ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಶುಕ್ರವಾರ, ಜೂನ್ 17, 2022

ಹಸಿರು ಮೆತ್ತಿ, ಮೊಳಕೆಯೊಡೆಸಿದ ನೀನೇ 
ಮೊದಲಾಗಬೇಕು, ನನ್ನ ತನು ಮನವು 
ಉಸಿರು ಬಿಟ್ಟಾಗ
ಮುತ್ತಿಕ್ಕಿ, ನಿನ್ನ ಹಸಿರು ಬನದಲಿ
ಅಂಗಾತ ಮಲಗಿಸಿ ಬಿಡು 
ಸದಾ ಹಾತೊರೆದು ನಿರಾಸೆಯ
ನೀರನ್ನು ಸುರಿಸಿದ ನನ್ನ ಕಣ್ಣುಗಳಿಗೆ
ನಿನ್ನ ಮನಸ್ಸಿನಂತೆ ವಿಶಾಲ
ಬೊಗಸೆ ಕೈಗಳಿಂದ
ಹುಡಿ ಹುಡಿಯಾದ ಮಣ್ಣು
ಉದುರಿಸು, ಮುಂದೊಂದು
ಜನ್ಮದಲ್ಲಿ ನಿನ್ನ ಸಸಿಯಾಗುವೆ
ನನ್ನ ಕಣ್ಣುಗಳಿಂದ ಹರಿದು
ಪಸೆಯಾದ ನಿನ್ನಲ್ಲಿಯ
ಗುಡ್ಡವನ್ನು ಮುಚ್ಚಲು ನೀ
ಏನನ್ನು ಬಳಸುವೆ, ಯೋಚಿಸು...
ಆಗದು ಎಂದೂ ನಿನ್ನಿಂದ
ನೀ ಹುದುಗಿಸಿದಷ್ಟು ನಾ
ಚಿಗುರುವೆ, ಚಿಗುರುವೆ
ನಿನ್ನಯ ಮನದಲ್ಲಿ
ಸದಾ ಹಸಿರಾಗಿ ನಿನ್ನ ಉಸಿರಾಗಿ.




ಗುರುವಾರ, ಡಿಸೆಂಬರ್ 16, 2021

ತಾಳ್ಮೆ

ಹಿಡಿದ ತಾಳ್ಮೆಯ ಬತ್ತಿ 
ಉರಿಯುತ್ತಲೇ ಇದೆ 
ಆಗಾಗ ತಂಗಾಳಿ 
ಆರಿಸಲೆಂದೋ ಉರಿಯನ್ನು 
ಹೆಚ್ಚಿಸಲೆಂದೋ 
ಬೀಸುತ್ತಲೇ ಇರುತ್ತದೆ  
ಹಗಲು, ರಾತ್ರಿಗಳಲ್ಲೂ 
ಬತ್ತಿ  ಪ್ರಕಾಶಿಸುತ್ತಿತ್ತು 
ವಾಯುರಾಯ ತನ್ನ ಪ್ರಭೆ 
ಹೆಚ್ಚಿಸಿ ನಗುವಿನ ಅಲೆ 
ಬೀರಿದ. 
ಅದನ್ನೂ ಬಾಚಿ ತಬ್ಬಿ 
ತನ್ನೊಳಗೆ ಬಚ್ಚಿಟ್ಟು 
ಬತ್ತಿ ಇನ್ನಷ್ಟು ಪ್ರಜ್ವಲಿಸಿತು 
ಬತ್ತಿಯಲ್ಲಿ ಬೆರೆತ 
ಗಾಳಿ ತನ್ನಲ್ಲಿಯ ಗುಣ 
ಬದಲಿಸಿ ಮತ್ತೆ ನಗುವಿನ 
ಅಲೆ ಬೀರಿತು. 



ಭಾವನೆಗಳು

ಕೊಳದಲ್ಲಿ ಭಾವನೆಗಳಿಗೆ
ಮುಳುಗಲು ಕಲಿಸುತ್ತಿದ್ದೇನೆ
ಮುಳುಗಿ ಮುಳುಗಿ
ಈಜ ಬಯಸಿದಾಗ
ಮತ್ತೆ ಮುಳುಗಿಸುತ್ತೇನೆ
ಮುಳುಗಿ ಮುಳುಗಿ
ಮತ್ತೆ ತೇಲ ಬಯಸಿದಾಗ
ಕತ್ತು ಹಿಸುಕಿ
ಉಸಿರುಗಟ್ಟಿಸಿದಾಗ
ಕಣ್ಣಂಚಿನ ನೀರಾಗಿ ಹರಿದು
ಅದೇ ಕೊಳವನ್ನು ಸೇರಿ
ಶಾಂತವಾಗುತ್ತವೆ.




ನನ್ನ ದಿನ

ಆಸೆಗಳು ಸತ್ತ ದಿನ
ನಾನು ಹುಟ್ಟಿದ ದಿನ

ನಿರೀಕ್ಷೆಗಳು ನೀರು ಕುಡಿದ ದಿನ
ನಾನು ಮರುಜನ್ಮವೆತ್ತಿದ ದಿನ

ಸ್ವತಂತ್ರವನ್ನು ಕಂಡುಕೊಂಡ ದಿನ
ನಾನು ನಾನಾದ ದಿನ

ಏಕಾಂತಕ್ಕೆ ಜೋತುಬಿದ್ದ ದಿನ
ನನ್ನಲ್ಲಿಯ ಬೆಳಕು ಸ್ಫೋಟಿಸಿದ ದಿನ

ಭಾವನೆಗಳನ್ನು ಮೆಟ್ಟಿನಿಂತ ದಿನ
ಸಮಸ್ತವನ್ನು ಗೆದ್ದು ನಿಂತ ನನ್ನ ದಿನ


ಶುಕ್ರವಾರ, ಡಿಸೆಂಬರ್ 3, 2021

ಹೆಣ್ಣು

ಹೆಣ್ಣು 


ಹೆಣ್ಣಂತೆ ಅವಳು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ 
ಹೆಣ್ಣಂತೆ ಅವಳು 
ಜನ್ಮ ಸಾರ್ಥಕತೆಯ 
ಮಕ್ಕಳಿರಬೇಕಂತೆ 
ಹೆಣ್ಣಂತೆ ಅವಳು 
ನೌಕರಿ, ಸೌಕರ್ಯಗಳ 
ಉಸಾಬರಿ ಬೇಕಿಲ್ಲವಂತೆ 
ಹೆಣ್ಣಂತೆ ಅವಳು 
ಮನೆಯೊಳಗೆ ಆಕಾಶ ನೇಯ ಬೇಕಂತೆ 
ಹೆಣ್ಣಂತೆ ಅವಳು 
ಬಯಕೆ ಬಾಣಲೆ ಬೇಯಿಸಿ 
ಮನಸ್ಸು, ಕನಸುಗಳ 
ಅಡುಗೆ ಮಾಡಿ ಬಡಿಸಬೇಕಂತೆ 
ಹೆಣ್ಣಂತೆ ಅವಳು 
ಅಧೀನತೆ ಅವಳ ಆ ಜನ್ಮಸಿದ್ಧ   ಹಕ್ಕಂತೆ 
ಹೆಣ್ಣಂತೆ ಅವಳು 
ಸದಾ ನಗುತ್ತಿರಬೇಕಂತೆ 
ಕತ್ತಲ್ಲಲ್ಲಿರುವ ಹಣತೆಯಂತೆ  
ಹೆಣ್ಣು ಹೂವಂತೆ 
ನೋವಲ್ಲೂ ನಗಬೇಕಂತೆ 
ಹೆಣ್ಣು ಕೋಮಲೆಯಂತೆ 
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ 
ಈ ಹೂವು, ಹಾವುಗಳ 
ಲೆಕ್ಕಾಚಾರವೆಲ್ಲ ಎಷ್ಟು ದಿನ? 
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ 
ಅಸ್ತ್ರಕ್ಕೆ ಕೈ ಚಾಚುವವರೆಗೆ. 






     

ಹೆಣ್ಣು


ಹೆಣ್ಣು 

ಹೆಣ್ಣಂತೆ ಅವಳು
ಆದರೆ ಕುಂಕುಮವಿರಬೇಕಂತೆ
ಹೆಣ್ಣಂತೆ ಅವಳು
ಜೇಡರ ಬಲೆಯ ಜಡೆ ಇರಬೇಕಂತೆ
ಹೆಣ್ಣಂತೆ ಅವಳು
ನರಿಗೆಗಳೆಲ್ಲ ಮಣ್ಣಾಗುವವರೆಗೂ
ಬಾಗುತ್ತಿರಬೇಕಂತೆ 
ಹೆಣ್ಣಂತೆ ಅವಳು 
ಜನ್ಮ ಸಾರ್ಥಕತೆಯ 
ಮಕ್ಕಳಿರಬೇಕಂತೆ 
ಹೆಣ್ಣಂತೆ ಅವಳು 
ನೌಕರಿ, ಸೌಕರ್ಯಗಳ 
ಉಸಾಬರಿ ಬೇಕಿಲ್ಲವಂತೆ 
ಹೆಣ್ಣಂತೆ ಅವಳು 
ಮನೆಯೊಳಗೆ ಆಕಾಶ ನೇಯ ಬೇಕಂತೆ 
ಹೆಣ್ಣಂತೆ ಅವಳು 
ಬಯಕೆ ಬಾಣಲೆ ಬೇಯಿಸಿ 
ಮನಸ್ಸು, ಕನಸುಗಳ 
ಅಡುಗೆ ಮಾಡಿ ಬಡಿಸಬೇಕಂತೆ 
ಹೆಣ್ಣಂತೆ ಅವಳು 
ಅಧೀನತೆ ಅವಳ ಆ ಜನ್ಮಸಿದ್ದ  ಹಕ್ಕಂತೆ 
ಹೆಣ್ಣಂತೆ ಅವಳು 
ಸದಾ ನಗುತ್ತಿರಬೇಕಂತೆ 
ಕತ್ತಲ್ಲಲ್ಲಿರುವ ಹಣತೆಯಂತೆ  
ಹೆಣ್ಣು ಹೂವಂತೆ 
ನೋವಲ್ಲೂ ನಗಬೇಕಂತೆ 
ಹೆಣ್ಣು ಕೋಮಲೆಯಂತೆ 
ಸ್ವಾತಂತ್ರ್ಯ ಬಳಿ ಸುಳಿಯಬಾರದಂತೆ 
ಈ ಹೂವು, ಹಾವುಗಳ 
ಲೆಕ್ಕಾಚಾರವೆಲ್ಲ ಎಷ್ಟು ದಿನ? 
ಶರಣೆಂಬ ಅಸ್ತ್ರ
ಕತ್ತರಿಸಿ, ಧೈರ್ಯ ವೆಂಬ 
ಅಸ್ತ್ರಕ್ಕೆ ಕೈ ಚಾಚುವವರೆಗೆ. 
     

ಹಠ


ಹಠ 

ದಣಿವಾರಿದ ನೆತ್ತಿಗೆ
ಕುಳಿತ ಮರದ ಮಣ್ಣಿನಲ್ಲಿ
ಹಸಿರು ಭಾವ ಮಿಂಚಿದಂತಾಗಿ
ಮನವು ಅಗೆದು ತೆಗೆಯ ಬಯಸಿತು
ಬಿಸಿಲ ಝಳದಿ ಬರಡು
ಭಾವನೆಗಳ ಅಗೆತ 
ಬಿಡದ ಛಲದಿ ಹಠಕ್ಕೆ 
ನೇತು ಬಿದ್ದು 
ತೂರಿ ತೂರಿ ಅಗೆದೆ 
ಗುಂಡಿ ಆಳವಾಗಿ ಇಣುಕಿ
ಹಠವು ಮಣ್ಣಿನಲ್ಲಿ ಮಲಗಿ, 
ನಕ್ಕು ನುಡಿಯಿತು
ಬರಡು ಬರಡು ಮಡಿಲಿನಲ್ಲಿ 
ಸಿಗುವುದುಂಟೆ ಹಸಿರ ಪಸೆಯು 
ಕಣ್ಣನೀರೆ ನಿನಗೆ ಬುತ್ತಿ 
ಗಟ್ಟಿ ಮಾಡು ನಿನ್ನತನವ 
ಎಂದು ಬತ್ತದಂತೆ
ನಿನ್ನ ಭಾವ ಸ್ಫೂರ್ತಿ. 




ಬುಧವಾರ, ಅಕ್ಟೋಬರ್ 6, 2021

  ಬಾಪುವಿನೊಂದಿಗೆ,  ನನ್ನ ಕೆಲವು ಮನದಾಳದ  ಮಾತುಗಳಿವೆ. 
     ನೀವೇನೋ ಸ್ವಾತಂತ್ರ್ಯಕ್ಕೆ ಹೋರಾಡಿ, ಸ್ವಾತಂತ್ರ್ಯದ ಬೀಜ ಬಿತ್ತು ಹೋದಿರಿ,  ಆದರಿಂದು ಸ್ವಾತಂತ್ರ್ಯವೇ ಅರ್ಥ ಕಳೆದುಕೊಂಡು, ಕೆಲವು ವಿಷಯಗಳಿಗೆ ಹಾಗೂ  ಕೆಲವರಿಗೆ ಮಾತ್ರ ಸೀಮಿತವಾಗಿದೆ. 

ಅಹಿಂಸೆಯ ದಾರಿ ತೋರಿದಿರಿ, ಆದರೆ ನೀವು ಜನಗಳಿಗೆ ಮಾನಸಿಕವಾಗಿ ಹಿಂಸಿಸುವುದೂ ಮಹಾಪಾಪವೆಂದು ತೋರಿಸಿಕೊಡಲಿಲ್ಲ 

ಮಾನವೀಯ ಮೌಲ್ಯಗಳಿರಬೇಕೆಂದೇನೂ ಹೇಳಿದಿರಿ, ಆದರಿಂದು ಜನಗಳಲ್ಲಿ ಪ್ರೀತಿ, ಕರುಣೆ, ತ್ಯಾಗ, ಅನುಕಂಪ, ಸಹಾನುಭೂತಿ, ತಾಳ್ಮೆಗಳೆಲ್ಲವೂ ಬುಡಸಮೇತ ಕಿತ್ತು ಬಿದ್ದುಕೊಂಡಿವೆ. 
ಪ್ರಚಾರ, ಹೊಗಳಿಗೆ, ಅನ್ಯಾಯ, ಭ್ರಷ್ಟತೆ, ಮೋಸ, ವಂಚನೆಗಳಿಗೆ ಆಶ್ರಯ ನೀಡಿವೆ. 

ನೀವೇ ಯೋಚಿಸಿ..... ನಿಮ್ಮ ಕನಸಿನ ದೇಶದ ವ್ಯವಸ್ಥೆಯು,  ಸ್ವಲ್ಪ ಮಟ್ಟಿಗಾದರೂ ಸರಿಯಾಗಲು , ಜನ ಮನಗಳಲ್ಲಿ ನೀವು ಮತ್ತೆ ಮೊಳಕೆಯಾಗಿ  ಚಿಗುರೊಡೆಯಬೇಕಾದ ಅನಿವಾರ್ಯತೆ ಎಷ್ಟಿದೆ ಎನ್ನುವುದನ್ನು ಬಾಪು. 

ಕೆಲಸಬೇಕಾಗಿದೆ

ಕಸಗುಡಿಸುವ
ಕೆಲಸಬೇಕಾಗಿದೆ, ಆ ಕಚೇರಿಯಲಿ
ಆ ಒಲವ ನೋಡಲು
ಅದರ ಚೆಲುವ ಸವಿಯಲು
ಅಂತರ್ಯ ಸ್ವಚ್ಛವಾಗಲು

ಆ ಒಂದು ಕಚೇರಿಯಲಿ
ಒಲವಿಂದ ಉಸಿರಾಡುತ್ತಿರುವ
ಹಸಿರಿನ ಅರಿವನ್ನು
ನಾ ಉಸಿರಾಡಲು
ಕೆಲಸ ಬೇಕಾಗಿದೆ, ಆ ಕಚೇರಿಯಲಿ

ಒಲವು ಮೌನದಲಿ
ಪ್ರತಿಭಟಿಸುತ್ತಿರುವ
ಶಿಷ್ಟತೆಯ , ಮಾರ್ದನಿಯಾಗಿ
ಧ್ವನಿಸಲು  ಕೆಲಸಬೇಕಾಗಿದೆ
ಆ ಕಚೇರಿಯಲಿ 

ಒಲವಲ್ಲಿ ತುಂಬಿರುವ 
ಗಾಂಭೀರ್ಯವನು ಅಳೆದು 
ಕುಡಿದು ಹೊರಹೊಮ್ಮಿದ ಹೂವಾಗಲು 
ಕೆಲಸಬೇಕಾಗಿದೆ, ಆ ಕಚೇರಿಯಲಿ 

ಒಲವಿನ ಕಣ್ಣಲ್ಲಿ ಕಣ್ಣಾಗಿ 
ಮಾತಲ್ಲಿ ಮಾತಾಗಿ 
ಸುತ್ತಲಿನ ಸಾಂಗತ್ಯವಾಗಿ 
ಅದರ ಚಪ್ಪಲಿಯ ಧೂಳಾಗಿ 
ಅದರಂತೆ ಶಾಂತಿ ಸೌಹಾರ್ದದ 
ಮೂರ್ತಿಯಾಗಲು 
ಕೆಲಸಬೇಕಾಗಿದೆ,  ಆ ಕಚೇರಿಯಲ್ಲಿ 
ಕಸಗುಡಿಸುವ ಕೆಲಸಬೇಕಾಗಿದೆ. 


ಅಮ್ಮ

ಪಾಪ ಅಮ್ಮ , ಎಂದು
ಅನ್ನಿಸಲೇ ಇಲ್ಲ
ಉರಿಮುಖದ ಸಹಾನುಮೂರ್ತಿಯ
ಒಳಗಿನ ಭಾವ ಎಂದೂ
ಅರಿಯಲೇ ಇಲ್ಲ, ಅರಿತ್ತದ್ದು ಒಂದೇ 
ವಟ ವಟ ಎನ್ನುವ ಬೈಗುಳ 
ರೋಗಕ್ಕೆ ನಂಟು ಬಿದ್ದು 
ಬೆವರಲ್ಲೇ ಉಣ ಬಡಿಸಿದರೂ 
ಕಂಡಿದ್ದು ನನ್ನ ಹಸಿವಷ್ಟೆ 
ಮೊಳಕೆಯೊಡೆದ ಅದೆಷ್ಟೋ 
ತನ್ನೊಳಗನ್ನು ಸಂಸಾರದ
ಕೆನ್ನಾಲಗೆಯಲ್ಲಿ ಅದ್ಹೇಗೆ 
ಚಿವುಟಿರಬಹುದು? 
ಸೊರಗಿ ಮೂಡಿದ ಸೀರೆಯ 
ನೋವಿನ  ನೆರಿಗೆಗಳನು 
ಅಮ್ಮ, ಎಂದಿಗೂ ಬಿಚ್ಚಿ 
ಹರಡಲಿಲ್ಲ 
ನಕ್ಕು ಹರಡಿದರೂ ಅದ 
ಅರಿಯುವ ಗೋಜು 
ಯಾರಿಗಿರಲಿಲ್ಲ
ಒಮ್ಮೆ ಅಲ್ಲಿಂದ ಕಾಲ್ಕಿತ್ತರೆ 
ಸಾಕೆನ್ನುತ್ತಿದ್ದ ಮನವಿಂದು 
ಘಾಸಿಗೊಂಡು ಉರಿವ
ಅದೇ ಕರಿನೆರಳ  
ಪಾಪ ಪ್ರಜ್ಞೆಯ   ಭಾಸದಲಿ.














ಸ್ವಾತಂತ್ರ್ಯ

ನಿನಗೊಂದು ಸ್ವಇಚ್ಚೆಯ ಪ್ರಶ್ನೆ
ಉತ್ತರಿಸುವೆಯ ಅಪ್ಪಿ...
ಸ್ವಾತಂತ್ರ್ಯಕ್ಕೆ ರೆಕ್ಕೆ ಬರುವುದು
ಯಾವಾಗ...?
ಪ್ರತಿ ಮನೆ -ಮನಗಳು
ಮಸಣದಿಂದೆದ್ದು ಹೊರಬರುವುದು
ಯಾವಾಗ...?
ಕಳ್ಳಗಿಂಡಿಯಲ್ಲಿ ಸದಾ ಬಗ್ಗಿ ನೋಡುವ
ಸ್ವಾತಂತ್ರ್ಯ, ಮುಖಾಮುಖಿಯಾಗುವುದು
ಯಾವಾಗ..?
ತಳ್ಳುವಿಕೆ, ನೂಕುವಿಕೆಗೆ ನಾಚುವ ಸ್ವಾತಂತ್ರ್ಯ
ರಾರಾಜಿಸುವುದು ಯಾವಾಗ...?
ಹೆಣ್ಮಕ್ಕಳ ಹಣೆಯಗಲದ ಕುಂಕುಮದಲಿ 
ಮಾತಾಗುವುದು  ಯಾವಾಗ...? 
ಹೆಂಗಳೆಯರ ಕಾಲ್ಗೆಜ್ಜೆಯಲಿ 
ನಲಿದಾಡುವ ದನಿಯಾಗುವುದು 
ಯಾವಾಗ...? 
ಕಂಬಗಳಲಿ ಮುಗಿಲ್ನೋಡುತ 
ಪಟ ಪಟನೆ ಕೈ ಬೀಸಿ ಕರೆಯುವ 
ಬಾವುಟಕ್ಕೆ ಅರ್ಥದ ಗಾಳಿ 
ಸ್ಪರ್ಶಿಸುವುದು ಯಾವಾಗ..? 
ಸ್ವಾತಂತ್ರ್ಯಕ್ಕೂ ಸ್ವಾತಂತ್ರ್ಯ 
ಮುತ್ತಿಕ್ಕುವುದು ಯಾವಾಗ..? 
ನನ್ನ ದೇಶ, ಬಾಪು ಬಯಸಿದ 
ಸ್ವಾತಂತ್ರ್ಯ ಕೊಡುವುದು ಯಾವಾಗ..? 
ಉತ್ತರಿಸುವೆಯ ಅಪ್ಪಿ.....? 



ತೂತು

ಬಚ್ಚಲ ತೂತು ದೊಡ್ಡದಾಯಿತೆಂದು
ಚಿಕ್ಕದು ಮಾಡಲು ಪ್ರಯತ್ನಿಸಿದೆ
ಮರುದಿನ ಅದರ ಸುತ್ತೆಲ್ಲಾ ಬಿರುಕುಗಳು
ಅದನ್ನೂ ಮುಚ್ಚಿ, ಉಸಿರು ಬಿಡುವಲ್ಲಿಗೆ
ಇಲಿರಾಯ ಒಂದು ಚಿಕ್ಕ
ಬಿಲ ಕೊರೆದು ಓಡಾಡಿದ
ಮಗನ ಬೆರಳು ಸಿಕ್ಕಿಕೊಂಡರೆಂದು
ಮಣ್ಣು ಹಾಕಿ ಸಮ ಮಾಡಿದೆ
ಕಣ್ಣು ಮುಚ್ಚಿ ಬಿಡುವುದರೊಳಗೆ
ಇರುವೆಗಳು ಸಾಲು ಸಾಲು
ಇದರ ಗೋಜೆ ಬೇಡೆಂದು
ಅಲ್ಲಿಗೊಂದು ಬೋರ್ಡು
ನೇತುಹಾಕಿದೆ
ಎಲ್ಲಾ ಕ್ರಿಮಿಗಳಿಗೂ
ಇಲ್ಲಿ ಸ್ಥಳಾವಕಾಶವಿದೆ
ಸವಾಲುಳ್ಳ ದೊಡ್ಡ ಕ್ರಿಮಿಗಳಿಗೆ
ಹೆಚ್ಚು ಪ್ರಾಶಸ್ತ್ಯ
ಹಾಗೂ ಸತ್ಕರಿಸುವಿಕೆಯೇ
ಉತ್ತರವಾಗಿರುವುದೆಂದು.


ಸೋಮವಾರ, ಸೆಪ್ಟೆಂಬರ್ 20, 2021

ಗ್ರಾಮೀಣ ಸಮುದಾಯ

  "ಗ್ರಾಮೀಣ ಸಮುದಾಯ " ಎಷ್ಟೊಂದು ವಿಶಾಲ ಅರ್ಥಕೊಡುವ ಪದ.  ಪದದಷ್ಟೇ ವಿಶಾಲ ಮನಸ್ಸಿನ,   ಚಿಂತನಾಶೀಲ, ಪ್ರಜ್ಞಾವಂತ  ಜನಗಳಿದ್ದರೆ  ಸಮಸ್ಯೆಗಳು ಸುಲಭವಾಗಿ ಪರಿಹಾರ ಕಾಣುತ್ತವೆ. 

ಎಲ್ಲಿ  ಜನರ ಆಲೋಚನೆಗಳು, ಚಿಂತನೆಗಳು, ಕಾರ್ಯ ಚಟುವಟಿಗಳು, ಆಚಾರ, ವಿಚಾರಗಳು  ಉನ್ನತ ಮಟ್ಟದಲ್ಲಿರುತ್ತವೆಯೋ , ಅಲ್ಲಿಯ ಶಾಲೆ, ಶಾಲೆಯ ವಾತಾವರಣವೂ ಸಹ ಉನ್ನತಮಟ್ಟದಲ್ಲಿರುತ್ತವೆ . ಒಂದು ಸಮುದಾಯ ಶಾಲೆಯ ಸಮಸ್ಯೆ /ಕೊರತೆಯನ್ನು ನೀಗಿಸುವಂತಿರಬೇಕೇ ಹೊರತು, ಹುಟ್ಟು ಹಾಕುವಂತಿರಬಾರದು.     

ಶಾಲೆಗಳ ವಿಷಯದಲ್ಲಿ ಸಮುದಾಯಗಳ ಪಾತ್ರ ಮಹತ್ವದ್ದು, ಅದರ ಅರಿವು ಅಲ್ಲಿಯ ಜನಸಮುದಾಯಕ್ಕಿರಬೇಕು. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ದ್ವೇಷ, ಒಳರಾಜಕೀಯ, ಒಳಸಂಚು, ಜಾತೀಯತೆ, ಸ್ವ ಪ್ರತಿಷ್ಠೆ ಗಳಿಗೆ ಶಾಲೆ ಒಳಗಾಗುತ್ತಿರುವುದು ಖಂಡಿಸಲಸಾದ್ಯವಾದ  ಶೋಚನೀಯ ವಿಷಯ. ಎಲ್ಲಿ ಸಮುದಾಯದ ಜನ ಪ್ರಜ್ಞಾಹೀನರಾಗಿರುತ್ತಾರೋ,  ಅಲ್ಲಿ ಅರಾಜಕತೆ ಹಾಗು ಮೂರ್ಖತನದ ಕಾರ್ಯಗಳು ಮೈತುಂಬಿ ಕುಣಿದಾಡುತ್ತವೆ. 

ಸ್ವ ಪ್ರತಿಷ್ಠೆಗಳನ್ನು ಶಾಲೆಗಳಲ್ಲಿ ಬೇಯಿಸಿಕೊಳ್ಳಲು ಅವಕಾಶ ನೀಡುವ  ಅಥವಾ ತಮ್ಮ ಮೂರ್ಖತನದ ಅಮಲಿನ ನಶೆಯನ್ನು ಶಾಲೆಯಲ್ಲಿ ಪ್ರದರ್ಶಿಸಲು, ಕೈ ಬೀಸಿ ಕರೆಯುವ ಮಟ್ಟಿಗೆ ಶಿಕ್ಷಕ ವರ್ಗವೂ  ಬುದ್ಧಿಹೀನವಾಗಬಾರದು. 

ಶಾಲೆ ವಿದ್ಯಾದೇಗುಲ. ಅದನ್ನು ವಿದ್ಯಾದೇಗುಲವಾಗಿಯೇ ನೋಡುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. 
 ಜನರು,  ಸಮುದಾಯ /ಶಾಲೆಯ ಹಿತಚಿಂತಕರಾಗಬೇಕೇ ವಿನಃ  ಘಾತುಕರಾಗಬಾರದು. 

ತಿಳಿದೋ, ತಿಳಿಯದೆಯೋ ಪ್ರೋತ್ಸಾಹಿಸುತ್ತಿರುವ ಪೋಷಕರು ಒಳಸಂಚುಗಳ ಬಗ್ಗೆ ಸ್ವಲ್ಪ ಚಿಂತಿಸಿದರೆ ಅದರಲ್ಲಿರುವ ಮರ್ಮಗಳು ಅರಿಯುತ್ತವೆ. 

ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರಲ್ಲಿ ಒಡೆದು ಮೂಡಬೇಕಾದ ಜ್ಞಾನೋದಯ.... ಇವೆಲ್ಲದುದರ ದುಷ್ಪರಿಣಾಮ ಯಾರ ಮೇಲೆ..? 
       
                  

ಮಂಗಳವಾರ, ಸೆಪ್ಟೆಂಬರ್ 14, 2021

ಆತ್ಮ

ಆತ ತನ್ನಾತ್ಮದ ಉಸಿರಿಗೆ
ತನ್ನೆಲ್ಲಾ ಜೀವ, ಭಾವ
ಬಸಿದು, ರೂಪುಕೊಟ್ಟು
ಜೀವ ತೆತ್ತನು.
ಆ ರೂಪಿಂದು ಅರಳಿ
ಹೂವಾಗುವ ಹಾದಿಯಲ್ಲಿ.....


ಶಾನು -ಆನು

ಶಾನು, ಆನು ಸೇರಿಕೊಂಡು
ಜಿಗಿದು ನಲಿದು
ಒಂದೇ ಸಮನೆ
ಗೊಳ್ಳು ಹಾಕುತ...
ಸೋನು ಬಂದು
ಹಿಡಿದು ಬಡಿದು
ಕೇಕೆ ಹಾಕುತ....
ಇದನು ಕಂಡು
ಶಾನು, ಆನು
ಮುದುಡಿ ಕುಳಿತ
ಕುಯ್ ಕುಯ್ ಗುಟ್ಟುತ.




ಸೋಮವಾರ, ಜುಲೈ 12, 2021

ಸ್ನೇಹಿತೆ


ಸ್ನೇಹಿತೆಯ ಕೈಯಲ್ಲಿದ್ದ
ಬೆಂಕಿಯನ್ನು ಕುರಿತು ಕೇಳಿದೆ
ಎಲ್ಲಿಂದ ತಂದಿರುವೆ..?
ಪಕ್ಕದ ಮನೆಯಿಂದ
ಎಂದಳವಳು ನಗುನಗುತ
ನನ್ನ ನಿನ್ನ ಮೈಯ
ಕಾವು ಆ ಬೆಂಕಿಯನ್ನು
ಕ್ಷಣಮಾತ್ರದಲ್ಲಿ
ನಂದಿಸಿಬಿಡುವಷ್ಟಿದೆ
ಎಂದೆನವಳಿಗೆ 
ಕಣ್ಣೊಳಗಿನ ಕಾವು ಹೊರ 
ಹಾಕುತ್ತಾ ಬಿಟ್ಟ ಕಣ್ಣು, 
ಬಾಯಿ ಬಿಟ್ಟಂತೆ 
ಸ್ನೇಹಿತೆ ಸ್ತಬ್ಧ.  



ಶನಿವಾರ, ಜೂನ್ 19, 2021

ಅಂಶ


ನೀ ನನ್ನೊಳಗೆ ಬೆಳೆಯಬೇಕಿತ್ತು
ಬೊಜ್ಜಾಗಿಯೋ
ತ್ಯಾಜ್ಯವಾಗಿಯೋ ಅಲ್ಲ
ನನ್ನಾತ್ಮದ ಬುದ್ಧನಾಗಿ
ಪ್ರತಿ ಉಸಿರಾಡದಲಿ
ನಿನ್ನಂಶದ ತಾಳ್ಮೆಯಾಗಿ
ಕಸಿವಿಸಿ ಮೊಳಕೆಗಳ 
ಹಸಿರಂಶವಾಗಿ 
ದೃಢತೆ ಕಾಯದ ಹೆಮ್ಮರವಾಗಿ 
ಹಾರಾಡಿ, ಕಾಲ್ಕಿತ್ತು ಓಡುವ 
ನನ್ನೊಳಗಿಗೆ  ಲಗಾಮುದಾರನಾಗಿ. 


ಶುಕ್ರವಾರ, ಜೂನ್ 11, 2021

ಕನಸುಗಳು

ನಾ ಕಂಡ ಕನಸುಗಳಲಿ
ನೇವರಿಸುವ ನೆತ್ತಿಗಳಿರಬೇಕಿತ್ತು
ಕನಸುಗಳಿಗೆ ಬಲೆ ಹೆಣೆದು
ದಾರಿ ತೋರುವ ಕಲ್ಪನೆಯ
ಹೊತ್ತಿಗೆಗಳಿರಬೇಕಿತ್ತು
ಮಾತುಗಳಿಗೆ ಹಿತ ತುಂಬುವ
ತುಟಿಗಳಿರಬೇಕಿತ್ತು
ವಾಸ್ತವಕ್ಕೆ ಚಿಮ್ಮಿ ನಿಲ್ಲುವ 
ಪಾದಗಳ ಸ್ಪರ್ಶವಿರಬೇಕಿತ್ತು 
ಸೂಕ್ಷ್ಮಕ್ಕೆ ಸೂಕ್ಷ್ಮ ತಿಳಿಸುವ 
ಅರಿವುಗಳಿರಬೇಕಿತ್ತು 
ಭಾವಕ್ಕೆ ನಂಟು ಬೆಸೆಯುವ 
ಮಿಡಿತಗಳಿರಬೇಕಿತ್ತು 
ರಾಗಕ್ಕೆ ಲಯ ಬೆಸೆಯುವ
ತಾಳ ಸಿಗುವಂತಿರಬೇಕಿತ್ತು 
ಸುಮ್ಮನೆ ಕೂತಾಗ ಸ್ಪರ್ಶಿಸಿ 
ಛೇಡಿಸಿ ಹೋಗುವ ತಂಗಾಳಿಯ 
ಸಾಂಗತ್ಯವಿರಬೇಕಿತ್ತು 
ಏನಿಲ್ಲದಿದ್ದರೂ 
ನಿನ್ನಲ್ಲಿಯ ಬುದ್ಧನ ಸಾಮರಸ್ಯದ 
ಹಿತ ಸ್ಪರ್ಶ ಸ್ವಲ್ಪವಾದರೂ 
ಇರಬೇಕಿತ್ತು. 

ಹೆಪ್ಪು


ನೀ ಅಂದು ನಕ್ಕೆ.. !
ಗಾಣದಲ್ಲಿ ಸಿಕ್ಕಿದ ನಗು ಹೆಪ್ಪುಗಟ್ಟಿ ತಿರುಗಿತು
ಗಾಣ ನಿಂತರೂ ಸವೆದ ದಾರಿಗಳು ಮಾಸಿಲ್ಲ
ತಿರುಗುತ್ತಲೇ ಇವೆ
ಒಳಗಿಳಿದ ಅದರ ಬೇರುಗಳು
ನಾ ನಕ್ಕು ಚಿಗುರೊಡೆಯಲು
ಇಂದೂ ಕಾಯುತ್ತಲೇ ಇವೆ.






ಗುರುವಾರ, ಜೂನ್ 3, 2021

ಎಲ್ಲರು ಅವನನ್ನು ಹುಚ್ಚನೆಂದೇ ಕರೆಯುತ್ತಿದ್ದರು, ನೋಡಲು ಸರಿಸುಮಾರು ಹಾಗೆಯೇ. ಎಣ್ಣೆ ಕಂಡು ವರ್ಷಗಳೇ ಕಳೆದಿದ್ದ ಕೂದಲು, ಎಂದೂ ತೆಗೆಯದ ಆ ಕಪ್ಪು ಬಿಳಿ ಗಡ್ಡ, ಚರಂಡಿಯ ಕೊಳಚೆಯೂ ನಾಚುವಂತ ಕೊಳಕಲು ಬಟ್ಟೆ, ಸ್ನಾನ, ಏನೆಂಬುದನ್ನೇ ಅರಿಯದ ದೇಹ,ಎಣ್ಣೆಯ ವಾಸನೆಯನ್ನು ಕಂಡಿರದ ಕೂದಲು, ಹೆಗಲ ಮೇಲೆ ಸದಾ ಸಂಗಾತಿಯಾಗಿದ್ದ ಒಂದು ಚೀಲ, ಹೀಗೆ ಆ ವ್ಯಕ್ತಿ ಕಾಣಸಿಗುತ್ತಿದ್ದ ದೈನಂದಿನ ಚಿತ್ರಣ. 

 ಸಿಕ್ಕ ಸಿಕ್ಕಲ್ಲಿ  ವಸ್ತುಗಳನ್ನು ಚೀಲಗಳಲ್ಲಿ ತುಂಬುವುದು, ಕಂಡ ಕಂಡ ಮನೆಯ ಹೊರಗೆ ಸಿಕ್ಕಿದ್ದನ್ನೆಲ್ಲಾ ಕದಿಯುವುದು, ಕೆಟ್ಟ ಕೆಟ್ಟ ಮಾತುಗಳಲ್ಲಿ ಜನರನ್ನು ಬೈಯುತ್ತಾ ನಡೆದಾಡುತ್ತಿದ್ದ ಆ ವ್ಯಕ್ತಿಯನ್ನು  ನೋಡಿ ಜನ, ವ್ಯಕ್ತಿಯನ್ನು ಹುಚ್ಚನೆಂದು ಕರೆಯುತ್ತಿದ್ದರು. ಹಾಗೆಯೇ ಕಳ್ಳತನ ಮಾಡುತ್ತಿದ್ದ ಕಾರಣಕ್ಕಾಗಿ,  ಆಗಾಗ್ಗೆ ಜನಗಳಿಂದ ಹೊಡೆತದ ರುಚಿಯನ್ನು ಕಂಡಿದ್ದರೂ ಕಳ್ಳತನ ಬಿಡುತ್ತಿರಲಿಲ್ಲ. ಬಹುಶಃ ಹಸಿವಿನ ದಾಹ ಮತ್ತು ಕುಡಿತದ ಚಟವನ್ನು ನೀಗಿಸಲು. 

ನಾನು ಆ ವ್ಯಕ್ತಿಯನ್ನು ಗಮನಿಸಿದ ಹಾಗೆ ಸಂಬಂಧಿಗಳಿದ್ದು, ಮದುವೆಯ ಗೋಜಿರಲಿಲ್ಲವಾದ್ದರಿಂದ ಏಕಾಂಗಿಯಾಗಿದ್ದರು. ಸಣ್ಣ ಪಟ್ಟಣವೆಂದು ಗುರುತಿಸಿಕೊಳ್ಳುವ , ತಾರಸಿ, ಬಹುಅಂತಸ್ತಿನ ಮನೆಗಳ ಮಧ್ಯೆ ಇದ್ದ,  ತನ್ನ ಪಾಳುಮನೆಯಲ್ಲಿ ವಾಸ. ಆ ಮನೆಯೊಳಗೋ ಕದ್ದು ತಂದಿದ್ದ ಏನೇನೋ ವಸ್ತುಗಳು, ಬಟ್ಟೆ, ಪಾತ್ರೆ, ದೊಡ್ಡ ಕಲ್ಲುಗಳು, ಮೂಟೆಗಳು ಕಾಫಿ ಬೀಜ, ಮೆಣಸು, ಶುಂಠಿ, ಹೀಗೆ ಏನೇನೋ.  ಈ ಕದ್ದು ತಂದ ವಸ್ತುಗಳನ್ನು ಅಂಗಡಿಯಲ್ಲಿ ಮಾರುವುದು, ಅವರು ಕೊಟ್ಟ ಅಲ್ಪ -ಸ್ವಲ್ಪ ಹಣದಲ್ಲಿ ಕುಡಿದು, ಆ ಪಾಳು ಮನೆಯೊಳಗೆ ಶವಾಸನ ಹಾಕಿ ಮಲಗುವುದು. 

ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಅವರಿವರ ಮನೆಯ ಹಿತ್ತಲು ಹುಡುಕುವುದು, ಆ ವ್ಯಕ್ತಿಯ ದಿನಚರಿಯಾಗಿತ್ತು.ಈ ದಿನಚರಿ ಕೊರೋನಾ ಲಾಕ್ಡೌನ್ ದಿನಗಳಲ್ಲೂ ಮುಂದುವರೆದಿತ್ತು. ಆದರೆ ಎಂದೂ ಆ ವ್ಯಕ್ತಿ ಮಾಸ್ಕ್ ಮೊರೆ ಹೋದವರಲ್ಲ. ಹಾಗೆ ಕೊರೋನಾ ಸಹ ಅವರ ಬಳಿ ಬಂದಿದ್ದಿಲ್ಲ. ಆದರೆ ಮೂರು ದಿನಗಳಿಂದ ಸದಾ ಬೀದಿಯಲ್ಲಿ ಸುತ್ತಾಡುತ್ತಿದ್ದ  ಆ ವ್ಯಕ್ತಿ ಕಾಣುತ್ತಿರಲಿಲ್ಲ. ಅಂತಹ ವ್ಯಕ್ತಿಯ ಬಗ್ಗೆ ಯಾರು ತಾನೇ ತಲೆಕೆಡಿಸಿ ಕೊಂಡಾರು? 

ಯಾವಾಗ ಆ ಪಾಳುಮನೆಯಿಂದ ಕೆಟ್ಟ ವಾಸನೆ ಅಕ್ಕ ಪಕ್ಕದ ಮನೆಗೆ ಬಡಿಯಿತೋ,ಅನುಮಾನಾಸ್ಪದದಿಂದ  ಒಳ ಹೊಕ್ಕು ನೋಡಿದಾಗ ಎಲ್ಲರ ಅನುಮಾನ ನಿಜವಾಗಿತ್ತು, ಹುಚ್ಚನೆಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿ  ಸತ್ತು ದಿನಗಳು ಕಳೆದಿದ್ದವು.  

ಸಂಬಂಧಿಕರು, ಬೆಲೆಬಾಳುವ ಆಸ್ತಿ, ಹಲವಾರು ಲಕ್ಷಗಳನ್ನು ಇಟ್ಟಿದ್ದ( ಜನಗಳ ಮಾತು ),  ಇಷ್ಟೆಲ್ಲಾ ಇದ್ದಾರು, ಆ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆದದ್ದು, ಗ್ರಾಮ ಪಂಚಾಯಿತಿಯಿಂದ ಒಂದು ಗೂಡ್ಸ್ ಆಟೋ ನಲ್ಲಿ ತೆಗೆದುಕೊಂಡು ಹೋಗಿ ಹೂತರು. 

ಆ ವ್ಯಕ್ತಿಯ ದುರ್ದೈವ ಅಷ್ಟೆಲ್ಲಾ ಬೆಲೆಬಾಳುವ ಆಸ್ತಿ ಇದ್ದರೂ ವಿದ್ಯೆ, ಸಾಮಾನ್ಯ ತಿಳುವಳಿಕೆ ಇಲ್ಲದೆ, ಒಂದು ದಿನವೂ ಸಾಮಾನ್ಯ ಜನಗಳಂತೆ ಬಾಳದೆ ಅನಾಥ ಶವವಾಗಿ ಜೀವಬಿಟ್ಟಿದ್ದು. 

 ಹುಚ್ಚನಿಗೆ ಕೊರೋನಾ, ಕುಡಿದ ಮತ್ತಿನಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ,  ಹೀಗೆಲ್ಲ  ಸತ್ತ ಕೆಲವು ದಿನಗಳ ನಂತರ ಜನಗಳು ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದರು. ಆದರೆ ಆ ವ್ಯಕ್ತಿ ಜನಗಳು ಹೇಳುವಂತೆ ಹುಚ್ಚನಾಗಿರಲಿಲ್ಲ. ಅವನ ವೇಷ ಭೂಷಣಗಳಷ್ಟೇ ಹುಚ್ಚಾಗಿದ್ದವು.  



ಬುಧವಾರ, ಜೂನ್ 2, 2021

ಉಯಿಲು

ಕೊಟ್ಟು ಬಿಡಿ ನಿಮ್ಮಲಿ
ಚಾಚುತ್ತಿರುವ ಕೆನ್ನಾಲಿಗೆಯ ಕಿಚ್ಚುಗಳಿಗೆ
ನನ್ನ ವಿಳಾಸವನು
ದೇವರು ನನ್ನ ಹೆಸರಿಗೆ ಉಯಿಲು
ಬರೆದು ಅದರ ಮೇಲೆ ನನ್ನ
ಹೆಸರು ಅಂಟು ಹಾಕಿದ್ದಾನೆ ಎನ್ನಲಾಗಿದೆ
ನುಂಗಲು |ನೀರು ಕುಡಿಯಲು 
ದಣಿವಾರಿಸಿ ಕೊಳ್ಳಲು |ತಿಂದು ತೇಗಲು 
ಹಾ.....,     ಮರೆಯದಿರಿ  
ನಿಮ್ಮ ಅಕ್ಕ ಪಕ್ಕದವರು, ಪರಿಚಿತರಿಗೆ 
ನನ್ನ ವಿಳಾಸ ಕೊಡಲು. 





ಶುಕ್ರವಾರ, ಮೇ 21, 2021

ಮುಖ್ಯರಸ್ತೆಯಲ್ಲಿರುವ ಸಣ್ಣದೊಂದು ದಿನಸಿ ಅಂಗಡಿ.ಅಂಗಡಿಯ ಮಾಲೀಕ ವ್ಯಾಪಾರದಲ್ಲಿ ಬಹಳ ನಿಸ್ಸೀಮ(ಮೋಸ ಮಾಡುವುದರಲ್ಲೂ ಅಷ್ಟೇ). ನಾನು  ಬಸ್ಸಿಗಾಗಿ ಕಾದು ನಿಂತಾಗ, ಕೆಲಮೊಮ್ಮೆ ಅಲ್ಲೆಲ್ಲ ಸಂಚರಿಸುವಾಗ ಗಮನಿಸಿದ್ದೆ, ಆ ಮಾಲೀಕ ಹೇಗೆ ಹಳ್ಳಿಯ ಜನರು, ಮುಗ್ದ ಜನರನ್ನು, ಚಿಲ್ಲರೆ ಕೊಡುವ ವಿಷಯದಲ್ಲಿ ಎಷ್ಟೆಲ್ಲಾ ವಿಧದಲ್ಲಿ ಮೋಸ  ಮಾಡುತ್ತಿದ್ದನೆಂದು,  ಗಮನಿಸುವಿಕೆ ಅಷ್ಟೇ ಅಲ್ಲ, ಅನುಭವವನ್ನೂ ಪಡೆದಿದ್ದೆ. ಕೂಡು -ಕಳೆಯುವಿಕೆಯಲ್ಲಿ ವ್ಯತ್ಯಾಸ, ನೋಟುಗಳಲ್ಲಿ ವ್ಯತ್ಯಾಸ ಮಾಡುವುದು, ಚಿಲ್ಲರೆ ಕೊಡುವಿಕೆಯಲ್ಲಿ ಎಗರಿಸುವುದು, ತೂಕದಲ್ಲಿ ವ್ಯತ್ಯಾಸ, ಅವಧಿ ಮುಗಿದ ದಿನಸಿ ಪ್ಯಾಕ್ಗಳನ್ನು ನೀಡುವುದು, ಹೀಗೆ ನನ್ನ ಅರಿವಿಗೆ ಬಂದ ಅಂಶಗಳನ್ನು ಮಾಲೀಕನೊಂದಿಗೆ ಕೆಲವು ಬಾರಿ ಚರ್ಚಿಸಿ  ಸರಿ ಮಾಡಿಕೊಂಡಿದ್ದೆ. ಆದರೆ ಅಲ್ಲಿ ಖರೀದಿಸುವ ಉಳಿದ ಜನರನ್ನು ನೋಡಿದಾಗ,  ಛೆ.. !!ಪಾಪ ಅನ್ನಿಸುತ್ತಿತ್ತು, ಆದರೆ ನನ್ನಿಂದ ಏನೂ ಮಾಡಲಾಗದ ಪರಿಸ್ಥಿತಿ. 

 ಒಂದೊಮ್ಮೆ ಹೀಗೆ.... ಅಂಗಡಿ ಬಸ್ಸು ನಿಲ್ದಾಣದ ಪಕ್ಕದಲ್ಲೇ ಇದ್ದುದ್ದರಿಂದ, ಬಸ್ಸಿಗಾಗಿ ಕಾದು ನಿಂತಿದ್ದೆ. ನಾನೆಂದರೆ ಬಸ್ಸಿಗೆ ಸಾಮಾನ್ಯವಾಗಿ ಮುನಿಸು. ನಾ ಕಾದು ನಿಂತಾಗಲೆಲ್ಲ ಬಸ್ ರಾಯ ಏನಾದರೂ ತಗಾದೆ ಮಾಡಿಕೊಂಡು ಬಿಟ್ಟಿರುತ್ತಾನೆ. ಕಾಯುತ್ತಾ ನಿಂತ ನನಗೆ ಆ ಅಂಗಡಿಗೆ ಬಂದ ಯುವಕರ ಮೇಲೆ ದೃಷ್ಟಿ ಹರಿಯಿತು. ಇಬ್ಬರೂ young and smart ಆಗಿದ್ದರು. ಇಬ್ಬರನ್ನು ನೋಡಿದರೆ ಅಕ್ಕ -ಪಕ್ಕದ ಊರಿನವರ ಮುಖಚರ್ಯೆ ಕಾಣುತ್ತಿರಲಿಲ್ಲ. ಒಬ್ಬ energetic boy ಬೈಕ್ ನಲ್ಲೇ ಕುಳಿತ, ಒಬ್ಬ ಇಳಿದು ಅಂಗಡಿಗೆ ಹೋಗಿ ಸಿಗರೇಟು ಪ್ಯಾಕ್ ಕೇಳಿದ, ಹೆಚ್ಚು ನಂಟು ಬೆಳಸಿದರೆ ಶ್ವಾಸಕೋಶ, ಹೃದಯವನ್ನೆಲ್ಲಾ ತಿಂದು ಕ್ಯಾನ್ಸರ್ ಗೆ ಆಹ್ವಾನ ನೀಡುವ, ಒಂದು ಸಿಗರೇಟು ಪ್ಯಾಕ್ ಬೆಲೆ ಸುಮಾರು 200ರೂ ಇರಬಹುದು. ಅವನು ಕೇಳಿದ್ದು ಬರೋಬ್ಬರಿ 20 ಪ್ಯಾಕುಗಳನ್ನು, ಮಾಲೀಕ 20 ಪ್ಯಾಕ್ ಗಳನ್ನು ಕೈನಲ್ಲಿ ಹಿಡಿದು ಹಣವನ್ನು ಕೇಳಿದ, ಆ young boy ಪರ್ಸ್ ತೆಗೆದು ಪರದಾಡುತ್ತಿದ್ದದ್ದನ್ನು  ನೋಡಿದರೆ,  ಅಷ್ಟೆಲ್ಲಾ ಹಣವಿಲ್ಲವೆಂಬುದು ಅವನ ಹಾವಭಾವಗಳಲ್ಲಿ ವ್ಯಕ್ತವಾಗುತ್ತಿತ್ತು. ಹಿಂದೆ ತಿರುಗಿ ಬೈಕ್ ಮೇಲೆ ಕುಳಿತ ಸ್ನೇಹಿತನ ಬಳಿ ಹೋಗಿ ಹಣವನ್ನು ಕೇಳಿ ಪಡೆದುಕೊಂಡು ಬಂದು, ಇನ್ನಾ 6 ಪ್ಯಾಕುಗಳು ಬೇಕೆಂದ, ಅಂಗಡಿಯ ಮಾಲೀಕ 20 ಪ್ಯಾಕ್ ಗಳನ್ನು ಟೇಬಲ್ ನ ಮೇಲಿಟ್ಟು  6 ಪ್ಯಾಕ್ ಗಳನ್ನು ತರಲು ಒಳಗೆ ಹೋದ. ತಕ್ಷಣ ಆ intelligent young boy  20 ಪ್ಯಾಕ್ ಗಳನ್ನು ಎತ್ತಿಕೊಂಡು, ಚಾಲನೆಯಲ್ಲಿದ್ದ ಸ್ನೇಹಿತನ ಬೈಕ್ ನಲ್ಲಿ ಕುಳಿತ ಅಷ್ಟೇ... ಆ ಬೈಕ್ ಅರೆಕ್ಷಣದಲ್ಲಿ ಮಾಯ. ಮಾಲೀಕ ಗಲಿಬಿಲಿಯಿಂದ ತನ್ನ ಬೈಕನ್ನೇರಿ ಹಿಂಬಾಲಿಸಿದರೂ ಅವರ ಸುಳಿವು ಇಲ್ಲ. ಹಿಂದಿರುಗಿ ಬಂದ ಅಂಗಡಿಯ ಮಾಲೀಕನ ಸಪ್ಪೆ ಮೋರೆಯಲ್ಲಿ ನನಗೆ ಕಂಡಿದ್ದು ಮಾಡಿದ್ದುಣ್ಣೋ ಮಹರಾಯ ನಲಿದಾಡುತ್ತಿದ್ದದ್ದು. ಅಷ್ಟರಲ್ಲಿ ಬಸ್ ರಾಯ ಹಾರ್ನ್ ಮಾಡಿದ ಶಬ್ದಕ್ಕೆ ನಾನು ಗಲಿಬಿಲಿಗೊಂಡು ಬಸ್ಸನ್ನೇರಿ ಕುಳಿತ,  ನನ್ನ ತಲೆಯಲ್ಲಿ  ಒಂದು ಸಿಗರೇಟು ಪ್ಯಾಕ್ ಬೆಲೆ 200ರೂ, 20× 200 ಇವೇ ಕೊರೆಯ ತೊಡಗಿದವು.  


ಮಂಗಳವಾರ, ಮೇ 18, 2021

     ಕೊರೋನಾ ಅದೆಷ್ಟು ಜನರನ್ನು ಮಾನಸಿಕವಾಗಿ, ದೈಹಿಕವಾಗಿ ಅಂಟಿದೆಯೋ ಗೊತ್ತಿಲ್ಲ. ಆದರೆ ಈ ಕೊರೋನಾ ಕೆಲವಷ್ಟು ಜನರ ಆರೋಗ್ಯ, ಆಯಸ್ಸು, ನಿದ್ರೆ, ನೆಮ್ಮದಿ ಹೀಗೆ ಏನೆಲ್ಲಾ ಕಸಿದು ಕಬಳಿಸಿದೆ ಎಂಬುದು ಆಯಾ ಪರಿಸ್ಥಿತಿಯಲ್ಲಿರುವವರು ಮಾತ್ರ ಹೇಳಲು ಸಾಧ್ಯ. ಶ್ರಮವನ್ನೇ  ನಂಬಿ ದುಡಿಯುವ ಆತ್ಮವಿಶ್ವಾಸದ ಜೀವಗಳಿಗೆ ಇದಾವುದು ಬಾಧಿಸಿರುವುದಿಲ್ಲ.
    ಕೊರೋನಾದ ಎರಡನೆಯ ಅಲೆಯ ಲಾಕ್ಡೌನ್ ದಿನಗಳು,  ನನ್ನನ್ನು ಆರೋಗ್ಯಕ್ಕಿಂತ ಹೆಚ್ಚಾಗಿ ಕಾಡಿದ್ದು, ನನ್ನ ಬರವಣಿಗೆಯ ಮೇಲೆ. ಮನಸ್ಸಿಗೆ ಕೊರೋನಾ ಹಿಡಿದಿದೆ ಎಂದನಿಸಿದ ಮೇಲೆ,  ಬರವಣಿಗೆಯಲ್ಲಿ ಕೊರೋನಾ ಲಕ್ಷಣಗಳು ಒಂದೊಂದೇ ಕಾಡತೊಡಗಿದವು. ನನಗೇಕೋ ಲಕ್ಷಣಗಳು ಹೆಚ್ಚಾಗುತ್ತಿವೆ ಎಂದು ಭಾಸವಾಗಿ ಪರೀಕ್ಷಿಸಲು ಪುಸ್ತಕ, ಪೆನ್ನು ಹಿಡಿದು ಗಂಟೆ ಗಟ್ಟಲೆ ಕೂತರೂ ದೊರೆತದ್ದು , ನಿರೀಕ್ಷೆ ಯಂತೆಯೇ ಕೊರೋನಾದ ಪಾಸಿಟಿವ್ ಲಕ್ಷಣಗಳು. ಅನುಭವಿಸಲಾಗದ ಪರಿಸ್ಥಿತಿ. ಏನೆಲ್ಲಾ ಔಷದೋಪಚಾರ ದೊರೆದರೂ ಸರಿಯಾಗದಂತಹ ಬರವಣಿಗೆಬಾರದ ಸ್ಥಿತಿ. ಆದಷ್ಟೂ ಬೇಗ ಕೊರೊನಕ್ಕೆ ಕೊರೋನಾದ ಮೂರನೆಯ ಅಲೆ ಅಪ್ಪಳಿಸಲಿ ಎಂದು ಶಪಿಸುತ್ತ ಕೂರುತ್ತಿದ್ದ ನನಗೆ, ಕೊನೆಗೂ ಬರವಣಿಗೆ ಅಪ್ಪಳಿಸಿದ್ದು ಈ ಅನಿಸಿಕೆ ವ್ಯಕ್ತವಾಗುವ  ಮೂಲಕ. 




ಮಂಗಳವಾರ, ಏಪ್ರಿಲ್ 27, 2021

ಅಪ್ಪಿ

ಇರುವನೊಬ್ಬ ಅಪ್ಪಿ
ಬಹಳ ತುಂಟ ಅಪ್ಪಿ
ಆಡ ಹೋಗಿ, ಆಯ ತಪ್ಪಿ
ಬಿದ್ದ ರಭಸ, ಮರವ ತಬ್ಬಿ
ಏರಿ ಕುಳಿತು, ಅಳುತ ಅಪ್ಪಿ 
ಓಡಿ ಬಂದು, ಅಮ್ಮ ಬೈದು 
ಹಿಡಿದ ರಚ್ಚೆ, ಹೆಚ್ಚು ಆಗಿ 
ಅಮ್ಮ ಸೋತು, ಕೊಟ್ಟು ಪಪ್ಪಿ 
ಇಳಿದು ಶಾಂತವಾಗಿ  ಅಪ್ಪಿ 
ಕೊರಳ ಬಿಗಿದು ಕೊಟ್ಟನೊಂದು 
ಸಿಹಿಯ ಪಪ್ಪಿ ಹಿಡಿದು  ಜಪ್ಪಿ. 


ಮಂಗಳವಾರ, ಏಪ್ರಿಲ್ 6, 2021

ಮುತ್ತುಗ

ನಾನಂದು ನೋಡ ಹೋಗಿದ್ದು
ಕಾಡಿಗೆ ಮುತ್ತುಗ
ಮುತ್ತು ಮುತ್ತಿನ ಕೆಂಪು
ಮುತ್ತಿನ ಮುತ್ತುಗ
ನಾ ಕಂಡಿದ್ದು ಕೆಂಪು ಹವಳ ದ್ವೀಪ
ಮುತ್ತಿನ ಮುತ್ತುಗ
ಕಾಡಿನ ನಡು ಹೊಕ್ಕುಳಲ್ಲಿ
ಅವಿತಿದ್ದ ಕೆಂಪು ಮುತ್ತು ಮುತ್ತುಗ
ಕಾಡೆಲ್ಲಾ ಸೂರೆಗೊಂಡು 
ಚಪ್ಪರ ಹಾಸಿ ಘಮ ಘಮಿಸಿ 
ಸೆಳೆಯುತ್ತಿದ್ದ ಕಾಡಿನ ಕೆಂಪು 
ಕಂಪಿನ ಚೆಂದುಳ್ಳಿಯ 
ಅಂದ ರಾಣಿ ಮುತ್ತುಗ 
ಸುಡು ಬಿಸಿಲಿನ ಇನಿಯನನ್ನು 
ತಬ್ಬಿ ಜ್ವಾಲೆಯಾಗಿ ಉರಿಯುತ್ತಿದ್ದ 
ಮೋಹಗಾತಿ ಮುತ್ತುಗ 
ಅಮ್ಮ ಬಡಿಸಿ ಹಸಿವಿಂಗಿಸುವ 
ಬಾಳ ತಟ್ಟೆಯ ಮುತ್ತುಗ 
ಕಾಡಿನರಾಜನ ಹೊಳೆಯುವ 
ಕಿರೀಟ ರಾಣಿ ಮುತ್ತುಗ 
ದುಂಬಿಗಳೊಂದಿಗೆ ಪಿಸುಗುಡುವ 
ಲಾವಣ್ಯಕಾಂತಿ ಮತ್ತಿನ ಮುತ್ತುಗ 
ಕಾಡಿನ ಸ್ವಾತಿ ಮುತ್ತು ಮುತ್ತುಗ. 


ಭಾನುವಾರ, ಮಾರ್ಚ್ 28, 2021

ಕಣ್ಣುಗಳು

ಕಣ್ಣುಗಳು 
ಎದುರು ಮನೆಯ ಹುಡುಗಿಯ
ಕಣ್ಣುಗಳಲ್ಲಿ ಸದಾ
ನೀರು ಚಿಮ್ಮುತ್ತಿರುತ್ತದೆ
ಬತ್ತದ ಅಂತರ್ಜಲ
ಪ್ರತಿದಿನದ ಕನಸು
ಅವಳ ಕಣ್ಣುಗಳಲ್ಲಿ
ಕಣ್ಣಿಡಬೇಕೆಂದು
ನನ್ನ ಕಣ್ಣುಗಳನ್ನು
ಸಂದೇಶ ರವಾನಿಸುವ
ಮೇಲ್ , ಮೆಸೇಜ್ ಗಳನ್ನಾಗಿಸಬೇಕೆಂದು,
ಅರ್ಥೈಸಿಕೊಳ್ಳದಿದ್ದರೆ ಬೇಡ
ಡ್ರಾಫ್ಟ್  ಬಾಕ್ಸ್ ನಲ್ಲೆ ಬೀಗ
ಜಡಿದುಕೊಳ್ಳಲಿ, ಎಂದೇನೇನೋ
ನೋಟಿಫಿಕೇಶನ್ಗಳು ನನ್ನ ತಲೆಯಲ್ಲಿ 
ರಿಂಗಣಿಸುತ್ತಿದ್ದ ಒಂದು ಅನುದಿನ 
ಎದುರಿಗೆ ಸಿಕ್ಕೇಬಿಟ್ಟಳು  
ಸಹಜವಾಗೇ, ನನ್ನ ಕಣ್ಣಲ್ಲಿ ಕಣ್ಣಾದಳು 
ಅಷ್ಟೂ ದಿನದ ಕೋಪ 
ದೃಷ್ಟಿಗಳ ಮಿಲನದಲ್ಲಿ 
ನನ್ನಲ್ಲೂ ಕಣ್ಣಿಂದ ಧಾರಾಕಾರವಾಗಿ 
ಹರಿಯಲಾರಂಭಿಸಿದರೂ 
ಅವಳ ಕಣ್ಣೀರಿನ ಆಳ -ಅಗಲಗಳೊಡನೆ 
ನನ್ನ ಕಣ್ಣುಗಳು ಬಳಲಿದವು 
ಅವಳ ಕಣ್ಣುಗಳು 
ಜೀವನದ ಅಲೆಗಳಲ್ಲಿ 
ಮಿಂದು ಹೊಳೆಯಾಗಿದ್ದವೇ ವಿನಃ 
ಪುಟಿದುರುಳುತ್ತಿದ್ದ ಚಿಲುಮೆಗಳಿಂದಲ್ಲ. 




ಗುರುವಾರ, ಮಾರ್ಚ್ 25, 2021



   


     ಸುನೀತ ಮೇಡಂರವರು ಹೇಳುವಂತೆ ನಾ ಅವರಿಗೆ ಅಪರಿಚಿತಳಾದರೂ, ನನಗೆ ತುಸು ಪರಿಚಿತ(ಕೃತಿ )ರಿರುವ ಅವರ ಸಾಮಾನ್ಯ ಓದುಗಳಾಗಿ ನಾನೇನು ಬರೆಯಬಲ್ಲೆ ಎಂಬುದು ನನ್ನನ್ನು ಬಹುವಾಗಿ ಕಾಡಿತು. ಪ್ರಯತ್ನದ ಬರವಣಿಗೆಯಲ್ಲಿ ವ್ಯತ್ಯಾಸಗಳಿದ್ದರೆ ಕ್ಷಮೆ ಎಂಬ  ಪ್ರೀತಿಯಿರಲಿ. 

ನಾಡಿನ ಖ್ಯಾತ ಸಾಹಿತಿ ಡಾ.ನಾ.ಡಿಸೋಜರವರ " ಕವಿ ಬೆಳೆದ ಹಾಗೆ ಆತ ಪರಿಪೂರ್ಣನಾಗುತ್ತಾನೆ. ಆ ಬಗೆಯ ಎಲ್ಲಾ ಲಕ್ಷಣಗಳು ಸುನೀತಾರವರಿಗಿದೆ, ಎಂಬ ಮುನ್ನುಡಿಯನ್ನು ಲೇಪಿಸಿಕೊಂಡು ಉರುಳುತಲಿರುವ "ಉರುಳುವ ಗಾಲಿಗೆ ಹಿಡಿಯುತ ಕೋಲು " ಮಕ್ಕಳ ಕವನ ಸಂಕಲನವು 76 ಕವನಗಳನ್ನು  ತನ್ನ ಉರುಳುವ ಗಾಲಿಗೆ ಹಿಡಿದಿದೆ. 

 ಬಿಡುವಿಲ್ಲದ ಜೀವನದ ಜಂಜಾಟಗಳಲ್ಲಿ ಮಕ್ಕಳಾಗಿ, ಮಕ್ಕಳ ಮನಸ್ಥಿತಿಯೊಳಗೆ ಹೊಕ್ಕು, ಮುಗ್ಧತೆಯನ್ನು ಇಣುಕಿನೋಡಿ ಕವನಗಳಾಗಿ ಬರೆಯುವುದು, ಎಂಥಹವರಿಗೂ ತುಸು ತ್ರಾಸಕ್ಕೆ ತಳ್ಳುವ ಸಂಗತಿಯೇ. ಅಂಥಹ ಸಂಗತಿಗಳನ್ನೆಲ್ಲಾ ಬದಿಗೊತ್ತಿ ಸುನೀತ ಮೇಡಂರವರು,  ತಮ್ಮ ಮಕ್ಕಳಿಗಾಗಿ, ಮುಗ್ಧ ಮನದ ಮೊಗ್ಗುಗಳಿಗಾಗಿ ಉರುಳುವ ಗಾಲಿಗೆ ಹಿಡಿಯುತ ಕೋಲೆಂಬ ಉತ್ತಮವಾದ ಪ್ರಯತ್ನವನ್ನು ನಮ್ಮ ಮುಂದಿಟ್ಟಿದ್ದಾರೆ. 

 ಸುನೀತ ಮೇಡಂರವರ ಉರುಳುವ ಗಾಲಿಯು,  ಪುಟಾಣಿ ಮುಗ್ಧ  ಮನಸ್ಸುಗಳನ್ನು ಸಹಜವಾಗಿ ಅರಳಿಸುವ ಮನೆ, ಶಾಲೆ, ಹೂ, ಪ್ರಾಣಿ, ಹಬ್ಬ, ಜಾತ್ರೆ, ಮಳೆ, ಆಟಗಳು, ಹಳ್ಳಿ, ಪರಿಸರ, ದೇಶ, ಭಾಷೆ  ಹೀಗೆ ನೀತಿಪೂರಕವಾಗಿ, ಮನೋರಂಜನಾತ್ಮಕವಾಗಿ , ಕಲಿವಿಕೆಗೆ ಪೂರಕ ಲಯಗಳ ಮೂಲಕ ತನ್ನ ಕವನಗಳನ್ನು ಉರುಳಿಸುತ್ತಾ ಸಾಗಿದೆ. 

ಮೇಲಿನಿಂದ ನೂಲಿನ ಹಾಗೆ 
ಬೀಳುವೆ ಹೇಗಣ್ಣಾ? 
ಯಾರು ಅಲ್ಲಿ ನೇಯ್ಗೆ  ಕೆಲಸ 
ಮಾಡುತ್ತಿರುವರು? 

ಮಳೆಯಣ್ಣ ಕವನದಲ್ಲಿ ಲೇಖಕಿ ಮಗುವಾಗಿ ಮಳೆಯನ್ನು, ನೂಲಾಗಿ ಕಾಣುವ ವಿಭಿನ್ನ  ಚಿಂತನೆ, ಮಳೆಬೀಳುವಿಕೆಯಲ್ಲಿ  ನೇಯ್ಗೆ ಕೆಲಸದ ಕಲ್ಪನೆ, ಮಳೆ ಹನಿಯನ್ನು ಬಣ್ಣವಿಲ್ಲದ ಬಿಂದುವಾಗಿ ಕಾಣುವುದು, ಹನಿಗಳು ಡಿಕ್ಕಿ ಹೊಡೆಯುವಿಕೆಯ ಭಾವ, ಇವು ಕವಿ ಮನಕ್ಕೆ ಮಾತ್ರ ಸಾಧ್ಯವಾದೀತು ಎಂಬುದು ನನ್ನ ಭಾವನೆ. 

ಮನೆ  ಮನಗಳ ಬೆಸುಗೆಯಾಸೆಗೆ 
ಹೃದಯ ಹಣತೆಯ ಹಚ್ಚಿಟ್ಟ ಭಾಷೆ 
ನಮ್ಮ ಕನ್ನಡ ಎಷ್ಟು ಸುಂದರ 

 ಇಲ್ಲಿ ಲೇಖಕಿ ಕನ್ನಡ ಭಾಷೆಯ ಮೇಲಿನ ಅಭಿಮಾನ,  ಪ್ರೀತಿಗೆ ತನ್ನ ಕವನವನ್ನು ಬೆಸುಗೆಯಾಗಿಸಿದ್ದಾರೆ.

ಕಪ್ಪು ಬಣ್ಣದ ಪರದೆಯೂ 
ಬಿಳಿಯ ಸೀಮೆಸುಣ್ಣವೂ 
ಕರಿಹಲಗೆಗದು ಸಮವಸ್ತ್ರವೂ 
ಬರೆದು ಅಳಿಸಿ ಬರೆದು ಅಳಿಸಿ 
ಎದೆಯೊಳಗೆಲ್ಲಾ ಇಳಿಯುತ್ತೆ 

 ಶಾಲೆಯಲ್ಲಿ ಮಕ್ಕಳ ಕಲಿಕೆ, ಕರಿಹಲಕೆಯ ಮೇಲಿನ ಬರವಣಿಗೆಯಿಂದ ಪಕ್ವತೆ ಪಡೆಯುವುದನ್ನು ಲೇಖಕಿ ಸುಂದರವಾಗಿ ಕರಿಹಲಗೆಗೆ ಬಿಳಿಯ ಸಮವಸ್ತ್ರ ತೊಡಿಸುವ ಮೂಲಕ ಕವನದ ಸಾಲುಗಳನ್ನು ಚೆಂದಗಾಣಿಸಿದ್ದಾರೆ. 

ಒಳ್ಳೆಯ ಗೆಳೆಯರ ಸೇರಿಕೊಂಡು 
ಬಾಳು ಚೆಂದ ಮಾಡು ಕಂದ 
ಎಲ್ಲರೊಳಗೊಂದಾಗಿ ನೀನು 
ಮಡಿಲ ಮುತ್ತಾಗು 
ಈ ನಾಡಿನ ಸ್ವತ್ತಾಗು 

 ಲೇಖಕಿ ಮೂಲತಃ ಶಿಕ್ಷಕಿಯಾಗಿರುವುದರಿಂದ ತಮ್ಮ ಮಕ್ಕಳಲ್ಲಿ ಅಪೇಕ್ಷಿಸುವ ಸದ್ಗುಣ, ಆಚಾರ-ವಿಚಾರ ವಿನಯಗಳಿಂದ ಮಡಿಲ ಮುತ್ತಾಗಿ , ಸ್ವತ್ತಾಗಿ ಬಾಳಿರಿ ಎಂದು ಆಶಿಸಿದ್ದಾರೆ. 

ಹಳ್ಳಕ್ಕೆ ಬಿದ್ದ ಕಸವಿಸಿಯೇನು 
ಬಿದ್ದರೂ ಎದ್ದು ಓಡೂ 
ಬದುಕು ಹಾಗೆಯೇ ನೋಡು 
ಸುಲಭದಿ ಸಿಕ್ಕ ಈ ಚಕ್ರ, ಕೋಲು 

  ಕವನ ಸಂಕಲನದ ಆಶಾಭಾವದ ಶೀರ್ಷಿಕೆ ಹೊತ್ತಿರುವ ಉರುಳುವ ಗಾಲಿಗೆ ಹಿಡಿಯುತ ಕೋಲು ಕವಿತೆಯಲ್ಲಿ ಲೇಖಕಿ, ಹೊರಗೆ ಹೋದ ಮಗ ಸಮಯವಾದರೂ ಇನ್ನೂ ಬಾರದಿದ್ದನ್ನು ಕಂಡು ತಾಯಂದಿರು ಪಡುವ  ಸಹಜವಾದ ಆತಂಕ, ಚಕ್ರವನ್ನು ನಾಗರೀಕತೆಯ ಸಂಕೇತವಾಗಿ, ಕೋಲನ್ನು ನಿಯಂತ್ರಣದ ಸಂಕೇತವಾಗಿ ಬಳಸಿ, ಬದುಕಿನಲ್ಲಿ ಸೋಲು ಸಹಜ, ಅದನ್ನು ಕೊಡವಿ ನಿಂತು, ಬದುಕಿನಲ್ಲಿ ಆಹ್ವಾನಿಸುವ ಅವಕಾಶಗಳನ್ನು ಬಳಸಿ ಬೆಳೆಯುವ ಆಶಯದೊಂದಿಗೆ, ಶರವೇಗದಲ್ಲಿ  ಉದಯಿಸುತ್ತಿರುವ ಇಂದಿನ ನಾಗರಿಕತೆಯನ್ನು ಪರಿಸರದ ಅರಿವಿನಿಂದ, ನಾಗರೀಕತೆಯ ರಕ್ಷಣೆಯನ್ನು ಹಿಡಿಯುವ ಕೋಲಾಗಿ ಹಾಗೆ ಜೀವನದ ಸೋಲು - ಗೆಲುವಿನ  ಚಕ್ರಕ್ಕೆ, ಆಶಾಭಾವದಿಂದ ಸೆಟೆದು ನಿಲ್ಲುವ ಕೋಲನ್ನು ಹಿಡಿಯಿರಿ ಎಂಬುದನ್ನು ಆಟದ ಮೂಲಕ ವ್ಯಕ್ತಪಡಿಸಿರುವುದು ಅವರ ಕವಿತ್ವ ಭಾವಕ್ಕೆ ಉತ್ತಮ ಉದಾಹರಣೆ.  

ಅಮ್ಮ ಅಮ್ಮ ರಜೆಯಲಿ ನಾನು 
ತಾತನ ಮನೆಗೆ ಹೋಗುವೆನು 
ಸುಡು ಸುಡು ಬಿಸಿಲಿನ ರಜೆಯನು ನಾನು 
ಮರದ ನೆರಳಲಿ ಕಳೆಯುವೆನು 

 ಆಧುನೀಕತೆಯ ಆಡಂಬರ, ಭರಾಟೆಗಳಲ್ಲಿ ಮಕ್ಕಳಲ್ಲಿರುವ ಮುಗ್ಧತೆ ದಿನೇ ದಿನೇ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ರಜೆಯ ಮಜಾ ಕವಿತೆ, ನಮ್ಮನ್ನು ಬಾಲ್ಯಕ್ಕೆ ಮತ್ತೊಮ್ಮೆ ಅಟ್ಟಿದ ಅನುಭವ ಮತ್ತು ಇಂದಿನ  ಮಕ್ಕಳಿಗೆ ನಾವು ಕಳೆದ ಬಾಲ್ಯವನ್ನು ಚುಟುಕಾಗಿ ತಿಳಿಸಲು ಒಂದು ಉತ್ತಮ ಸಾಧನ ಈ ಕವಿತೆ. 

 ಕೆಲವು ಕವಿತೆಗಳಲ್ಲಿ ಪ್ರಾರಂಭದ ಸಾಲುಗಳಲ್ಲಿ ತುಡಿಯುವ ಲಯ, ಭಾವ, ಕವಿತೆಯ ಕೊನೆಯವರೆಗೂ ಮಿಡಿಯುವಂತಿರಬೇಕಿತ್ತು ಎಂಬುದು ನನಗೆ ಸುನೀತ ಮೇಡಂರವರ ಕವನಗಳನ್ನು ಓದಿದಾಗ ಲಘುವಾಗಿ ಮಿಡಿದ ಭಾವಾನಿಸಿಕೆ.

 "ಪುಸ್ತಕದಲ್ಲಿರುವ ಕೆಲವು ಪದ್ಯಗಳನ್ನಾದರೂ ಶಾಲಾ ವಿದ್ಯಾರ್ಥಿಗಳು,  ರಾಗವಾಗಿ ಹಾಡಿದರೆ ನನ್ನ ಪ್ರಯತ್ನ ಸಫಲವಾಗುವುದು ಎಂಬ ಭಾವದೊಂದಿಗೆ,  ನನ್ನ ಶಿಶುಗೀತೆಗಳನ್ನು ವಿದ್ಯಾರ್ಥಿಗಳು ತರಗತಿಯಲ್ಲಿ ದಿನನಿತ್ಯ ಹಾಡುವುದನ್ನು ಕೇಳುತ್ತಾ, ತೃಪ್ತಿಯ ಸಾರ್ಥಕ್ಯ ಭಾವ ಕಂಡಿರುವ ಲೇಖಕಿ, ಓದುಗರ ಸಾರ್ಥಕ್ಯ ಭಾವದ ಅಭಿಪ್ರಾಯಿಸುವಿಕೆಗಾಗಿ "ಉರುಳುವ ಗಾಲಿಗೆ ಹಿಡಿಯುತ ಕೋಲು " ಕವನ  ಸಂಕಲನವನ್ನು ನಮ್ಮ -ನಿಮ್ಮೆಲ್ಲರ ಮುಂದಿಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಉತ್ತಮವಾದ ಯಶಸ್ಸು ಓದುಗರ ವಿಮರ್ಶೆ, ಪರಾಮರ್ಶೆ, ಹಾರೈಕೆಗಳ ಮೂಲಕ ಒಲಿದು ಬರಲಿ, ಸುನೀತ ಮೇಡಂ  ಸಾಹಿತ್ಯಕ್ಷೇತ್ರ ಕಂಡ ಉತ್ತಮ ಕವಿಗಳನ್ನು ಮೀರಿ ಬೆಳೆಯುವ ಹೃದಯಕವಿಯಾಗಿ ಪುಟಿಯಲಿ ಎಂದು  ಅತ್ಯಂತ ಕಿರಿಯವಳಾಗಿ ಮನ ತುಂಬಿ ಹಾರೈಸುತ್ತೇನೆ 💐💐.




ಮಂಗಳವಾರ, ಮಾರ್ಚ್ 23, 2021

ತೋರ್ಪಡಿಕೆ

ತೋರ್ಪಡಿಕೆ ನಾಟಕದಲ್ಲಿ
ಪ್ರಾಮಾಣಿಕತೆಯ ಅಂಗಿಯನ್ನು
ಕಳಚಿ ತೊಟ್ಟಿಕೊಂಡಿತು
ನೋಡಲು ಎಷ್ಟು ಮಿರ ಮಿರ
ನವ ನವ, ಶುಭ್ರ
ಬೀಸೋ ಗಾಳಿ, ಹರಿವ ನೀರಿಗೂ
ಅದರ ಅಂಗಿಯಲ್ಲಿರುವ
ಕಪ್ಪು ಚುಕ್ಕೆಗಳು ಕಾಣಿಸುವುದಿಲ್ಲ
ದುರ್ಬಿನ್ನೇ ಬೇಕಾದೀತು
ಗಾಂಧಿತಾತನ ನ್ಯಾಯಬೆಲೆ
ಅಂಗಡಿಯ ಸಾಬೂನುಗಳಿಂದಲೂ
ಆ ಚುಕ್ಕೆಗಳು ಮಾಸುವುದಿಲ್ಲ 
ಇನ್ನಷ್ಟು ಇಸ್ತ್ರಿ ಮಾಡಿದಂತೆ 
ಹೊಳೆಯುತ್ತದೆ 
ಅದರ ವಿಜೃಂಭಣೆಯ ಮುಂದೆ 
ಅಸಹಾಯ ಪ್ರಾಮಾಣಿಕತೆ 
ಬಾಯಿಗೆ ಬೀಗ ಜಡಿದು
ಜನ ಮನಗಳನ್ನು ಹುಡುಕುತ್ತಾ 
ಅಲೆಯುತ್ತಿರುತ್ತದೆ 
ಎಲ್ಲಿಯವರೆಗೆ...? 
ತೋರ್ಪಡಿಕೆ ಅಂಗಿಯ 
ಕಳಚಲು ಅವ, ಅವಳು 
ಕಪ್ಪು ರಂಧ್ರಗಳಿಲ್ಲದ ಹೊಸ 
ಬಿಳಿ ಅಂಗಿ ತೊಡುವವರೆಗೆ 
ಆದರಿನ್ನೂ ಅವರು ಅಂಗಿ 
ಖರೀದಿಸುವ ಯೋಚನೆಯನ್ನು 
ಮಾಡಿಲ್ಲ. 


ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...