ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಮಂಗಳವಾರ, ಸೆಪ್ಟೆಂಬರ್ 14, 2021

ಆತ್ಮ

ಆತ ತನ್ನಾತ್ಮದ ಉಸಿರಿಗೆ
ತನ್ನೆಲ್ಲಾ ಜೀವ, ಭಾವ
ಬಸಿದು, ರೂಪುಕೊಟ್ಟು
ಜೀವ ತೆತ್ತನು.
ಆ ರೂಪಿಂದು ಅರಳಿ
ಹೂವಾಗುವ ಹಾದಿಯಲ್ಲಿ.....


ಶಾನು -ಆನು

ಶಾನು, ಆನು ಸೇರಿಕೊಂಡು
ಜಿಗಿದು ನಲಿದು
ಒಂದೇ ಸಮನೆ
ಗೊಳ್ಳು ಹಾಕುತ...
ಸೋನು ಬಂದು
ಹಿಡಿದು ಬಡಿದು
ಕೇಕೆ ಹಾಕುತ....
ಇದನು ಕಂಡು
ಶಾನು, ಆನು
ಮುದುಡಿ ಕುಳಿತ
ಕುಯ್ ಕುಯ್ ಗುಟ್ಟುತ.




ಸೋಮವಾರ, ಜುಲೈ 12, 2021

ಸ್ನೇಹಿತೆ


ಸ್ನೇಹಿತೆಯ ಕೈಯಲ್ಲಿದ್ದ
ಬೆಂಕಿಯನ್ನು ಕುರಿತು ಕೇಳಿದೆ
ಎಲ್ಲಿಂದ ತಂದಿರುವೆ..?
ಪಕ್ಕದ ಮನೆಯಿಂದ
ಎಂದಳವಳು ನಗುನಗುತ
ನನ್ನ ನಿನ್ನ ಮೈಯ
ಕಾವು ಆ ಬೆಂಕಿಯನ್ನು
ಕ್ಷಣಮಾತ್ರದಲ್ಲಿ
ನಂದಿಸಿಬಿಡುವಷ್ಟಿದೆ
ಎಂದೆನವಳಿಗೆ 
ಕಣ್ಣೊಳಗಿನ ಕಾವು ಹೊರ 
ಹಾಕುತ್ತಾ ಬಿಟ್ಟ ಕಣ್ಣು, 
ಬಾಯಿ ಬಿಟ್ಟಂತೆ 
ಸ್ನೇಹಿತೆ ಸ್ತಬ್ಧ.  



ಶನಿವಾರ, ಜೂನ್ 19, 2021

ಅಂಶ


ನೀ ನನ್ನೊಳಗೆ ಬೆಳೆಯಬೇಕಿತ್ತು
ಬೊಜ್ಜಾಗಿಯೋ
ತ್ಯಾಜ್ಯವಾಗಿಯೋ ಅಲ್ಲ
ನನ್ನಾತ್ಮದ ಬುದ್ಧನಾಗಿ
ಪ್ರತಿ ಉಸಿರಾಡದಲಿ
ನಿನ್ನಂಶದ ತಾಳ್ಮೆಯಾಗಿ
ಕಸಿವಿಸಿ ಮೊಳಕೆಗಳ 
ಹಸಿರಂಶವಾಗಿ 
ದೃಢತೆ ಕಾಯದ ಹೆಮ್ಮರವಾಗಿ 
ಹಾರಾಡಿ, ಕಾಲ್ಕಿತ್ತು ಓಡುವ 
ನನ್ನೊಳಗಿಗೆ  ಲಗಾಮುದಾರನಾಗಿ. 


ಶುಕ್ರವಾರ, ಜೂನ್ 11, 2021

ಕನಸುಗಳು

ನಾ ಕಂಡ ಕನಸುಗಳಲಿ
ನೇವರಿಸುವ ನೆತ್ತಿಗಳಿರಬೇಕಿತ್ತು
ಕನಸುಗಳಿಗೆ ಬಲೆ ಹೆಣೆದು
ದಾರಿ ತೋರುವ ಕಲ್ಪನೆಯ
ಹೊತ್ತಿಗೆಗಳಿರಬೇಕಿತ್ತು
ಮಾತುಗಳಿಗೆ ಹಿತ ತುಂಬುವ
ತುಟಿಗಳಿರಬೇಕಿತ್ತು
ವಾಸ್ತವಕ್ಕೆ ಚಿಮ್ಮಿ ನಿಲ್ಲುವ 
ಪಾದಗಳ ಸ್ಪರ್ಶವಿರಬೇಕಿತ್ತು 
ಸೂಕ್ಷ್ಮಕ್ಕೆ ಸೂಕ್ಷ್ಮ ತಿಳಿಸುವ 
ಅರಿವುಗಳಿರಬೇಕಿತ್ತು 
ಭಾವಕ್ಕೆ ನಂಟು ಬೆಸೆಯುವ 
ಮಿಡಿತಗಳಿರಬೇಕಿತ್ತು 
ರಾಗಕ್ಕೆ ಲಯ ಬೆಸೆಯುವ
ತಾಳ ಸಿಗುವಂತಿರಬೇಕಿತ್ತು 
ಸುಮ್ಮನೆ ಕೂತಾಗ ಸ್ಪರ್ಶಿಸಿ 
ಛೇಡಿಸಿ ಹೋಗುವ ತಂಗಾಳಿಯ 
ಸಾಂಗತ್ಯವಿರಬೇಕಿತ್ತು 
ಏನಿಲ್ಲದಿದ್ದರೂ 
ನಿನ್ನಲ್ಲಿಯ ಬುದ್ಧನ ಸಾಮರಸ್ಯದ 
ಹಿತ ಸ್ಪರ್ಶ ಸ್ವಲ್ಪವಾದರೂ 
ಇರಬೇಕಿತ್ತು. 

ಹೆಪ್ಪು


ನೀ ಅಂದು ನಕ್ಕೆ.. !
ಗಾಣದಲ್ಲಿ ಸಿಕ್ಕಿದ ನಗು ಹೆಪ್ಪುಗಟ್ಟಿ ತಿರುಗಿತು
ಗಾಣ ನಿಂತರೂ ಸವೆದ ದಾರಿಗಳು ಮಾಸಿಲ್ಲ
ತಿರುಗುತ್ತಲೇ ಇವೆ
ಒಳಗಿಳಿದ ಅದರ ಬೇರುಗಳು
ನಾ ನಕ್ಕು ಚಿಗುರೊಡೆಯಲು
ಇಂದೂ ಕಾಯುತ್ತಲೇ ಇವೆ.






ಗುರುವಾರ, ಜೂನ್ 3, 2021

ಎಲ್ಲರು ಅವನನ್ನು ಹುಚ್ಚನೆಂದೇ ಕರೆಯುತ್ತಿದ್ದರು, ನೋಡಲು ಸರಿಸುಮಾರು ಹಾಗೆಯೇ. ಎಣ್ಣೆ ಕಂಡು ವರ್ಷಗಳೇ ಕಳೆದಿದ್ದ ಕೂದಲು, ಎಂದೂ ತೆಗೆಯದ ಆ ಕಪ್ಪು ಬಿಳಿ ಗಡ್ಡ, ಚರಂಡಿಯ ಕೊಳಚೆಯೂ ನಾಚುವಂತ ಕೊಳಕಲು ಬಟ್ಟೆ, ಸ್ನಾನ, ಏನೆಂಬುದನ್ನೇ ಅರಿಯದ ದೇಹ,ಎಣ್ಣೆಯ ವಾಸನೆಯನ್ನು ಕಂಡಿರದ ಕೂದಲು, ಹೆಗಲ ಮೇಲೆ ಸದಾ ಸಂಗಾತಿಯಾಗಿದ್ದ ಒಂದು ಚೀಲ, ಹೀಗೆ ಆ ವ್ಯಕ್ತಿ ಕಾಣಸಿಗುತ್ತಿದ್ದ ದೈನಂದಿನ ಚಿತ್ರಣ. 

 ಸಿಕ್ಕ ಸಿಕ್ಕಲ್ಲಿ  ವಸ್ತುಗಳನ್ನು ಚೀಲಗಳಲ್ಲಿ ತುಂಬುವುದು, ಕಂಡ ಕಂಡ ಮನೆಯ ಹೊರಗೆ ಸಿಕ್ಕಿದ್ದನ್ನೆಲ್ಲಾ ಕದಿಯುವುದು, ಕೆಟ್ಟ ಕೆಟ್ಟ ಮಾತುಗಳಲ್ಲಿ ಜನರನ್ನು ಬೈಯುತ್ತಾ ನಡೆದಾಡುತ್ತಿದ್ದ ಆ ವ್ಯಕ್ತಿಯನ್ನು  ನೋಡಿ ಜನ, ವ್ಯಕ್ತಿಯನ್ನು ಹುಚ್ಚನೆಂದು ಕರೆಯುತ್ತಿದ್ದರು. ಹಾಗೆಯೇ ಕಳ್ಳತನ ಮಾಡುತ್ತಿದ್ದ ಕಾರಣಕ್ಕಾಗಿ,  ಆಗಾಗ್ಗೆ ಜನಗಳಿಂದ ಹೊಡೆತದ ರುಚಿಯನ್ನು ಕಂಡಿದ್ದರೂ ಕಳ್ಳತನ ಬಿಡುತ್ತಿರಲಿಲ್ಲ. ಬಹುಶಃ ಹಸಿವಿನ ದಾಹ ಮತ್ತು ಕುಡಿತದ ಚಟವನ್ನು ನೀಗಿಸಲು. 

ನಾನು ಆ ವ್ಯಕ್ತಿಯನ್ನು ಗಮನಿಸಿದ ಹಾಗೆ ಸಂಬಂಧಿಗಳಿದ್ದು, ಮದುವೆಯ ಗೋಜಿರಲಿಲ್ಲವಾದ್ದರಿಂದ ಏಕಾಂಗಿಯಾಗಿದ್ದರು. ಸಣ್ಣ ಪಟ್ಟಣವೆಂದು ಗುರುತಿಸಿಕೊಳ್ಳುವ , ತಾರಸಿ, ಬಹುಅಂತಸ್ತಿನ ಮನೆಗಳ ಮಧ್ಯೆ ಇದ್ದ,  ತನ್ನ ಪಾಳುಮನೆಯಲ್ಲಿ ವಾಸ. ಆ ಮನೆಯೊಳಗೋ ಕದ್ದು ತಂದಿದ್ದ ಏನೇನೋ ವಸ್ತುಗಳು, ಬಟ್ಟೆ, ಪಾತ್ರೆ, ದೊಡ್ಡ ಕಲ್ಲುಗಳು, ಮೂಟೆಗಳು ಕಾಫಿ ಬೀಜ, ಮೆಣಸು, ಶುಂಠಿ, ಹೀಗೆ ಏನೇನೋ.  ಈ ಕದ್ದು ತಂದ ವಸ್ತುಗಳನ್ನು ಅಂಗಡಿಯಲ್ಲಿ ಮಾರುವುದು, ಅವರು ಕೊಟ್ಟ ಅಲ್ಪ -ಸ್ವಲ್ಪ ಹಣದಲ್ಲಿ ಕುಡಿದು, ಆ ಪಾಳು ಮನೆಯೊಳಗೆ ಶವಾಸನ ಹಾಕಿ ಮಲಗುವುದು. 

ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಅವರಿವರ ಮನೆಯ ಹಿತ್ತಲು ಹುಡುಕುವುದು, ಆ ವ್ಯಕ್ತಿಯ ದಿನಚರಿಯಾಗಿತ್ತು.ಈ ದಿನಚರಿ ಕೊರೋನಾ ಲಾಕ್ಡೌನ್ ದಿನಗಳಲ್ಲೂ ಮುಂದುವರೆದಿತ್ತು. ಆದರೆ ಎಂದೂ ಆ ವ್ಯಕ್ತಿ ಮಾಸ್ಕ್ ಮೊರೆ ಹೋದವರಲ್ಲ. ಹಾಗೆ ಕೊರೋನಾ ಸಹ ಅವರ ಬಳಿ ಬಂದಿದ್ದಿಲ್ಲ. ಆದರೆ ಮೂರು ದಿನಗಳಿಂದ ಸದಾ ಬೀದಿಯಲ್ಲಿ ಸುತ್ತಾಡುತ್ತಿದ್ದ  ಆ ವ್ಯಕ್ತಿ ಕಾಣುತ್ತಿರಲಿಲ್ಲ. ಅಂತಹ ವ್ಯಕ್ತಿಯ ಬಗ್ಗೆ ಯಾರು ತಾನೇ ತಲೆಕೆಡಿಸಿ ಕೊಂಡಾರು? 

ಯಾವಾಗ ಆ ಪಾಳುಮನೆಯಿಂದ ಕೆಟ್ಟ ವಾಸನೆ ಅಕ್ಕ ಪಕ್ಕದ ಮನೆಗೆ ಬಡಿಯಿತೋ,ಅನುಮಾನಾಸ್ಪದದಿಂದ  ಒಳ ಹೊಕ್ಕು ನೋಡಿದಾಗ ಎಲ್ಲರ ಅನುಮಾನ ನಿಜವಾಗಿತ್ತು, ಹುಚ್ಚನೆಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿ  ಸತ್ತು ದಿನಗಳು ಕಳೆದಿದ್ದವು.  

ಸಂಬಂಧಿಕರು, ಬೆಲೆಬಾಳುವ ಆಸ್ತಿ, ಹಲವಾರು ಲಕ್ಷಗಳನ್ನು ಇಟ್ಟಿದ್ದ( ಜನಗಳ ಮಾತು ),  ಇಷ್ಟೆಲ್ಲಾ ಇದ್ದಾರು, ಆ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆದದ್ದು, ಗ್ರಾಮ ಪಂಚಾಯಿತಿಯಿಂದ ಒಂದು ಗೂಡ್ಸ್ ಆಟೋ ನಲ್ಲಿ ತೆಗೆದುಕೊಂಡು ಹೋಗಿ ಹೂತರು. 

ಆ ವ್ಯಕ್ತಿಯ ದುರ್ದೈವ ಅಷ್ಟೆಲ್ಲಾ ಬೆಲೆಬಾಳುವ ಆಸ್ತಿ ಇದ್ದರೂ ವಿದ್ಯೆ, ಸಾಮಾನ್ಯ ತಿಳುವಳಿಕೆ ಇಲ್ಲದೆ, ಒಂದು ದಿನವೂ ಸಾಮಾನ್ಯ ಜನಗಳಂತೆ ಬಾಳದೆ ಅನಾಥ ಶವವಾಗಿ ಜೀವಬಿಟ್ಟಿದ್ದು. 

 ಹುಚ್ಚನಿಗೆ ಕೊರೋನಾ, ಕುಡಿದ ಮತ್ತಿನಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ,  ಹೀಗೆಲ್ಲ  ಸತ್ತ ಕೆಲವು ದಿನಗಳ ನಂತರ ಜನಗಳು ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದರು. ಆದರೆ ಆ ವ್ಯಕ್ತಿ ಜನಗಳು ಹೇಳುವಂತೆ ಹುಚ್ಚನಾಗಿರಲಿಲ್ಲ. ಅವನ ವೇಷ ಭೂಷಣಗಳಷ್ಟೇ ಹುಚ್ಚಾಗಿದ್ದವು.  



ಬುಧವಾರ, ಜೂನ್ 2, 2021

ಉಯಿಲು

ಕೊಟ್ಟು ಬಿಡಿ ನಿಮ್ಮಲಿ
ಚಾಚುತ್ತಿರುವ ಕೆನ್ನಾಲಿಗೆಯ ಕಿಚ್ಚುಗಳಿಗೆ
ನನ್ನ ವಿಳಾಸವನು
ದೇವರು ನನ್ನ ಹೆಸರಿಗೆ ಉಯಿಲು
ಬರೆದು ಅದರ ಮೇಲೆ ನನ್ನ
ಹೆಸರು ಅಂಟು ಹಾಕಿದ್ದಾನೆ ಎನ್ನಲಾಗಿದೆ
ನುಂಗಲು |ನೀರು ಕುಡಿಯಲು 
ದಣಿವಾರಿಸಿ ಕೊಳ್ಳಲು |ತಿಂದು ತೇಗಲು 
ಹಾ.....,     ಮರೆಯದಿರಿ  
ನಿಮ್ಮ ಅಕ್ಕ ಪಕ್ಕದವರು, ಪರಿಚಿತರಿಗೆ 
ನನ್ನ ವಿಳಾಸ ಕೊಡಲು. 





ಶುಕ್ರವಾರ, ಮೇ 21, 2021

ಮುಖ್ಯರಸ್ತೆಯಲ್ಲಿರುವ ಸಣ್ಣದೊಂದು ದಿನಸಿ ಅಂಗಡಿ.ಅಂಗಡಿಯ ಮಾಲೀಕ ವ್ಯಾಪಾರದಲ್ಲಿ ಬಹಳ ನಿಸ್ಸೀಮ(ಮೋಸ ಮಾಡುವುದರಲ್ಲೂ ಅಷ್ಟೇ). ನಾನು  ಬಸ್ಸಿಗಾಗಿ ಕಾದು ನಿಂತಾಗ, ಕೆಲಮೊಮ್ಮೆ ಅಲ್ಲೆಲ್ಲ ಸಂಚರಿಸುವಾಗ ಗಮನಿಸಿದ್ದೆ, ಆ ಮಾಲೀಕ ಹೇಗೆ ಹಳ್ಳಿಯ ಜನರು, ಮುಗ್ದ ಜನರನ್ನು, ಚಿಲ್ಲರೆ ಕೊಡುವ ವಿಷಯದಲ್ಲಿ ಎಷ್ಟೆಲ್ಲಾ ವಿಧದಲ್ಲಿ ಮೋಸ  ಮಾಡುತ್ತಿದ್ದನೆಂದು,  ಗಮನಿಸುವಿಕೆ ಅಷ್ಟೇ ಅಲ್ಲ, ಅನುಭವವನ್ನೂ ಪಡೆದಿದ್ದೆ. ಕೂಡು -ಕಳೆಯುವಿಕೆಯಲ್ಲಿ ವ್ಯತ್ಯಾಸ, ನೋಟುಗಳಲ್ಲಿ ವ್ಯತ್ಯಾಸ ಮಾಡುವುದು, ಚಿಲ್ಲರೆ ಕೊಡುವಿಕೆಯಲ್ಲಿ ಎಗರಿಸುವುದು, ತೂಕದಲ್ಲಿ ವ್ಯತ್ಯಾಸ, ಅವಧಿ ಮುಗಿದ ದಿನಸಿ ಪ್ಯಾಕ್ಗಳನ್ನು ನೀಡುವುದು, ಹೀಗೆ ನನ್ನ ಅರಿವಿಗೆ ಬಂದ ಅಂಶಗಳನ್ನು ಮಾಲೀಕನೊಂದಿಗೆ ಕೆಲವು ಬಾರಿ ಚರ್ಚಿಸಿ  ಸರಿ ಮಾಡಿಕೊಂಡಿದ್ದೆ. ಆದರೆ ಅಲ್ಲಿ ಖರೀದಿಸುವ ಉಳಿದ ಜನರನ್ನು ನೋಡಿದಾಗ,  ಛೆ.. !!ಪಾಪ ಅನ್ನಿಸುತ್ತಿತ್ತು, ಆದರೆ ನನ್ನಿಂದ ಏನೂ ಮಾಡಲಾಗದ ಪರಿಸ್ಥಿತಿ. 

 ಒಂದೊಮ್ಮೆ ಹೀಗೆ.... ಅಂಗಡಿ ಬಸ್ಸು ನಿಲ್ದಾಣದ ಪಕ್ಕದಲ್ಲೇ ಇದ್ದುದ್ದರಿಂದ, ಬಸ್ಸಿಗಾಗಿ ಕಾದು ನಿಂತಿದ್ದೆ. ನಾನೆಂದರೆ ಬಸ್ಸಿಗೆ ಸಾಮಾನ್ಯವಾಗಿ ಮುನಿಸು. ನಾ ಕಾದು ನಿಂತಾಗಲೆಲ್ಲ ಬಸ್ ರಾಯ ಏನಾದರೂ ತಗಾದೆ ಮಾಡಿಕೊಂಡು ಬಿಟ್ಟಿರುತ್ತಾನೆ. ಕಾಯುತ್ತಾ ನಿಂತ ನನಗೆ ಆ ಅಂಗಡಿಗೆ ಬಂದ ಯುವಕರ ಮೇಲೆ ದೃಷ್ಟಿ ಹರಿಯಿತು. ಇಬ್ಬರೂ young and smart ಆಗಿದ್ದರು. ಇಬ್ಬರನ್ನು ನೋಡಿದರೆ ಅಕ್ಕ -ಪಕ್ಕದ ಊರಿನವರ ಮುಖಚರ್ಯೆ ಕಾಣುತ್ತಿರಲಿಲ್ಲ. ಒಬ್ಬ energetic boy ಬೈಕ್ ನಲ್ಲೇ ಕುಳಿತ, ಒಬ್ಬ ಇಳಿದು ಅಂಗಡಿಗೆ ಹೋಗಿ ಸಿಗರೇಟು ಪ್ಯಾಕ್ ಕೇಳಿದ, ಹೆಚ್ಚು ನಂಟು ಬೆಳಸಿದರೆ ಶ್ವಾಸಕೋಶ, ಹೃದಯವನ್ನೆಲ್ಲಾ ತಿಂದು ಕ್ಯಾನ್ಸರ್ ಗೆ ಆಹ್ವಾನ ನೀಡುವ, ಒಂದು ಸಿಗರೇಟು ಪ್ಯಾಕ್ ಬೆಲೆ ಸುಮಾರು 200ರೂ ಇರಬಹುದು. ಅವನು ಕೇಳಿದ್ದು ಬರೋಬ್ಬರಿ 20 ಪ್ಯಾಕುಗಳನ್ನು, ಮಾಲೀಕ 20 ಪ್ಯಾಕ್ ಗಳನ್ನು ಕೈನಲ್ಲಿ ಹಿಡಿದು ಹಣವನ್ನು ಕೇಳಿದ, ಆ young boy ಪರ್ಸ್ ತೆಗೆದು ಪರದಾಡುತ್ತಿದ್ದದ್ದನ್ನು  ನೋಡಿದರೆ,  ಅಷ್ಟೆಲ್ಲಾ ಹಣವಿಲ್ಲವೆಂಬುದು ಅವನ ಹಾವಭಾವಗಳಲ್ಲಿ ವ್ಯಕ್ತವಾಗುತ್ತಿತ್ತು. ಹಿಂದೆ ತಿರುಗಿ ಬೈಕ್ ಮೇಲೆ ಕುಳಿತ ಸ್ನೇಹಿತನ ಬಳಿ ಹೋಗಿ ಹಣವನ್ನು ಕೇಳಿ ಪಡೆದುಕೊಂಡು ಬಂದು, ಇನ್ನಾ 6 ಪ್ಯಾಕುಗಳು ಬೇಕೆಂದ, ಅಂಗಡಿಯ ಮಾಲೀಕ 20 ಪ್ಯಾಕ್ ಗಳನ್ನು ಟೇಬಲ್ ನ ಮೇಲಿಟ್ಟು  6 ಪ್ಯಾಕ್ ಗಳನ್ನು ತರಲು ಒಳಗೆ ಹೋದ. ತಕ್ಷಣ ಆ intelligent young boy  20 ಪ್ಯಾಕ್ ಗಳನ್ನು ಎತ್ತಿಕೊಂಡು, ಚಾಲನೆಯಲ್ಲಿದ್ದ ಸ್ನೇಹಿತನ ಬೈಕ್ ನಲ್ಲಿ ಕುಳಿತ ಅಷ್ಟೇ... ಆ ಬೈಕ್ ಅರೆಕ್ಷಣದಲ್ಲಿ ಮಾಯ. ಮಾಲೀಕ ಗಲಿಬಿಲಿಯಿಂದ ತನ್ನ ಬೈಕನ್ನೇರಿ ಹಿಂಬಾಲಿಸಿದರೂ ಅವರ ಸುಳಿವು ಇಲ್ಲ. ಹಿಂದಿರುಗಿ ಬಂದ ಅಂಗಡಿಯ ಮಾಲೀಕನ ಸಪ್ಪೆ ಮೋರೆಯಲ್ಲಿ ನನಗೆ ಕಂಡಿದ್ದು ಮಾಡಿದ್ದುಣ್ಣೋ ಮಹರಾಯ ನಲಿದಾಡುತ್ತಿದ್ದದ್ದು. ಅಷ್ಟರಲ್ಲಿ ಬಸ್ ರಾಯ ಹಾರ್ನ್ ಮಾಡಿದ ಶಬ್ದಕ್ಕೆ ನಾನು ಗಲಿಬಿಲಿಗೊಂಡು ಬಸ್ಸನ್ನೇರಿ ಕುಳಿತ,  ನನ್ನ ತಲೆಯಲ್ಲಿ  ಒಂದು ಸಿಗರೇಟು ಪ್ಯಾಕ್ ಬೆಲೆ 200ರೂ, 20× 200 ಇವೇ ಕೊರೆಯ ತೊಡಗಿದವು.  


ಮಂಗಳವಾರ, ಮೇ 18, 2021

     ಕೊರೋನಾ ಅದೆಷ್ಟು ಜನರನ್ನು ಮಾನಸಿಕವಾಗಿ, ದೈಹಿಕವಾಗಿ ಅಂಟಿದೆಯೋ ಗೊತ್ತಿಲ್ಲ. ಆದರೆ ಈ ಕೊರೋನಾ ಕೆಲವಷ್ಟು ಜನರ ಆರೋಗ್ಯ, ಆಯಸ್ಸು, ನಿದ್ರೆ, ನೆಮ್ಮದಿ ಹೀಗೆ ಏನೆಲ್ಲಾ ಕಸಿದು ಕಬಳಿಸಿದೆ ಎಂಬುದು ಆಯಾ ಪರಿಸ್ಥಿತಿಯಲ್ಲಿರುವವರು ಮಾತ್ರ ಹೇಳಲು ಸಾಧ್ಯ. ಶ್ರಮವನ್ನೇ  ನಂಬಿ ದುಡಿಯುವ ಆತ್ಮವಿಶ್ವಾಸದ ಜೀವಗಳಿಗೆ ಇದಾವುದು ಬಾಧಿಸಿರುವುದಿಲ್ಲ.
    ಕೊರೋನಾದ ಎರಡನೆಯ ಅಲೆಯ ಲಾಕ್ಡೌನ್ ದಿನಗಳು,  ನನ್ನನ್ನು ಆರೋಗ್ಯಕ್ಕಿಂತ ಹೆಚ್ಚಾಗಿ ಕಾಡಿದ್ದು, ನನ್ನ ಬರವಣಿಗೆಯ ಮೇಲೆ. ಮನಸ್ಸಿಗೆ ಕೊರೋನಾ ಹಿಡಿದಿದೆ ಎಂದನಿಸಿದ ಮೇಲೆ,  ಬರವಣಿಗೆಯಲ್ಲಿ ಕೊರೋನಾ ಲಕ್ಷಣಗಳು ಒಂದೊಂದೇ ಕಾಡತೊಡಗಿದವು. ನನಗೇಕೋ ಲಕ್ಷಣಗಳು ಹೆಚ್ಚಾಗುತ್ತಿವೆ ಎಂದು ಭಾಸವಾಗಿ ಪರೀಕ್ಷಿಸಲು ಪುಸ್ತಕ, ಪೆನ್ನು ಹಿಡಿದು ಗಂಟೆ ಗಟ್ಟಲೆ ಕೂತರೂ ದೊರೆತದ್ದು , ನಿರೀಕ್ಷೆ ಯಂತೆಯೇ ಕೊರೋನಾದ ಪಾಸಿಟಿವ್ ಲಕ್ಷಣಗಳು. ಅನುಭವಿಸಲಾಗದ ಪರಿಸ್ಥಿತಿ. ಏನೆಲ್ಲಾ ಔಷದೋಪಚಾರ ದೊರೆದರೂ ಸರಿಯಾಗದಂತಹ ಬರವಣಿಗೆಬಾರದ ಸ್ಥಿತಿ. ಆದಷ್ಟೂ ಬೇಗ ಕೊರೊನಕ್ಕೆ ಕೊರೋನಾದ ಮೂರನೆಯ ಅಲೆ ಅಪ್ಪಳಿಸಲಿ ಎಂದು ಶಪಿಸುತ್ತ ಕೂರುತ್ತಿದ್ದ ನನಗೆ, ಕೊನೆಗೂ ಬರವಣಿಗೆ ಅಪ್ಪಳಿಸಿದ್ದು ಈ ಅನಿಸಿಕೆ ವ್ಯಕ್ತವಾಗುವ  ಮೂಲಕ. 




ಮಂಗಳವಾರ, ಏಪ್ರಿಲ್ 27, 2021

ಅಪ್ಪಿ

ಇರುವನೊಬ್ಬ ಅಪ್ಪಿ
ಬಹಳ ತುಂಟ ಅಪ್ಪಿ
ಆಡ ಹೋಗಿ, ಆಯ ತಪ್ಪಿ
ಬಿದ್ದ ರಭಸ, ಮರವ ತಬ್ಬಿ
ಏರಿ ಕುಳಿತು, ಅಳುತ ಅಪ್ಪಿ 
ಓಡಿ ಬಂದು, ಅಮ್ಮ ಬೈದು 
ಹಿಡಿದ ರಚ್ಚೆ, ಹೆಚ್ಚು ಆಗಿ 
ಅಮ್ಮ ಸೋತು, ಕೊಟ್ಟು ಪಪ್ಪಿ 
ಇಳಿದು ಶಾಂತವಾಗಿ  ಅಪ್ಪಿ 
ಕೊರಳ ಬಿಗಿದು ಕೊಟ್ಟನೊಂದು 
ಸಿಹಿಯ ಪಪ್ಪಿ ಹಿಡಿದು  ಜಪ್ಪಿ. 


ಮಂಗಳವಾರ, ಏಪ್ರಿಲ್ 6, 2021

ಮುತ್ತುಗ

ನಾನಂದು ನೋಡ ಹೋಗಿದ್ದು
ಕಾಡಿಗೆ ಮುತ್ತುಗ
ಮುತ್ತು ಮುತ್ತಿನ ಕೆಂಪು
ಮುತ್ತಿನ ಮುತ್ತುಗ
ನಾ ಕಂಡಿದ್ದು ಕೆಂಪು ಹವಳ ದ್ವೀಪ
ಮುತ್ತಿನ ಮುತ್ತುಗ
ಕಾಡಿನ ನಡು ಹೊಕ್ಕುಳಲ್ಲಿ
ಅವಿತಿದ್ದ ಕೆಂಪು ಮುತ್ತು ಮುತ್ತುಗ
ಕಾಡೆಲ್ಲಾ ಸೂರೆಗೊಂಡು 
ಚಪ್ಪರ ಹಾಸಿ ಘಮ ಘಮಿಸಿ 
ಸೆಳೆಯುತ್ತಿದ್ದ ಕಾಡಿನ ಕೆಂಪು 
ಕಂಪಿನ ಚೆಂದುಳ್ಳಿಯ 
ಅಂದ ರಾಣಿ ಮುತ್ತುಗ 
ಸುಡು ಬಿಸಿಲಿನ ಇನಿಯನನ್ನು 
ತಬ್ಬಿ ಜ್ವಾಲೆಯಾಗಿ ಉರಿಯುತ್ತಿದ್ದ 
ಮೋಹಗಾತಿ ಮುತ್ತುಗ 
ಅಮ್ಮ ಬಡಿಸಿ ಹಸಿವಿಂಗಿಸುವ 
ಬಾಳ ತಟ್ಟೆಯ ಮುತ್ತುಗ 
ಕಾಡಿನರಾಜನ ಹೊಳೆಯುವ 
ಕಿರೀಟ ರಾಣಿ ಮುತ್ತುಗ 
ದುಂಬಿಗಳೊಂದಿಗೆ ಪಿಸುಗುಡುವ 
ಲಾವಣ್ಯಕಾಂತಿ ಮತ್ತಿನ ಮುತ್ತುಗ 
ಕಾಡಿನ ಸ್ವಾತಿ ಮುತ್ತು ಮುತ್ತುಗ. 


ಭಾನುವಾರ, ಮಾರ್ಚ್ 28, 2021

ಕಣ್ಣುಗಳು

ಕಣ್ಣುಗಳು 
ಎದುರು ಮನೆಯ ಹುಡುಗಿಯ
ಕಣ್ಣುಗಳಲ್ಲಿ ಸದಾ
ನೀರು ಚಿಮ್ಮುತ್ತಿರುತ್ತದೆ
ಬತ್ತದ ಅಂತರ್ಜಲ
ಪ್ರತಿದಿನದ ಕನಸು
ಅವಳ ಕಣ್ಣುಗಳಲ್ಲಿ
ಕಣ್ಣಿಡಬೇಕೆಂದು
ನನ್ನ ಕಣ್ಣುಗಳನ್ನು
ಸಂದೇಶ ರವಾನಿಸುವ
ಮೇಲ್ , ಮೆಸೇಜ್ ಗಳನ್ನಾಗಿಸಬೇಕೆಂದು,
ಅರ್ಥೈಸಿಕೊಳ್ಳದಿದ್ದರೆ ಬೇಡ
ಡ್ರಾಫ್ಟ್  ಬಾಕ್ಸ್ ನಲ್ಲೆ ಬೀಗ
ಜಡಿದುಕೊಳ್ಳಲಿ, ಎಂದೇನೇನೋ
ನೋಟಿಫಿಕೇಶನ್ಗಳು ನನ್ನ ತಲೆಯಲ್ಲಿ 
ರಿಂಗಣಿಸುತ್ತಿದ್ದ ಒಂದು ಅನುದಿನ 
ಎದುರಿಗೆ ಸಿಕ್ಕೇಬಿಟ್ಟಳು  
ಸಹಜವಾಗೇ, ನನ್ನ ಕಣ್ಣಲ್ಲಿ ಕಣ್ಣಾದಳು 
ಅಷ್ಟೂ ದಿನದ ಕೋಪ 
ದೃಷ್ಟಿಗಳ ಮಿಲನದಲ್ಲಿ 
ನನ್ನಲ್ಲೂ ಕಣ್ಣಿಂದ ಧಾರಾಕಾರವಾಗಿ 
ಹರಿಯಲಾರಂಭಿಸಿದರೂ 
ಅವಳ ಕಣ್ಣೀರಿನ ಆಳ -ಅಗಲಗಳೊಡನೆ 
ನನ್ನ ಕಣ್ಣುಗಳು ಬಳಲಿದವು 
ಅವಳ ಕಣ್ಣುಗಳು 
ಜೀವನದ ಅಲೆಗಳಲ್ಲಿ 
ಮಿಂದು ಹೊಳೆಯಾಗಿದ್ದವೇ ವಿನಃ 
ಪುಟಿದುರುಳುತ್ತಿದ್ದ ಚಿಲುಮೆಗಳಿಂದಲ್ಲ. 




ಗುರುವಾರ, ಮಾರ್ಚ್ 25, 2021



   


     ಸುನೀತ ಮೇಡಂರವರು ಹೇಳುವಂತೆ ನಾ ಅವರಿಗೆ ಅಪರಿಚಿತಳಾದರೂ, ನನಗೆ ತುಸು ಪರಿಚಿತ(ಕೃತಿ )ರಿರುವ ಅವರ ಸಾಮಾನ್ಯ ಓದುಗಳಾಗಿ ನಾನೇನು ಬರೆಯಬಲ್ಲೆ ಎಂಬುದು ನನ್ನನ್ನು ಬಹುವಾಗಿ ಕಾಡಿತು. ಪ್ರಯತ್ನದ ಬರವಣಿಗೆಯಲ್ಲಿ ವ್ಯತ್ಯಾಸಗಳಿದ್ದರೆ ಕ್ಷಮೆ ಎಂಬ  ಪ್ರೀತಿಯಿರಲಿ. 

ನಾಡಿನ ಖ್ಯಾತ ಸಾಹಿತಿ ಡಾ.ನಾ.ಡಿಸೋಜರವರ " ಕವಿ ಬೆಳೆದ ಹಾಗೆ ಆತ ಪರಿಪೂರ್ಣನಾಗುತ್ತಾನೆ. ಆ ಬಗೆಯ ಎಲ್ಲಾ ಲಕ್ಷಣಗಳು ಸುನೀತಾರವರಿಗಿದೆ, ಎಂಬ ಮುನ್ನುಡಿಯನ್ನು ಲೇಪಿಸಿಕೊಂಡು ಉರುಳುತಲಿರುವ "ಉರುಳುವ ಗಾಲಿಗೆ ಹಿಡಿಯುತ ಕೋಲು " ಮಕ್ಕಳ ಕವನ ಸಂಕಲನವು 76 ಕವನಗಳನ್ನು  ತನ್ನ ಉರುಳುವ ಗಾಲಿಗೆ ಹಿಡಿದಿದೆ. 

 ಬಿಡುವಿಲ್ಲದ ಜೀವನದ ಜಂಜಾಟಗಳಲ್ಲಿ ಮಕ್ಕಳಾಗಿ, ಮಕ್ಕಳ ಮನಸ್ಥಿತಿಯೊಳಗೆ ಹೊಕ್ಕು, ಮುಗ್ಧತೆಯನ್ನು ಇಣುಕಿನೋಡಿ ಕವನಗಳಾಗಿ ಬರೆಯುವುದು, ಎಂಥಹವರಿಗೂ ತುಸು ತ್ರಾಸಕ್ಕೆ ತಳ್ಳುವ ಸಂಗತಿಯೇ. ಅಂಥಹ ಸಂಗತಿಗಳನ್ನೆಲ್ಲಾ ಬದಿಗೊತ್ತಿ ಸುನೀತ ಮೇಡಂರವರು,  ತಮ್ಮ ಮಕ್ಕಳಿಗಾಗಿ, ಮುಗ್ಧ ಮನದ ಮೊಗ್ಗುಗಳಿಗಾಗಿ ಉರುಳುವ ಗಾಲಿಗೆ ಹಿಡಿಯುತ ಕೋಲೆಂಬ ಉತ್ತಮವಾದ ಪ್ರಯತ್ನವನ್ನು ನಮ್ಮ ಮುಂದಿಟ್ಟಿದ್ದಾರೆ. 

 ಸುನೀತ ಮೇಡಂರವರ ಉರುಳುವ ಗಾಲಿಯು,  ಪುಟಾಣಿ ಮುಗ್ಧ  ಮನಸ್ಸುಗಳನ್ನು ಸಹಜವಾಗಿ ಅರಳಿಸುವ ಮನೆ, ಶಾಲೆ, ಹೂ, ಪ್ರಾಣಿ, ಹಬ್ಬ, ಜಾತ್ರೆ, ಮಳೆ, ಆಟಗಳು, ಹಳ್ಳಿ, ಪರಿಸರ, ದೇಶ, ಭಾಷೆ  ಹೀಗೆ ನೀತಿಪೂರಕವಾಗಿ, ಮನೋರಂಜನಾತ್ಮಕವಾಗಿ , ಕಲಿವಿಕೆಗೆ ಪೂರಕ ಲಯಗಳ ಮೂಲಕ ತನ್ನ ಕವನಗಳನ್ನು ಉರುಳಿಸುತ್ತಾ ಸಾಗಿದೆ. 

ಮೇಲಿನಿಂದ ನೂಲಿನ ಹಾಗೆ 
ಬೀಳುವೆ ಹೇಗಣ್ಣಾ? 
ಯಾರು ಅಲ್ಲಿ ನೇಯ್ಗೆ  ಕೆಲಸ 
ಮಾಡುತ್ತಿರುವರು? 

ಮಳೆಯಣ್ಣ ಕವನದಲ್ಲಿ ಲೇಖಕಿ ಮಗುವಾಗಿ ಮಳೆಯನ್ನು, ನೂಲಾಗಿ ಕಾಣುವ ವಿಭಿನ್ನ  ಚಿಂತನೆ, ಮಳೆಬೀಳುವಿಕೆಯಲ್ಲಿ  ನೇಯ್ಗೆ ಕೆಲಸದ ಕಲ್ಪನೆ, ಮಳೆ ಹನಿಯನ್ನು ಬಣ್ಣವಿಲ್ಲದ ಬಿಂದುವಾಗಿ ಕಾಣುವುದು, ಹನಿಗಳು ಡಿಕ್ಕಿ ಹೊಡೆಯುವಿಕೆಯ ಭಾವ, ಇವು ಕವಿ ಮನಕ್ಕೆ ಮಾತ್ರ ಸಾಧ್ಯವಾದೀತು ಎಂಬುದು ನನ್ನ ಭಾವನೆ. 

ಮನೆ  ಮನಗಳ ಬೆಸುಗೆಯಾಸೆಗೆ 
ಹೃದಯ ಹಣತೆಯ ಹಚ್ಚಿಟ್ಟ ಭಾಷೆ 
ನಮ್ಮ ಕನ್ನಡ ಎಷ್ಟು ಸುಂದರ 

 ಇಲ್ಲಿ ಲೇಖಕಿ ಕನ್ನಡ ಭಾಷೆಯ ಮೇಲಿನ ಅಭಿಮಾನ,  ಪ್ರೀತಿಗೆ ತನ್ನ ಕವನವನ್ನು ಬೆಸುಗೆಯಾಗಿಸಿದ್ದಾರೆ.

ಕಪ್ಪು ಬಣ್ಣದ ಪರದೆಯೂ 
ಬಿಳಿಯ ಸೀಮೆಸುಣ್ಣವೂ 
ಕರಿಹಲಗೆಗದು ಸಮವಸ್ತ್ರವೂ 
ಬರೆದು ಅಳಿಸಿ ಬರೆದು ಅಳಿಸಿ 
ಎದೆಯೊಳಗೆಲ್ಲಾ ಇಳಿಯುತ್ತೆ 

 ಶಾಲೆಯಲ್ಲಿ ಮಕ್ಕಳ ಕಲಿಕೆ, ಕರಿಹಲಕೆಯ ಮೇಲಿನ ಬರವಣಿಗೆಯಿಂದ ಪಕ್ವತೆ ಪಡೆಯುವುದನ್ನು ಲೇಖಕಿ ಸುಂದರವಾಗಿ ಕರಿಹಲಗೆಗೆ ಬಿಳಿಯ ಸಮವಸ್ತ್ರ ತೊಡಿಸುವ ಮೂಲಕ ಕವನದ ಸಾಲುಗಳನ್ನು ಚೆಂದಗಾಣಿಸಿದ್ದಾರೆ. 

ಒಳ್ಳೆಯ ಗೆಳೆಯರ ಸೇರಿಕೊಂಡು 
ಬಾಳು ಚೆಂದ ಮಾಡು ಕಂದ 
ಎಲ್ಲರೊಳಗೊಂದಾಗಿ ನೀನು 
ಮಡಿಲ ಮುತ್ತಾಗು 
ಈ ನಾಡಿನ ಸ್ವತ್ತಾಗು 

 ಲೇಖಕಿ ಮೂಲತಃ ಶಿಕ್ಷಕಿಯಾಗಿರುವುದರಿಂದ ತಮ್ಮ ಮಕ್ಕಳಲ್ಲಿ ಅಪೇಕ್ಷಿಸುವ ಸದ್ಗುಣ, ಆಚಾರ-ವಿಚಾರ ವಿನಯಗಳಿಂದ ಮಡಿಲ ಮುತ್ತಾಗಿ , ಸ್ವತ್ತಾಗಿ ಬಾಳಿರಿ ಎಂದು ಆಶಿಸಿದ್ದಾರೆ. 

ಹಳ್ಳಕ್ಕೆ ಬಿದ್ದ ಕಸವಿಸಿಯೇನು 
ಬಿದ್ದರೂ ಎದ್ದು ಓಡೂ 
ಬದುಕು ಹಾಗೆಯೇ ನೋಡು 
ಸುಲಭದಿ ಸಿಕ್ಕ ಈ ಚಕ್ರ, ಕೋಲು 

  ಕವನ ಸಂಕಲನದ ಆಶಾಭಾವದ ಶೀರ್ಷಿಕೆ ಹೊತ್ತಿರುವ ಉರುಳುವ ಗಾಲಿಗೆ ಹಿಡಿಯುತ ಕೋಲು ಕವಿತೆಯಲ್ಲಿ ಲೇಖಕಿ, ಹೊರಗೆ ಹೋದ ಮಗ ಸಮಯವಾದರೂ ಇನ್ನೂ ಬಾರದಿದ್ದನ್ನು ಕಂಡು ತಾಯಂದಿರು ಪಡುವ  ಸಹಜವಾದ ಆತಂಕ, ಚಕ್ರವನ್ನು ನಾಗರೀಕತೆಯ ಸಂಕೇತವಾಗಿ, ಕೋಲನ್ನು ನಿಯಂತ್ರಣದ ಸಂಕೇತವಾಗಿ ಬಳಸಿ, ಬದುಕಿನಲ್ಲಿ ಸೋಲು ಸಹಜ, ಅದನ್ನು ಕೊಡವಿ ನಿಂತು, ಬದುಕಿನಲ್ಲಿ ಆಹ್ವಾನಿಸುವ ಅವಕಾಶಗಳನ್ನು ಬಳಸಿ ಬೆಳೆಯುವ ಆಶಯದೊಂದಿಗೆ, ಶರವೇಗದಲ್ಲಿ  ಉದಯಿಸುತ್ತಿರುವ ಇಂದಿನ ನಾಗರಿಕತೆಯನ್ನು ಪರಿಸರದ ಅರಿವಿನಿಂದ, ನಾಗರೀಕತೆಯ ರಕ್ಷಣೆಯನ್ನು ಹಿಡಿಯುವ ಕೋಲಾಗಿ ಹಾಗೆ ಜೀವನದ ಸೋಲು - ಗೆಲುವಿನ  ಚಕ್ರಕ್ಕೆ, ಆಶಾಭಾವದಿಂದ ಸೆಟೆದು ನಿಲ್ಲುವ ಕೋಲನ್ನು ಹಿಡಿಯಿರಿ ಎಂಬುದನ್ನು ಆಟದ ಮೂಲಕ ವ್ಯಕ್ತಪಡಿಸಿರುವುದು ಅವರ ಕವಿತ್ವ ಭಾವಕ್ಕೆ ಉತ್ತಮ ಉದಾಹರಣೆ.  

ಅಮ್ಮ ಅಮ್ಮ ರಜೆಯಲಿ ನಾನು 
ತಾತನ ಮನೆಗೆ ಹೋಗುವೆನು 
ಸುಡು ಸುಡು ಬಿಸಿಲಿನ ರಜೆಯನು ನಾನು 
ಮರದ ನೆರಳಲಿ ಕಳೆಯುವೆನು 

 ಆಧುನೀಕತೆಯ ಆಡಂಬರ, ಭರಾಟೆಗಳಲ್ಲಿ ಮಕ್ಕಳಲ್ಲಿರುವ ಮುಗ್ಧತೆ ದಿನೇ ದಿನೇ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ರಜೆಯ ಮಜಾ ಕವಿತೆ, ನಮ್ಮನ್ನು ಬಾಲ್ಯಕ್ಕೆ ಮತ್ತೊಮ್ಮೆ ಅಟ್ಟಿದ ಅನುಭವ ಮತ್ತು ಇಂದಿನ  ಮಕ್ಕಳಿಗೆ ನಾವು ಕಳೆದ ಬಾಲ್ಯವನ್ನು ಚುಟುಕಾಗಿ ತಿಳಿಸಲು ಒಂದು ಉತ್ತಮ ಸಾಧನ ಈ ಕವಿತೆ. 

 ಕೆಲವು ಕವಿತೆಗಳಲ್ಲಿ ಪ್ರಾರಂಭದ ಸಾಲುಗಳಲ್ಲಿ ತುಡಿಯುವ ಲಯ, ಭಾವ, ಕವಿತೆಯ ಕೊನೆಯವರೆಗೂ ಮಿಡಿಯುವಂತಿರಬೇಕಿತ್ತು ಎಂಬುದು ನನಗೆ ಸುನೀತ ಮೇಡಂರವರ ಕವನಗಳನ್ನು ಓದಿದಾಗ ಲಘುವಾಗಿ ಮಿಡಿದ ಭಾವಾನಿಸಿಕೆ.

 "ಪುಸ್ತಕದಲ್ಲಿರುವ ಕೆಲವು ಪದ್ಯಗಳನ್ನಾದರೂ ಶಾಲಾ ವಿದ್ಯಾರ್ಥಿಗಳು,  ರಾಗವಾಗಿ ಹಾಡಿದರೆ ನನ್ನ ಪ್ರಯತ್ನ ಸಫಲವಾಗುವುದು ಎಂಬ ಭಾವದೊಂದಿಗೆ,  ನನ್ನ ಶಿಶುಗೀತೆಗಳನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ದಿನನಿತ್ಯ ಹಾಡುವುದನ್ನು ಕೇಳುತ್ತಾ, ತೃಪ್ತಿಯ ಸಾರ್ಥಕ್ಯ ಭಾವ ಕಂಡಿರುವ ಲೇಖಕಿ, ಓದುಗರ ಸಾರ್ಥಕ್ಯ ಭಾವದ ಅಭಿಪ್ರಾಯಿಸುವಿಕೆಗಾಗಿ "ಉರುಳುವ ಗಾಲಿಗೆ ಹಿಡಿಯುತ ಕೋಲು " ಕವನ  ಸಂಕಲನವನ್ನು ನಮ್ಮ -ನಿಮ್ಮೆಲ್ಲರ ಮುಂದಿಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಉತ್ತಮವಾದ ಯಶಸ್ಸು ಓದುಗರ ವಿಮರ್ಶೆ, ಪರಾಮರ್ಶೆ, ಹಾರೈಕೆಗಳ ಮೂಲಕ ಒಲಿದು ಬರಲಿ, ಸುನೀತ ಮೇಡಂ  ಸಾಹಿತ್ಯಕ್ಷೇತ್ರ ಕಂಡ ಉತ್ತಮ ಕವಿಗಳನ್ನು ಮೀರಿ ಬೆಳೆಯುವ ಹೃದಯಕವಿಯಾಗಿ ಪುಟಿಯಲಿ ಎಂದು  ಅತ್ಯಂತ ಕಿರಿಯವಳಾಗಿ ಮನ ತುಂಬಿ ಹಾರೈಸುತ್ತೇನೆ 💐💐.




ಮಂಗಳವಾರ, ಮಾರ್ಚ್ 23, 2021

ತೋರ್ಪಡಿಕೆ

ತೋರ್ಪಡಿಕೆ ನಾಟಕದಲ್ಲಿ
ಪ್ರಾಮಾಣಿಕತೆಯ ಅಂಗಿಯನ್ನು
ಕಳಚಿ ತೊಟ್ಟಿಕೊಂಡಿತು
ನೋಡಲು ಎಷ್ಟು ಮಿರ ಮಿರ
ನವ ನವ, ಶುಭ್ರ
ಬೀಸೋ ಗಾಳಿ, ಹರಿವ ನೀರಿಗೂ
ಅದರ ಅಂಗಿಯಲ್ಲಿರುವ
ಕಪ್ಪು ಚುಕ್ಕೆಗಳು ಕಾಣಿಸುವುದಿಲ್ಲ
ದುರ್ಬಿನ್ನೇ ಬೇಕಾದೀತು
ಗಾಂಧಿತಾತನ ನ್ಯಾಯಬೆಲೆ
ಅಂಗಡಿಯ ಸಾಬೂನುಗಳಿಂದಲೂ
ಆ ಚುಕ್ಕೆಗಳು ಮಾಸುವುದಿಲ್ಲ 
ಇನ್ನಷ್ಟು ಇಸ್ತ್ರಿ ಮಾಡಿದಂತೆ 
ಹೊಳೆಯುತ್ತದೆ 
ಅದರ ವಿಜೃಂಭಣೆಯ ಮುಂದೆ 
ಅಸಹಾಯ ಪ್ರಾಮಾಣಿಕತೆ 
ಬಾಯಿಗೆ ಬೀಗ ಜಡಿದು
ಜನ ಮನಗಳನ್ನು ಹುಡುಕುತ್ತಾ 
ಅಲೆಯುತ್ತಿರುತ್ತದೆ 
ಎಲ್ಲಿಯವರೆಗೆ...? 
ತೋರ್ಪಡಿಕೆ ಅಂಗಿಯ 
ಕಳಚಲು ಅವ, ಅವಳು 
ಕಪ್ಪು ರಂಧ್ರಗಳಿಲ್ಲದ ಹೊಸ 
ಬಿಳಿ ಅಂಗಿ ತೊಡುವವರೆಗೆ 
ಆದರಿನ್ನೂ ಅವರು ಅಂಗಿ 
ಖರೀದಿಸುವ ಯೋಚನೆಯನ್ನು 
ಮಾಡಿಲ್ಲ. 


ಗುರುವಾರ, ಮಾರ್ಚ್ 4, 2021

ಅನೀಫಾ

ಖಾಲಿ ಕುರ್ಚಿಯಲ್ಲಿ
ಕುಳಿತ ನಮ್ಮ ಅನೀಫನಿಗೆ
ಮನಸ್ಸೆಲ್ಲಾ ಖಾಲಿ -ಖಾಲಿ
ಒಮ್ಮೊಮ್ಮೆ ಅದರಲ್ಲಿ
ಹೂ ಅರಳಿದಂತೆ,
ಗಾಳಿ ಬೀಸಿದಂತೆ ಭಾಸವಾಗಿ
ಕುರ್ಚಿ ಹಿಂದೆ ಮುಂದೆ
ವಾಲಿದೊಡನೆ ತಡ
ಬಡಯಿಸುತ್ತಾನೆ
ಪಕ್ಕದಲೆಲ್ಲೋ ಸದ್ದಾಗಿ
ಭ್ರಮೆಯಿಂದ ಎಚ್ಚರಿಸುತ್ತದೆ 
ಕುರ್ಚಿಯ ಕೈ ನೇವರಿಸುತ್ತಾನೆ 
ಕಾಲಲ್ಲಿ ಕಾಲಿಟ್ಟು ಚಡಪಡಿಸುತ್ತಾನೆ 
ಅದರೊಡನೆ ಸಂವಾದಕ್ಕಿಳಿಯುತ್ತಾನೆ 
ಹಾಗೂ ಮನಸ್ಸು ತುಂಬಲಿಲ್ಲ 
ಕೊನೆಗೆ ಕುರ್ಚಿಯೊಂದಿಗೆ 
ಕನಸಿಗೆ ಬೀಳುತ್ತಾನೆ 
ಅಲ್ಲೂ ಸಾಣೆ ಹಿಡಿಯುವ 
ಮಂಡಿಗೆ ತಿನ್ನುವ ಮರ್ಕಟ ಛಾಯೆ 
ತಕ್ಷಣ ಕುರ್ಚಿಗೆ ಮೆತ್ತಿದ 
ತುಕ್ಕೆಂಬ ರಜದ ನೆನಪಾಗಿ
ಕುರ್ಚಿಯಿಂದ ಎದ್ದು, ಎಣ್ಣೆ ಹಚ್ಚಿ 
ಪಾಲಿಶ್ಯು ಮಾಡ ತೊಡಗುತ್ತಾನೆ. 




ಶನಿವಾರ, ಫೆಬ್ರವರಿ 27, 2021

ಮೌನ ಮುರಿವೆಯಾ... [ ನನ್ನದೆ ರಚನೆಯ ಭಾವಗೀತೆ ]

ಮೌನ ಮುರಿವೆಯಾ... ಮುಕುಂದಾ
ನನ್ನ -ನಿನ್ನ ನಡುವಿನ
ತನು ಬೆರೆವೆಯಾ...ಮುಕುಂದಾ [2]

ನಿನ್ನಾ ಒಂದು ಕಿರುನಗೆ
ಸಾಕೆನಗೆ ಬಾಳಲಿ
ಅದು ಮಾಸದೆ ಹೊಸೆದಾಡುತಿರಲಿ
ನನ್ನ -ನಿನ್ನ ಭಾವ ರಾಗದಲಿ [ಮೌನ ಮುರಿವೆಯಾ ]

ನಿನ್ನ ಮಾತು ಕೇಳುತಿರೆ...
ಮನ ಬೀಗಿ ಬಾಗುವುದು
ಧನ್ಯವಾಗುತಾ, ಧನ್ಯವಾಗುತಾ[ಮೌನ ಮುರಿವೆಯಾ ]

ನಿನ್ನ ಒಂದು ಸ್ಪರುಷದಲಿ
ಸಿಗುತಿರೆ.. ನಿತ್ಯದಲಿ
ಅದು ನಾ ತಂದ
ಪುಣ್ಯಫಲದ ಹರುಷದಿ[ಮೌನ ಮುರಿವೆಯಾ



ಗುರುವಾರ, ಫೆಬ್ರವರಿ 25, 2021

'ದಿ ಗ್ರೇಟ್ ಇಂಡಿಯನ್ ಕಿಚನ್' ಮಲಯಾಳಂ ಮೂವಿ



ಮಾತನಾಡಲು ಭಾಷೆ ಬಾರದಿದ್ದರೂ, ಅಕ್ಷರ ಜ್ಞಾನ ಇದೆಯಲ್ಲ ಎಂಬ ಹೆಮ್ಮೆಯಿಂದ ನೋಡಿದ್ದೆ. ಹಿಂದೆ ನೋಡಿದ ಮಲಯಾಳಂ ಚಲನಚಿತ್ರಗಳಿಗಿಂತ ತುಸು ಹೆಚ್ಚಾಗಿ ಕಾಡಿದ ಚಲನಚಿತ್ರ ಕಾರಣ ಆ ಚಿತ್ರದಲ್ಲಿ ಕಂಪುಗಟ್ಟಿರುವ ನೈಜತನ. ಭಾರತೀಯ ಅಡುಗೆ ಮನೆಯ ಸ್ವಾರಸ್ಯಕತೆಯನ್ನು ತೀರಾ ಸರಳವಾಗಿ ಸೆರೆಹಿಡಿದಿದ್ದಾರೆ. ಬಹುಪಾಲು ಮಹಿಳೆಯರು ಅರಿವಿಲ್ಲದೆ ಅನುಭವಿಸುತ್ತಿರುವ ಕಥಾಹಂದರ. ನಾಯಕಿಯ ಪಾತ್ರಕ್ಕೆ ಜೀವ ತುಂಬಿರುವ ನಿಮಿಷ ಸಜಯನ್ ರವರ ನಟನೆ ಪ್ರಶಂಸನೀಯ. 



ಬುಧವಾರ, ಫೆಬ್ರವರಿ 24, 2021


ರಣ ಬಿಸಿಲಿನ ಬೇಸಿಗೆಯಲ್ಲಿ ಮರಿಗುಬ್ಬಿ ತನ್ನ ತಾಯಿಯೊಂದಿಗೆ ಮರಳುಗಾಡಿನಲ್ಲಿ ನಡೆದು ಹೋಗುತಿತ್ತು. ಮರಿಗುಬ್ಬಿ ತಾಯಿ ಪ್ರೀತಿ ಅನುಮಾನಿಸಿ ಪರೀಕ್ಷಿಸಲೆಂದು ಹೇಳಿತು, ಅಮ್ಮ... ನಾನು ಹಿಂದಿರುಗಿ ಬರುವವರೆಗೂ ನೀನೊಬ್ಬಳೇ ನಿಂತ ಈ ಜಾಗದಲ್ಲೇ ನನಗಾಗಿ ಕಾಯುತ್ತಿರಬೇಕೆಂದು.  ಹೆತ್ತವ್ವನಿಗೆ ಮಗುವಿನ ಮಾತಿನ ಮರ್ಮ ಅರ್ಥವಾಗದಿರುವುದೇ..? ತಾಯಿ ಗುಬ್ಬಿ ಒಪ್ಪಿಗೆ ನೀಡಿದ ಮೇಲೆ ಮರಿಗುಬ್ಬಿ ಅಲ್ಲಿಂದ ಹೊರಟು ಹೋಯಿತು. ಹಲವು ತಾಸು... ದಿನ, ರಾತ್ರಿ, ಹೀಗೆ ವಾರಗಳೇ ಕಳೆದವು.  ಒಂದು ದಿನ ಮರಿಗುಬ್ಬಿಗೆ ತನ್ನ ತಾಯಿಯ ನೆನಪಾಗಿ ಮನೆಯನ್ನು ಸೇರಿತು. ಆದರೆ ಮನೆಯಲ್ಲಿ  ತಾಯಿ ಇಲ್ಲದ್ದು ಕಂಡು ಆಶ್ಚರ್ಯ. ಅಕ್ಕ ಪಕ್ಕದಲ್ಲೆಲ್ಲಾ ವಿಚಾರಿಸಿ ಸೋತ ಮರಿಗುಬ್ಬಿಗೆ ನೆನಪಾಯಿತು, ತಾನು ತಾಯಿಗೆ ಹೇಳಿದ ಮಾತು. ತಕ್ಷಣ ಪುರ್ರೆಂದು ಮರಳುಗಾಡಿನ ಕಡೆ ಹಾರಿತು. ಮರಳುಗಾಡಿನಲ್ಲಿ ಆ ದಿನ  ಹೇಳಿದ ಜಾಗದಲ್ಲೇ ಅಮ್ಮನ್ನನ್ನು ಕಂಡು ಮರಿಗುಬ್ಬಿಯ ಆನಂದ ಹೇಳತೀರದಾಯಿತು. ಅಮ್ಮನ ಹತ್ತಿರ  ಹೋಗಿ ನೋಡಿತು, ತಾನು ಹೇಳಿದ ಜಾಗದಿಂದ ಸ್ವಲ್ಪವೂ ಅಲುಗದೆ ನಿಂತು, ಕೃಶವಾಗಿ ಮರಳಲ್ಲಿ ಹೂತು ಹೋಗಿ ಮುಖ ಮಾತ್ರ ಕಾಣುತಿತ್ತು.ಮರಿಗುಬ್ಬಿ ಅಮ್ಮಾ... ಎಂದೊಡನೆ ತನ್ನ ಮರಿಗಾಗಿ ಜೀವದ ತುದಿ ಎಳೆ ಹಿಡಿದು ಕಾಯುತ್ತಿದ್ದ ತಾಯಿಗುಬ್ಬಿ ಕೊನೆಯದಾಗಿ ಉಸುರಿತು, ಕಡು ಬಿಸಿಲು, ಮಳೆಗಳ ಕಾಯುವಿಕೆಯಲ್ಲಿ ನನ್ನಲ್ಲಿ ನೀನು ಗೆದ್ದೆ, ಆದರೆ ಮನಸ್ಸೊಳಗಿನ ಕಾಯುವಿಕೆಯಲ್ಲಿ  ಕ್ಷಣ ಕ್ಷಣವೂ ಮರಳೊಳಗೆ ನೀ ಹೂತು ಹೋದೆ. 



ಕ್ಷಮಿಸು

ಕ್ಷಮಿಸು ಎಂಬುದು ಆಗಾಗ್ಗೆ
ಮರುಕಳಿಸುವ ಮಾರ್ದನಿ
ನಮ್ಮ ಮನುಕುಲದೊಳಗೆ
ಹಿಂಜರಿಕೆ, ಮುಗ್ಗರಿಕೆಗಳಿಲ್ಲ
ಕ್ಷಮಿಸುವಿಕೆಯ ಅರಿವು
ಪರಿವಿನ ಪಟ್ಟಿಯಲ್ಲಿ
ಮುಲಾಜು ರಿಯಾಯಿತಿಗಳಿಲ್ಲ
ಲಯ, ತಾಳಗಳಿಲ್ಲ
ಆದರೆ ವಜ್ರದ ಹೊಳಪಿದೆ
ಪಾದರಸದ ಹರಿವಿದೆ
ಒಮೊಮ್ಮೆ ಮುಗ್ಗರಿಸಿ ಪಲ್ಟಿ
ಹೊಡೆದರೂ ಇನ್ನೊಮ್ಮೆ
ಸೆಟೆದು ನಿಲ್ಲುತ್ತದೆ
ಸಾವೇ ಕಣ್ಣೆದುರಿದ್ದರೂ
ಸರಳ ಸುಲಲಿತವಾಗಿ
ಮಾಡುವುದ ಮಾಡಿ
ನನ್ನ ನೀ ಕ್ಷಮಿಸು. 
ನಾ ಕ್ಷಮಿಸುವಿಕೆಯನ್ನೇ 
ಪ್ರಶ್ನಿಸುವೆ ತರವೇ ಇದುವೆ ನಿನಗೆ...? 
ಕ್ಷಮಿಸು..... 


ಅಪ್ಪ

ಅಂದು ಅಪ್ಪ ತನ್ನ ನೋವಿನ ಬೀಜವನ್ನು
ನನ್ನೊಳಗಿನ ನಾನಾಗಿ ಬಿತ್ತಿದ
ಅದು ನನ್ನೊಳಗಿನ ನಾವಾಯಿತು
ಹಗಲು ರಾತ್ರಿ ತನ್ನ ಬೆವರು
ಘಾಟಿನ ಸಿಡಿ ಮಿಡಿಯನ್ನು ಮೆತ್ತಿದ
ಮೊಳೆತ ಗಿಡಕೆ ತನ್ನಂತೆ ಪ್ರಾಮಾಣಿಕತೆಯ 
ತಾಜಾತನದ ನೀರುಣಿಸಿದ 
ಅಮ್ಮ ಮುಲಾಮು ಇಲ್ಲದ ತನ್ನ 
ನೋವುಗಳಿಂದ ಪೋಷಣೆ ಮಾಡಿ 
ನಗೆಯೆಂಬ ಹರಿದ ಚಾಪೆ ಹೊದಿಸಿದಳು 
ಅವರಿಬ್ಬರ ಕತ್ತಲು ಬೆಳಕಿನ ಈಜಾಟದಲ್ಲಿ 
ಸಸಿ ಬಾಡದೆ ಚಿಗುರೊಡೆಯಿತು 
ಮಳೆ ಬಿಸಿಲಿನ ಒಲವ ತಾಪಕೆ 
ಇಬ್ಬರೂ ತಮ್ಮ ದೇಹದ ಚರ್ಮ
ಬಿಸಿಲುಡಿಗೆ ಮಾಡಿ 
ಗಿಡಕೆ ಹೊರಿಸಿದರು 
ಗಿಡ ಕವಲೊಡೆಯುವುದರಲ್ಲಿ 
ಎಡವಿದರು ಮೂಲತ್ವದಲ್ಲಿ 
ಅರಳಿ ಮರವಾಯಿತು 
ಆದರೀಗ ಬುಡಕೆ ತಗುಲಿದೆ 
ಮಾರ್ಮಿಕ ಹುಳುವಿನ ಕೊರೆತ 
ಉಳಿವು ಅಳಿವುಗಳಲ್ಲಿ 
ಪ್ರಶ್ನೆಯಾಗಿ ಕಂಡಿಹುದು 
ನನ್ನೊಳಗಿನ ನಾನು -ನಾವು. 






ಚೀಲ

ಬಲೆ ಬಲೆಯ ಕತ್ತಲೆಯ ಚೀಲ 
ನಾ ಅದರೊಳಗೆ  ಬೆಳಕನ್ನು 
ಹಿಡಿದು ಆದಷ್ಟು ತುಂಬಿದ್ದೆ 
ಬೆಳಕು ಮಿನುಗುವುದು ಬಲೆಯಲ್ಲಿ 
ಆಗಾಗ ಕಾಣುತಿತ್ತು
ಮೂಲೆಯಲ್ಲೆಲ್ಲೋ ದುಗುಡ 
ಬೆಳಕು ಕತ್ತಲ್ಲನ್ನು ನುಂಗುವುದೋ 
ಕತ್ತಲೆ ಬೆಳಕಿಗೆ ಶರಣಾಗುವುದೋ
ಚೀಲದ ದಾರ ಅಲುಗಾಡತೊಡಗಿತು 
ಆದಷ್ಟೂ ಬಿಗಿದು ಸರಿಮಾಡಿ 
ಕುಳಿತೆ ವಿರಮಿಸಲು 
ಕ್ಷಣಮಾತ್ರದಲ್ಲಿ ಹಿಂದೆ 
ಧಗ್ ಎಂಬ ಸದ್ದು 
ನಿಧಾನವಾಗಿ ನೋಡಿದೆ ತಿರುಗಿ 
ಚೀಲ ಛಿದ್ರ ಛಿದ್ರ !
ಬೆಳಕೆಂಬ ಸುಳಿವಿಲ್ಲ 
ಕತ್ತಲು ಸುರಿದು ಹರಿದಾಡುತ್ತಿದೆ 
ಅದ ನೋಡಿ ನನಗೆ ದಿಗಿಲಿನ ಮೂರ್ಛೆ 
ಕತ್ತಲೊಳಗೆ ನನ್ನದೇ ಪ್ರತಿಬಿಂಬ 
ಗಹ ಗಹಿಸಿ ನಗುತ್ತಿದ್ದ ಕಂಡು. 




ಶುಕ್ರವಾರ, ಫೆಬ್ರವರಿ 5, 2021

ಮುಪ್ಪು


ಶತ ಶತಮಾನಗಳಿಂದಲೂ
ಬಾಳಿ ಬಂದಿದ್ದೆ
ತಲೆಮಾರಿಗಿಲ್ಲ ಯಾರೂ ಇಂದು
ಕಾಲೊಂದು ಮುರಿಯಿತೆಂದು
ಹೊಳಪಿನ ಬಣ್ಣ ಮಾಸಿತೆಂದು
ಹಳೆಕೊಠಡಿಯ ವಾಸ್ತವ್ಯಕ್ಕೆ
ತಂದು ಬಿಸುಟಿದರು 
ಗತಕಾಲವೂ ಇಂದಿಲ್ಲಿ ನೆನಪಾಗಿದೆ 
ಎಲ್ಲರ ಸಮ್ಮುಖ ಅಂದು ನಾ 
ಅರೆಬರೆ ತಿಂದು ಆಲಿಸಿದ 
ನ್ಯಾಯದ ತುಣುಕುಗಳು 
ಬಹಿಷ್ಕರಿಸಿದ ವ್ಯಾಜ್ಯಗಳು, 
ದಾರಿ ಅರಸಿ ಸೋಲನ್ನಪ್ಪಿದ 
ಭೂ ಮಾತೆಯರು ನನ್ನಲ್ಲಿ ವಿರಳ 
ತಾರುಣ್ಯದಲ್ಲಿ ಉದಾಸೀನತೆ 
ಕುಡಿಯುವ ನೀರಾಗಿತ್ತು ನನಗೆ 
ಹಾಗೆ ಮುದುಕ -ಮುದುಕಿಯರ 
ಕಣ್ಣೀರೂ  ಸಹ 
ಅದೆಷ್ಟೋ  ಬಡವರು ನನ್ನ ಕಾಲುಗಳಿಗೆ
ಪಾಲಿಸು ಮಾಡಿದ್ದರು 
ಹೆಪ್ಪುಗಟ್ಟಿದ್ದ ರಕ್ತದ ಕಲೆಗಳನ್ನು 
ಕೆರೆದು ತೆಗೆದಿದ್ದರು 
ರಕ್ತ ಬೀಜಾಸುರರು ಮೆಟ್ಟಿಲೇರಿ 
ಅಟ್ಟಹಾಸಗೈದಿದ್ದರು ನನ್ನಲ್ಲಿ 
ಲೆಕ್ಕವಿಲ್ಲದಷ್ಟು ನೋಟಿನ ನೊಣಗಳು
ಅಂಟಿ ಗುಯ್ ಗುಟ್ಟಿದ್ದವು 
ಬ್ಯಾಕ್ಟೀರಿಯಾ, ವೈರಸ್ಸುಗಳು ಕೊರೆದು 
ಕರಕಲು ಮಾಡಿ ಅದೃಶ್ಯವಾಗಿದ್ದರೂ 
ಜಾತಿ, ವಿಜಾತಿಯ ಬೇರುಗಳು 
ಹಬ್ಬಿ ಬಿಟ್ಟಿದ್ದವು 
ಎಲ್ಲವೂ ಜೊಂಪುಗಟ್ಟಿದ್ದವು ಅಂದು ನನ್ನಲ್ಲಿ. 
ಇಂದು ನಾ ಮುರಿದಿರುವೆ 
ಅದೇ ಜನ ನನಗೂ ತೋರಿರುವರು 
ಮುಪ್ಪನು ಮರೆಯುವ  ತಾರುಣ್ಯವ 
ನನ್ನಂತೆ ಶತ ಶತಮಾನ ಅರಸಿ 
ಮರುಗುತ್ತಿರುವ ಈ ಹಾಳು ಉಗ್ರಾಣದಲ್ಲಿ. 

 

ಬುಧವಾರ, ಜನವರಿ 27, 2021

ಮೆರಗು ನೀಡುವ ಹಬ್ಬ ಆಚರಣೆ

        ಅದೊಂದು ರಾಷ್ಟ್ರೀಯ ಹಬ್ಬ ಆಚರಣೆಯ ದಿನದಲ್ಲಿ ಶಾಲೆಗೆ ಮೆರಗು ತರಬಯಸಲು ಸ್ಪರ್ಧೆ, ಆಟ -ಊಟೋಪಚಾರಗಳ ಆಮಿಷ ಒಡ್ಡಿ ಎಲ್ಲರನ್ನು ಸೇರಿಸಿದ ಕಾರ್ಯಕ್ರಮ. ಅಂದು ಶಾಲೆಯಲ್ಲಿ ಹಿಂದೆಂದೂ ಕಾಣದ ಹಬ್ಬದ ವಾತಾವರಣ. 

ಶಾಲೆಯ ಮುಂದೆ ದಿನಾ ನಡೆದು ಹೋದರೂ,ಶಾಲೆಯ ಕಡೆ ತಿರುಗಿಯೂ ನೋಡದ, ಅಕಸ್ಮಾತಾಗಿ ನೋಡಿದರು ಶಾಲೆಯ ಕಟ್ಟಡ, ಅಲ್ಲಿಯ ಶಿಕ್ಷಕರು ನಮಗೆ ಗೊತ್ತೇ ಇಲ್ಲವೆಂಬಂತೆ ಹೋಗುವ ಜನಗಳು, ಸರ್ಕಾರಿ ಶಾಲೆ ಎಂದರೆ ಏನೋ ಉದಾಸೀನ ಮನೋಭಾವನೆ ಇರುವ ಗಣ್ಯರು, ಶಾಲೆಯನ್ನು ಸಾರ್ವಜನಿಕ ಸಭಾಂಗಣ ಮತ್ತು ಸಾರ್ವಜನಿಕ ಆಟದ ಮೈದಾನ ಮಾಡಿಕೊಳ್ಳಲು ಬಯಸುತ್ತಿರುವ ಮನಸ್ಸುಳ್ಳವರೆಲ್ಲಾ,  ಆ  ದಿನ ಅಲ್ಲಿ ನೆರೆದು ನಮ್ಮದೇ ಶಾಲೆ ಎಂಬಂತೆ ಬೀಗುತ್ತಿದ್ದರು.ಅದರಲ್ಲಿ ಒಂದೋ - ಎರಡೋ ಮನಸ್ಸುಗಳು  ಮಾತ್ರ ನಾನು ಓದಿದ ಶಾಲೆಯ ಅಭಿವೃದ್ಧಿಯ ಶ್ರೇಯಸ್ಸಿಗಾಗಿ ಶ್ರಮಿಸುತ್ತಿದ್ದವು.

ಅಲ್ಲಿಯ ಶಿಕ್ಷಕರುಗಳ ತೋರ್ಪಡಿಕೆಯ ಓಡಾಟ ಅಷ್ಟಿಷ್ಟಲ್ಲ.ಜನರಂತು ಶಿಕ್ಷಕರುಗಳ ಓಡಾಟ ನೋಡಿ ತಾವೂ ಶಿಕ್ಷಕರಾಗಿದ್ದರು. ಅದರಲ್ಲಿ ಕೆಲವು ಶಿಕ್ಷಕರು ತರಾತುರಿಯಲ್ಲಿ ನೀಡಿದ ಕೆಲಸವನ್ನು ಅಸಮಾಧಾನದಿಂದಲೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
 
ಕಾರ್ಯಕ್ರಮವು ಹೇಗೋ ಏನೋ ಅದ್ದೂರಿಯಾಗಿ ನಡೆಯಿತು, ಎಲ್ಲರು ಆಡಿ, ಉಂಡು ತಿಂದು, ಕುಣಿದರು, ಸಮಾಪ್ತಿಯು ಹೊಸ ವರ್ಷ ಆಚರಣೆಯಂತೆ ರಾತ್ರಿಗಳಲ್ಲಿ ಜರುಗಿತ್ತು. 

    ಮಾರನೇ ದಿನ ನಾ ಎಂದಿನಂತೆ ಶಾಲೆಯ ಮುಂದೆ ಹಾದು ಹೋಗುವಾಗ ಗಮನಿಸಿದೆ... ಮೊದಲಿನಂತೆ ಕಂಡ ಶಾಲೆ, ಆದರೆ ಗಿಡಗಳನ್ನು ತೆಗೆದು ಮತ್ತೆ ನೆಟ್ಟ ಹೊಸ ಗಿಡಗಳು, ಕಾರ್ಯಕ್ರಮ ನಡೆದ ಸಂಕೇತವಾಗಿ ಅವಶೇಷವಾಗಿ ಉಳಿದಿದ್ದ ಚಪ್ಪರ, ನನ್ನನ್ನು ಬಳಸಿಕೊಂಡು ತಿಂದು ಕುಡಿದರೆಂದು ಅಳುತ್ತ ಹರಕು -ಮುರುಕಾಗಿದ್ದ ಪ್ಲಾಸ್ಟಿಕ್ ಲೋಟ-ತಟ್ಟೆಗಳು, ಕಸ, ಮೂಲೆಗಳಲ್ಲಿ ಅವಿತು ಕುಳಿತ್ತಿದ್ದ ಬಾಟಲಿಗಳು, ನಾಯಿಗಳು ಮೂಸಿ ನೋಡಿ ಖುಷಿ ಪಡುತ್ತಿದ್ದ ಮೂಳೆಗಳು ಹಾಗೂ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದ್ದ ಶಾಲೆಯ ಮೂಕರಾಗದ ತರಂಗದಲೆಗಳು. 

ಎಲ್ಲಕ್ಕಿಂತ ನನ್ನನ್ನು ಹೆಚ್ಚಾಗಿ ಕಾಡಿದ ವಿಷಯವೆಂದರೆ ಅಲ್ಲಿ ಕ್ರಾಂತಿಕಾರಿಯಾಗಿ ಭುಗಿಲೆದ್ದು ಕೆಲಸ ಮಾಡಿದ ಜಾತಿಯ ಬೇರು, ರಾಜಕೀಯ ವೈಷಮ್ಯ, ನಾಟಕೀಯ ಪ್ರವೃತ್ತಿ, ಪ್ರಚಾರದ ಲಾಬಿಗಳು. ಎಲ್ಲಿಯೂ ಶಾಲೆಯ ಮೃದು ಮನಸ್ಸುಗಳನ್ನು ಪಾರಿಜಾತಗಳಾಗಿ ಅರಳಿಸುವ ಭರವಸೆ ಕಂಡು ಬರಲಿಲ್ಲ.

ಹೂ, ಹಣ್ಣು, ಹಾರ-ತುರಾಯಿ, ಬಹುಮಾನ, ಉಪಹಾರಗಳಿಗೆಂದು ದಾನ ನೀಡಿ ಪ್ರಚಾರ ಪಡೆಯುವ ಉದಾರ ಮನಸ್ಸುಗಳು, ಶೈಕ್ಷಣಿಕ ಉಪಯುಕ್ತತೆ ವಿಷಯ ಬಂದರೆ ಉದಾರತೆ ಬತ್ತಿದ ಜಲವಾಗುತ್ತದೆ. ಹಾರ-ತುರಾಯಿ, ಬಹುಮಾನ, ಉಪಹಾರ ಇತ್ಯಾದಿಗಳಿಗೆ ಸಂಗ್ರಹಗೊಂಡಿದ್ದ ಅಷ್ಟೂ ಹಣವು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಅಲಂಕಾರಗೊಂಡಿದ್ದರೆ ಉದಾರತೆ ಸಾರ್ಥಕತೆಯ ಉತ್ತುಂಗದಲ್ಲಿ ವಿಜೃಂಭಿಸುತಿತ್ತು.


ಶನಿವಾರ, ಜನವರಿ 23, 2021

ಬುಧವಾರ, ಜನವರಿ 20, 2021

ಕವಿತೆಗಳು

ಇತ್ತೀಚೆಗೇಕೋ ಕವಿತೆಗಳು
ನನ್ನೊಂದಿಗೆ ಮುನಿಸು -ಮುಷ್ಕರಗಳ
ತಗಾದೆ ತೋರಿ, ಬೆವೆತು ನೀರಾಡಿ
ಮಾಸು ಮಾಸಾಗುತ್ತಿವೆ
ಕವಿತೆಗಳಲ್ಲಿ ಗುಳ್ಳೆಗಳ್ಳೆದ್ದು
ಚರ್ಮ ಸುಲಿದೇಳುತ್ತಿದ್ದರು
ಅಕ್ಷರಗಳು ಪದಗಳಾಗುತ್ತಿಲ್ಲ
ಪದಗಳು ಸಾಲುಗಳಾಗಿ ತೋರುತ್ತಿಲ್ಲ
ಕಲ್ಪನೆಗಳು ಕೂಸಾಗುತ್ತಿಲ್ಲ
ಗತಕಾಲ ಅರಸುತ್ತಿರುವ ಭಾಸ
ಬಾ ಎಂದರೂ ಬರಲಾರದೆ
ಸೆಡ್ಡು ಹೊಡೆದು ಹೆಪ್ಪುಗಟ್ಟಿ ನಿಂತು
ಸುಟ್ಟು ಬೇಯುತ್ತಿರುವ ಭಾವನೆಗಳೊಂದಿಗೆ 
ಕರಕಲಾದರೂ,  ರಾಜಿ ಸಂಧಾನಗಳ 
ತಗಾದೆಗಳು  ಏರ್ಪಡದಿದ್ದರು 
ಶರಣಾಗತಿಯ ಶಯನ ಬಯಸಿ 
ಖಿನ್ನತೆಯ ಲೋಕದಲ್ಲಿ ನಿಂತಾಗ ನಾ 
ಹರಿಯುತ್ತವೆ ಹನಿ ಹನಿಯಾಗಿ 
ಬಿಳಿಯ ಹಾಳೆಯ ಮೇಲೆ. 



ಬುಧವಾರ, ಜನವರಿ 13, 2021

ಸೂರ್ಯ

ಸೌರಮಂಡಲ ಶೋಭಿತ ನಕ್ಷತ್ರ ನಮ್ಮ ವೈವಸ್ವತ. ತಾನು ಉರಿದು ಜಗಕ್ಕೆಲ್ಲ ಬೆಳಕು ಕೊಡುವುದು ಅರ್ಕನ ಸ್ವಭಾವತಃ ಕರ್ತವ್ಯ ಒಪ್ಪುವ, ಆದರೆ ಆಯಾಸಗೊಂಡಾಗ, ಭೂಮಿ ಆತಂಕದ  ಭೂಕಂಪ, ಜ್ವಾಲಾಮುಖಿಯ  ಸೃಷ್ಟಿಯಲ್ಲಿ ಕರಗುತ್ತಿದೆ ಎಂಬುದನ್ನು ಅರಿತು ಬೆಳಗಿದರೆ ಸೌರಮಂಡಲದ ಒಡೆಯ ಮತ್ತಷ್ಟು ಶೋಭಿತನಾಗುತ್ತಾನೆ. 


ಮಂಗಳವಾರ, ಜನವರಿ 12, 2021

ಕೊಡಗಿನ ಗವಿಸಿದ್ಧೇಶ್ವರ ಬೆಟ್ಟ

ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಸಿಕೊಳ್ಳುವ ಕರ್ನಾಟಕದ ಒಂದು ಪುಟ್ಟ ಜಿಲ್ಲೆ ಕೊಡಗು. ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ ಆಗಳಿ. ಈ ಗ್ರಾಮವು ನಿಸರ್ಗ ರಮಣೀಯತೆಯಿಂದ ಕಂಗೊಳಿಸುತ್ತಿದೆ .ಈ ನಿಸರ್ಗ ಸೌಂದರ್ಯದ ಒಡಲಲ್ಲಿರುವುದೇ ಗವಿಸಿದ್ಧೇಶ್ವರ ಬೆಟ್ಟ. ಈ ಬೆಟ್ಟಕ್ಕೆ ಕಟ್ಟೆಪುರ ಮೀಸಲು ಅರಣ್ಯದ ನಡುವೆ ಹಾದು ಹೋಗಬೇಕು.

ಈ ಅರಣ್ಯವು ತುಂಬಾ ದಟ್ಟತೆಯನ್ನು,ಇಂದು ಉಳಿಸಿ ಕೊಂಡಿಲ್ಲವಾದರೂ ರಸ್ತೆಯಲ್ಲಿ ಸಾಗುವಾಗ ತಂಪಾದ ವಾತಾವರಣ ಮನಕ್ಕೆ ಹಿತನೀಡುತ್ತದೆ.   ಗವಿಸಿದ್ಧೇಶ್ವರ ಬೆಟ್ಟಕ್ಕೆ ಸಾಗುವ ಹಾದಿಯಲ್ಲಿ ಕಾಡುಬಸವ ಹೆಸರಿನಲ್ಲಿ ಕರಿಸಿಕೊಳ್ಳುವ ಚಿಕ್ಕದಾದ ದೇವರಗುಡಿ ಒಂದು ಕಾಣಸಿಗುತ್ತದೆ. ಈ ಗುಡಿಯು ತನ್ನದೆಯಾದ ವಿಶಿಷ್ಟ್ಯವನ್ನು ಹೊಂದಿದ್ದು,

ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಪ್ರಕೃತಿಯ ಮಧ್ಯದಲ್ಲಿ ಮಲಗಿ ವಿಶ್ರಮಿಸಿರುವಂತೆ ಭಾಸವಾಗುವ ಮನೋಜ್ಞವಾದ ಕೆರೆಯೊಂದು ಕಾಣಸಿಗುತ್ತದೆ.

ದಂಡಿನ ಬಾವಿ ದಳವಾಯಿ ಕೆರೆ. ಹಿಂದೆ ಕೊಡಗಿನ ರಾಜನಾಗಿದ್ದ ವೀರರಾಜ ಮತ್ತು ಅವನ ಸೇನಾಧಿಕಾರಿಗಳು (ರಾಜನ ದಂಡು -ಸೇನೆ) ಸಿದ್ಧೇಶ್ವರ ದೇವರ ಆಣತಿಯಂತೆ ಒಂದು ರಾತ್ರಿಯಲ್ಲಿ ಕೆರೆಯನ್ನು ನಿರ್ಮಾಣ ಮಾಡಿದ್ದರಿಂದ, ಈ ಕೆರೆಗೆ ದಂಡಿನ ಬಾವಿ ದಳವಾಯಿ ಕೆರೆ ಎಂದು ಹೆಸರಾಗಿದೆ ಎಂದು ಇಲ್ಲಿನ ಹಿರಿಯ ಗ್ರಾಮಸ್ಥರು ಹೇಳುತ್ತಾರೆ. ಈ ಕೆರೆಯ ಸೌಂದರ್ಯವನ್ನು ಮನ ತುಂಬಿಕೊಂಡು ಮುಂದೆ ಸಾಗಿದರೆ, ರಸ್ತೆಯ ಬಲಭಾಗಕ್ಕೆ ಕಾಣುವ ಕವಲು ದಾರಿಯಲ್ಲಿ ಸ್ವಲ್ಪ ದೂರ ಪ್ರಯಾಣಿಸಿದರೆ, ನಮ್ಮನ್ನು ಎದುರ್ಗೊಳ್ಳುವುದೇ ಮನೋಹರವಾದ ಬಂಡೆಗಳಿಂದ ಕೂಡಿದ ಗವಿಸಿದ್ಧೇಶ್ವರ ಬೆಟ್ಟ .

ಅಲ್ಲಿನ ಸುತ್ತಲಿನ ಪ್ರದೇಶವೂ ದೇವರ ಕಾಡು ಎಂದು ಕರೆಸಿಕೊಳ್ಳುತ್ತದೆ. ಹೆಬ್ಬಂಡೆಗಳ ನಡುವಿರುವ ಈ ಬೆಟ್ಟವನ್ನು, ಅಲ್ಲಿಯ ಹಕ್ಕಿ -ಪಕ್ಷಿಗಳ ಕಲರವ, ಚಿಲಿಪಿಲಿ ನಾದವನ್ನು ಆಲಿಸುತ್ತಾ, ಪ್ರಕೃತಿ ಸೌಂದರ್ಯ ವನ್ನು ಆರಾಧಿಸುತ್ತಾ, ಬೆಟ್ಟವನ್ನು ಕಡಿದು ನಿರ್ಮಿಸಿರುವ ಮೆಟ್ಟಿಲುಗಳನ್ನು ಏರುತ್ತಾ ಹೋದರೆ ಕಾಣಸಿಗುವುದೇ ಸಿದ್ದೇಶ್ವರ ಸ್ವಾಮಿ ದೇವಾಲಯ. ದೇವಸ್ಥಾನದ ಗೋಡೆಗಳು ಪೂರ್ಣಪ್ರಮಾಣದಲ್ಲಿ ನೈಸರ್ಗಿಕವಾಗಿ ರಚನೆಯಾಗಿರುವ ಬಂಡೆಗಳಿಂದ ನಿರ್ಮಿಸಲ್ಪಟ್ಟಿವೆ.

ದೇವಾಲಯದ ಒಳಗೆ ಪ್ರವೇಶಿಸಿದಾಗ ಗವಿಸಿದ್ಧೇಶ್ವರ ಸ್ವಾಮಿ ಮಲಗಿರುವ ಭಂಗಿಯಲ್ಲಿ ಕಾಣಸಿಗುತ್ತದೆ. ಇಲ್ಲಿ ನಾಗದೇವತೆಯು ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ.



      ದೇವಾಲಯದ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿದ್ದು,ಜನಗಳ ಸದ್ದು-ಗದ್ದಲವಿಲ್ಲದೆ ನಿಶಬ್ದವಾಗಿದ್ದು,  ಪ್ರಕೃತಿಯ ಸೌಂದರ್ಯವು ಮನಸ್ಸಿಗೆ ಮುದನೀಡುತ್ತದೆ. ದೇವಾಲಯದ ಹಿಂಬದಿಯಲ್ಲಿ ನಿಂತು ನೋಡಿದರೆ ಪ್ರಕೃತಿ ದೇವತೆಯೇ ಎದ್ದು ಬಂದಂತೆ ಭಾಸವಾಗುವ ಆ ಕ್ಷಣ ಮೈನವಿರೇಳಿಸುತ್ತದೆ. 

       ಇಲ್ಲಿ ಕಂಡುಬರುವ ಪುರಾತನ ಹೆಬ್ಬಂಡೆಗಳು ಇಲ್ಲಿಯ ಇನ್ನೊಂದು ವಿಶೇಷತೆಗಳಾಗಿವೆ. ಗ್ರಾಮಸ್ಥರ ಅಭಿಪ್ರಾಯದಲ್ಲಿ ಈ ದೇವಸ್ಥಾನದ ಐತಿಹ್ಯವನ್ನು ಹೇಳುವುದಾದರೆ  ಸುಮಾರು 500 ರಿಂದ 600 ವರ್ಷಗಳ ಹಿಂದೆ ಐದು ಜನ ಶರಣರು ಭಿಕ್ಷಾಟನೆ ಮಾಡಿಕೊಂಡು ಈ ಗ್ರಾಮದಲ್ಲಿ ನೆಲೆಸಿದ್ದು, ಈ ಬೆಟ್ಟವು ಹಿಂದೆ ದಟ್ಟಾರಣ್ಯವಾಗಿದ್ದು, ಧ್ಯಾನಕ್ಕೆ ಪ್ರಶಾಂತವಾಗಿದ್ದರಿಂದ ಶರಣರು ಕಾಲಕ್ರಮೇಣ  ಗ್ರಾಮಗಳನ್ನು ತೊರೆದು ಈ ಪ್ರದೇಶಕ್ಕೆ ಬಂದು ಗುಹೆಯಲ್ಲಿ   ನೆಲೆ ಕಂಡುಕೊಂಡರು. 

  ಶರಣರು ಲೋಕ ಕಲ್ಯಾಣಾರ್ಥವಾಗಿ ಈ ಪ್ರದೇಶದಲ್ಲಿ ಶಿವನು ನೆಲೆನಿಲ್ಲಬೇಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿದಾಗ,  ಅವರ ತಪಸ್ಸಿಗೆ ಮೆಚ್ಚಿ ಸಿದ್ದೇಶ್ವರನ ರೂಪದಲ್ಲಿ ಗವಿ (ಗುಹೆ )ಯಲ್ಲಿ ಐಕ್ಯವಾಗುತ್ತಾನೆ. ಶರಣರು ಸಹ ಸಿದ್ದೇಶ್ವರನ ಸನಿಹದಲ್ಲಿ ಕಲ್ಲುಗಳ ರೂಪದಲ್ಲಿ ಐಕ್ಯವಾಗಿರುವುದನ್ನು ಕಾಣಬಹುದು. ಅಂದಿನಿಂದ  ಇದು ಗವಿಸಿದ್ಧೇಶ್ವರ ಬೆಟ್ಟವೆಂದು ಕರೆಯಲ್ಪಡುತ್ತದೆ. 

ಸಿದ್ಧೇಶ್ವರ ಸ್ವಾಮಿಯ ಮೂರ್ತಿ ಮತ್ತು ಬೆಟ್ಟ ಪ್ರತಿವರ್ಷ ರಾಗಿಕಾಳಿನಷ್ಟು ಬೆಳೆಯಲ್ಪಡುತ್ತಿದೆ ಎಂಬುದು ಗ್ರಾಮಸ್ಥರ ಹೇಳಿಕೆ ಮತ್ತು ನಂಬಿಕೆ. 

       ಪ್ರತಿವರ್ಷ ಶಿವರಾತ್ರಿಯ ಮಾರನೇ ದಿನ  ಎಲ್ಲಾ ಜನಾಂಗದವರು ಸೇರಿ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

           ಜನರು,  ಪಟ್ಟಣಗಳ ಕಿರಿಕಿರಿ ಗದ್ದಲ ಶಬ್ದಗಳಿಂದ ಯಾವಾಗಲೂ ದೂರವಿರುವ ಈ ಬೆಟ್ಟ ನಿಸರ್ಗ ಸೌಂದರ್ಯ ಮತ್ತು ನಿಶ್ಯಬ್ದತೆಯಿಂದ  ಮನಸ್ಸಿನ ಎಲ್ಲಾ ಜಂಜಾಟಗಳನ್ನು ಕ್ಷಣಕಾಲ ದೂರವಿಡಲು ಮತ್ತು ಪೋಟೋಗ್ರಫಿಯನ್ನು  ಅರಸಿ ಬರುವವರಿಗೆ ಒಂದು ಆಹ್ವಾನದಂತೆ ವ್ಯಕ್ತವಾಗುತ್ತದೆ.ಅಪರೂಪಕ್ಕೊಮ್ಮೆ ಎಂಬಂತೆ ಗಜರಾಜರ ದಂಡು ದಾಳಿಮಾಡುತ್ತದೆ ಎಂಬುದನ್ನು ಬಿಟ್ಟರೆ ಇಲ್ಲಿಗೆ ತೆರಳಲು ಬೇರೆ ಇನ್ನಾವುದೇ ಭಯವಿಲ್ಲ.
  
        


ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...