ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಗುರುವಾರ, ಮೇ 28, 2020

ಕೂಸು


ಮುಂದೊಂದು ಜನ್ಮದಲ್ಲಿ
ನಿನ್ನಿಂದ ಕೂಸಾಗಿ ಹುಟ್ಟಿ
ಕೈ ಬೆರೆಳು ಹಿಡಿದು ನಡೆವಾಸೆ
ನಿನ್ನ ಬಿಗಿದಪ್ಪುವಾಸೆ
ನಿನ್ನ ತೋಳಲ್ಲಿ ಮಲಗುವಾಸೆ
ಸಿಹಿ ಮುತ್ತು ಪಡೆವಾಸೆ
ಕೈ ತುತ್ತು ತಿನ್ನುವಾಸೆ
ನಗು ಮೊಗಕ್ಕೆ ಚುಂಬಿಸುವಾಸೆ
ನಿನ್ನ ಬಾಯಿಗೆ ಬೈಗುಳವಾಗುವಾಸೆ
ಬೆತ್ತದ ಪೆಟ್ಟು ತಿನ್ನುವಾಸೆ
ನಿನ್ನೊಂದಿಗೆ ಹಟಬೀಳುವಾಸೆ
ಮುನಿಸಲ್ಲಿ ನಿನ್ನ ಮೌನವಾಗುವಾಸೆ
ನಿನ್ನ ನೆರಳಲ್ಲಿ ಹಬ್ಬುವ ಬಳ್ಳಿಯಾಗುವಾಸೆ
ಅಳುವಲ್ಲಿ ಸಾಂತ್ವನವಾಗುವಾಸೆ
ನಗುವಿನ ಆನಂದಬಾಷ್ಪವಾಗುವಾಸೆ
ಕಷ್ಟದಲ್ಲಿ ಹೆಗಲಾಗುವಾಸೆ
ಸುಖದಲ್ಲಿ ಜೊತೆ ನಲಿವಾಸೆ
ಮಮತೆ, ವಾತ್ಸಲ್ಯಕ್ಕೆ ಅಮ್ಮನಾಗುವಾಸೆ
ಮಡದಿಯ ಒಲವಾಗುವಾಸೆ
ಧ್ಯಾನದಲ್ಲಿ ನಿನ್ನ ಏಕಾಂತವಾಗುವಾಸೆ
ಜೊತೆಯಿರುವ ಲೇಖನಿಯಾಗುವಾಸೆ
ಆಸಕ್ತಿಯ ಹವ್ಯಾಸಗಳಾಗುವಾಸೆ
ಪ್ರೀತಿಯಲ್ಲಿ ಹೂವಾಗುವಾಸೆ
ನೀ ಹಡೆವ ಕವಿತೆಗಳಾಗುವಾಸೆ
ಸಾಧನೆಗೆ ಜ್ಞಾನದ ಹೊತ್ತಿಗೆಯಾಗುವಾಸೆ
ನಾ..ಇರುವವರೆಗೂ....ನಿನ್ನೊಂದಿಗೆ ಇರುವಾಸೆ.


ಬುಧವಾರ, ಮೇ 27, 2020

ನನ್ನ ಕವಿತೆಯ ಪರಿವು




ಕವಿತೆಯ ಕಾವ್ಯ ನೀನು
ಕಾವ್ಯದ ಭಾವ ನೀನು
ಕಾವ್ಯದ ವಸ್ತು ನೀನು
ಕಾವ್ಯದ ಕಲ್ಪನೆ ನೀನು
ಕಾವ್ಯದ ಹುಟ್ಟು ನೀನು
ಕಾವ್ಯದ ಭಾಷೆ ನೀನು
ಕಾವ್ಯದ ರಚನೆ ನೀನು
ಕಾವ್ಯದ ಪ್ರಾಸ ನೀನು
ಕಾವ್ಯದ ಲಯ  ನೀನು
ಕಾವ್ಯದ ಜೀವ ನೀನು
ಕಾವ್ಯದ ಆಶಯ ನೀನು
ಕಾವ್ಯದ ಒಳಹರಿವು ನೀನು
ಕಾವ್ಯದ ಬದುಕು ನೀನು
ಕಾವ್ಯದ ಅಲಂಕಾರ ನೀನು
ಕಾವ್ಯದ ಛಂದಸ್ಸು ನೀನು
ಕಾವ್ಯದ ಸ್ಫೂರ್ತಿ ನೀನು
ಕಾವ್ಯದ ಸೆಲೆ ನೀನು
ಕಾವ್ಯದ ಪ್ರತಿಮೆ ನೀನು
ಕಾವ್ಯದ ಕೃತಿಯು ನೀನು
ಕಾವ್ಯದ ಕರ್ತೃ ನೀನು
ಕಾವ್ಯದ ತರ್ಜುಮೆ ನೀನು
ಕಾವ್ಯದ ರಸೌಚಿತ್ಯ ನೀನು
ಕಾವ್ಯದ ವಿಮರ್ಶೆ ನೀನು
ಕೊನೆಗೆ.....
ಕಾವ್ಯದ ಕವಿಯೂ ನೀನೆ.
         

ಮನ

ಮಣ್ಣ ಘಾಟು ಬಡಿದು
ಸುವಾಸನೆ ಮಂಪೇರಿಸಿ
ಮೂಗಿಗೆ ಬೇಲಿಕಟ್ಟಿ
ಮಣ್ಣ ಸಂಗ ಬಯಸುತ್ತಿದೆ ಮನ.. !

ಮಣ್ಣ ಪುಟ್ಟ ಪುಟ್ಟ ಕಂದಮ್ಮಗಳು
ಸಣ್ಣ ಹೊಟ್ಟೆಗೆ ಚಪ್ಪರಿಸಲು
ಆಹಾರವಾಗುತ್ತ ನಂಟು ಬಿತ್ತಲು
ಹಂಬಲಿಸುತ್ತಿದೆ ಮನ.. !

ಮಣ್ಣ ಅಣುಗಳ ಬೆವರಲ್ಲಿ
ಕೊಳೆತ ಹೂವಾಗಿ ಬಾಳಲು
ಕುಣಿಯುತ್ತಿದೆ ಮನ.. !

ಮಣ್ಣ ಹಸಿ ತೇವದೊಳಗೆ
ದೇಹವನ್ನು ಉಜ್ಜಿ ಮೆತ್ತಿಕೊಳ್ಳಲು
ಹಾತೊರೆಯುತ್ತಿದೆ ಮನ.. !

ಮಣ್ಣ ವಿಶಾಲ ಆಗಸದಲ್ಲಿ
ಅರೆಬೆಂದ ನೆನಪನ್ನು ಹಚ್ಚುತ್ತಾ
ನಿರಾಳತೆಯನ್ನು ತನ್ನದಾಗಿಸಿ
ಬಾಳ ಅಮಾವಾಸ್ಯೆ ನೆನೆದು
ಕಾಲುಚಾಚಿ ನಿದ್ರಿಸಲು
ತವಕಿಸುತ್ತಿದೆ ಈ ನನ್ನ ಮನ.. !!
 

ಮಂಗಳವಾರ, ಮೇ 26, 2020

ನೋವು

ಚುಚ್ಚಿ ಚುಚ್ಚಿ ಮುಕ್ಕುವ
ಹದ್ದುಗಳ ನಡುವೆ
ಒಲವ ಕಟ್ಟೆಯ ಹೂರಣ
ಮೂಕ ಮನಸ್ಸಿನ
ನೂರಾರು ನೋವ ರಂಧ್ರಗಳು
ಸೊಕ್ಕಿನ ಬರಸಿಡಿಲು ಬಡಿದು
ಮುಚ್ಚಲೆತ್ನಿಸಿದರೂ..
ಆಗಾಗ್ಗೆ ತೆರೆದುಕೊಳ್ಳುತ್ತವೆ
ಪರಿ ಹೇಗಿದೆಯೆಂದರೆ
ಅವುಗಳೂ.. ಪರಿಸ್ಥಿತಿ ಅಣುಕಿಸಿ
ಕೇಕೆ ಹಾಕಲಾರಂಭಿಸಿವೆ
ಭಯವಿಲ್ಲವೀಗ..ಸೆಟೆದು ನಿಂತಿವೆ
ಬಂದ ನೋವಿನ ಉಂಡೆಗಳನ್ನು
ಗುಳುಂ ಎಂದು ನುಂಗಿ
ಗಹ ಗಹನೇ ನಕ್ಕು
ನೀರು ಕುಡಿದು.. ಬಾಯಿ ಒರೆಸಿಕೊಳ್ಳುತ್ತಿವೆ
ಇನ್ನಾ.. ಬರುವುದಾದರೆ ಬರಲಿ
ಎಂದು ಹಸಿವಿನ ಬಾಯಾರಿಕೆಗೆ
ಬಾಯ್ತೆರೆದು ನಿಂತು ಬಿಟ್ಟಿವೆ.

ಸೋಮವಾರ, ಮೇ 25, 2020

ಅಂತರಂಗ

ಮನಸ್ಸು ಕನಸ್ಸಿನೊಳಗೊಂದು
ಪುಟ್ಟ ಹಕ್ಕಿ...!!
ಗೂಡು ಕಟ್ಟಿ ನಲುಗುತಿಹುದು
ಕತ್ತಲ್ಲನ್ನೇ ಹೊತ್ತಿದ್ದರು
ಸದಾ ಇಣುಕುತ್ತಿರುತ್ತದೆ
ಅದಕ್ಕೂ.. ಕಣ್ಣು.. ಕಿವಿ..
ಮನಸ್ಸು... ಇದ್ದಿರಬಹುದು!
ಉಸಿರಾಡಲು ಹವಣಿಸುತ್ತಿರುತ್ತದೆ
ನಿರಾಸೆಯ ಗುಳ್ಳೆಗಳನ್ನು ಅಂಟಿಸಿಕೊಂಡು
ಭರವಸೆಯ ಗಂಟು
ಹೊದ್ದು ನಿದ್ರಿಸುತ್ತಿರುತ್ತದೆ
ಒಳ ಇರಲೂ.. ಒಲ್ಲದು
ಹೊರಹೋಗಲು ಕಾಲಿಲ್ಲ
ಅದರ ಖಂಡನೆ ಸಲ್ಲದು
ಸೂರ್ಯ ತೇಜಸ್ಸಿನ ಕಿರಣ ಪ್ರಭೆ
ಪುಟ್ಟ ರಂಧ್ರ ಸೃಷ್ಟಿಸಿ
ಹೊರ ತೇಲಿಸ ಬಹುದೆಂಬ
ಆಶಾಭಾವದ ಕಪ್ಪುಛಾಯೆ
ಎಂದಿಗೋ.. ಮೂಕವೇದನೆಗೆ
ಬಿಡುಗಡೆಯ ಮರೀಚಿಕೆ
ಇಂದಿರಾ..ಚಂದಿರ.. ಆಚಾರ್ಯರಿಂದ.

ಒಬ್ಬಂಟಿ

ಏಳುಬೀಳಿನ ಬಾಳ ಪಥದಲ್ಲಿ
ಒಬ್ಬಂಟಿ ಧ್ಯಾನ..!
ಭಾವನೆಗಳು ತಲೆಶೂಲ
ಏಕಾಂತ ಹಿತವೆನಿಸಿ
ಸಾನಿಧ್ಯ ಸಾಕೆನಿಸಿ
ನೆನಪಿನ ದಾರಿ ಸವೆದು
ಆಹ್ವಾನ ಬೇಡೆನಿಸಿ
ಸಿಹಿ ನೆನಪು ಉಪ್ಪಿನ ಮುಪ್ಪಾಗಿ
ತಳ್ಳಿದಷ್ಟು ದೂರ.. ಸಾಗಿ
ಮನಸ್ಸಿನ ಮರ್ಕಟ ತಿಂದು
ಮಣ್ಣಾ ಕಣದ ಅಣುವಾಗಿ
ಹೆಬ್ಬಂಡೆ ತಾಕಿದರು..
ಅಲುಗಾಡದಂತೆ
ವಾರಿಧಿಯ ಭೋರ್ಗರೆತದೊಳಗೆ
ಮರೆವಿನ ಕಂಬಳಿ ಹೊದ್ದು
ಮರುಜನ್ಮ ಅರಸಿ
ಮಗುವಾಗಿ
ಮಲಗಿಬಿಡುವಾಸೆ.

ಖಾಲಿಯಾಗಿದೆ ಭಾವನೆಗಳು







ಸೋಮವಾರ, ಮೇ 18, 2020

ಪನ್ನೀರು



   ಜಲ ಜಲನೇ ಹರಿವ ನೀನು
   ಅದೆಷ್ಟು ಚಂದ...
   ಅದ್ಹೇಗೆ  ಹಗುರಾಗಿಸುತ್ತೀಯೋ   
   ಮನವ ನನ್ನ ಗೆಳೆಯ
   ಕೆನ್ನೆಗಳಿಗೆ ಮುತ್ತಿಕುತ್ತಾ
   ಸ್ಪರ್ಶಿಸುವ ನೀನು
   ಭಾವನೆಗಳ ಜಲಧಿ
   ಭಾವೋದ್ರೇಗಕ್ಕೂ ಸೈ !
   ನನ್ನೊಳಗೂ... ಜೈ
   ಮನವನ್ನು ಮುದುಡಿ ಅರಳಿಸುವೆ
   ನನ್ನ ಅಪ್ಪಿಯಂತೆ
   ದಿನಕ್ಕೊಮ್ಮೆಯಾದರೂ ನೀ ಇಣುಕುವೆ
   ಮುತ್ತಿಕ್ಕಿ ಅಪ್ಪುವೆ
   ಅಪ್ಪಿ ಮುತ್ತಿಕ್ಕುವೆ
   ಅಳಿಸಿ  ಅಳಿಸಿ ನಗುವೆ..
   ಅಳಿಸಿ ಅಳಿಸಿ ನಗಿಸುವೆ..
   ಕೊನೆಗೆ  ಬಿಟ್ಟು ಜಿಗಿವೆ.
   ನನ್ನೊಳಗಿನ ಪ್ರಾಣಪಕ್ಷಿಯಲ್ಲಿ.

  

ಭಾನುವಾರ, ಮೇ 10, 2020

ಕಾಜೂರು ಸತೀಶ್ ಸರ್

   
         ನನ್ನ ಈ  ಲೇಖನ  ಕೊಡಗಿನ ಪ್ರತಿಭಾನ್ವಿತ ಕವಿ ಹಾಗು ತನ್ನ ಕೌಶಲ್ಯವನ್ನು ವಿವಿಧ ಆಸಕ್ತಿಯ ಭಿನ್ನತೆ ಮೆರೆಯುವ ಕೊಡಗಿನ ಪ್ರತಿಭಾನ್ವಿತ., ಸಂವೇದನಾಶೀಲ ಯುವ  ಕವಿ.. ಶಿಕ್ಷಕ.. ಅನುವಾದಕ.. ಸಾಹಿತಿ.. ಚಿಂತಕ  ಕಾಜೂರು ಸತೀಶ್ ರವರ ಬಗ್ಗೆ.

       
      ಶ್ರೀ. ನಾರಾಯಣ್ ಮತ್ತು  ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ.
     
         ಸತೀಶ್ ರವರ ಕವಿತೆಗಳನ್ನು ಜೀರ್ಣಿಸಿಕೊಳ್ಳಲು ಎರೆಡೆರೆಡು ಬಾರಿಯಾದರೂ ಓದುವ ನಾನು ಅವರ ಕವಿತೆಗಳ ಬಗ್ಗೆ ಏನು ಹೇಳಲು ಸಾಧ್ಯ..? ಎಂಬ ಪ್ರಶ್ನೆ ಆಗಾಗ್ಗೆ ಕಾಡುತ್ತಿರುತ್ತದೆ. ಇರಲಿ..... ಅನ್ನಿಸಿದ್ದನ್ನು ಹೇಳುವುದರಲ್ಲಿ ತಪ್ಪಿಲ್ಲವೆಂದು ಭಾವಿಸುತ್ತೇನೆ.
   
      2015ರ " ಕಡೆಂಗೋಡ್ಲು  ಶಂಕರಭಟ್ಟ  ಕಾವ್ಯ ಪುರಸ್ಕಾರ " ಪಡೆದ ಸತೀಶ್ ರವರ ಮೊದಲ  ಕವನ ಸಂಕಲನ "ಗಾಯದ ಹೂವುಗಳು "  ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ "ಕಡಲಕರೆ "ಗೆ..ತಡವಾಗಿಯಾದರೂ ಶುಭಾಶಯಗಳನ್ನು  💐💐ತಿಳಿಸುತ್ತಾ... ಮುಂದುವರೆಯುತ್ತೇನೆ.
     
                            ನಾ ಅರಿತಂತೆ ಸತೀಶ್ ರವರ  ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ.. ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು  ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.

     ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ.
 
ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.
   
    
  ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
  ಹೌದಾಗಿರುವ ಇವರು,  ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ  ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ  ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ  wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ.
     
      ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.

      ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ...!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ  ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.

            ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ  ಸತೀಶ್
ರವರು ವರ್ಣಚಿತ್ರಗಳು... ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು.

                                                                     
      ಕಾಡಿನ ಹಾದಿಯಾದರೂ ಸೈ.. !ಎನ್ನುವ ಅನ್ವೇಷಣಾ ಮನೋಭಾವದ ನಮ್ಮ ಸತೀಶ್ ರವರಿಗೆ ಗೆಳೆಯರ ಜೊತೆಗೂಡಿ  ಚಾರಣ ಹೋಗುವುದು,   ಬಲುಪ್ರೀತಿಯ   ಹವ್ಯಾಸಗಳಲ್ಲಿ ಒಂದಾಗಿದೆ.

     ಮಾಡೆಲಿಂಗ್ ಕ್ಷೇತ್ರಕ್ಕೂ ಸೈ ಎನ್ನುವ ರೀತಿಯ ಸುಂದರ, ಸದೃಢಕಾಯ ಸತೀಶ್ ರವರಿಗೆ... ಸತೀಶ್ ರವರು ಮಾತ್ರ ಸಾಟಿ.

       ಸಾಮಾಜಿಕಜಾಲತಾಣಗಳು... youtube.. ನಂತಹ ವಿಡಿಯೋ ಶೇರಿಂಗ್ ಸರ್ವಿಸ್ ಗಳಲ್ಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ.
 

   
    " ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.".. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ  ನಿಪುಣತೆ ಇವರಲ್ಲಿದೆ.

    ಗಣ್ಯ ವ್ಯಕ್ತಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಇವರು,  ಸರಳಜೀವಿ. ಸನ್ಮಾನ, ಹೊಗಳಿಕೆ, ಪ್ರಚಾರ, ಆಡಂಬರದ ಜೀವನಗಳಿಂದ ದೂರದಲ್ಲೇ ಉಳಿಯುವ ಇವರು,  ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಒಬ್ಬಂಟಿಯಾಗಿ ಹೊರಡುವ ಪರಿ... ಕವಿತೆಗಳ ಮೊರೆ ಹೋಗುವ ರೀತಿ ಇವರ ವ್ಯಕ್ತಿತ್ವಕ್ಕೆ  ಇನ್ನಷ್ಟು ಮೆರಗು ನೀಡುತ್ತವೆ. 

            ಮಾನವೀಯ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ  ಇಂತಹ ಕವಿ., ಕವಿತೆಗಳು, ತೊಡಗಿಸಿಕೊಳ್ಳುವಿಕೆ, ವ್ಯಕ್ತಿತ್ವ ಯುವಪೀಳಿಗೆಗೆ ಮಾರ್ಗದರ್ಶಿ ಎಂದರೆ ಅತಿಶಯದ ಮಾತುಗಳಾಗುವುದಿಲ್ಲ. 

    ಇಂತಹ  ವಿಶಿಷ್ಟತೆಯ ವಿಭಿನ್ನ ಚೇತನ ನಮ್ಮೊಂದಿಗೆ ಶಿಕ್ಷಕರಾಗಿ, ನಮ್ಮ ಇಲಾಖೆಯಲ್ಲಿರುವುದೇ ಹೆಮ್ಮೆಯ ಸಂಗತಿ.           
                  2017 ರಲ್ಲಿ ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನರಾಗಿರುವ, ಇವರಿಂದ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಸಲ್ಲುವಂತಾಗಲಿ,  ಹಾಗೆಯೇ ಮತ್ತಷ್ಟು ಪ್ರಶಸ್ತಿಗಳು ಇವರ ಪ್ರತಿಭೆಗೆ ಅರಸಿ ಬರಲಿ. 

      ತಮ್ಮಲ್ಲಿಯ   ಜ್ಞಾನ ಮತ್ತು ಕವಿತ್ವದ ನೆಲೆಯಿಂದ ರಾಷ್ಟ್ರಕಂಡ ಕವಿಗಳ ಸಾಲಿನಲ್ಲಿ ನಮ್ಮ ಸತೀಶ್  ಸರ್ ರವರ  ಹೆಸರು ಹೊರಹೊಮ್ಮುವಂತಾಗಲಿ ಎಂಬುದೇ ಸಾಮಾನ್ಯ ಓದುಗಳಾಗಿ ನನ್ನ ಮನತುಂಬಿದ ಹಾರೈಕೆ💐💐. 

ಮಂಗಳವಾರ, ಏಪ್ರಿಲ್ 7, 2020

ಪತಂಗ


ನನ್ನೊಳಗಿನ ಪತಂಗ
ರಂಗು.. !ರಂಗು !
ನೀಲಿ... ಕೆಂಪು ಚಿಟ್ಟೆಯಂತೆ
ಬಿಳಿ ಪಟ್ಟೆ.
ರೆಕ್ಕೆಗಳಿದ್ದರೂ..
ಸ್ವಾತಂತ್ರ್ಯ ಮರೀಚಿಕೆ.
ಪಕ.. ಪಕನೆ  ಜಿಗಿಯುತ್ತದೆ
ಕಾಲು ಮುರಿದುಕೊಳ್ಳುತ್ತದೆ
ವ್ಯಥೆಯಲ್ಲೂ ನಗುತ್ತದೆ
ಅರ್ಥೈಸುವಲ್ಲಿ ಬೀಳುತ್ತದೆ
ಪ್ರೀತಿಸ ಬಯಸುತ್ತದೆ
ಹೂವಲ್ಲಿ ಸ್ನೇಹ ಅರಸುತ್ತದೆ
ಹೇ...
ಹೂವಿಂದ ಹೂವಿಲ್ಲ ! ಇದರಲ್ಲಿ
ಹೂವಲ್ಲೇ ಪ್ರಾಣ!
ಸುತ್ತುತ್ತದೆ..ರಮಿಸುತ್ತದೆ..
ಕಾಡುತ್ತದೆ.. ಬೇಡುತ್ತದೆ..
ಇಷ್ಟಿದ್ದರೂ..
ಹೂವಿನ ಸಂಗ ಮುನಿಸು
ಬಿಟ್ಟಿತೇ.. ಹೂವನ್ನು..?
ಮತ್ತದೇ ಭಾವದ ಆಲಾಪ
ಯಾಕೀ.. ಭಾವಸಂತಾಪ.. ??
ಕೆಂಪು..ನೀಲಿ.. ಬಿಳಿ ಮಿಶ್ರಿತ
ರಂಗವಲ್ಲಿಯ ರಂಗಿನ
ಪಾತರಮಲ್ಲಿಗೆ... ??
ತಿಳಿದು.. ತಿಳಿಯುತ್ತಿಲ್ಲ
ಅದರ ಪಥದ
ಅಂತರ್ಯ   ಹಾರಾಟ..
ಹೇ..
ನಿನಗೆ ಅರಿತರೆ.. ಮರೆಯದೇ
ತಿಳಿಸು.. ನಾ ಕಾದಿರುವೆ..
ಅದಕ್ಕಾಗಿ ನಿರಂತರ.



ಸೋಮವಾರ, ಮಾರ್ಚ್ 16, 2020

ಪ್ರಾಮಾಣಿಕತೆ

                    ಮಾರುಕಟ್ಟೆಯಲ್ಲಿ ತರಕಾರಿ
                    ಹುಡುಕ ಹೊರಟ  ನನಗೆ
                    ಸಿಕ್ಕಿದ್ದು ಗುಣ..!
                    ಗುಣ ಹುಡುಕ
                    ಹೊರಟ ನನಗೆ....
                    ಅದುವೇ ಪ್ರಶ್ನೆಯೇ... ??
                    ಗೊಂದಲವೇ...
                    ಬೆಲೆಯಿಲ್ಲ ಅದಕೆ
                    ಹೆಸರಿಗೂ.. ಸ್ವಭಾವಕ್ಕೂ
                    ನಂಟಿದೆಯೇ.... ?? ?
                    ಬೆಲೆ ಎಂಬುದು ಸುಳ್ಳಂತೆ
                    ನಂಬಿಕೆ ಅದರಲ್ಲಿ ಮುಳ್ಳಂತೆ
                    ಅವರವರ ಸ್ವಭಾವದ ಅಳತೆ
                    ಪ್ರಾಮಾಣಿಕತೆ ಕತ್ತಲ್ಲಿಲ್ಲಿ
                    ಅರಾಜಕತೆ ಸುತ್ತಲ್ಲಿಲ್ಲಿ
                    ನಿರೀಕ್ಷೆ  ಬೆತ್ತಲ್ಲಲ್ಲಿ.
                    ವಂಚನೆ ಹೆಮ್ಮರವಿಲ್ಲಿ
                    ನಿಷ್ಠೆಯಲ್ಲಿ ಮೊಳಕೆ
                    ಚಿಗುರೊಡೆಯುವುದು ಸಾಧ್ಯವೇ..?
                    ಚಿವುಟುತಿಹರು ಕಪಟಧಾರಿಗಳು
                    ಬಿತ್ತಿ ಬೆಳೆಯುವರು
                    ಪಾರ್ಥೇನಿಯಂನಂತೆ
                    ಸಹಿಸುವಲ್ಲಿ ಮುಳುಗೇಳುತಿಹುದು !!
                    ನ್ಯಾಯದ ಬಿಂದಿಗೆಯು..
                    ನಿರೀಕ್ಷೆ ಗುಡಿಕಟ್ಟ ಹೊರಟವರೆಲ್ಲ
                    ಮಾನಸಿಕ ಅಸ್ವಸ್ಥರಂತೆ !!
                    ಹೇಗೆ ತಿಳಿಸುವುದು
                    ಫಲದ  ಚೀಲದೊಳಿರುವ
                     ಪುಣ್ಯವಾ.. !
                    ಹುಡುಕಿ ಸೋತಿಹೆನು ಉತ್ತರವಾ...
              
                       
                       
         
                   

ಬುಧವಾರ, ಮಾರ್ಚ್ 4, 2020

ಸ್ವಪ್ನ

                          ಪ್ರೀತಿಯೋ.. ಹಟವೋ...
                          ತಿಳಿಯುತ್ತಿಲ್ಲ.
                          ಮಗು... ತಬ್ಬಿ !
                          ಬಿಗಿದಪ್ಪಿ ಕೊಳ್ಳಬಯಸುತ್ತಿದೆ.
                          ನನ್ನಲ್ಲಿ ಮಾತ್ರ ನೀನು
                          ಚುಂಬನ, ಮುದ್ದಿಸುವಿಕೆ
                          ಆಲಿಂಗನ ನನಗೆ ಮಾತ್ರ ನಿನ್ನಲ್ಲಿ
                          ಒಮ್ಮೆಯಾದರೂ.. ಬಾಹುಗಳಲ್ಲಿ
                          ಬಂಧಿಸೆಂದು ಹಿಡಿದೆಳೆಯುತ್ತಿದೆ.
                          ಎತ್ತಲು ಹೋದರೂ... ಬಾರದು.
                          ಅಳುವಿನ ವರ್ಷಧಾರೆ
                          ಅವರೇ.. ಬೇಕ್ಕೆನ್ನುವ ಮುನಿಸು !
                          ಆದರೆ   ಮಗುವಿನಲ್ಲಿ ,
                          ಅವರದ್ದೇನೋ.. ಅಂತರ್ಯ ನಿಲುವು !
                          ತಟಸ್ಥವಾಗಿದ್ದರೂ...
                          ಬಿಡುವುದೇ... ಮಗು? ?
                          ತೋರದೆ.. ಇದ್ದರೂ..
                          ಅರಿಯದೇ.. ಅನುರಾಗವನ್ನ?
                          ಮಗುವು ತೊದಲುತ್ತ ನುಡಿಯುತ್ತಿದೆ
                          ಉತ್ತರವಾಗುವೆಯಾ... ನನ್ನಯ ಮಾತಿಗೆ?
                          ಆವರಿಸಿಹೇ ... ನಿನ್ನಯ ಮನವ ನಾನು 
                          ನಿನ್ನಲ್ಲಿರುವುದೇ..  ಅಗಲಿಕೆ ಭಾವ !!
                          ಬೀಳ್ಕೊಡುವೆಯಾ..  ನಿನ್ನಯ ಮನದಿಂದ..? 
                          ಆಲೋಚಿಸಿ.. ಚಿಂತಿಸಿ, 
                          ನುಡಿದರು.... 
                          ಕೊನೆಗೂ.. ಸೋತೆ!.
                          ನಿನ್ನಯ..  ಪ್ರೀತಿಗೆ. 
                          ಒಲಿದೆನು.. ನಿನ್ನಯ ಭಾವಕೆ !
                          ಮೂಡಿತು  ಮನದಲ್ಲಿ ನಿನ್ನಯ ರೂಪು !
                           ಕೊಡುವೆನು ಕಂದಮ್ಮ !!
                          ಬದಲಿಸಿ ನನ್ನಯ ತನವ !
                          ಎನ್ನುತ  ಮಗುವನ್ನು ಎತ್ತಿ
                          ಮುತ್ತಿಟ್ಟರು ಹಣೆಗೆ ಒಲವನ್ನು ಒತ್ತಿ. 
                          ಮಗುವು ತಬ್ಬಿತು ಕೊರಳನ್ನು ಗಟ್ಟಿ 
                          ನಿದ್ದೆಗೆ  ಜಾರಿತು, ಹೆಗಲ್ಲಲ್ಲಿ 
                          ಕೊರಳನ್ನು ಅಪ್ಪಿ. 
                          ತಟ್ಟನೆ  ಎದ್ದಿತು.. ಸ್ವಪ್ನದಿ ಮಗುವು 
                          ಸುತ್ತಲೂ.. ನೋಡಿತು.. ಅವರಿಲ್ಲ !
                          ತನ್ನಯ ಭ್ರಮೆಯ ಅರಿತು 
                          ಬಿಕ್ಕಳಿಸಿತು ಮತ್ತದೇ ನೋವಿಂದ. 
                          ಕನಸಿಗೆ ಇಲ್ಲಿ ಬೆಲೆಯಿಲ್ಲ. 
                          ನನಸಿಗೆ ಎಲ್ಲಾ ಹಾತೊರೆವವರೆಲ್ಲ. 
                          ಅರ್ಥೈಸುವುದು ಹೇಗೆ ಮಗುವಿಗೆ 
                          ಈ ತಾತ್ಪರ್ಯ ನುಡಿಯನ್ನ..   ?
                 
                         

                         


 

                       
                   

ಬುಧವಾರ, ಫೆಬ್ರವರಿ 26, 2020

ಚಿತ್ತ

                          ಜನ  ಸುತ್ತುಗಟ್ಟಿ
                          ಪಿಸುಗುಡುತ್ತಿದ್ದಾರೆ.
                          ಹೇ.. ಪ್ರಜ್ಞೆಯಿಲ್ಲ, ಗ್ರಹಿಕೆಯಿಲ್ಲ !
                          ಯೋಚನೆಯಿಲ್ಲ, ವಿವೇಚನೆಯಿಲ್ಲಾ.. !
                          ಗ್ರಹಿಸುತ್ತಿಲ್ಲ, ಪ್ರತಿಕ್ರಿಯುಸುತ್ತಿಲ್ಲಾ... !
                          ಹೇ.. ಸತ್ತಿದೆ...
                          ಇಲ್ಲಾ... !!
                          ಸಾಯುತ್ತಿದೆ.....
                          ಇನ್ನೇನು  ಸಾಯುತ್ತದೆ,
                          ಸತ್ತಿಲ್ಲ.... ! ಜೀವವಿದೆ.
                          ಉಸಿರಾಡುತ್ತಿದೆ.
                          ಎಲ್ಲರೂ  ಸೇರಿ ಉಸಿರುಗಟ್ಟಿಸುತ್ತಿದ್ದಾರೆ.
                          ಸಾಯಲು  ಆಗುತ್ತಿಲ್ಲ.
                          ಜೀವವಿರಲೂ ಬಿಡುತ್ತಿಲ್ಲ.
                          ಕೊನೆಯುಸಿರು ಹಿಡಿದು ನರಳುತ್ತಿದೆ.
                          ನೀರು ಕೊಟ್ಟರೆ ಬದುಕಬಹುದೇ... ??
                          ಇಲ್ಲಾ... ಹಣ್ಣು..? ಊಟ..? ಬಟ್ಟೆ.. ?                                        ಹುದ್ದೆ..? ನಿವೇಶನ..? ಮನೆ..? ಪ್ರಶಂಸೆ.. ?
                          ಕೊನೆಗೂ.. ಉಸಿರು ಮೇಲಕ್ಕೆ ಎಳೆಯುತ್ತಾ...
                          ತೋರಿತು ಬೆರಳು.. !
                          ಗುಂಪಿನಲ್ಲಿದ್ದ  ವ್ಯಕ್ತಿಯತ್ತ.

                         

ಮಂಗಳವಾರ, ಫೆಬ್ರವರಿ 25, 2020

ಅಶ್ರು

                    ನನ್ನೊಳಗಿನ ಅಂತರ್ಯಾಮಿ
                    ಬಲು ಹೊಳಪು.
                    ದುಗುಡದಲ್ಲೂ ಜೊತೆ.
                    ನಾ ಬಯಸಿದಾಗ ಬರುವ
                    ಕೆಮ್ಮೋರೆಯ ನುಣುಪಲ್ಲಿ
                    ನಲಿವ.
                    ಹೊರದೂಡಿ ಅವನನ್ನ,
                    ನಯನದಲ್ಲಿ ಹಸನು.
                    ರುಚಿಯಲ್ಲಿ ಪ್ರೀತಿಯ ಲವಣ.
                    ಮನವನ್ನ ಹಗುರಾಗಿಸಿ,
                    ನನ್ನನ್ನು ತಣಿವ.. !
                    ಕಾರ್ನಿಯಾ ವಾಸ.
                    ಭಾವನೆಗಳಿಗೆ ದಾಸ.
                    ಎಂತಹವರನ್ನೂ....
                    ಮುತ್ತಿಕ್ಕುವ... ಭಾವ.. !
                    ಚಿತೆ, ಚಿಂತೆ, ವ್ಯಥೆ
                    ಬೇಸರಿಕೆಯಲ್ಲಿ
                    ಮೊದಲ್ಗೊಲ್ವ ..
                    ಏಕಾಂಗಿಯ ಜೊತೆಗಾರ.
                    ನನಗೇ... ಅವನ
                    ಅಗ್ರಸ್ಥಾನ.
                    ನನ್ನಲ್ಲಿ ಮೋಹ, ಅಕ್ಕರೆಯ
                    ಬಲುಪ್ರೀತಿ.
                    ನನಗೆಲ್ಲಾ... ಅವ!
                    ನಾ.. ಬಿಟ್ಟರೂ...
                    ಅವ... ಬಿಡನು.
                    ಮುತ್ತಂತೆ ಅವ ರೂಪು!!
                    ಪ್ರತಿ ಮುತ್ತಲೂ...
                    ವದನ ಹಗುರ,
                    ಎನ್ವ...
                   ಜಲನಿಧಿ ರೂಪದಿ..
                   ನನ್ನಲ್ಲಿಯ..ಗುಪ್ತಗಾಮಿನಿಯ
                   ಅಂತರ್ಯ ಭಾವ.
     
                 
   
                 
   

                 
                   

ಮೌನಿ.....??

                       
                           ಎಷ್ಟೂ......
                           ಕೇಳಲಿ,
                           ಬೇಡಲಿ,
                           ಬಾಗಲಿ,
                           ನಿನ್ನಲ್ಲಿ... ? ?
                            ಆಗದು
                            ನನ್ನಿಂದ.
                             ನಿನ್ನಲ್ಲಿ,
                             ಸಹಿಸೆನು
                            ಆ ಗುಣವ !!
                             ನಲಿದೆ,
                             ಒಲಿದೆ,
                             ಸಂತೈಸಿದೆ,
                              ಹಾರೈಸಿದೆ,
                             ನನ್ನೊಳಗೆ.
                              ಆದರೆ
                              ಕೊನೆಗೂ
                              ತೋರಿ,
                              ತಳೆದೆ
                              ನನ್ನಲ್ಲಿ !
                               ತಾಳದ ,
                               ತಪವ ,
                               ನೀ.... ಮೌನಿ.
   

 
     


ಭಾನುವಾರ, ಫೆಬ್ರವರಿ 23, 2020

ಕೋರಿಕೆ

                   ನೆನಪುಗಳ ಕೇಳದಿರು
                   ಬುತ್ತಿ ಕಸಿಯದಿರು
                   ಮನಸ್ಸಿನ ಪ್ರತಿರಂಧ್ರದಿಂದ ಹೆಕ್ಕಲಾರೆ !
                   ಭಾವನೆಗಳ ಹೊಲಿಗೆ ಬಿಚ್ಚಲೊಲ್ಲೆ !!
                   ಜೀವನದಿ ಅಮೂಲ್ಯ ಉಡುಗೊರೆಗಳವು !
                   ಹೋಗುವುದಾದರೆ ನೀ ಹೋಗು......
                   ಎಂದಿಗೂ.. ನಾ ಏಕಾಂಗಿ.
                   ಕೇಳಿದ್ದರ, ಬಯಸಿದ್ದರ
                   ಅರಿವಿಲ್ಲ, ಪರಿವಿಲ್ಲ
                   ನಿನ್ನ ನೋಯಿಸುವುದೆಂದು.
                   ಆದರೆ ಕ್ಷಮಿಸು......
                   ನೆನಪಲ್ಲೇ ಬುತ್ತಿ ಇಟ್ಟು ಸಾಗುತ್ತೇನೆ
                   ಕಣ್ಣೀರಿನ ಸಮುದ್ರವಿದೆ
                   ದಿನಾ ಮುಳುಗೇಳುವ ಪರಿಯಿದೆ.
                   ನಿನ್ನಂತ ಆಕಾಶದೀಪದಲಿ
                   ಚೆಲ್ಲುವ ಬೆಳಕಲ್ಲಿ ಮಿನುಗುತ್ತೇನೆ
                   ಇಂದಿಗೆ ನಿಲ್ಲಿಸು ನಿನ್ನ ಬೆಳಕನ್ನ
                   ನೆನಪಿನ ಬೆಳಕಲ್ಲಿ ಬದುಕು ಸವೆವೆ.
                   ನೋವುಗಳ ಬೇಯಿಸಿ ಕೊಡಲಾರೆ!
                   ಅದು ನನಗಿರಲಿ.
                   ನನ್ನ ನಲಿವೂ.... ನಿನಗೆ ಬರಲಿ
                   ಸಾಧ್ಯವಾಗುವುದಾದರೆ.....
                   ನಿನ್ನೆಲ್ಲಾ ನೋವುಗಳು ನನಗಿರಲಿ.
                   ಚಂದಿರೆ ನಾನು !.....
                   ನೋವುಗಳ ಬಚ್ಚಿಟ್ಟು ನಗುವುದು ಕರಗತ.
                   ಸೋಗೆಯಲಿ ಮಲಗಿಸಿ ಬಿಡು
                   ಗಾಢನಿದ್ದೆಯಲಿ ನೆಮ್ಮದಿಯ ನಿಟ್ಟುಸಿರು !
                   ಬೂದಿಯಲಿ ಗುಲಾಬಿ ಎಲೆಯನ್ನಾದರೂ ಸೇರಿಸು
                   ಪಂಚಭೂತಗಳಲ್ಲಿ ಸ್ನೇಹ ಬಯಸುತ್ತೇನೆ.
                   ನೀ...ಹೋಗು ನನ್ನ ಬಿಟ್ಟು
                   ಮತ್ತೆಂದೂ ನನ್ನ ಪಯಣದಲಿ ಇಣುಕಬೇಡ.
                   ನನ್ನದೊಂದು ವಿನಮ್ರ ಬೇಡಿಕೆ...
                   ಷರಕ್ಕೆ ಷರವಾಗ ಬಯಸುತ್ತೇನೆ...
                  " ನನ್ನಿಲ್ಲಿಯ ಪಯಣ ಮುಗಿದ ಮೇಲೆ.. "
             

     

ಗುರುವಾರ, ಫೆಬ್ರವರಿ 20, 2020

ಆಂತರ್ಯ ನುಡಿ

                       
                          ಅಪರೂಪ ನೀನು.
                          ಪ್ರತಿರೂಪ.... ಕಾಣೆ.           
                          ಕಾಂತೀಯ  ಬಣ್ಣ.
                          ಚೆಲುವಲ್ಲಿ  ಅರಸು.
                          ಮಗುವಂತೆ ಮನಸ್ಸು.
                          ನಗುವಿನ ವದನ !
                          ತಿಳುವಳಿಕೆ ಅಗಾಧ.                             
                          ಜ್ಞಾನಕ್ಕೆ ಭಂಡಾರ.
                          ಸಾಹಿತ್ಯ ಉಸಿರು.
                          ಬದುಕಲ್ಲಿ ಕವಿತ್ವ ಹಸಿರು.
                          ಛಾಯಾಚಿತ್ರದ ಕೈಚಳಕ,
                          ಎಲ್ಲರಲ್ಲೂ  ಪುಳಕ.
                          ಪುನರ್ ಆಲಿಸ್ಸೆನ್ನುವ ಧ್ವನಿ
                          ಮಾತಲ್ಲಿ ಹಿತ -ಮಿತ.
                          ಮಾತಿನ ಶೈಲಿ ಆಕರ್ಷಕ.
                          ಮೈಕಟ್ಟು ಬಲು ಮೋಹಕ.
                          ಚಿತ್ರವಿದ್ಯೆಯಲ್ಲಿ ಜಾದು.
                          ಭಿನ್ನರಲ್ಲಿ  ವಿಭಿನ್ನ.
                          ಮೌನದಲ್ಲೂ.. ಏಕಾಂಗಿ.
                          ಕಾರ್ಯದಿ ಅತಿ ನಿರತ
                         ಪಸರಿಸುವಲ್ಲಿ ಸಕ್ರಿಯ.
                         ಅಮ್ಮನಲ್ಲಿ ಅಪ್ಪಿ.
                         ಕವಿಗಳಲ್ಲಿ  ಕವಿ.
                         ಸೃಜನಶೀಲತೆಯ ಬಾಪು.
                         ಹಿಂಬಾಲಕರಲ್ಲಿ ಸ್ಪೂರ್ತಿ.
                         ಸಾಟಿಯಲ್ಲಿ ಸಾಟಿ.
                         ಗಂಭೀರತೆಯಲ್ಲಿ ಆಕ್ರೋಶ.
                         ಶಾಂತತೆಯಲ್ಲೂ ಕೋಪ.
                         ಪ್ರಾಮಾಣಿಕತೆಯಲ್ಲಿ ದಿಟ್ಟತೆ.
                         ಬರವಣಿಗೆಯಲ್ಲಿ ಬಂಡಾಯ.
                         ಅಜ್ಞಾನಿಯ ದಿನಚರಿಯಲ್ಲಿ,
                         ಗಾಯದ ಹೂಗಳಲ್ಲೂ
                          ಕಡಲಕರೆಯಾಗಿ
                          ಗುಪ್ತವಾಗಿರುವ ಪ್ರೀತಿಯ ಹೂ.....
         

                           

ಮಂಗಳವಾರ, ಫೆಬ್ರವರಿ 18, 2020

ವ್ಯಕ್ತಿತ್ವ

                      ನಿನ್ನಂತೆ ಪ್ರತಿರೂಪ, ಅಪರೂಪ. 
                      ನೆರೆಹೊರೆಯಿದ್ದರೂ.. ಒಬ್ಬಂಟಿ. 
                      ಹಲವು ಸುತ್ತಲ್ಲಿದ್ದರೂ... 
                      ನಿನ್ನಂತ್ತಿಲ್ಲ.. ! ಹಮ್ಮು -ಬಿಮ್ಮು
                      ನಿನ್ನ ಛಾಪು.. ದಿಟ್ಟ ಹೊಳಪು. 
                      ನಿನ್ನ ಮನಸ್ಸಿಗಿಂತ ಮಿಗಿಲೇನಿಲ್ಲ, 
                      ಅದರ ಬಣ್ಣ. 
                      ನಿನ್ನಂತೆ ಬುಡದಿಂದ ಹೊರಟ 
                      ಹಲವು ಸೃಜನಶೀಲ ಕವಲುಗಳು 
                      ಪ್ರತಿ ಕವಲು ಕೊಂಬೆಗಳೂ.. 
                      ಒಂದೊಂದು ...  ದಾರಿ ತೋರುತ್ತಿವೆ, 
                      ಪ್ರೇರಣೆಗಯ್ಯುತ್ತಿವೆ... 
                      ನಿನ್ನ ರೂಪಂತೆ,  ಅದರ ರೂಪು. 
                      ಸುಂದರವೋ, ಸುಮಧುರವೋ 
                      ಚೆಲುವಲ್ಲಿ  ನಗುತಿಹುವುದು 
                      ಭಾವವೋ.. ! ಬಾಸವೋ.. !
                      ವಸಂತನ ಒಲವು ಪಡೆದು 
                      ಎಲ್ಲರಲ್ಲೂ.. ಆಕರ್ಷಿಸುತ್ತಿಹುದು, 
                      ನಿನ್ನ ಭಿನ್ನ ವ್ಯಕ್ತಿತ್ವದಂತೆ 
                      ನಾ.... ಕಂಡ ನಿನ್ನಂತೆ. 

                



                            


                     

ಮಂಗಳವಾರ, ಫೆಬ್ರವರಿ 4, 2020

ನೆರೆ

ಎಷ್ಟೊಂದು ಅಸಹ್ಯ ನೀನು !
 ನನ್ನೊಳಗೆ  .? ?
ಎಷ್ಟು ಗಟ್ಟಿಯಾದ ಬುಡ ನಿನಗೆ...??
ಕಿತ್ತೆಸೆದರೋ ಪಾರ್ಥೇನಿಯಂ
ಯಾವುದೇ ಮಗ್ಗಲೂ
ಬದಲಿಸಿದರೂ ಅಲ್ಲೂ..
ಪಳಪಳನೆ ಹೊಳೆವೆ,
ಅದೇನೂ ಅಂದವಿಲ್ಲದ ಕಾಂತಿಯೋ ನಿನಗೆ ??
ಕಾಮನಬಿಲ್ಲಿನ ಬಣ್ಣಗಳನ್ನೇ
ಲೇಪಿಸಿದರೂ..
ನಿನ್ನ ಹುಟ್ಟುಗುಣ ಬಿಡದೆ
ಎಲ್ಲರ ಮೊದಲನೋಟ ಸೆಳೆವೆ
ಅಮಾವಾಸೆಯಲ್ಲೂ ಬೆಳ್ಳಕ್ಕಿ,
ಎಳೆಚಿಗುರಿನಿಂದ
ಹಣ್ಣು ಮುದುಕಿಯೊಂದಿಗೂ..
ನಿನ್ನ ವೈರಾಗ್ಯ ಸ್ನೇಹ.
ಎಷ್ಟೊಂದು ಬಸುರ ಬಯಕೆ !
ಇಂದೋ.. ನಾಳೆಯೋ
ಮಣ್ಣನ್ನೇ ಹಾಸಿಗೆ ಹೊದೆವ ಆತ್ಮಕ್ಕೆ..!!
ನನ್ನೊಳಗೆ ನಾ.. ನಕ್ಕೆ!!
     

ಗುರುವಾರ, ಜನವರಿ 30, 2020

ಸಿಕ್ಕೂ.. ಸಿಗದಿಹ ಉತ್ತರ..???

ನಾನ್ -ನೀನ್  ನನ್ನದೆನ್ನುತ 
ಅವರ್ -ಇವರ್  ಎನುತ 
ಇವರ್ -ಅವರ್  ಎನುತ 
ಅವರಿವರ್ ಗಳೊಂದಿಗೆ 
ಜಾತಿ  ಮಳೆಯ ಸಾರುತ 
ದ್ವೇಷ  ಅಸೂಯೆಗಳ ಬಿತ್ತುತ್ತಾ 
ಭೂ ವ್ಯಾಜ್ಯಗಳ  ಎಳೆಯುತ 
ಕಪಟ ರಾಜಕೀಯ ಮಾಡುತ 
ಮರೆತಿಹೆವು ಪ್ರೀತಿ ಸ್ನೇಹದ ಅಂಕಿತ 
ಅತಿನಿರತ ದುಡಿಮೆ -ಜಂಜಾಟಗಳಲ್ಲಿ  ಕಳೆಯುತ 
ಮನುಜ  ನೀ ಮರೆಯುತಿಹೇ  ನಿನ್ನಯ ತನವ 
ನಿನಗಿದೆಲ್ಲಾದುದರ ಅರಿವಿಲ್ಲದಿರುವುದೇ ಮಾನವ ? 
ಕೊನೆಗರಿಯುವೆ  ಅದರ  ಅರಿವಿನ ಮರ್ಮ 
ಆದರೆ ನೀ ಸಾಗಿ ಸವೆಸಿರುವೆ ಹಿಂದಿರುಗಲಾಗದ 
ಪರ್ವ.
ಜೀವನವೆಂಬುದು ಮಾಯೆ 
ನೀ ಬಲ್ಲೆಯಾ  ಅದರ  ಛಾಯೆ ?? 
ಅದೊಂದು ಸುಖ -ದುಃಖ ದುಮ್ಮಾನಗಳ ಮಿಲನ ಪಾತ್ರೆ 
ಒಂದೊಳ್ಳೆ ಅರ್ಥೈಸುವ ಮನಸ್ಸಿಲ್ಲ ಯಾರಲ್ಲಿ !
ನೆಮ್ಮದಿಯ ಸೂರು ಹುಡುಕಿದರೂ ಸಿಕ್ಕೊಲ್ಲ ಇಲ್ಲಿ 
ಅದೆಲ್ಲಿ ಸಿಗುವುದು ನನ್ನ-ನಿನ್ನಂತವರ ಬಾಳಲ್ಲಿ ? 
ಬಿಟ್ಟು ಬಿಡದಿರು, ಹಿಡಿದಿಡು, ಅದರ ಜಾಡನಿಲ್ಲಿ 
ಕೊನೆಗೊಂದಿನ ನಡವೆ ತೊರೆದು ಜಂಜಾಟದ ಜಾತ್ರೆ 
ಅದಕ್ಕಾಗಿ  ನೀ ಪಡುವೆ  ಯಾಕೀ ಅರಿವಿಲ್ಲದ ಯಾತ್ರೆ..? 

ಗುರುವಾರ, ಜನವರಿ 23, 2020

"ಕಾರ್ಮೋಡ "

ಕಾರ್ಮೋಡದ ದಟ್ಟತೆಯ ಪಸರತೆ 
ಹೆಸರಿಗೆ ತಕ್ಕಂತೆ ಕರ್ಪು ಛಾಯೆಯ ಕಾಂತತೆ 
ಗುಣತ್ವಕ್ಕೆ ತಕ್ಕಂತೆ ರೂಪತ್ವದ ಆರ್ತತೆ 
ಮತ್ತದೇ ನಿಶ್ಚಲತೆಯ ಆರ್ದ್ರತೆ 

ಸೂರ್ಯನ ಆಧರಿಸುವ ಕಾಂತೆಯ ಸೆಳೆವು 
ಕಾರ್ಮೋಡ ಸರಿಸುತ್ತಿಲ್ಲ ಪರದೆಯ ಸೆರಗು 
ಅದೇ ಸೂರ್ಯ ಕಾಂತೆಯ ಕೊರಗು

ಕಾರ್ಮೋಡವೋ  ಧ್ಯಾನಸ್ಥ, ಪರಿವ್ರಾಜಕ  ಮಗ್ನಸ್ಥ!

ಪರದೆಯು ಸರಿದರೆ ನೈಜ್ಯತೆಯ ಮೆರಗು 
ಕಾಂತೆಯು ಮರೆಯುತ್ತಿದೆ ಅದರ ಸೊಬಗು 
ಭಾಸ್ಕರನ ಪ್ರಭೆಯಲ್ಲಿ ಪೊಗರು 


ಕಾರ್ಮೋಡದ ಕೆಂಬೆಳಕಿನ ನರ್ತನ 
ಕಾಂತೆಯ ಕರಣತ್ರಯ ವರ್ತನ 
ನರ್ತನ, ವರ್ತನಗಳ ಆರ್ತ ಮರ್ದನ

ಸೆರಗು, ಮೆರಗು, ಕೊರಗುಗಳ ಒರತೆ 
ಎಲ್ಲೋ, ಏನೋ ಬಯಸಿತೋ ಕಾಂತೆ 
ಆದರೆ ಬೆಳಕಿನ ಗ್ರಹಣಕ್ಕೆ ಮೈಯೊಡ್ಡಿ ಶಾಂತೆ !!!


ಮಂಗಳವಾರ, ಜನವರಿ 7, 2020

*ನಾ....ತಿಳಿದ ಸಿದ್ಧಾರ್ಥ್ ಸರ್*

         ತಮ್ಮ  ಹೆಸರಿಗೆ ತಕ್ಕಂತೆ ಎಲ್ಲೋ ಲಕ್ಷಕ್ಕೊಬ್ಬರು, ಕೊಟ್ಟಿಗೊಬ್ಬರು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ.      ಆ ಹೆಸರಿಗೊಂದು ಸಾರ್ಥಕತೆಯನ್ನು ತಂದುಕೊಡುತ್ತಾರೆ. ಅದರಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ, ಸರಳಜೀವಿ, ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಕೆಫೆ ಕಾಫಿ ಡೇ ಕಿಂಗ್ ಮೇಕರ್ ಸಿದ್ಧಾರ್ಥ್ ಹೆಗ್ಡೆ ಸರ್ ಒಬ್ಬರು. ಯಶಸ್ಸಿನ ತುತ್ತತುದಿ ತಲುಪಿದ ಎಲ್ಲರ ಹಿಂದೆ ನೋವಿನ ಕಥೆಯಿರುತ್ತದೆ. ಅನುಕರಿಸುವ ಛಲವಿರುತ್ತದೆ,  ಕಲಿಯುವ ಪಾಠಗಳಿರುತ್ತವೆ. ಆದರೆ ಆ ಯಶಸ್ಸು ಪಡೆದ ಮೇಲೆ ಆರಂಭವಾಗುವುದು ವಾಟ್ ನೆಕ್ಸ್ಟ್...? ? ಅನ್ನುವ ಆ ಕಾಲ ಘಟ್ಟವಿದೆಯಲ್ಲ ಅಲ್ಲೇ ಎಲ್ಲರೂ ಎಡವುದು. 

      ಸಿದ್ಧಾರ್ಥ ಸರ್ ಒಬ್ಬ ಯಶಸ್ವಿ ಉದ್ಯಮಿ ಮಾತ್ರ ಆಗಿದ್ದರೆ ಇಷ್ಟೊಂದು ನೋವು ಕಾಡುತ್ತಿ ರಲಿಲ್ಲವೇನೋ !ಆದರೆ ಸಿದ್ಧಾರ್ಥ್ ಸರ್ ಮಾನವೀಯ ಗುಣಗಳುಳ್ಳ ಅಪ್ರತಿಮ ಕನ್ನಡದ ಕಟ್ಟಾಳುವಾಗಿದ್ದರು. 

     ಸಾಫ್ಟ್ವೇರ್ ನಲ್ಲಿ ಇನ್ಫೋಸಿಸ್ನ ನ ನಾರಾಯಣಮೂರ್ತಿ ಯವರು ಮೆರೆದ ಉದ್ಯಮಶೀಲತೆಯನ್ನು ಈಗ ಮತ್ತೊಬ್ಬ ಕನ್ನಡಿಗರಲ್ಲಿ ಕಾಣಬಹುದಾದರೆ ತಟ್ಟನೆ ಕಣ್ಮುಂದೆ ಬರುವವರು ಸಿದ್ಧಾರ್ಥ್ ಸರ್ ಎಂದರೆ ಅತಿಶಯೋಕ್ತಿಯಲ್ಲ, ನಿಜಕ್ಕೂ ಅವರು ಕನ್ನಡಿಗರ brew-eyed man. 

    ಕೆಫೆ ಕಾಫಿ ಡೇ ಎಂಬುದು ಒಂದು  ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್. ಕಾಫಿ ಮಾರುಕಟ್ಟೆಯಲ್ಲಿ ಸ್ಟಾರ್ ಬಕ್ಸ್ ಹಾಗು  ಬರಿಸ್ಟಾ ಹೇಗೆ ಖ್ಯಾತಿಗಳಿಸಿದೆಯೋ, ಭಾರತದ ಮಟ್ಟಿಗೆ ಕೆಫೆ ಕಾಫಿ ಡೇ ಅಂತ ಜನಪ್ರಿಯತೆ, ಜನಮನ್ನಣೆ ಗಳಿಸಿದೆ. ಹಾಗೆ ನೋಡಿದರೆ ಇದೊಂದು ಅಪ್ಪಟ ಕನ್ನಡದ ಬ್ರ್ಯಾಂಡ್. ಕನ್ನಡಿಗರೊಬ್ಬರು ಹುಟ್ಟಿಹಾಕಿದ ಬ್ರ್ಯಾಂಡ್. 
       ಇಂದಿನ ಯಾವುದೇ ಉದ್ಯೋಗಕ್ಕೆ ಬೇಕಾಗುವುದು ಇಂಗ್ಲಿಷ್ ಬಳಕೆ. ಆದರೆ ಸಿದ್ಧಾರ್ಥ್ರವರ ಕಂಪನಿಗಳಲ್ಲಿ      ಮಲೆನಾಡಿನ ಯುವಕರಿಗೆ ಇಂಗ್ಲೀಷ್ ಕ್ವಾಲಿಫಿಕೇಷನ್ ಬೇಕಾಗಿರಲಿಲ್ಲ. ಒಳ್ಳೆ ಹುಡುಗ, ಮನೆಯಲ್ಲಿ ಕಷ್ಟವಿದೆ ಎಂದರೆ ಸಾಕು, ಕೆಲಸ ಗ್ಯಾರಂಟಿ. ಕೈ ತುಂಬಾ ಸಂಬಳ ನೀಡುತ್ತಿದ್ದ ಉದಾರ ಮನೋಭಾವದ ವ್ಯಕ್ತಿ.    
     
     ಕುಪ್ಪಳ್ಳಿಯ ಕವಿಶೈಲ ನಿರ್ಮಾಣದಲ್ಲಿ ಸಿದ್ಧಾರ್ಥ್ ಸರ್ ತೋರಿದ ಆಸ್ಥೆ, ಯಾವ ಪ್ರಚಾರ ಇಲ್ಲದೆ ಲಕ್ಷಾಂತರ ರೂಪಾಯಿಗಳ ಗ್ರಾನೈಟ್ ಬಂಡೆಗಳನ್ನು ತಂದು ಇಳಿಸಿದ ಅವರ ಕೊಡುಗೈ ಮನಸ್ಸು ವಿಶಾಲವಾದದ್ದು. 
  
     ಬದುಕಿದ್ದಾಗ ಯುವಜನತೆಗೆ ಪ್ರೇರಣೆಯಾಗಿದ್ದ ಸಿದ್ಧಾರ್ಥ್ ಸರ್ ಸಾವಿನಲ್ಲಿ ಯಾಕೆ ?ಕೆಟ್ಟ ಮೆಸೇಜ್ ನ್ನು forward ಮಾಡಿ ಹೋದರೆಂಬುದೇ ಕಾಡುವ ಯಕ್ಷಪ್ರಶ್ನೆ ?? ?? 
     ಒಬ್ಬ ಪುರುಷ ಪುರುಷೋತ್ತಮನಾಗಲು ಬೇಕಾದ ಎಲ್ಲವೂ ಇದ್ದ ಸಿದ್ಧಾರ್ಥ್ ಸರ್ ಧಾರುಣ ಅಂತ್ಯ ಕಂಡದ್ದು ನಮ್ಮ ಅರಿವಿಗೆ ನಿಲುಕದ ಸಂಗತಿ. 
     ಕೋಟಿ ಕನಸು ಕಂಡ ಕಣ್ಣುಗಳು ನೇತ್ರಾವತಿ ನದಿಯ ಮಡಿಲಲ್ಲಿ ಮರಳ ಘಾಸಿಗೆ ಮುಚ್ಚಿದ್ದು ಏಕೆ? ?ಹೀಗೆ ನಮ್ಮ ಕಾಡುವ ಪ್ರಶ್ನೆಗಳಿಗೆ ಅಂತ್ಯವಿಲ್ಲ. ಸಿದ್ಧಾರ್ಥ್ ರವರ ಸಾವು ಹಳೆಯದಾಗಿರಬಹುದು ಆದರೆ ಅದರ ನೋವು ನವ -ನವೀನ. 

       ಇದರಿಂದ ಹೊರಬಂದು ಹೇಳುವುದಾದರೆ ಸಿದ್ಧಾರ್ಥ್ ಸರ್ ರಂತಹ ಕೋಟಿ, ಕೋಟಿ ಜನ ನಮ್ಮ ನಿಮ್ಮ ನಡುವೆಯೇ ಇದ್ದಾರೆ. ನಮ್ಮ ಯಾಂತ್ರಿಕ ಜೀವನದಿಂದ  ಸ್ವಲ್ಪ ಮಟ್ಟಿಗೆ ಹೊರಬರೋಣ. ಜೀವನದಲ್ಲಿ ಜಿಗುಪ್ಸೆಗೆ, ಮಾನಸಿಕ ಖಿನ್ನತೆಗೆ, ಕೋಟಿ ಕೋಟಿ ರೂಪಾಯಿಗಳ ಸಮಸ್ಯೆಗಳೇ ಇರಬೇಕೆಂದಿಲ್ಲ. ಸಾಕಷ್ಟು ವಿಷಯಗಳಿಂದ ಜಿಗುಪ್ಸೆಗೊಳಗಾದವರು ಇರುತ್ತಾರೆ. ನಮ್ಮ ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ, ಸಂಬಂಧಿಕರು, ಸ್ನೇಹಿತರು, ನೆಚ್ಚಿನ ಗೆಳೆಯ, ಗೆಳತಿಯರು  ಸಿದ್ಧಾರ್ಥ್ ರವರ ಹಾದಿಯಲ್ಲೇ ಇರಬಹುದು.    ಸತ್ತ ನಂತರ ಕಣ್ಣೀರು ಹಾಕುವ ಬದಲು, ಬದುಕಿದ್ದಾಗಲೇ ಅವರ ಜೊತೆ ಮಾತನಾಡೋಣ. ಸತ್ತ ಮೇಲೆ ಹೆಗಲು ಕೊಡುವ ಬದಲು ಇದ್ದಾಗಲೇ ಅವರ ಸಮಸ್ಯೆ ಅರಿಯೋಣ, ಅದರಿಂದ ಹೊರ ಬರಲು ಹೆಗಲು ಕೊಡೋಣ. 

       ಇರುವಾಗಲೇ ಮರುಕ, ಕರುಣೆ, ಕಾಳಜಿ, ಪ್ರೀತಿ, ಮಾನವೀಯತೆ ಇತ್ಯಾದಿ ಗಳ ಶೇಕಡಾ 1 ಭಾಗವನ್ನು ಬದುಕಿದ್ದಾಗಲೇ ತೋರಿಸಿದರೆ "ಆತ್ಮಹತ್ಯೆ "ಎಂಬ ಪಿಡುಗು ಸ್ವಲ್ಪವಾದರೂ ಕಡಿಮೆಯಾದಿತೇನೋ ಎಂಬುದು ನನ್ನ ಆಶಯ.  

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...