ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಸೋಮವಾರ, ಆಗಸ್ಟ್ 3, 2020

ಮಕ್ಕಳಲ್ಲಿನ ಮಾನವೀಯತೆ


              ಮಕ್ಕಳಲ್ಲಿನ ಮಾನವೀಯತೆ

        ಪ್ರತಿಭಾನ್ವಿತರೆಲ್ಲ -ಮೌಲ್ಯವುಳ್ಳವರೇ..? ಜೀರ್ಣಿಸಿಕೊಳ್ಳಲು ಕಷ್ಟವಾಗುವ ಪ್ರಶ್ನೆ.   ಶಿಕ್ಷಕರಾಗಿ ಎಲ್ಲಾ ಮಕ್ಕಳನ್ನು ಸಮಾನರಾಗಿ ಕಾಣುವ ಪ್ರಯತ್ನ ಮಾಡುತ್ತೇವೆಯಾದರು, ಪ್ರತಿಭೆಯುಳ್ಳವರಲ್ಲಿ ಹೆಚ್ಚಾಗಿ ಮೋಹಗೊಳ್ಳುತ್ತೇವೆ. ಪ್ರತಿಯೊಂದು ಮಗು ಒಂದೊಂದು ಕೌಶಲ್ಯ ಹೊಂದಿರುತ್ತದೆ.ಒಂದೊಂದು ಮಗುವಿನ ಬುದ್ಧಿ ಶಕ್ತಿ ಮಟ್ಟ  ಒಂದೊಂದು ರೀತಿಯದ್ದಾಗಿರುತ್ತದೆ. ಇದರಲ್ಲಿ ಮಗುವಿನ ತಪ್ಪೇನು..?? ಅದನ್ನು ಗುರುತಿಸಿ ಒರೆ ಹಚ್ಚುತ್ತೇವೆಯಾದರು,
ಹೆಚ್ಚಾಗಿ ನಾವು ಇಷ್ಟಪಡುವುದು ಬುದ್ದಿವಂತರನ್ನ,ಪ್ರತಿಭೆಯುಳ್ಳ, ಚುರುಕುವುಳ್ಳ, ಮಕ್ಕಳನ್ನು ಮಾತ್ರ. ಮೇಲ್ನೋಟಕ್ಕೆ ಒಪ್ಪಿಕ್ಕೊಳ್ಳಲು ಕಷ್ಟವಾದರು ಒಳಮನಸ್ಸಿನ  ಸತ್ಯದ ಪೊರೆ ಬಿಚ್ಚಿದರೆ ಸಿಗುವ ಉತ್ತರ.

       ಅದೇ ತರಗತಿಯಲ್ಲಿ ಒಳ್ಳೆ ನಡತೆ,  ಮೌಲ್ಯವುಳ್ಳ  ಮಗು ಇದ್ದರು, ಅದರ ಬಗ್ಗೆ ನಾವು ಅಷ್ಟಾಗಿ ಗಮನ ಕೊಡುವುದಿಲ್ಲ.   ಏಕೆ...??  ಶ್ರದ್ಧೆ,  ನಿಷ್ಠೆ, ನ್ಯಾಯ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ಒಳ್ಳೆಯ ಗುಣ, ಸಂಸ್ಕಾರ, ಸಚ್ಚಾರಿತ್ಯ, ಸಹಕಾರ, ಸಹೋದರತ್ವ ಗುಣಗಳು ನಮಗೆ ಒಂದು ಅತ್ಯಮೂಲ್ಯ ಕೌಶಲ /ಪ್ರತಿಭೆಯಾಗಿ ಗೋಚರಿಸುವುದಿಲ್ಲ?? ಗೋಚರಿಸಿಲ್ಲ. ಸೂಕ್ಷ್ಮವಾಗಿ ಆಲೋಚಿಸಿ, ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ.

      ಇಂದಿನ ನವನವೀನತೆ ಹೊಂದಿರುವ ಸಮಾಜದಲ್ಲಿ ಮಾನವ ವೈಜ್ಞಾನಿಕತೆಯ ತುತ್ತ ತುದಿಯನ್ನೇರಿದರು, ಮಾನವರಾಗಿ ಬಾಳುವುದನ್ನು ಕಲಿತ್ತಿಲ್ಲ. ನೈತಿಕತೆ, ಮಾನವೀಯತೆಗಳು ರಾಗಿ ಕಾಳಿನಷ್ಟು ಬೆಲೆ ಉಳಿಸಿ ಕೊಂಡಿಲ್ಲ.

                 ನಾನಾದರು ಮಾಡುವುದೇನು?  ನನ್ನಲ್ಲೇ ನಾ ಹೊಕ್ಕಾಗ ಅಥವಾ ಇತರರನ್ನು ಅವಲೋಕಿಸಿದಾಗ, ಒಂದು ಮಗು /ವ್ಯಕ್ತಿ ಬುದ್ಧಿವಂತ, ಪ್ರತಿಭಾವಂತ ಎಂದರೆ ಪ್ರೋತ್ಸಾಹಿಸಿ ಬೆನ್ನುತಟ್ಟುತ್ತೇವೆ, ಇನ್ನಾ ಮುಂದುವರೆದು,ಸಾಮಾಜಿಕಜಾಲತಾಣಗಳಲ್ಲಿ, ಅವರ ಬಗ್ಗೆ ಹಾಕಿ ಬೀಗುತ್ತೇವೆ.ಅದೇ ಒಂದು ಮಗು/ ವ್ಯಕ್ತಿ  ಸಂಸ್ಕಾರವಂತನಾಗಿ, ಮೌಲ್ಯವುಳ್ಳವನಾಗಿ,  ಬಾಳುತ್ತಿರುವನೆಂದರೆ, ನಾವು ಅವರನ್ನು  ಗುರುತಿಸುವ  ಗೋಜಿಗೆ  ಹೋಗುವುದಿಲ್ಲ . ನೈತಿಕಗುಣವಿಲ್ಲದ ತಳಪಾಯ ಕಟ್ಟ ಹೊರಟಿರುವ ನಮಗೆ ಕಾಣುವುದು ಪ್ರತಿಭೆ, ಪುರಸ್ಕಾರ, ಪ್ರಶಂಸೆಗಳ ಗರಿಮೆಯ ಹಿರಿಮೆ.

               "ವರ್ತನೆಯ ನರ್ತನಕ್ಕೆ ಪರಿವರ್ತನೆಯ ಶೃಂಗಾರ "ಎಂಬ ಕವಿವಾಣಿಯಂತೆ ಪ್ರತಿಭಾವಂತರನ್ನು ಗೌರವಿಸೋಣ, ಪ್ರೋತ್ಸಾಹಿಸಿ, ಬೆಳೆಸೋಣ ಜೊತೆಗೆ ಮಾನವೀಯತೆಯನ್ನು ಎತ್ತಿ ಹಿಡಿಯೋಣ.

             ಜೀವನದಲ್ಲಿ ಪ್ರತಿಭೆ, ಸಾಧನೆಗಳಷ್ಟೇ ಮುಖ್ಯವಲ್ಲ, ಅದರೊಂದಿಗೆ ಗುಣ, ನಡತೆ, ಸಂಸ್ಕಾರ, ಬೆರೆತುಬಾಳುವ ಮನಸ್ಸು, ಗುರುಹಿರಿಯರಲ್ಲಿ ವಿನಯತೆಗಳು ಅವಶ್ಯಕ. ಇಂತಹ ಮಕ್ಕಳನ್ನು ಗುರುತಿಸಿ ನೈತಿಕ ಬಲವರ್ಧನೆಗೊಳಿಸುವ ಕೆಲಸ ನಮ್ಮಿಂದಾಗಬೇಕು. ಇಂತಹ ಅಭೂತಪೂರ್ಣವಾದ  ಹೊಣೆ , ಶಾಲೆ, ಶಿಕ್ಷಕರು, ಪೋಷಕರುಗಳಾದ ನಮ್ಮ ಮೇಲಿದೆ.




ಲೇಖನಕ್ಕೆ ಸ್ನೇಹಿತೆ ಲಕ್ಷ್ಮಿಯ ಪೂರಕವಾದ ಆಶಯ                                     ನುಡಿಗಳು :-

 ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಸಮಂಜಸವೇ ಸರಿ. ಜೊತೆಗೆ ಸಾಮಾನ್ಯ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ಅಷ್ಟೇ ಮುಖ್ಯ. ಕೆಲವೇ ಪ್ರತಿಭಾವಂತರಿಂದ ಸಮಾಜ ಸಮೃದ್ಧಿ ಆಗುವುದಿಲ್ಲ. ಪ್ರತಿಯೊಬ್ಬರು ತಮ್ಮ ಕೊಡುಗೆ ನೀಡಬೇಕು. 

     ಪ್ರತಿಯೊಂದು ಮಗುವೂ ಅನನ್ಯ. ವಿಭಿನ್ನತೆಯೇ ಪ್ರತಿಯೊಬ್ಬರ ವೈಶಿಷ್ಠ್ಯ. ಈ ಭಿನ್ನತೆಯನ್ನು ಸ್ವೀಕರಿಸುವ ಗುಣ ಎಲ್ಲರಲ್ಲು ಇರಬೇಕು. ಎಲ್ಲರು ಅವರದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಹೆಚ್ಚಿನ ನಿರೀಕ್ಷೆ ಸಲ್ಲದು. ಪ್ರತಿಭಾವಂತ ಮತ್ತು ಸಾಧಾರಣ ವಿದ್ಯಾರ್ಥಿಯನ್ನು ಭೇದಭಾವ ದೃಷ್ಟಿಯಲ್ಲಿ ಕಾಣಬಾರದು. ಪ್ರತಿ ಮಗುವನ್ನು ಶಿಕ್ಷಕರು ಸಮಾನ ಮನೋಭಾವದಿಂದ ನೋಡಬೇಕು. ಪ್ರತಿಭಾವಂತ ಮಗು ಮಾತ್ರ ನಮ್ಮ ಪ್ರತಿಷ್ಠೆ ಅಲ್ಲ. ಪ್ರತಿ ಮಗುವೂ ಸಹ ನಮ್ಮ ಪ್ರತಿಷ್ಠೆ. 

  ಸಾಮಾನ್ಯ ಮಗುವಿನ ವಿಶೇಷತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ತರಗತಿಯಲ್ಲಿ ಈ ತರಹದ ವಿದ್ಯಾರ್ಥಿಗಳು ಇರುತ್ತಾರೆ.ಹೇಗೆಂದರೆ, ಕಲಿಕೆಯಲ್ಲಿ ಹಿಂದುಳಿದಿದ್ದಾನೆ, ಆದರೆ ನಯ -ವಿನಯದಲ್ಲಿ ಎಲ್ಲರಿಗಿಂತ ಮುಂದೆ. ಶಿಕ್ಷಕರೆದುರು ಮಾತನಾಡಲು ಹಿಂಜರಿಯುತ್ತಾಳೆ, ಆದರೆ ತನ್ನ ದೃಷ್ಟಿ ದೋಷ ಸಹಪಾಠಿಗೆ ಸಹಾಯ -ಬೆಂಬಲ ನೀಡಲು ಹಿಂಜರಿಯುವುದಿಲ್ಲ. ಸದಾ ಕೀಟಲೆ ಮಾಡುವ ಇವನು, ಶಾಲೆಯ ಕೆಲಸ ಕಾರ್ಯಗಳಲ್ಲಿ ಸದಾ ಮುಂದು. ಗೃಹಕಾರ್ಯ ಮಾಡದ ಇವನು, ಎಷ್ಟೇ ಬೈದರೂ ಬೇಸರಗೊಳ್ಳುವುದಿಲ್ಲ.  ಅವನ ಮುಗ್ದ ನಗು ಮಾಸುವುದಿಲ್ಲ. 

  ಪಾಠ ಪ್ರವಚನ ವಿಷಯದಲ್ಲಿ ಇವನು ಹಿಂದೆ ಇದ್ದಾನೆ, ಆದರೆ ಈ ವರೆಗೆ ಅನ್ಯ ಯಾವ ವಿಷಯದಲ್ಲೂ ತಪ್ಪು ಮಾಡುವುದಿಲ್ಲ. ಇಂತಹ ಹಲವು ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ. ಅವರನ್ನು ಬೇರೆಯವರೊಂದಿಗೆ ಹೋಲಿಸಿ ಹೀಯಾಳಿಸುವ ಬದಲು, ಗುಣಗಳನ್ನು ಗುರುತಿಸಿ, ಪ್ರೇರೇಪಿಸಿದರೆ ಮುಂದೆ ಖಂಡಿತಾ ಸುಧಾರಿಸುತ್ತಾರೆ. 

  ಸಮಾಜ ಕೇವಲ ಪ್ರತಿಭೆ ಮೇಲೆ ನಿಂತಿಲ್ಲ. ಮಾನವೀಯ ಮೌಲ್ಯಗಳ ನೆಲೆಯಲ್ಲಿ ನಿಂತಿದೆ. ಇದನ್ನು ಬೆಂಬಲಿಸುವ ಹೊರೆ ಶಿಕ್ಷಕರದ್ದು ಮತ್ತು ಪೋಷಕರದ್ದು. 



2 ಕಾಮೆಂಟ್‌ಗಳು:

  1. ಉತ್ತಮ ವಿಚಾರದೆಡೆ ಆಲೋಚಿಸಲು ಪ್ರಚೋದಿಸಿದಕ್ಕೆ ಧನ್ಯವಾದಗಳು.
    ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಗಿಸಿ.ಅವರನ್ನು ಮೌಲ್ಯನಿಷ್ಠರನ್ನಾಗಿಸಿದರೆ ಅದುವೇ ನಮ್ಮ ಯಶಸ್ಸು....

    ಪ್ರತ್ಯುತ್ತರಅಳಿಸಿ

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...