್ನಡಿಗರಲ್ಲಿ ಕಾಣಬಹುದಾದರೆ ತಟ್ಟನೆ ಕಣ್ಮುಂದೆ ಬರುವವರು ಸಿದ್ಧಾರ್ಥ್ ಸರ್ ಎಂದರೆ ಅತಿಶಯೋಕ್ತಿಯಲ್ಲ, ನಿಜಕ್ಕೂ ಅವರು ಕನ್ನಡಿಗರ brew-eyed man.
ಕೆಫೆ ಕಾಫಿ ಡೇ ಎಂಬುದು ಒಂದು ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್. ಕಾಫಿ ಮಾರುಕಟ್ಟೆಯಲ್ಲಿ ಸ್ಟಾರ್ ಬಕ್ಸ್ ಹಾಗು ಬರಿಸ್ಟಾ ಹೇಗೆ ಖ್ಯಾತಿಗಳಿಸಿದೆಯೋ, ಭಾರತದ ಮಟ್ಟಿಗೆ ಕೆಫೆ ಕಾಫಿ ಡೇ ಅಂತ ಜನಪ್ರಿಯತೆ, ಜನಮನ್ನಣೆ ಗಳಿಸಿದೆ. ಹಾಗೆ ನೋಡಿದರೆ ಇದೊಂದು ಅಪ್ಪಟ ಕನ್ನಡದ ಬ್ರ್ಯಾಂಡ್. ಕನ್ನಡಿಗರೊಬ್ಬರು ಹುಟ್ಟಿಹಾಕಿದ ಬ್ರ್ಯಾಂಡ್.
ಇಂದಿನ ಯಾವುದೇ ಉದ್ಯೋಗಕ್ಕೆ ಬೇಕಾಗುವುದು ಇಂಗ್ಲಿಷ್ ಬಳಕೆ. ಆದರೆ ಸಿದ್ಧಾರ್ಥ್ರವರ ಕಂಪನಿಗಳಲ್ಲಿ ಮಲೆನಾಡಿನ ಯುವಕರಿಗೆ ಇಂಗ್ಲೀಷ್ ಕ್ವಾಲಿಫಿಕೇಷನ್ ಬೇಕಾಗಿರಲಿಲ್ಲ. ಒಳ್ಳೆ ಹುಡುಗ, ಮನೆಯಲ್ಲಿ ಕಷ್ಟವಿದೆ ಎಂದರೆ ಸಾಕು, ಕೆಲಸ ಗ್ಯಾರಂಟಿ. ಕೈ ತುಂಬಾ ಸಂಬಳ ನೀಡುತ್ತಿದ್ದ ಉದಾರ ಮನೋಭಾವದ ವ್ಯಕ್ತಿ.
ಕುಪ್ಪಳ್ಳಿಯ ಕವಿಶೈಲ ನಿರ್ಮಾಣದಲ್ಲಿ ಸಿದ್ಧಾರ್ಥ್ ಸರ್ ತೋರಿದ ಆಸ್ಥೆ, ಯಾವ ಪ್ರಚಾರ ಇಲ್ಲದೆ ಲಕ್ಷಾಂತರ ರೂಪಾಯಿಗಳ ಗ್ರಾನೈಟ್ ಬಂಡೆಗಳನ್ನು ತಂದು ಇಳಿಸಿದ ಅವರ ಕೊಡುಗೈ ಮನಸ್ಸು ವಿಶಾಲವಾದದ್ದು.
ಬದುಕಿದ್ದಾಗ ಯುವಜನತೆಗೆ ಪ್ರೇರಣೆಯಾಗಿದ್ದ ಸಿದ್ಧಾರ್ಥ್ ಸರ್ ಸಾವಿನಲ್ಲಿ ಯಾಕೆ ?ಕೆಟ್ಟ ಮೆಸೇಜ್ ನ್ನು forward ಮಾಡಿ ಹೋದರೆಂಬುದೇ ಕಾಡುವ ಯಕ್ಷಪ್ರಶ್ನೆ ?? ??
ಒಬ್ಬ ಪುರುಷ ಪುರುಷೋತ್ತಮನಾಗಲು ಬೇಕಾದ ಎಲ್ಲವೂ ಇದ್ದ ಸಿದ್ಧಾರ್ಥ್ ಸರ್ ಧಾರುಣ ಅಂತ್ಯ ಕಂಡದ್ದು ನಮ್ಮ ಅರಿವಿಗೆ ನಿಲುಕದ ಸಂಗತಿ.
ಕೋಟಿ ಕನಸು ಕಂಡ ಕಣ್ಣುಗಳು ನೇತ್ರಾವತಿ ನದಿಯ ಮಡಿಲಲ್ಲಿ ಮರಳ ಘಾಸಿಗೆ ಮುಚ್ಚಿದ್ದು ಏಕೆ? ?ಹೀಗೆ ನಮ್ಮ ಕಾಡುವ ಪ್ರಶ್ನೆಗಳಿಗೆ ಅಂತ್ಯವಿಲ್ಲ. ಸಿದ್ಧಾರ್ಥ್ ರವರ ಸಾವು ಹಳೆಯದಾಗಿರಬಹುದು ಆದರೆ ಅದರ ನೋವು ನವ -ನವೀನ.
ಇದರಿಂದ ಹೊರಬಂದು ಹೇಳುವುದಾದರೆ ಸಿದ್ಧಾರ್ಥ್ ಸರ್ ರಂತಹ ಕೋಟಿ, ಕೋಟಿ ಜನ ನಮ್ಮ ನಿಮ್ಮ ನಡುವೆಯೇ ಇದ್ದಾರೆ. ನಮ್ಮ ಯಾಂತ್ರಿಕ ಜೀವನದಿಂದ ಸ್ವಲ್ಪ ಮಟ್ಟಿಗೆ ಹೊರಬರೋಣ. ಜೀವನದಲ್ಲಿ ಜಿಗುಪ್ಸೆಗೆ, ಮಾನಸಿಕ ಖಿನ್ನತೆಗೆ, ಕೋಟಿ ಕೋಟಿ ರೂಪಾಯಿಗಳ ಸಮಸ್ಯೆಗಳೇ ಇರಬೇಕೆಂದಿಲ್ಲ. ಸಾಕಷ್ಟು ವಿಷಯಗಳಿಂದ ಜಿಗುಪ್ಸೆಗೊಳಗಾದವರು ಇರುತ್ತಾರೆ. ನಮ್ಮ ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ, ಸಂಬಂಧಿಕರು, ಸ್ನೇಹಿತರು, ನೆಚ್ಚಿನ ಗೆಳೆಯ, ಗೆಳತಿಯರು ಸಿದ್ಧಾರ್ಥ್ ರವರ ಹಾದಿಯಲ್ಲೇ ಇರಬಹುದು. ಸತ್ತ ನಂತರ ಕಣ್ಣೀರು ಹಾಕುವ ಬದಲು, ಬದುಕಿದ್ದಾಗಲೇ ಅವರ ಜೊತೆ ಮಾತನಾಡೋಣ. ಸತ್ತ ಮೇಲೆ ಹೆಗಲು ಕೊಡುವ ಬದಲು ಇದ್ದಾಗಲೇ ಅವರ ಸಮಸ್ಯೆ ಅರಿಯೋಣ, ಅದರಿಂದ ಹೊರ ಬರಲು ಹೆಗಲು ಕೊಡೋಣ.
ಇರುವಾಗಲೇ ಮರುಕ, ಕರುಣೆ, ಕಾಳಜಿ, ಪ್ರೀತಿ, ಮಾನವೀಯತೆ ಇತ್ಯಾದಿ ಗಳ ಶೇಕಡಾ 1 ಭಾಗವನ್ನು ಬದುಕಿದ್ದಾಗಲೇ ತೋರಿಸಿದರೆ "ಆತ್ಮಹತ್ಯೆ "ಎಂಬ ಪಿಡುಗು ಸ್ವಲ್ಪವಾದರೂ ಕಡಿಮೆಯಾದಿತೇನೋ ಎಂಬುದು ನನ್ನ ಆಶಯ.