ಶತ ಶತಮಾನಗಳಿಂದಲೂ
ಬಾಳಿ ಬಂದಿದ್ದೆ
ತಲೆಮಾರಿಗಿಲ್ಲ ಯಾರೂ ಇಂದು
ಕಾಲೊಂದು ಮುರಿಯಿತೆಂದು
ಹೊಳಪಿನ ಬಣ್ಣ ಮಾಸಿತೆಂದು
ಹಳೆಕೊಠಡಿಯ ವಾಸ್ತವ್ಯಕ್ಕೆ
ತಂದು ಬಿಸುಟಿದರು
ಗತಕಾಲವೂ ಇಂದಿಲ್ಲಿ ನೆನಪಾಗಿದೆ
ಎಲ್ಲರ ಸಮ್ಮುಖ ಅಂದು ನಾ
ಅರೆಬರೆ ತಿಂದು ಆಲಿಸಿದ
ನ್ಯಾಯದ ತುಣುಕುಗಳು
ಬಹಿಷ್ಕರಿಸಿದ ವ್ಯಾಜ್ಯಗಳು,
ದಾರಿ ಅರಸಿ ಸೋಲನ್ನಪ್ಪಿದ
ಭೂ ಮಾತೆಯರು ನನ್ನಲ್ಲಿ ವಿರಳ
ತಾರುಣ್ಯದಲ್ಲಿ ಉದಾಸೀನತೆ
ಕುಡಿಯುವ ನೀರಾಗಿತ್ತು ನನಗೆ
ಹಾಗೆ ಮುದುಕ -ಮುದುಕಿಯರ
ಕಣ್ಣೀರೂ ಸಹ
ಅದೆಷ್ಟೋ ಬಡವರು ನನ್ನ ಕಾಲುಗಳಿಗೆ
ಪಾಲಿಸು ಮಾಡಿದ್ದರು
ಹೆಪ್ಪುಗಟ್ಟಿದ್ದ ರಕ್ತದ ಕಲೆಗಳನ್ನು
ಕೆರೆದು ತೆಗೆದಿದ್ದರು
ರಕ್ತ ಬೀಜಾಸುರರು ಮೆಟ್ಟಿಲೇರಿ
ಅಟ್ಟಹಾಸಗೈದಿದ್ದರು ನನ್ನಲ್ಲಿ
ಲೆಕ್ಕವಿಲ್ಲದಷ್ಟು ನೋಟಿನ ನೊಣಗಳು
ಅಂಟಿ ಗುಯ್ ಗುಟ್ಟಿದ್ದವು
ಬ್ಯಾಕ್ಟೀರಿಯಾ, ವೈರಸ್ಸುಗಳು ಕೊರೆದು
ಕರಕಲು ಮಾಡಿ ಅದೃಶ್ಯವಾಗಿದ್ದರೂ
ಜಾತಿ, ವಿಜಾತಿಯ ಬೇರುಗಳು
ಹಬ್ಬಿ ಬಿಟ್ಟಿದ್ದವು
ಎಲ್ಲವೂ ಜೊಂಪುಗಟ್ಟಿದ್ದವು ಅಂದು ನನ್ನಲ್ಲಿ.
ಇಂದು ನಾ ಮುರಿದಿರುವೆ
ಅದೇ ಜನ ನನಗೂ ತೋರಿರುವರು
ಮುಪ್ಪನು ಮರೆಯುವ ತಾರುಣ್ಯವ
ನನ್ನಂತೆ ಶತ ಶತಮಾನ ಅರಸಿ
ಮರುಗುತ್ತಿರುವ ಈ ಹಾಳು ಉಗ್ರಾಣದಲ್ಲಿ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ