ಕಾಸರಕೂಸು
ಬುಧವಾರ, ಫೆಬ್ರವರಿ 24, 2021
ರಣ ಬಿಸಿಲಿನ ಬೇಸಿಗೆಯಲ್ಲಿ ಮರಿಗುಬ್ಬಿ ತನ್ನ ತಾಯಿಯೊಂದಿಗೆ ಮರಳುಗಾಡಿನಲ್ಲಿ ನಡೆದು ಹೋಗುತಿತ್ತು. ಮರಿಗುಬ್ಬಿ ತಾಯಿ ಪ್ರೀತಿ ಅನುಮಾನಿಸಿ ಪರೀಕ್ಷಿಸಲೆಂದು ಹೇಳಿತು, ಅಮ್ಮ... ನಾನು ಹಿಂದಿರುಗಿ ಬರುವವರೆಗೂ ನೀನೊಬ್ಬಳೇ ನಿಂತ ಈ ಜಾಗದಲ್ಲೇ ನನಗಾಗಿ ಕಾಯುತ್ತಿರಬೇಕೆಂದು. ಹೆತ್ತವ್ವನಿಗೆ ಮಗುವಿನ ಮಾತಿನ ಮರ್ಮ ಅರ್ಥವಾಗದಿರುವುದೇ..? ತಾಯಿ ಗುಬ್ಬಿ ಒಪ್ಪಿಗೆ ನೀಡಿದ ಮೇಲೆ ಮರಿಗುಬ್ಬಿ ಅಲ್ಲಿಂದ ಹೊರಟು ಹೋಯಿತು. ಹಲವು ತಾಸು... ದಿನ, ರಾತ್ರಿ, ಹೀಗೆ ವಾರಗಳೇ ಕಳೆದವು. ಒಂದು ದಿನ ಮರಿಗುಬ್ಬಿಗೆ ತನ್ನ ತಾಯಿಯ ನೆನಪಾಗಿ ಮನೆಯನ್ನು ಸೇರಿತು. ಆದರೆ ಮನೆಯಲ್ಲಿ ತಾಯಿ ಇಲ್ಲದ್ದು ಕಂಡು ಆಶ್ಚರ್ಯ. ಅಕ್ಕ ಪಕ್ಕದಲ್ಲೆಲ್ಲಾ ವಿಚಾರಿಸಿ ಸೋತ ಮರಿಗುಬ್ಬಿಗೆ ನೆನಪಾಯಿತು, ತಾನು ತಾಯಿಗೆ ಹೇಳಿದ ಮಾತು. ತಕ್ಷಣ ಪುರ್ರೆಂದು ಮರಳುಗಾಡಿನ ಕಡೆ ಹಾರಿತು. ಮರಳುಗಾಡಿನಲ್ಲಿ ಆ ದಿನ ಹೇಳಿದ ಜಾಗದಲ್ಲೇ ಅಮ್ಮನ್ನನ್ನು ಕಂಡು ಮರಿಗುಬ್ಬಿಯ ಆನಂದ ಹೇಳತೀರದಾಯಿತು. ಅಮ್ಮನ ಹತ್ತಿರ ಹೋಗಿ ನೋಡಿತು, ತಾನು ಹೇಳಿದ ಜಾಗದಿಂದ ಸ್ವಲ್ಪವೂ ಅಲುಗದೆ ನಿಂತು, ಕೃಶವಾಗಿ ಮರಳಲ್ಲಿ ಹೂತು ಹೋಗಿ ಮುಖ ಮಾತ್ರ ಕಾಣುತಿತ್ತು.ಮರಿಗುಬ್ಬಿ ಅಮ್ಮಾ... ಎಂದೊಡನೆ ತನ್ನ ಮರಿಗಾಗಿ ಜೀವದ ತುದಿ ಎಳೆ ಹಿಡಿದು ಕಾಯುತ್ತಿದ್ದ ತಾಯಿಗುಬ್ಬಿ ಕೊನೆಯದಾಗಿ ಉಸುರಿತು, ಕಡು ಬಿಸಿಲು, ಮಳೆಗಳ ಕಾಯುವಿಕೆಯಲ್ಲಿ ನನ್ನಲ್ಲಿ ನೀನು ಗೆದ್ದೆ, ಆದರೆ ಮನಸ್ಸೊಳಗಿನ ಕಾಯುವಿಕೆಯಲ್ಲಿ ಕ್ಷಣ ಕ್ಷಣವೂ ಮರಳೊಳಗೆ ನೀ ಹೂತು ಹೋದೆ.
ಕ್ಷಮಿಸು
ಅಪ್ಪ
ಚೀಲ
ಶುಕ್ರವಾರ, ಫೆಬ್ರವರಿ 5, 2021
ಮುಪ್ಪು
ಶತ ಶತಮಾನಗಳಿಂದಲೂ
ಬುಧವಾರ, ಜನವರಿ 27, 2021
ಮೆರಗು ನೀಡುವ ಹಬ್ಬ ಆಚರಣೆ
ಶನಿವಾರ, ಜನವರಿ 23, 2021
ಬುಧವಾರ, ಜನವರಿ 20, 2021
ಕವಿತೆಗಳು
ಬುಧವಾರ, ಜನವರಿ 13, 2021
ಸೂರ್ಯ
ಮಂಗಳವಾರ, ಜನವರಿ 12, 2021
ಕೊಡಗಿನ ಗವಿಸಿದ್ಧೇಶ್ವರ ಬೆಟ್ಟ
ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಸಿಕೊಳ್ಳುವ ಕರ್ನಾಟಕದ ಒಂದು ಪುಟ್ಟ ಜಿಲ್ಲೆ ಕೊಡಗು. ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ ಆಗಳಿ. ಈ ಗ್ರಾಮವು ನಿಸರ್ಗ ರಮಣೀಯತೆಯಿಂದ ಕಂಗೊಳಿಸುತ್ತಿದೆ .ಈ ನಿಸರ್ಗ ಸೌಂದರ್ಯದ ಒಡಲಲ್ಲಿರುವುದೇ ಗವಿಸಿದ್ಧೇಶ್ವರ ಬೆಟ್ಟ. ಈ ಬೆಟ್ಟಕ್ಕೆ ಕಟ್ಟೆಪುರ ಮೀಸಲು ಅರಣ್ಯದ ನಡುವೆ ಹಾದು ಹೋಗಬೇಕು.
ಈ ಅರಣ್ಯವು ತುಂಬಾ ದಟ್ಟತೆಯನ್ನು,ಇಂದು ಉಳಿಸಿ ಕೊಂಡಿಲ್ಲವಾದರೂ ರಸ್ತೆಯಲ್ಲಿ ಸಾಗುವಾಗ ತಂಪಾದ ವಾತಾವರಣ ಮನಕ್ಕೆ ಹಿತನೀಡುತ್ತದೆ. ಗವಿಸಿದ್ಧೇಶ್ವರ ಬೆಟ್ಟಕ್ಕೆ ಸಾಗುವ ಹಾದಿಯಲ್ಲಿ ಕಾಡುಬಸವ ಹೆಸರಿನಲ್ಲಿ ಕರಿಸಿಕೊಳ್ಳುವ ಚಿಕ್ಕದಾದ ದೇವರಗುಡಿ ಒಂದು ಕಾಣಸಿಗುತ್ತದೆ. ಈ ಗುಡಿಯು ತನ್ನದೆಯಾದ ವಿಶಿಷ್ಟ್ಯವನ್ನು ಹೊಂದಿದ್ದು,
ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಪ್ರಕೃತಿಯ ಮಧ್ಯದಲ್ಲಿ ಮಲಗಿ ವಿಶ್ರಮಿಸಿರುವಂತೆ ಭಾಸವಾಗುವ ಮನೋಜ್ಞವಾದ ಕೆರೆಯೊಂದು ಕಾಣಸಿಗುತ್ತದೆ.
ದಂಡಿನ ಬಾವಿ ದಳವಾಯಿ ಕೆರೆ. ಹಿಂದೆ ಕೊಡಗಿನ ರಾಜನಾಗಿದ್ದ ವೀರರಾಜ ಮತ್ತು ಅವನ ಸೇನಾಧಿಕಾರಿಗಳು (ರಾಜನ ದಂಡು -ಸೇನೆ) ಸಿದ್ಧೇಶ್ವರ ದೇವರ ಆಣತಿಯಂತೆ ಒಂದು ರಾತ್ರಿಯಲ್ಲಿ ಕೆರೆಯನ್ನು ನಿರ್ಮಾಣ ಮಾಡಿದ್ದರಿಂದ, ಈ ಕೆರೆಗೆ ದಂಡಿನ ಬಾವಿ ದಳವಾಯಿ ಕೆರೆ ಎಂದು ಹೆಸರಾಗಿದೆ ಎಂದು ಇಲ್ಲಿನ ಹಿರಿಯ ಗ್ರಾಮಸ್ಥರು ಹೇಳುತ್ತಾರೆ. ಈ ಕೆರೆಯ ಸೌಂದರ್ಯವನ್ನು ಮನ ತುಂಬಿಕೊಂಡು ಮುಂದೆ ಸಾಗಿದರೆ, ರಸ್ತೆಯ ಬಲಭಾಗಕ್ಕೆ ಕಾಣುವ ಕವಲು ದಾರಿಯಲ್ಲಿ ಸ್ವಲ್ಪ ದೂರ ಪ್ರಯಾಣಿಸಿದರೆ, ನಮ್ಮನ್ನು ಎದುರ್ಗೊಳ್ಳುವುದೇ ಮನೋಹರವಾದ ಬಂಡೆಗಳಿಂದ ಕೂಡಿದ ಗವಿಸಿದ್ಧೇಶ್ವರ ಬೆಟ್ಟ .
ಅಲ್ಲಿನ ಸುತ್ತಲಿನ ಪ್ರದೇಶವೂ ದೇವರ ಕಾಡು ಎಂದು ಕರೆಸಿಕೊಳ್ಳುತ್ತದೆ. ಹೆಬ್ಬಂಡೆಗಳ ನಡುವಿರುವ ಈ ಬೆಟ್ಟವನ್ನು, ಅಲ್ಲಿಯ ಹಕ್ಕಿ -ಪಕ್ಷಿಗಳ ಕಲರವ, ಚಿಲಿಪಿಲಿ ನಾದವನ್ನು ಆಲಿಸುತ್ತಾ, ಪ್ರಕೃತಿ ಸೌಂದರ್ಯ ವನ್ನು ಆರಾಧಿಸುತ್ತಾ, ಬೆಟ್ಟವನ್ನು ಕಡಿದು ನಿರ್ಮಿಸಿರುವ ಮೆಟ್ಟಿಲುಗಳನ್ನು ಏರುತ್ತಾ ಹೋದರೆ ಕಾಣಸಿಗುವುದೇ ಸಿದ್ದೇಶ್ವರ ಸ್ವಾಮಿ ದೇವಾಲಯ. ದೇವಸ್ಥಾನದ ಗೋಡೆಗಳು ಪೂರ್ಣಪ್ರಮಾಣದಲ್ಲಿ ನೈಸರ್ಗಿಕವಾಗಿ ರಚನೆಯಾಗಿರುವ ಬಂಡೆಗಳಿಂದ ನಿರ್ಮಿಸಲ್ಪಟ್ಟಿವೆ.
ದೇವಾಲಯದ ಒಳಗೆ ಪ್ರವೇಶಿಸಿದಾಗ ಗವಿಸಿದ್ಧೇಶ್ವರ ಸ್ವಾಮಿ ಮಲಗಿರುವ ಭಂಗಿಯಲ್ಲಿ ಕಾಣಸಿಗುತ್ತದೆ. ಇಲ್ಲಿ ನಾಗದೇವತೆಯು ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ.
ದೇವಾಲಯದ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿದ್ದು,ಜನಗಳ ಸದ್ದು-ಗದ್ದಲವಿಲ್ಲದೆ ನಿಶಬ್ದವಾಗಿದ್ದು, ಪ್ರಕೃತಿಯ ಸೌಂದರ್ಯವು ಮನಸ್ಸಿಗೆ ಮುದನೀಡುತ್ತದೆ. ದೇವಾಲಯದ ಹಿಂಬದಿಯಲ್ಲಿ ನಿಂತು ನೋಡಿದರೆ ಪ್ರಕೃತಿ ದೇವತೆಯೇ ಎದ್ದು ಬಂದಂತೆ ಭಾಸವಾಗುವ ಆ ಕ್ಷಣ ಮೈನವಿರೇಳಿಸುತ್ತದೆ.
ಇಲ್ಲಿ ಕಂಡುಬರುವ ಪುರಾತನ ಹೆಬ್ಬಂಡೆಗಳು ಇಲ್ಲಿಯ ಇನ್ನೊಂದು ವಿಶೇಷತೆಗಳಾಗಿವೆ. ಗ್ರಾಮಸ್ಥರ ಅಭಿಪ್ರಾಯದಲ್ಲಿ ಈ ದೇವಸ್ಥಾನದ ಐತಿಹ್ಯವನ್ನು ಹೇಳುವುದಾದರೆ ಸುಮಾರು 500 ರಿಂದ 600 ವರ್ಷಗಳ ಹಿಂದೆ ಐದು ಜನ ಶರಣರು ಭಿಕ್ಷಾಟನೆ ಮಾಡಿಕೊಂಡು ಈ ಗ್ರಾಮದಲ್ಲಿ ನೆಲೆಸಿದ್ದು, ಈ ಬೆಟ್ಟವು ಹಿಂದೆ ದಟ್ಟಾರಣ್ಯವಾಗಿದ್ದು, ಧ್ಯಾನಕ್ಕೆ ಪ್ರಶಾಂತವಾಗಿದ್ದರಿಂದ ಶರಣರು ಕಾಲಕ್ರಮೇಣ ಗ್ರಾಮಗಳನ್ನು ತೊರೆದು ಈ ಪ್ರದೇಶಕ್ಕೆ ಬಂದು ಗುಹೆಯಲ್ಲಿ ನೆಲೆ ಕಂಡುಕೊಂಡರು.
ಶರಣರು ಲೋಕ ಕಲ್ಯಾಣಾರ್ಥವಾಗಿ ಈ ಪ್ರದೇಶದಲ್ಲಿ ಶಿವನು ನೆಲೆನಿಲ್ಲಬೇಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿದಾಗ, ಅವರ ತಪಸ್ಸಿಗೆ ಮೆಚ್ಚಿ ಸಿದ್ದೇಶ್ವರನ ರೂಪದಲ್ಲಿ ಗವಿ (ಗುಹೆ )ಯಲ್ಲಿ ಐಕ್ಯವಾಗುತ್ತಾನೆ. ಶರಣರು ಸಹ ಸಿದ್ದೇಶ್ವರನ ಸನಿಹದಲ್ಲಿ ಕಲ್ಲುಗಳ ರೂಪದಲ್ಲಿ ಐಕ್ಯವಾಗಿರುವುದನ್ನು ಕಾಣಬಹುದು. ಅಂದಿನಿಂದ ಇದು ಗವಿಸಿದ್ಧೇಶ್ವರ ಬೆಟ್ಟವೆಂದು ಕರೆಯಲ್ಪಡುತ್ತದೆ.
ಸಿದ್ಧೇಶ್ವರ ಸ್ವಾಮಿಯ ಮೂರ್ತಿ ಮತ್ತು ಬೆಟ್ಟ ಪ್ರತಿವರ್ಷ ರಾಗಿಕಾಳಿನಷ್ಟು ಬೆಳೆಯಲ್ಪಡುತ್ತಿದೆ ಎಂಬುದು ಗ್ರಾಮಸ್ಥರ ಹೇಳಿಕೆ ಮತ್ತು ನಂಬಿಕೆ.
ಪ್ರತಿವರ್ಷ ಶಿವರಾತ್ರಿಯ ಮಾರನೇ ದಿನ ಎಲ್ಲಾ ಜನಾಂಗದವರು ಸೇರಿ ಜಾತ್ರೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.
ಜನರು, ಪಟ್ಟಣಗಳ ಕಿರಿಕಿರಿ ಗದ್ದಲ ಶಬ್ದಗಳಿಂದ ಯಾವಾಗಲೂ ದೂರವಿರುವ ಈ ಬೆಟ್ಟ ನಿಸರ್ಗ ಸೌಂದರ್ಯ ಮತ್ತು ನಿಶ್ಯಬ್ದತೆಯಿಂದ ಮನಸ್ಸಿನ ಎಲ್ಲಾ ಜಂಜಾಟಗಳನ್ನು ಕ್ಷಣಕಾಲ ದೂರವಿಡಲು ಮತ್ತು ಪೋಟೋಗ್ರಫಿಯನ್ನು ಅರಸಿ ಬರುವವರಿಗೆ ಒಂದು ಆಹ್ವಾನದಂತೆ ವ್ಯಕ್ತವಾಗುತ್ತದೆ.ಅಪರೂಪಕ್ಕೊಮ್ಮೆ ಎಂಬಂತೆ ಗಜರಾಜರ ದಂಡು ದಾಳಿಮಾಡುತ್ತದೆ ಎಂಬುದನ್ನು ಬಿಟ್ಟರೆ ಇಲ್ಲಿಗೆ ತೆರಳಲು ಬೇರೆ ಇನ್ನಾವುದೇ ಭಯವಿಲ್ಲ.
ಮಂಗಳವಾರ, ಡಿಸೆಂಬರ್ 15, 2020
ಪ್ರೀತಿ
ಸೋಮವಾರ, ಡಿಸೆಂಬರ್ 7, 2020
ಹುಟ್ಟು
ಸೋಮವಾರ, ನವೆಂಬರ್ 23, 2020
ಪಸೆ
ಒಂದು ಹುಳು
ಭಾವ
ಏಕಾತ್ಮ
ಶನಿವಾರ, ನವೆಂಬರ್ 21, 2020
ಕವಿತೆ ಭಾವ
ಗುರುವಾರ, ನವೆಂಬರ್ 19, 2020
ಕಡಲ್ಲವ್ವ
ಮಂಗಳವಾರ, ನವೆಂಬರ್ 10, 2020
ನಂಬಿಕೆ
ಅವ್ವ
ಶುಕ್ರವಾರ, ನವೆಂಬರ್ 6, 2020
"ಗಾಯದ ಹೂವುಗಳು "
ಮಂಗಳವಾರ, ನವೆಂಬರ್ 3, 2020
ಮಹಾಕಾದಂಬರಿ
ಸೋಮವಾರ, ನವೆಂಬರ್ 2, 2020
ಹುಡುಗಿ
ಕಚೇರಿ
ಸೋಮವಾರ, ಅಕ್ಟೋಬರ್ 19, 2020
ಭಾವನೆಗಳು (ಭಾವನೆಗಳಿರುವವರ ಭಾವಕ್ಕೆ.... )
ಭಾವನೆಗಳು ನಮ್ಮನ್ನು ಬರಸೆಳೆದು ಬಂಧಿಸುತ್ತವೆಯೋ ಅಥವಾ ನಾವೇ ಅವುಗಳಲ್ಲಿ ಮೋಹಗೊಂಡು ಬಂಧಿಯಾಗುತ್ತೇವೆಯೋ ತಿಳಿಯದು. ನಿರ್ಭಾವ ವ್ಯಕ್ತಿಗಳು ಇದ್ದಾರೆಂದು ಹೇಳಲಾಗುವುದಿಲ್ಲವಾದರೂ ನಮ್ಮ ಆಚಾರ -ವಿಚಾರ, ಕೆಲಸ ನಮ್ಮ ಭಾವನೆಗಳೊಂದಿಗೆ ವಿಲೀನಗೊಂಡಿರುತ್ತವೆ. ಕನಸು, ಕಲ್ಪನೆಗಳು, ಭಾವನೆಗಳು ಹಡೆಯುವ ಕೂಸುಗಳೆಂದರೆ ತಪ್ಪಾಗಲಾರವು.
ಮಂಗಳವಾರ, ಸೆಪ್ಟೆಂಬರ್ 29, 2020
ಮಂಜಕ್ಕ
ಮಂಜಕ್ಕ ಹೆಸರಂತೆ ಬಲು ಮನೋಹರೆಯು, ಮುಗ್ದೆಯು,
ಅನಾಥೆಯಾದರು, ಅನೇಕ ಕನಸು ಹೊತ್ತು,ಬಡತನದಲ್ಲಿ
ಅರಳಿದ ಹೂ ಕುಸುಮ.
ಮಂಜಕ್ಕನ ವಿಧಿಬರಹದಲ್ಲಿ ಅವಳ ಅಪ್ಪ -ಅಮ್ಮನ
ಮುಖ ನೋಡುವ ಭಾಗ್ಯವೇ ಬರೆದಿರಲ್ಲಿಲ್ಲ.ಅಜ್ಜಿಯ
ಆಶ್ರಯದಲ್ಲಿ ಬೆಳೆದ ಅವಳಿಗೆ ಅಪ್ಪ-ಅಮ್ಮನ ದೈವ ಸ್ವರೂಪಿ,
ಅಜ್ಜಿ ಸುಂದ್ರಮ್ಮ. ಮಂಜಕ್ಕನನ್ನು ಸುಂದ್ರಮ್ಮ (ಚಿಕ್ಕ
ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡಿದ್ದಳು. ಮಕ್ಕಳು ಸಹ
ಇರಲ್ಲಿಲ್ಲ)ಹಸುಗೂಸಿನಲ್ಲೇ ಆಸ್ಪತ್ರೆಯಿಂದ ತಂದು,
ಇಳಿವಯಸ್ಸಿನಲ್ಲಿ ಊರುಗೋಳಾಗುತ್ತಾಳೆಂದು
ತನ್ನಿಂದಾದ ಮಟ್ಟಿಗೆ ಸಾಕಿ ಸಲಹಿದ್ದಳು. ಹೀಗೆ ನೋಡಿದರೆ
ಸುಂದ್ರಮ್ಮ ಒಬ್ಬಳು ಆದರ್ಶ ಮಹಿಳೆಯಂತೆ ಕಾಣಸಿಗುತ್ತಾಳೆ.
ಬೇಸಿಗೆ ಕಾಲವಾದರು ಅಂದು ಮೋಡಕವಿದ ತಂಪಾದ
ವಾತಾವರಣ. ಹಿತವಾಗಿ ಬೀಸುವ ಗಾಳಿ. ಆದರೂ ಸುಂದ್ರಮ್ಮ
ಚಿಂತಾಮಗ್ನಳಾಗಿ, ತನ್ನ ಮನೆಯ ಹಳೆಯ ದೊಡ್ಡ ಮರದ
ಕಂಬವನ್ನು ಒರಗಿ ಕುಳಿತ್ತಿದ್ದಳು. ಎಂದಿನಂತೆ ಮನೆಯ
ಕೆಲಸಗಳನ್ನು ಮುಗಿಸಿ ಹೊರಬಂದ ಮಂಜಕ್ಕ, ಅಜ್ಜಿಯನ್ನು
ಸೂಕ್ಷ್ಮವಾಗಿ ಗಮನಿಸಿ ಎಂದಿನಂತೆ ಇಲ್ಲದೆ ಏನೂ ಚಿಂತಿಸುತ್ತ
ಕುಳಿತಿರುವ ಅಜ್ಜಿಯನ್ನು ಕಂಡು, ಅಜ್ಜಮ್ಮ....ಏಕೆ? ಹೀಗೆ
ಕುಳಿತಿರುವೆ? ಎಂದು ಕೇಳಲು, ನೋಡೇ ಮಂಜು... ನಾನೊ
ಹಣ್ಣಾದ ತರಗೆಲೆ. ನನಗೆ ನಾಡು ಹೋಗು ಅನ್ನತ್ತೆ, ಕಾಡು ಬಾ
ಅನ್ನತ್ತೆ, ಅಷ್ಟರೊಳಗಾಗಿ ನಿಂಗೊಂದು ಮದುವೆ ಮಾಡಿದರೆ
ನಾನು ನಿಶ್ಚಿಂತೆಯಿಂದ ಕಣ್ಣು ಮುಚ್ಚಬಹುದು ಎಂದು
ಹೇಳುತ್ತಿರುವಾಗ, ಅದೇ ಊರಿನವನಾದ ಕಾಂತಣ್ಣನು ತನ್ನ
ಮಗನ ಮದುವೆಗೆ ಕರೆಯಲು ಬರುತ್ತಾನೆ. ಆಗ ಅಜ್ಜಿಯು
ಮಂಜುವಿಗೊಂದು ಹುಡುಗನನ್ನು ನೋಡೆಂದು ಹೇಳಿದಾಗ,
ಕಾಂತಣ್ಣನು... ಅಲ್ಲ ! ಸುಂದ್ರಜ್ಜಿ , ಅಂಗೈಯಲ್ಲೇ ಬೆಣ್ಣೆ
ಇಟ್ಕೊಂಡು, ಊರೆಲ್ಲಾ ಅಲೆದ್ರಂತೆ ಹಾಗಾಯಿತು ನಿನ್ನ
ಕಥೆ.ಅದೇ ನಿನ್ನ ದೂರದ ಸಂಬಂಧಿ ಆಷಾಡಮ್ಮನ ಮಗ
ಸುಬ್ಬೇಗೌಡ ಇದ್ದಾನಲ್ಲ,ಅವನಿಗೆ ಕೊಡಬಹುದಲ್ಲ ನಿಮ್ಮ
ಮಂಜುನಾ ಎಂದನು. ತಕ್ಷಣ ಸುಂದ್ರಜ್ಜಿ, ಹೌದಲ್ವಾ !ನನ್ನ
ಹಾಳು ತಲೆಗೆ ಹೊಳೆದೇ ಇರಲ್ಲಿಲ್ಲ
ನೋಡು,ವಯಸ್ಸಾಯಿತ್ತಲ್ಲಪ್ಪ ಬುದ್ಧಿ ಮಂಕು.ನೀನೇ ಅವರಿಗೆ
ಈ ವಿಷಯವಾಗಿ ಕೇಳಿನೋಡೆಂದು ಹೇಳುತ್ತಾಳೆ ಸುಂದ್ರಮ್ಮ.
ಸುಬ್ಬೇಗೌಡನಿಗೆ ತಂದೆ ಇರಲ್ಲಿಲ್ಲ.ಒಂದು ಕಾರ್ಖಾನೆಯಲ್ಲಿ
ಕೆಲಸಕ್ಕೆ ಹೋಗುತ್ತಿದ್ದ. ಹೊಟ್ಟೆ ಬಟ್ಟೆಗೆ ಯಾವ ತೊಂದರೆ
ಇರಲ್ಲಿಲ್ಲ.ಸುಂದ್ರಮ್ಮಗಿಂತ ಆರ್ಥಿಕವಾಗಿ ಎತ್ತರದಲ್ಲೇಇದ್ದರು.
ಹೀಗೆ ಹಲವು ದಿನಗಳ ನಂತರ ಕಾಂತಣ್ಣನ ಮಗ
ಸುದೀಂದ್ರನ ಮದುವೆಗೆ ಹೋದ ಸುಂದ್ರಜ್ಜಿಗೆ, ಆಷಾಡಮ್ಮ
ಸಿಕ್ಕಿ ತನ್ನ ಮಗನಿಗೆ ಮಂಜಕ್ಕನನ್ನು ಮದುವೆ ಮಾಡಿಕೊಳ್ಳಲು
ಇಷ್ಟವಿರುವ ವಿಷಯ ತಿಳಿಸಿ, ಮರುದಿನವೇ ನಿಶ್ಚಯದ
ಶಾಸ್ತ್ರವು ಮುಗಿಯುತ್ತದೆ. ಸುಂದ್ರಜ್ಜಿ ತನ್ನ ಜವಾಬ್ದಾರಿಯನ್ನು
ಮೆರೆದಳೆ ಹೊರತು, ಮಂಜಕ್ಕನಿಗೆ ಮದುವೆಯ ಇಷ್ಟ
-ಕಷ್ಟಗಳ ಬಗ್ಗೆ ಏನನ್ನು ಕೇಳುವ ಗೋಜಿಗೆ ಹೋಗಲಿಲ್ಲ.
ನರಿಬುದ್ಧಿಯ ಆಷಾಡಮ್ಮನ ಉದ್ದೇಶ ಅಜ್ಜಿ ಸತ್ತರೆ ಇರುವ
ಮನೆಯು ಮಂಜಕ್ಕನ ಮೂಲಕ ನಮಗೆ ಸೇರುವುದೆಂದು, ಈ
ವಿಷಯವಾಗಿ ಅಜ್ಜಿಯೊಂದಿಗೆ ಪ್ರಸ್ತಾಪಿಸಿಯೂ ಇದ್ದಳು.
ನಿಶ್ಚಯಿಸಿದ ದಿನದಂದು ಮಂಜಕ್ಕ -ಸುಬ್ಬೇಗೌಡನ
ಮದುವೆಯು ಆಗುತ್ತದೆ. ಸುಬ್ಬೇಗೌಡ ಹೊಸದರದಲ್ಲಿ
ತಕ್ಕಮಟ್ಟಿಗೆ ಇದ್ದನಾದರೂ, ತೀರ ಏಕಾಂತ ಸ್ವಭಾವ, ಒರಟು
,ಜಡತ್ವ ಬುದ್ಧಿಯ ಅವನಲ್ಲಿ ಪ್ರೀತಿ, ಕಾಳಜಿಗಳಿಗೆ
ಜಾಗವಿರಲ್ಲಿಲ್ಲ. ಮಂಜಕ್ಕ ತನ್ನ ಗಂಡನನ್ನು ದೈವವೆಂದು
ಬಗೆದು ಅವನ ಪ್ರೀತಿ, ವಾತ್ಸಲ್ಯ, ಅಕ್ಕರೆಗಾಗಿ ಪರಿ
ತಪಿಸುತ್ತಾಳೆ. ತನ್ನ ಅಪ್ಪ -ಅಮ್ಮ, ಅಜ್ಜಿಯ ಪ್ರೀತಿಯನ್ನು
ಗಂಡನಲ್ಲಿ ಕಾಣಬಯಸಿದ ಅವಳಿಗೆ, ದಕ್ಕಿದ್ದು ಬರಿ ನಿರಾಶೆಯ
ಗೋಪುರ . ಅತ್ತೆಯಲ್ಲಿ, ತಾಯಿ ಪ್ರೀತಿ ನಿರೀಕ್ಷೆಯಲ್ಲಿದ್ದ
ಮಂಜಕ್ಕನ ಪಾಲಿಗೆ ಅದುವೇ ನೀರಿನ ಮೇಲಿನ
ಗುಳ್ಳೆಯಾಗಿತ್ತು. ಮಂಜಕ್ಕ, ವಾಸ್ತವಕ್ಕೆ ಹೊಂದಿಕೊಳ್ಳುತ್ತಲ್ಲಿ
ದ್ದರೂ... ಮಾನಸಿಕವಾಗಿ ಕೃಶಳಾಗುತ್ತ ಸಾಗಿದ್ದಳು.
ದಿನಗಳು ತಮ್ಮ ಆಯಸ್ಸನ್ನು ಕಳೆಯುತ್ತಿರಲು,
ಕಷ್ಟ -ಸುಖ ಹೇಳಿಕೊಳ್ಳಲು ಇದ್ದ, ಅಜ್ಜಿಯು ಒಂದು ದಿನ
ಅನಾರೋಗ್ಯದಿಂದ ತೀರಿಕೊಂಡಾಗ, ಮಂಜಕ್ಕನಿಗೆ ತನ್ನ
ಅಸ್ತಿತ್ವವೇ ಕಳಚಿ ಬಿದ್ದಂತ್ತಾಗಿತ್ತು.ಅಷ್ಟರಲ್ಲೇ ನವ ಮಾಸ
ತುಂಬಿದ ಮಂಜಕ್ಕ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಳು.
ಇಷ್ಟವೋ -ಕಷ್ಟವೋ ಅತ್ತೆಯ ಬಾಣಂತನವೆಂಬ ಮೈ
ಒರೆಸುವ ಶಾಸ್ತ್ರವೂ ಒಂದೇ ತಿಂಗಳಿಗೆ ಮುಗಿದು, ಇರಲಿರದ
ಖಾಯಿಲೆಯನ್ನು ಇದೆ ಎಂದು ಹೇಳಿ, ವಿಶ್ರಾಂತಿಗಾಗಿ ನೆಂಟರ
ಮನೆಗೆ ಹೋದ ಆಷಾಡಮ್ಮ ತಿಂಗಳುಗಳೇ ಕಳೆದರು ಇತ್ತ ತಲೆ
ಹಾಕಲೇ ಇಲ್ಲ. ಇದ್ದರೂ.. ಇಲ್ಲದಂತ್ತಿದ್ದ ಗಂಡನೊಂದಿಗೆ,
ಎಳೆಕೂಸನ್ನು ಕಟ್ಟಿಕೊಂಡು ಪಡಬಾರದ ಪಾಡುಪಟ್ಟು
ಮಗಳನ್ನು ಸಾಕಿ ಅದಕ್ಕೆ ಒಂದು ವರ್ಷವಾದಾಗ ತನ್ನ
ಮನಸ್ಸಿನ ಇಚ್ಚೆಯಂತೆ 'ಆರತಿ '(ತನ್ನ ಮಗಳು
ಕಷ್ಟದಲ್ಲಿರುವವರ ಬಾಳನ್ನು ಬೆಳಗುವ
ದೀಪವಾಗಲೆಂದು)ಎಂದು ಹೆಸರಿಡುತ್ತಾಳೆ. ಒಂದು
ಅಮಾವಾಸ್ಯೆಯ ಬೆಳಗ್ಗೆ, ಕೆಲಸಕ್ಕೆಂದು ಹೊರಟು ನಿಂತ
ಸುಬ್ಬೇಗೌಡ... ಏಯ್...ಮಂಜು, ನಾನು ಕೆಲಸಕ್ಕೆ
ಹೋಗಿಬರುತ್ತೇನೆ ಎಂದು ಹೇಳಿ ಹೋದವನು ಸಂಜೆ, ರಾತ್ರಿ,
ದಿನ, ವಾರ, ತಿಂಗಳುಗಳೇ ಕಳೆದರು ಮನೆಗೆ
ಬರಲ್ಲಿಲ್ಲ.ಮಂಜಕ್ಕ ಅವಳಿಗೆ ತಿಳಿದಿರುವ ಎಲ್ಲಾ ಕಡೆ ಹಾಗು
ಕಂಡಕಂಡವರಲ್ಲಿ ತನ್ನ ಗಂಡನ ಬಗ್ಗೆ ವಿಚಾರಿಸುತ್ತಾಳೆ, ಆದರೆ
ಎಲ್ಲೂ, ತನ್ನ ಗಂಡನ ಪರವಾಗಿ ಯಾವ ವಿಷಯವು
ತಿಳಿಯುವುದಿಲ್ಲ. ಅವರಿವರು ಹೇಳುವಂತೆ,
ಜೀವಕಳೆದುಕೊಂಡಿರಬೇಕೆಂಬ, ಊರುಬಿಟ್ಟು ಹೋದನೆಂದು,
ಇನ್ನೊಂದು ಮದುವೆ ಆದನೆಂದು, ತನ್ನ ತಾಯಿಯೊಂದಿಗೆ
ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾನೆಂದು... ಹೀಗೆ ಇಲ್ಲ
-ಸಲ್ಲದ ಊಹಾಪೋಹಗಳನ್ನು ನಂಬುವ ಅನಿವಾರ್ಯತೆ
ಮನಸ್ಸಿಗೆ. ಸಿಡಿಲ್ಲಬ್ಬರದಂತೆ ಅಪ್ಪಳಿಸಿದ ಈ ಪರಿಸ್ಥಿತಿಗೆ
ಮಂಜಕ್ಕ ಹತಾಶಳಾಗಿ ಹೋದಳು.ನನ್ನನ್ನು ಹೊತ್ತಿರುವ ಭೂ
ತಾಯಿ ಇಬ್ಬಾಗವಾಗಿ ನನ್ನನ್ನು ಅದರ ಒಡಲಿನೊಳಗೆ
ಸೇರಿಸಿಕೊಂಡುಬಿಡಬಾರದೇ ಎನ್ನುವಷ್ಟು ದುಃಖ ಉಮ್ಮಳಿಸಿ
ದಿಕ್ಕೇ ತೋಚದಾದಾಗ ತನ್ನ ಮಗಳು 'ಆರತಿ 'ಬದುಕಿನ
ಆಸರೆಯಾಗಿ ಗೋಚರಿಸುತ್ತಾಳೆ. ತನಗೆ ಒದಗಿದ ಈ
ಪರಿಸ್ಥಿತಿಯಿಂದ, ಮನೆಯ ಬಾಡಿಗೆ ಕಟ್ಟಲು ಸಾಧ್ಯವಾಗದೆ
ಹೋದಾಗ, ಆ ಮನೆಯನ್ನು ಬಿಟ್ಟು ತನ್ನ ಅಜ್ಜಿ ಬಿಟ್ಟು
ಹೋಗಿದ್ದ ಮನೆಗೆ, ಮಗಳೊಂದಿಗೆ ಬಂದು ನೆಲೆಸುತ್ತಾಳೆ.
ಮಂಜಕ್ಕ ಮೃದು ಸ್ವಭಾವದವಳಾದರು, ದೃಢ ವ್ಯಕ್ತಿತ್ವದವಳು.
ಚಿಕ್ಕಂದಿನಲ್ಲೆ ಅಪ್ಪ -ಅಮ್ಮನ ಕಳೆದುಕೊಂಡ ಕೊರಗು,
ಸಮಾಜದ ಆಗು -ಹೋಗು, ಆಚಾರ -ವಿಚಾರಗಳಿಂದ
ಬೇಸತ್ತು, ತಾನು ಮದುವೆ ಆಗಬಾರದೆಂಬ ನಿಲುವು
ತಳೆದಿರುತ್ತಾಳೆ. ಆದರೆ ಅಜ್ಜಿಯ ಜವಾಬ್ಧಾರಿ ಕಳೆದು
ನೆಮ್ಮದಿಯ ಉಸಿರು ಬಿಡಬೇಕೆಂಬ ಆಸೆಗೆ,
ಹತಾಶಳಾಗಿ,ತನ್ನನ್ನು ಸಾಕಿಬೆಳೆಸಿದ ಕೃತಜ್ಞತಾ
ಮನೋಭಾವದಿಂದಾಗಿ ಒಪ್ಪಿರುತ್ತಾಳೆ. ಅಜ್ಜಿಯು ಮದುವೆ
ವಿಷಯದಲ್ಲಿ ಮಂಜಕ್ಕನ ಇಷ್ಟ -ಅನಿಷ್ಟಗಳನ್ನು ಕೇಳುವ
ಗೋಜಿಗೆ ಹೋಗಿರುವುದಿಲ್ಲ. ಹಾಗೆ ಕೇಳಿದ್ದರೆ ಅವಳು
ಮದುವೆ ಆಗದೆ, ನನ್ನಂತ ಅನಾಥರ ಸೇವೆಯನ್ನು
ಮಾಡಿಕೊಂಡು ಜೀವನ ಕಳೆಯಬೇಕೆಂದಿರುವ ಮಹಾ
ದಾಸೆಯನ್ನು ತಿಳಿಸಿರುತ್ತಿದ್ದಳೋ ಏನೋ. ತನ್ನ ಅಜ್ಜಿ, ಗಂಡ,
ಅತ್ತೆ ಇಲ್ಲದೆ ಒಬ್ಬಳು ಹೆಣ್ಣು ಮಗಳಾಗಿ ಈ ಅಮಾನುಷ,
ನಿರ್ದಯ ಸಮಾಜದಲ್ಲಿ ಸಣ್ಣ ಮಗುವನ್ನು ಕಟ್ಟಿಕೊಂಡು
ಜೀವನಕ್ಕಾಗಿ ಏನು ಮಾಡುವುದು ಎಂಬುದು ಒಂದು ದೊಡ್ಡ
ಸವಾಲಾದಾಗ, ಅಲ್ಪ -ಸ್ವಲ್ಪ ಮಟ್ಟಿನ ಓದನ್ನು ಕಲಿತ್ತಿದ್ದ
ಮಂಜಕ್ಕ, ತನ್ನ ಗಂಡ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ
ಹೇಗೋ ಕೆಲಸಕ್ಕೆ ಸೇರಿಕೊಂಡು ತನ್ನ ಮಗಳನ್ನು ಸಾಕುವ
ದೊಡ್ಡ ಜವಾಬ್ದಾರಿ ಹೊತ್ತು ನಿಲ್ಲುತ್ತಾಳೆ. ಮಂಜಕ್ಕನಿಗೆ
ಪ್ರಪಂಚವೇ ಮಗಳು. ಮಗಳ ವಿನಾ ಬೇರೇನೂ ಕಾಣದು.
ತನ್ನ ಪ್ರತಿಯೊಂದು ಸುಖವನ್ನು ತನ್ನ ಮಗಳ ಸುಖ, ಓದಿಗಾಗಿ
(ತನ್ನ ಭರವಸೆಗಾಗಿ )ಮೀಸಲಿಡುತ್ತಾಳೆ.
ಮಗಳು ವೈದ್ಯಳಾಗಿ ಬಡರೋಗಿಗಳ ಶುಶ್ರೂಷೆ
ಮಾಡಬೇಕೆಂಬ ಅವಳ ಸಾಗರದಂತಹ ಕನಸು,
ಮಂಜಕ್ಕನಂತಹ ಬಡ, ಒಬ್ಬಂಟಿ ಮಹಿಳೆಗೆ ಆ ಕಾಲಕ್ಕೆ
ಅಸಾಮಾನ್ಯವಾದುದಾಗಿರುತ್ತದೆ. ಆದರೆ ಮಂಜಕ್ಕ ತನ್ನ
ದೌರ್ಬಲ್ಯವನ್ನೇ ಅಸ್ತ್ರವಾಗಿಸಿ, ಅವಳ ಛಲದ ನಿಲುವಿಂದ
ಹಿಂದೆ ಸರಿಯದೆ ತನ್ನ ಮಗಳ ಓದಿಗಾಗಿ ಟೊಂಕಕಟ್ಟಿ
ನಿಲ್ಲುತ್ತಾಳೆ. ಮಗಳು ' ಆರತಿ ' ಮಂಜಕ್ಕನಂತೆ ಚೆಲುವುಳ್ಳ,
ಚುರುಕು ಬುದ್ಧಿಯ ಹುಡುಗಿ. ಅಮ್ಮನ ಪ್ರೀತಿ, ಛಲ, ನನಗಾಗಿ
ಅಮ್ಮ ಒಬ್ಬಂಟಿಯಾಗಿ ಪಡುತ್ತಿರುವ ಯಾತನೆ ಎಲ್ಲವೂ
ತಿಳಿದ ಅವಳು ಚೆನ್ನಾಗಿ ಓದುತ್ತಿರುತ್ತಾಳೆ. ಓದುವುದು ಅವಳ
ಆಸಕ್ತಿಯ ಹವ್ಯಾಸವೂ ಆಗಿರುತ್ತದೆ.
ಮಂಜಕ್ಕನಿಗೆ ಕೆಲಸ ಸಿಕ್ಕ ಹೊಸದರಲ್ಲಿ, ಹೊರ ಪ್ರಪಂಚವೇ
ತಿಳಿಯದಿದ್ದ ಅವಳಿಗೆ ಕಾರ್ಖಾನೆಯ ಪರಿಸರ, ಸಹ
ಕೆಲಸಗಾರರೊಂದಿಗೆ ಹೊಂದಾಣಿಕೆ, ಹೊಸ ಲೋಕದಂತೆ
ಕಂಡರೂ ಹೊಂದಾಣಿಕಾ ಮನೋಭಾವದ ಮಂಜಕ್ಕ
ಎಲ್ಲರೊಂದಿಗೆ ಬೆರೆಯುವಲ್ಲಿ ಹೆಚ್ಚು ಸಮಯ ಬೇಕಾಗಲಿಲ್ಲ.
ಅಲ್ಲಿ ಅವಳಿಗೆ ಸರೋಜಳೆಂಬ ಉತ್ತಮ ಸ್ನೇಹಿತೆಯು
ಸಿಗುತ್ತಾಳೆ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಹೆಗಲಾಗುವಷ್ಟು
ಜೀವನ ಗೆಳತಿಯರಾಗುತ್ತಾರೆ. ಮಂಜಕ್ಕನಿಗೆ ಅಜ್ಜಿಯ ನಂತರ
ಜೀವನದಲ್ಲಿ ಸಿಕ್ಕ ಅಪೂರ್ವ ವ್ಯಕ್ತಿ ಸರೋಜ. ಕೆಲಸ
ಮಾಡುವಲ್ಲಿ, ಅಕ್ಕ -ಪಕ್ಕದ ಮನೆಯವರು ತನ್ನ
ಸ್ನೇಹಿತೆಯೊಂದಿಗೆ, ಗಂಡನಿಲ್ಲದ ಹೆಣ್ಣೆಂದು
ನಡೆದುಕೊಳ್ಳುತ್ತಿದ್ದ ರೀತಿ -ನೀತಿಗಳನ್ನು ಹತ್ತಿರದಿಂದ
ಬಲ್ಲವಳಾಗಿದ್ದ ಮತ್ತು ಮಂಜಕ್ಕನಿಂದ ಕೇಳಿಯೂ ತಿಳಿದಿದ್ದ
ಸರೋಜ, ಮಂಜಕ್ಕ ಕಷ್ಟ ಪಡುವುದನ್ನು ನೋಡಿ, ಏ..
ಮಂಜು.. ನಿನ್ನ ಮಗಳಿಗಾಗಿ ನೀ ಪಡುವ ಕಷ್ಟವನ್ನು ನಾನು
ನೋಡಲಾರೆ. ಅರು.... ಹೇಗೂ ಚೆನ್ನಾಗಿ ಓದುತ್ತಿದ್ದಾಳೆ.
ನೋಡಲು ಗೊಂಬೆಯಂತಿರುವ, ನಮ್ಮ ಅರೂಗೆ ಒಂದೊಳ್ಳೆ
ಹುಡುಗನನ್ನು ನೋಡಿ ಮದುವೆ ಮಾಡಿಬಿಟ್ಟರೆ, ನಿನ್ನ
ಜವಾಬ್ದಾರಿಯು ಕಳೆಯುತ್ತದೆ, ನಿಮ್ಮ ಕುಟುಂಬಕ್ಕೆ ಒಂದು
ಗಂಡು ದಿಕ್ಕು ಸಿಗುತ್ತದೆ. ಅದನ್ನ ಬಿಟ್ಟು ಏನೋ, ಡಾಕ್ಟರ್
-ಗೀಕ್ಟರ್ ಓದುಸ್ತೀನಿ ಅಂತ, ಇಲ್ಲ -ಸಲ್ಲದೆಲ್ಲ ಮೈಮೇಲೆ
ಎಳೆದುಕೊಂಡು ಹೆಣಗೋದು ನನ್ನಿಂದ ನೋಡೋದಿಕ್ಕೆ
ಆಗ್ತಿಲ್ಲಪ್ಪ ಎಂದು ಬುದ್ಧಿ ಮಾತು ಹೇಳುತ್ತಾಳೆ. ಮಂಜಕ್ಕ ಚಿಂತೆ
(ಚಿತೆ )ಯಲ್ಲಿ ಬಿದ್ದ ಹುಳುವಾಗುತ್ತಾಳೆ. ಆದರೂ ತನ್ನ ಛಲ
ಬಿಡದೆ ಅವಳಲ್ಲಿನ ದೃಢತೆಯ ಸಂಕಲ್ಪ ಸೆಟೆದು ನಿಲ್ಲುತ್ತದೆ.
ದಿನ ಕಳೆದಂತೆ 'ಆರತಿ ' ಬೆಳೆಯುತ್ತಾ, ತಾಯಿಯ
ಮಹಾದಾಸೆಗೆ ನೀರೆರೆಯುತ್ತಾ ತುಂಬಾ ಚೆನ್ನಾಗಿ
ಓದುತ್ತಿರುತ್ತಾಳೆ. ಮಂಜಕ್ಕ ಹಗಲಿರುಳೆನ್ನದೆ
ದುಡಿಯಲಾರಂಭಿಸುತ್ತಾಳೆ. ಸಂಘ, ಸಂಸ್ಥೆ,ಬ್ಯಾಂಕ್ ಗಳಿಂದ
ಮತ್ತು ತಾನು ಕೂಡಿಟ್ಟ
ತನ್ನಲ್ಲಿದ್ದ ಅಲ್ಪ -ಸ್ವಲ್ಪವೇ ಚಿನ್ನ ಎಲ್ಲವನ್ನು ಮಾರಿ ಮಗಳನ್ನು
ವೈದ್ಯಕೀಯ ಕೋರ್ಸ್ ಓದಿಸುವಲ್ಲಿ ಯಶಸ್ವಿಯಾಗುತ್ತಾಳೆ.
ಹಾಗೆಯೇ ಮಗಳು ವೈದ್ಯಳೂ ಆಗುವಲ್ಲಿ, ಮಂಜಕ್ಕ ಒಂದು
ದಿನ ಗೆಲ್ಲುತ್ತಾಳೆ. ಅವಳ ಮಹಾದಾಸೆಯಂತೆ 'ಆರತಿ' ಗೆ
ವೈದ್ಯಳಾಗಿ ಕೆಲಸವು ಸಿಗುತ್ತದೆ. ಮಂಜಕ್ಕನ ಆ ದಿನದ
ಸಂತೋಷಕ್ಕೆ ಮಿತಿಯೇ ಇರುವುದಿಲ್ಲ.
'ಆರತಿ'ಯು, ಕೆಲಸ ಸಿಕ್ಕ ಮೊದಲ ದಿನ ಕರ್ತವ್ಯಕ್ಕೆ
ಹಾಜರಾಗಲು ಮಂಜಕ್ಕಳನ್ನು ಕರೆದುಕೊಂಡು ಹೋದಾಗ,
ಮಂಜಕ್ಕ ನೋಡಿದ ದೃಶ್ಯ ! ಗುಡುಗಿಗೂ ದಿಗಿಲು
ಬಡಿಸುವಂತಿತ್ತು. ಆದರೆ ಅವಳು ಯಾವುದನ್ನು
ತೋರುಗೊಡದೆ ಆಸ್ಪತ್ರೆಯಿಂದ ವಾಪಸ್ಸಾಗಿದ್ದಳು. ಊಟ
ಮಾಡಿ ಮಲಗಿದ ಮಂಜಕ್ಕನಿಗೆ ಎಷ್ಟು ಸಮಯವಾದರೂ
ನಿದ್ರೆ ಹತ್ತಿರ ಸುಳಿದಿರಲಿಲ್ಲ. ಅವಳ ಆ ಯಾತನೆಗೆ
ಕಾರಣವಾಗಿದ್ದು, ಆಸ್ಪತ್ರೆ ಯಲ್ಲಿ ನೋಡಿದ ಆ ವ್ಯಕ್ತಿಗಳು. ಆ
ವ್ಯಕ್ತಿಯ ತಾಯಿ, ಉಡುಪು, ಮಾತುಗಾರಿಕೆ, ವರ್ತನೆಗಳಲ್ಲಿ
ಹೇಳಬಹುದಾಗಿದ್ದ, ಶ್ರೀಮಂತ ಹೆಂಡತಿ, ಅವರ ಮಕ್ಕಳು.
ಅವರ ನಡುವೆ ನಡೆಯುತ್ತಿದ್ದ ಸಂಭಾಷಣೆಯಿಂದಲೇ ಅವರ
ನಡುವಿನ ಸಂಬಂಧಗಳ ನಂಟನ್ನು ಊಹಿಸಿದ್ದಳು ಸೂಕ್ಷ್ಮೆ
ಮಂಜಕ್ಕ. ಅವಳ ಮನಸ್ಸಿನಲ್ಲಿ ಹಲವಾರು ಗೊಂದಲ,
ಪ್ರಶ್ನೆಗಳು ತೂಗುಯ್ಯಾಲೆ ಆಡಿ, ಹಲವಾರು ವರ್ಷಗಳ
ಅಮೂರ್ತ ಕಲ್ಪನೆ, ಮೂರ್ತ ರೂಪ ತಾಳಿ ಮನಸ್ಸಲ್ಲಿ ದುಃಖ
ಉಮ್ಮಳಿಸಿ, ಕಣ್ಣೀರ ಹನಿಗಳಾಗಿ ಇಳಿದು ತುಸು
ಸಮಾಧಾನವಾದಂತಾಗಿ, ತನ್ನ ದುರ್ವಿಧಿಯನ್ನು ನೆನೆಯುತ್ತ
ಯಾವಾಗ ನಿದ್ದೆ ಸುಳಿದವೋ ಅವಳಿಗೆ ತಿಳಿಯದು.
'ಆರತಿ' ವೈದ್ಯಳಾಗಿ ಏಳೆಂಟು ತಿಂಗಳುಗಳು ಕಳೆದಿರಲು,
ಅವಳು ಕೆಲಸ ಮಾಡುವಲ್ಲಿ ಆದರ್ಶ ನೆಂಬ ವೈದ್ಯನಿರುತ್ತಾನೆ.
ಹುಟ್ಟಿನಿಂದಲೂ ಶ್ರೀಮಂತ ಮನೆತನದವನಾಗಿದ್ದು,
ಆರತಿಗಿಂತ ಎರೆಡು -ಮೂರು ವರ್ಷಕ್ಕೆ
ದೊಡ್ಡವನಿರಬಹುದಾದ ಸುಂದರ ಯುವಕನಾಗಿದ್ದನು.
ಸರಳತೆಯ ಪ್ರತೀಕದಂತಿದ್ದ ಆರತಿಗೆ ಮನಸೋತು, ಒಂದು
ದಿನ ಆರತಿಯ ಬರುವಿಕೆಗಾಗಿಯೇ ಕಾದು, ಆರತಿ
ಬಂದೊಡನೆಯೇ, ಆರತಿಯವರೇ... ನಾವು ಇಷ್ಟು ದಿನ
ಉತ್ತಮ ಸ್ನೇಹಿತರಾಗಿ ಒಬ್ಬರನ್ನೊಬ್ಬರು ಅರ್ಥ
ಮಾಡಿಕೊಂಡಿದ್ದೇವೆ. ನೀವು ಒಪ್ಪುವುದಾದರೆ, ಮುಂದೆ ನಾವು
ಮದುವೆ ಆಗಿ,ಹೆಚ್ಚಿನ ಓದಿಗಾಗಿ ಮುಂದಿನ ತಿಂಗಳು
ಅಮೇರಿಕಾಕ್ಕೆ ಹೋರಾಡಲಿರುವ ಮತ್ತು ನೀವೂ ಹೆಚ್ಚಿನ
ಓದಿಗಾಗಿ ನನ್ನೊಂದಿಗೆ ಬರಬಹುದೆಂದು, ಇದಕ್ಕೆ ನಿಮ್ಮ
ಅಭಿಪ್ರಾಯವನ್ನು ಆದಷ್ಟು ಬೇಗ ತಿಳಿಸಬೇಕೆಂದು
ಹೇಳಿಹೋಗುತ್ತಾನೆ. ಆದರ್ಶನಲ್ಲಿ ಆರತಿಗೂ ಒಲವಿದ್ದ ಕಾರಣ
ತನಗೆ ಏನು ಮಾಡಬೇಕೆಂದು ಗೊತ್ತಾಗದೇ ಅವನು ಹೋದ
ದಾರಿಯಲ್ಲಿ ನೋಡುತ್ತಾ, ನಿಂತ ಅವಳಿಗೆ ಕೊನೆಗು
ಗಟ್ಟಿಮನಸ್ಸು ಮಾಡಿ ಅಮ್ಮನಲ್ಲಿ ನನ್ನ ಇಷ್ಟವನ್ನು ಹೇಳಿ
ಬಿಡಬೇಕೆಂದು ತೀರ್ಮಾನಿಸಿ ಮನೆಗೆ ಬರುತ್ತಾಳೆ.
ಆಗ ತಾನೇ ಕೆಲಸದಿಂದ ಬಂದು ಕಾಫಿ ಮಾಡುವ
ಕಾರ್ಯದಲ್ಲಿ ಮಗ್ನಳಾಗಿದ್ದ ಮಂಜಕ್ಕ, ಮಗಳು ಬಂದದ್ದನ್ನು
ಕಂಡು ಅವಳಿಗು ಕಾಫಿ ಹಾಕಿ ತಂದು ಕೊಡುತ್ತಾಳೆ. ತಾನು
ಅಲ್ಲೇ ಕಂಬ ಒರಗಿ ಕಾಫಿ ಕುಡಿಯಲು ಕುಳಿತ ಮಂಜಕ್ಕನ
ಕಾಲ ಕೆಳಗೆ ಕುಳಿತ ಮಗಳು... ಅಮ್ಮ, ನೀನು, ನನ್ನನ್ನು ಎಷ್ಟು
ಕಷ್ಟ ಪಟ್ಟು ಒಬ್ಬಳೇ ಸಾಕಿ, ನನ್ನನ್ನು ಜವಾಬ್ದಾರಿಯುತ
ವೈದ್ಯಳನ್ನಾಗಿ ಮಾಡಲು ಪಟ್ಟ ಕಷ್ಟಗಳು, ನನ್ನೊಂದಿಗಿನ ನಿನ್ನ ಆಸೆಗಳು
ನನಗೆ ಅರಿವಿದೆ ಎನ್ನಲು, ಮಂಜಕ್ಕ....ಮಗಳ ತಲೆ ಮೇಲೆ ಕೈ
ಆಡಿಸುತ್ತಾ, ಅವಳನ್ನೇ ನೋಡುತ್ತಾ.. ಈಗೇಕೆ?? ಆ ಮಾತು
ಅರು ಎಂದು ಕೇಳುತ್ತಾಳೆ. ನಾನು ಕೆಲಸ ಮಾಡುವಲ್ಲಿ
ಆದರ್ಶನೆಂಬ ಸಹ ವೈದ್ಯನಿರುವುದನ್ನು, ಬೆಳಗ್ಗೆ ಅವನು
ಹೇಳಿದ ವಿಷಯವನ್ನೆಲ್ಲ ತಿಳಿಸಿ, ನನಗೆ ಅವನು
ಇಷ್ಟವಿದ್ದು,ಅವನನ್ನು ಮದುವೆಯಾದರೆ ಅಮೇರಿಕಾದಲ್ಲಿ
ಇನ್ನೂ ಹೆಚ್ಚಿನ ಓದು ಓದಬಹುದೆಂದು ಮತ್ತೆ ಭಾರತಕ್ಕೆ
ಬಂದು ಕೆಲಸ ಮಾಡಬಹುದೆಂದು ಹಾಗೂ ನನ್ನ ಜೀವನವು
ಚೆನ್ನಾಗಿರುತ್ತದೆ ಎಂಬ ಮಗಳ ಮಾತು ಕೇಳಿ, ಸಿಡಿಲು ಬಡಿದು,
ಆಕಾಶವೇ ಕಳಚಿ ಬಿದ್ದ ಅನುಭವವಾಗಿ, ಪ್ರಜ್ಞೆಯೇ ಇಲ್ಲದಂತೆ
ಕುಳಿತುಬಿಡುತ್ತಾಳೆ. ಮಗಳ ಬಗ್ಗೆ ನೂರಾರು ಕನಸು ಕಟ್ಟಿ,
ಕೊನೆಗಾಲದಲ್ಲಿ ಊರುಗೋಳಾಗುತ್ತಾಳೆಂಬ ಕನಸಿನ
ಆಶಾಗೋಪುರ ಕುಸಿದು, ಏನು ಹೇಳಬೇಕೆಂದೇ
ತಿಳಿಯುವುದಿಲ್ಲ. ಸ್ವಲ್ಪ ಸಮಯದ ನಂತರ
ಸುಧಾರಿಸಿಕೊಂಡು (ತನಗೆ ಇಷ್ಟವಿಲ್ಲದಿದ್ದರು ಮಗಳ ಇಷ್ಟದ
ವಿರುದ್ಧ ಹೋಗಲು ಆಗದೆ)ನಿನ್ನಿಷ್ಟದಂತೆ ಆಗಲಿ ಅರು ಎಂದು ಹೇಳುತ್ತಾಳೆ.
ಅಂತೆಯೇ ಸ್ವಲ್ಪ ದಿನಗಳಲ್ಲಿ ಆರತಿ -ಆದರ್ಶರ ಮದುವೆ
ಸರಳವಾಗಿ ನಡೆದು, ಹೆಚ್ಚಿನ ಓದಿಗೋ, ಅಲ್ಲಿಯ
ನಿವಾಸಿಗಳಾಗುವುದಕ್ಕೋ ಮಗಳು -ಅಳಿಯನನ್ನು
ಮನಸ್ಸಿಲ್ಲದ ಮನಸ್ಸಿಂದ ಬೀಳ್ಕೊಟ್ಟ ಮಂಜಕ್ಕನಿಗೆ,
ಮಗಳಿಲ್ಲದ ಮನೆ ಮಸಣದಂತೆ ತೋರಿತು. ಬದುಕಿನ
ಭರವಸೆಗೆ ದೊಡ್ಡ ಬರಸಿಡಿಲು ಬಡಿದಿತ್ತು. ತನ್ನ ಸುಖವನ್ನೇ
ಮಗಳ ಸುಖವೆಂದು ಬಗೆದು ಹಗಲಿರುಳು ಸಾಕಿದ ತಾಯಿಯ
ಬಗ್ಗೆ ಮಗಳು ಸ್ವಲ್ಪವೂ ಯೋಚಿಸದೇ ತನ್ನ ಜೀವನ, ಸುಖ,
ಸ್ವಾರ್ಥ ಯೋಚಿಸಿದ್ದು ಮಂಜಕ್ಕನ ಮನಸ್ಸಿನಲ್ಲಿ ಅಗಾದ
ಗಾಯ ಮಾಡಿತ್ತು. ಇಲ್ಲಿಯವರೆಗೆ ಮಂಜಕ್ಕನಿಗೆ ಮಗುವಾಗಿದ್ದ
ಅರು ಈ ದಿನ ಬೆಳೆದು ನಿಂತ 'ಆರತಿ'ಯಾಗಿ ಕಂಡಳು. ನನ್ನ
ಮಗಳು ಇಷ್ಟು ಸ್ವಾರ್ಥಿಯಾಗಲು ಹೇಗೆ ಸಾಧ್ಯವೆಂಬುದನ್ನು
ಜೀರ್ಣಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಯಿತು ಮಂಜಕ್ಕನಿಗೆ.
ಮಗಳಿಲ್ಲದ ದುಃಖ ಅತಿಯಾಗಿ ಕಾಡುತ್ತಿರಲು.. ಒಂದು ದಿನ
ಹೀಗೆ ಅಜ್ಜಿ ಒರಗಿ ಕುಳಿತುಕೊಳ್ಳುತ್ತಿದ್ದ ಹಳೆಯ ಮರದ
ಕಂಬವನ್ನು ಒರಗಿ ಕುಳಿತಿರುವಾಗ, ಹೊರಗಡೆ ಸಿಡಿಲು,
ಮಿಂಚು, ಗುಡುಗುಗಳಿಂದ ಭೋರ್ಗರೆದು ಸುರಿಯುವ ಮಳೆ.
ಮಂಜಕ್ಕನ ಮನಸ್ಸಲ್ಲಿ ಮತ್ತೊಮ್ಮೆ ಸಿಡಿಲು ಬಡಿದಂತಾಗಿತ್ತು.
ಅವಳ ಮನಸ್ಸಲ್ಲಿ ಅದೇನೋ ಹೊಳೆಯಿತು, ಆಶಾದೀಪ
ಬೆಳಗಿದಂತಾಯಿತು, ಅನಾಥೆಯನ್ನು ಸಾಕಿ ಸಲಹಿದ ಅಜ್ಜಿ ಆ
ಬೆಳಕಿನಲ್ಲಿ ಕಂಡಿದ್ದಳು. ಹಿಂದಿನ ಮಹಾದಾಸೆ, ತನ್ನಂತೆ
ಅನಾಥರ ಸೇವೆ ಮಾಡುವ ಯೋಚನೆ ಗುಡುಗಿತ್ತು. ಅಜ್ಜಿಯ
ಮನೆಯನ್ನೇ ಅನಾಥರನ್ನು ಸಲಹುವ ಅನಾಥಾಲಯ
ಮಾಡುವ ಮಿಂಚು ಮಿಂಚು ಮರೆಯಾಗಿತ್ತು.
ಬುಧವಾರ, ಸೆಪ್ಟೆಂಬರ್ 23, 2020
ಬೀಜ
ನಾನು ಅರಿವಿದ್ದ ದಿನಗಳಲ್ಲಿ ಮನೆಯ ಮುಂದೆ ಪ್ರಾಮಾಣಿಕತೆಯ
ಬೀಜ ಬಿತ್ತಿದ್ದೆ. ಅದು ಸಸಿಯಾಗಿ ಬೆಳೆದು ಬೆಳೆದು
ಹೆಮ್ಮರವಾಗುವುದರಲ್ಲಿದೆ ಎಂದು ಹಗಲುಗನಸು ಕಂಡಿದ್ದೆ.ಆದರೆ
ಅದು ಕವಲೊಡೆದು, ಕಾಣದ ಅಸ್ಮಿತಕ್ಕೆ ಬಾಗಿದೆ. ನಾನೀಗ ಮತ್ತೆ
ಅದೇ ಬೀಜಬಿತ್ತಿದ ಜಾಗದಲ್ಲಿ ನೀರಿಕ್ಷೆಯಲ್ಲಿದ್ದೇನೆ.
ಮಂಗಳವಾರ, ಸೆಪ್ಟೆಂಬರ್ 22, 2020
ಮಲೆಗಳಲ್ಲಿ -ಮದುಮಗಳು
ಸೋಮವಾರ, ಆಗಸ್ಟ್ 24, 2020
ನನ್ನಪ್ಪ
ಗುರುವಾರ, ಆಗಸ್ಟ್ 13, 2020
ನಿರಾಕರಣೆ
ಬುಧವಾರ, ಆಗಸ್ಟ್ 5, 2020
ಕೊಡಗಿನ ಪ್ರತಿಭಾನ್ವಿತ ಕವಿ ಕಾಜೂರು ಸತೀಶ್
2015ರ " ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪುರಸ್ಕಾರ " ಪಡೆದ ಸತೀಶ್ ರವರ ಮೊದಲ ಕವನ ಸಂಕಲನ "ಗಾಯದ ಹೂವುಗಳು " ಮತ್ತು ಮಲಯಾಳಂ ಕವಿತೆಗಳ ಅನುವಾದಿದ ಪುಸ್ತಕ "ಕಡಲಕರೆ "ಗೆ..ತಡವಾಗಿಯಾದರೂ ಅಭಿನಂದನೆಗಳನ್ನು 💐💐ತಿಳಿಸುತ್ತಾ... ಮುಂದುವರೆಯುತ್ತೇನೆ.
ನಾ ಅರಿತಂತೆ ಸತೀಶ್ ರವರ ಕವಿತೆಗಳಲ್ಲಿ ಅವರಂತೆ ಉತ್ಸಾಹವಿದೆ.ಸಾಮಾನ್ಯ ಓದುಗರನ್ನು ಯೋಚನಾ ಮಗ್ನರನ್ನಾಗಿಸುವ ಶಕ್ತಿ ಇದೆ. ಇಂದಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಆಕ್ರೋಶವಿದೆ. ಬೇಸರ, ಕಾಳಜಿ, ನೋವು, ಸಮಾನತೆಗಾಗಿ ಹಂಬಲ, ಭ್ರಷ್ಟಾಚಾರದ ವಿರುದ್ದ ದನಿ, ಪರಿಸರ ಕಾಳಜಿ, ಪ್ರೇರಣೆಯ ಶಕ್ತಿ, ಇವುಗಳು ಅವರ ಕವಿತೆಯಲ್ಲಿ ಉಸಿರಾಡುತ್ತವೆ. ಸತೀಶ್ ರವರು ಕವಿತೆಗಳನ್ನು ಹಡೆಯುವ ಪರಿ ನಮ್ಮಂಥ ಸಾಮಾನ್ಯ ಓದುಗರನ್ನು ಚಿಂತನಾಶೀಲರನ್ನಾಗಿಸುತ್ತದೆ.
ಬುದ್ಧನ ತತ್ವಗಳಿಗೆ ಶರಣು ಹೋಗಿರುವ ಸತೀಶ್ ರವರು.. ಓದು ಮತ್ತು ಏಕಾಂತವನ್ನು ಸಂಗಾತಿಯನ್ನಾಗಿಸಿ ಕೊಂಡಿದ್ದಾರೆ. ಹೆಚ್ಚಾಗಿ ಏಕಾಂತವನ್ನು ಪ್ರೀತಿಸಿ.. ಅಪ್ಪಿರುವ ಇವರು ಏಕಾಂತ ಪರಿಭಾವಿ. ಶಿಕ್ಷಕರಾಗಿಯೂ ಹೆಚ್ಚಿನ ಜ್ಞಾನ ಹೊಂದಿರುವ ಇವರು ಎಲ್ಲರೊಂದಿಗೂ ಸ್ನೇಹಜೀವಿ. ಯಾವುದೇ ವೃತ್ತಿ /ಸೇವೆ ಕೊಟ್ಟರು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮೃದು ವ್ಯಕ್ತಿತ್ವದ ಆಶಾಭಾವಿ.
ಸೂಕ್ಷ್ಮ ದೃಷ್ಟಿಕೋನದಲ್ಲಿ ಗಮನಿಸಿದಾಗ ಭಿನ್ನರಲ್ಲಿ ವಿಭಿನ್ನರಾಗಿ ಕಾಣುವ ಸತೀಶ್ ರವರು ಸಾಹಿತ್ಯವಲ್ಲದೇ ಇತರ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.
ಸತೀಶ್ ರವರ ಫೋಟೋಗ್ರಫಿ :-ಪರಿಸರ ಪ್ರೇಮಿಯು
ಹೌದಾಗಿರುವ ಇವರು, ಸಾಮಾನ್ಯ ವಸ್ತು.. ಸಂಗತಿಗಳನ್ನು ತನ್ನ ದೃಷ್ಟಿಯಲ್ಲಿ ವಿಶೇಷವಾಗಿ ಕಾಣುತ್ತಾ.. ಪ್ರಕೃತಿ, ಸಸ್ಯ, ಪಕ್ಷಿ ಹೀಗೆ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಶೇಷವಾಗಿ ತೋರಿಸುವ ಕಲೆ ಕರಗತವಾಗಿಸಿಕೊಂಡಿದ್ದಾರೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಸತೀಶ್ ರವರ ಕ್ಯಾಮರಾ ಕಣ್ ಚಳಕದಲ್ಲಿ ಕಂಡಾಗ wow.. !ಎಂಬ ಉದ್ಗಾರ ಹೊರಡಿಸುವಂತಿರುತ್ತವೆ. ಪಕ್ಷಿಗಳನ್ನು ಪ್ರೀತಿಸುವ ಇವರು ಅವುಗಳೊಂದಿಗೆ ನಂಟು ಹೊಂದಿದ್ದು.. ಪಕ್ಷಿಗಳ ಬಗ್ಗೆ ಅಪಾರ ಜ್ಞಾನ ತುಂಬಿಕೊಂಡಿದ್ದಾರೆ.
ಮಾತುಗಳೇ ಮತ್ತೆ ಮತ್ತೆ ಆಲಿಸುವಷ್ಟು ಹಿತವೆನ್ನಿಸುವಾಗ ಹಾಡಿದರೆ ಎಷ್ಟು ಚಂದ...!! ಹೌದು ಸತೀಶ್ ರವರ ಹಾಡುಗಾರಿಕೆ ಕೇಳಲು ಇಂಪಾಗಿರುತ್ತದೆ. ಸತೀಶ್ ರವರು ಹಾಡಿರುವ ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಚಲನಚಿತ್ರಗೀತೆಗಳು, ಭಾವಗೀತೆಗಳು ಅವರ ಹಾಡುಗಾರಿಕೆಯಲ್ಲಿನ ಆಸಕ್ತಿ., ತೊಡಗಿಸಿಕೊಳ್ಳುವಿಕೆಯನ್ನು ಸಾಕ್ಷಿಕರಿಸುತ್ತವೆ.
ಚಿತ್ರಕಲೆಯನ್ನು ಹವ್ಯಾಸವಾಗಿಸಿಕೊಂಡಿರುವ ಸತೀಶ್
ರವರು ವರ್ಣಚಿತ್ರಗಳು... ಡಿಜಿಟಲ್ ಪೇಂಟಿಂಗ್..ಹೀಗೆ ವಿವಿಧ ರೀತಿಯ ಕಲಾತ್ಮಕ ಚಿತ್ರಗಳನ್ನು ಅರಳಿಸುವಲ್ಲಿ ನಿಸ್ಸೀಮರು.ಫೇಸ್ಬುಕ್, ಇನ್ಸ್ಟಾಗ್ರಾಮ್, ಸ್ಟಾರ್ ಮೇಕರ್, youtube ಗಳಲ್ಲಿ ಅವರು ತೊಡಗಿಸಿ ಕೊಂಡಿರುವ ರೀತಿ ಶ್ಲಾಘನೀಯ.
ಸಾಮಾಜಿಕಜಾಲತಾಣಗಳು... youtube.. ನಂತಹ ವಿಡಿಯೋ ಶೇರಿಂಗ್ ಸರ್ವಿಸ್ಗಳಲ್ಲಿ ಸರ್ಕಾರಿಶಾಲೆ ಮತ್ತು ಸರ್ಕಾರಿ ಶಾಲಾಮಕ್ಕಳ ಪ್ರತಿಭೆ.. ಕವಿತಾವಾಚನ ಹೀಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪಸರಿಸುವಲ್ಲಿ ಸಕ್ರಿಯರಾಗಿದ್ದಾರೆ. " ಯಾರಲ್ಲೂ ಸಲ್ಲದ ಕಲೆಗಳು.. ಸತೀಶ್ ರವರಿಗೆ ಸಲ್ಲುತ್ತವೆ.".. ಕಾರಣ ಅವುಗಳ ಜಾಡು ಹಿಡಿದು ದಕ್ಕಿಸಿಕೊಳ್ಳುವ ಶ್ರಮದ ಪ್ರಯತ್ನ /ಛಲ ಮತ್ತು ಪ್ರತಿಯೊಂದರಲ್ಲೂ ಸೃಜನಶೀಲತೆ ಹುಡುಕುವ ನಿಪುಣತೆ ಇವರಲ್ಲಿದೆ.
ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...
-
ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಪುಸ್ತಕ ಕುವೆಂಪುರವರ "ಮಲೆಗಳಲ್ಲಿ ಮದುಮಗಳು " ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವ...
-
ಕ್ಷಮಿಸು ಎಂಬುದು ಆಗಾಗ್ಗೆ ಮರುಕಳಿಸುವ ಮಾರ್ದನಿ ನಮ್ಮ ಮನುಕುಲದೊಳಗೆ ಹಿಂಜರಿಕೆ, ಮುಗ್ಗರಿಕೆಗಳಿಲ್ಲ ಕ್ಷಮಿಸುವಿಕೆಯ ಅರಿವು ಪರಿವಿನ ಪಟ್ಟಿಯಲ್ಲಿ ಮುಲಾಜು ರಿಯಾಯಿತಿಗಳಿಲ...
-
ನೀ ಅಂದು ನಕ್ಕೆ.. ! ಗಾಣದಲ್ಲಿ ಸಿಕ್ಕಿದ ನಗು ಹೆಪ್ಪುಗಟ್ಟಿ ತಿರುಗಿತು ಗಾಣ ನಿಂತರೂ ಸವೆದ ದಾರಿಗಳು ಮಾಸಿಲ್ಲ ತಿರುಗುತ್ತಲೇ ಇವೆ ಒಳಗಿಳಿದ ಅದರ ಬೇರುಗಳು ನಾ ನಕ್ಕು ಚಿಗ...




































